ಬಾಲ್ಯ ವಿವಾಹವೊಂದು ಘೋರ ಕಾರ್ಯ, ಈ ಬಾಲ್ಯವಿವಾಹ ಮಾಡುವುದರಿಂದ ಆಗುವ ದುಷ್ಪರಿಣಾಮಗಳು ಅನೇಕ ಇವೆ. ಮಕ್ಕಳಲ್ಲಿ ವಯಸ್ಸಿಗೆ ಮೀರಿದ ಜವಾಬ್ದಾರಿ ಹೊರಿಸಿದಂತಾಗುತ್ತದೆ, ಮಕ್ಕಳು ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಿಣಿಯಾಗುವುದರಿಂದ ಗರ್ಭಕೋಶ ಪೂರ್ಣಗೊಳ್ಳದೆ ಗರ್ಭಪಾತವಾಗುತ್ತದೆ. ಗರ್ಭಚೀಲಕ್ಕೆ ಪೆಟ್ಟು ಬೀಳುವುದರಿಂದ ಹೆರಿಗೆ ಸಮಯದಲ್ಲಿ ಅಕಾಲಿಕ ಮರಣವಾಗುತ್ತದೆ. ಬಾಲ್ಯವಿವಾಹದಿಂದ ವಿಕಲಾಂಗ ಮಕ್ಕಳ ಜನನವಾಗುತ್ತವೆ. ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಬಾಲ್ಯ ವಿವಾಹವು ಮಕ್ಕಳ ಮೇಲಿನ ಬಲಾತ್ಕಾರ ಇದ್ದಂತೆ. ಲೈಂಗಿಕ ಖಾಯಿಲೆಗಳಾದ ಎಚ್ಐವಿ ಏಡ್ಸ್ಗೆ ಗುರಿಯಾಗುವ ಸಾಧ್ಯತೆಯಿದೆ.
ಮಕ್ಕಳಲ್ಲಿ ರಕ್ತಹೀನತೆ ಹಾಗೂ ತೂಕ ಕಡಿಮೆ ಇರುವ ಮಕ್ಕಳು ಜನನವಾಗುತ್ತವೆ. ಶಿಶು ಮರಣ ಮಕ್ಕಳ ಮರಣ ಹೆಚ್ಚಾಗುವುದು. ಬಾಲ್ಯವಿವಾಹದಿಂದ ಮಾನಸಿಕ ದೌರ್ಬಲ್ಯತೆಗೆ ಒಳಗಾಗುತ್ತಾರೆ. ಬಾಲ್ಯವಿವಾಹವಾದ ಮಕ್ಕಳಲ್ಲಿ ಖಿನ್ನತೆ ಕಂಡುಬರುತ್ತದೆ. ಮಕ್ಕಳಲ್ಲಿ ಭಯಭೀತಿ ವಾತಾವರಣ ಕಲ್ಪಿಸಿದಂತಾಗುತ್ತದೆ. ಮಕ್ಕಳು ಮಾನಸಿಕ ಸ್ಥೈರ್ಯ ಕಳೆದುಕೊಳ್ಳುತ್ತಾರೆ. ಶಾಲೆ ಬಿಡುವ ಮಕ್ಕಳ ಸಂಖ್ಯೆ ಹೆಚ್ಚುತ್ತದೆ, ಶಿಕ್ಷಣದಿಂದ ವಂಚಿತರಾಗುವ ಮಕ್ಕಳು ಅನಕ್ಷರತೆ ಹೆಚ್ಚಾಗುತ್ತದೆ. ಬಾಲ್ಯಾವಸ್ಥೆ ಹಾಗೂ ಮಕ್ಕಳ ಬಾಲ್ಯ ಅವಕಾಶದಿಂದ ವಂಚನೆಯಾಗುತ್ತದೆ.
ಮಕ್ಕಳು ತಾರತಮ್ಯ ಹಾಗೂ ಅವಹೇಳನಕ್ಕೆ ಬಲಿಯಾಗುವ ಸಾಧ್ಯತೆ ಹೆಚ್ಚು, ಅವಮಾನ ತಾಳಲಾರದೆ, ಅಜ್ಞಾನದಿಂದ ಮಕ್ಕಳು ಆತ್ಮ ಹತ್ಯೆಗೆ ಬಲಿಯಾಗುತ್ತಾರೆ. ಎಳೆಯ ವಯಸ್ಸಿನಲ್ಲೆ ವಿಧವೆಯಾಗುತ್ತಾರೆ. ವಯಸ್ಸಿನ ಅಂತರದಿಂದ ಮದುವೆಯಾದ ದಂಪತಿಗಳಲ್ಲಿ ಸಾಮರಸ್ಯವಿಲ್ಲದೆ ನಿರಂತರ ಕೌಟುಂಬಿಕ ದೌರ್ಜನ್ಯ, ನಿಂದನೆ ಹೆಚ್ಚಾಗುತ್ತದೆ. ದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ.
ಇಂತಹ ಘೋರ ಪರಿಣಾಮವನ್ನು ಬೀರುವ ಬಾಲ್ಯವಿವಾಹ ಅಪರಾಧವಾಗಿದೆ. ಈ ಅಪರಾಧಕ್ಕೆ ಎರಡು ವರ್ಷ ಜೈಲು, 1 ಲಕ್ಷ ದಂಡ, ಜಾಮೀನುರಹಿತ ಹಾಗೂ ವಿಚಾರಣಾರ್ಹ ಅಪರಾಧವಾಗಿದೆ. ಇದನ್ನೆಲ್ಲ ಅರಿಯದ ಒಂದು ಗುಂಪು ಈ ಬಾಲ್ಯವಿವಾಹ ಮಾಡಿದರೆ, ಇದನ್ನೆಲ್ಲ ಅರಿತು ಮಾಡುವ ಇನ್ನೊಂದು ಗುಂಪು ನಮ್ಮ ಈ ಸಮಾಜದಲ್ಲಿ ಕಾಣಬಹುದಾಗಿದೆ. ಅರಿವು ಇರುವವರಿಗೆ ಭಯವಿಲ್ಲ ಅರಿವಿಲ್ಲದವರಿಗೆ ಕಾನೂನಿನ ಗಂಧಗಾಳಿಯು ಗೊತ್ತಿಲ್ಲ ಇವೆಲ್ಲದರ ಮದ್ಯೆ ಮಕ್ಕಳು ಈ ಕೆಲಸಕ್ಕೆ ಸಿಕ್ಕು ಒದ್ದಾಡಿ ತಮ್ಮ ಭವ್ಯವಾದ ಬಾಲ್ಯ ಕಳೆದುಕೊಳ್ಳುತ್ತಿದ್ದಾರೆ.
ಬಾಲ್ಯವಿವಾಹದಲ್ಲಿ ಎಲ್ಲರೂ ತಪ್ಪಿತಸ್ಥರೆ ಆಗುತ್ತಾರೆ. ಮಕ್ಕಳನ್ನು ಮದುವೆಯಾಗುವ ವಯಸ್ಕ ವ್ಯಕ್ತಿ, ಬಾಲ್ಯ ವಿವಾಹ ಏಪರ್ಡಿಸುವ, ನಿರ್ದೇಶಿಸುವ, ನೆರವೇರಿಸುವ ಮತ್ತು ಕುಮ್ಮಕ್ಕು ನೀಡುವ ಯಾವುದೇ ವ್ಯಕ್ತಿ ಹಾಗೂ ಸಂಸ್ಥೆ, ಮಗುವನ್ನು ಹೆತ್ತವರು, ಪೋಷಕರು, ಸಂರಕ್ಷಕರು, ಮಗುವಿನ ಜವಾಬ್ದಾರಿ ಹೊತ್ತ ಯಾವುದೇ ವ್ಯಕ್ತಿ ಸಂಸ್ಥೆ. ನಿರ್ಲಕ್ಷದಿಂದ ಬಾಲ್ಯ ವಿವಾಹ ತಡೆಯಲು ವಿಫಲರಾದವರು, ಬಾಲ್ಯ ವಿವಾಹದಲ್ಲಿ ಭಾಗವಹಿಸುವವರು, ಕಾಯ್ದೆಯಡಿ ನೀಡಿದ ತಡೆಯಾಜ್ಞೆ ಉಲ್ಲಂಘಿಸಿದವರು. ಹೀಗೆ ಬಾಲ್ಯವಿವಾಹವು ತನ್ನ ಸ್ವರೂಪದಲ್ಲಿ ಎಲ್ಲರನ್ನು ಒಳಗೊಂಡಿದೆ. ವಿವಾಹದಲ್ಲಿ ಮಂತ್ರ ಹೇಳುವ ಪೂಜಾರಿಯು ಈ ಅಪರಾಧಕ್ಕೆ ತಕ್ಕ ಶಿಕ್ಷೆ ಅನುಭವಿಸಬೇಕಾಗುತ್ತದೆ.
ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳು ಆಯಾ ಜಿಲ್ಲೆಯಲ್ಲಿದ್ದಾರೆ, ಅವರೇ ನಮ್ಮ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ, ಪೋಲಿಸ್ ಇಲಾಖೆ, ಪರಿಶಿಷ್ಟ ವರ್ಗ ಇಲಾಖೆ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕಂದಾಯ ಇಲಾಖೆ ಇವರೆಲ್ಲ ಆಯಾ ಜಿಲ್ಲೆಯಲ್ಲಿನ ವ್ಯಾಪ್ತಿಯಲ್ಲಿ ನಡೆಯುವ ಬಾಲ್ಯವಿವಾಹವನ್ನು ನಿಷೇಧಿಸುವ ಹಕ್ಕನ್ನು ಹೊಂದಿರುತ್ತಾರೆ. ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವ ಪರವಾನಗಿ ಹೊಂದಿರುತ್ತಾರೆ. ಆದರೆ ಆಗುತ್ತಿರುವುದೇ ಬೇರೇ ಅಧಿಕಾರಿಗಳು ಈ ರಿಸ್ಕ್ ತೆಗೆದುಕೊಳ್ಳುವ ಹಂತದಲ್ಲಿ ಉಳಿದಿಲ್ಲ ನಮಗೇಕೆ ಅವರಿವರ ಸುದ್ದಿ ಎನ್ನುವ ನೆಪದಲ್ಲಿ ಮಕ್ಕಳ ಹಕ್ಕುಗಳು ಹಾಳಾಗಲು ಬಿಡುತ್ತಿದ್ದಾರೆ.
ಇನ್ನು ಹಡೆದವರೇನು ಕಮ್ಮಿಯಿಲ್ಲ ಸ್ವತ: ತಂದೆತಾಯಿಗಳೇ ತಮ್ಮ ಮಕ್ಕಳಿಗೆ ಬಾಲ್ಯವಿವಾಹದ ಬಾವಿಗೆ ನೂಕುವ ಉದಾಹರಣೆಗಳು ಹಳ್ಳಿಗಳಲ್ಲಿ ತುಂಬ ಕಂಡುಬರುತ್ತವೆ. ತಾವು ಏನು ಮಾಡುತಿರುವೇವು ಎಂಬ ಅರಿವು ಮರೆತು ನಡೆಯುತ್ತಾರೆ. ಹೆಚ್ಚಿಗೆ ಹೇಳಲು ಹೋದರೆ ಬಡತನವೆಂಬ ಕಾರಣ ನೆಪವೊಡ್ಡುತ್ತಾರೆ. ಕಾಯುವವರೆ ಕೊಲ್ಲುವ ಸ್ಥಿತಿಗೆ ಬಂದರೆ ಯಾರುತಾನೆ ಮಕ್ಕಳನ್ನು ಕಾಯಬೇಕು ಹೇಳಿ, ಮಕ್ಕಳ ಈ ಪರಿಸ್ಥಿತಿ ಯಾರು ಕೇಳದಾಗಿದೆ. ಎಲ್ಲರು ಅವರವರ ಸ್ವಾರ್ಥಪರತೆಗಳಲ್ಲಿ ಮಕ್ಕಳು ಬಡವರಾಗಿ ಹೋಗುತ್ತಿದ್ದಾರೆ.
ದೇಶದ ಜನಸಂಖ್ಯೆಯಲ್ಲಿ, ಅರ್ಧಕ್ಕಿಂತ ಹೆಚ್ಚಿರುವ ಮಕ್ಕಳಲ್ಲಿ ಅದೆಷ್ಟು ಮಕ್ಕಳು ಈ ಬಾಲ್ಯವಿವಾಹವೆಂಬ ಭೂತಕ್ಕೆ ಸಿಕ್ಕು ಅತ್ಯಂತ ಬೇಗ ಇಹಲೋಕ ಬಿಡುತ್ತಾರೆ. ಚಿಗುರಬೇಕಾದ ಬಳ್ಳಿಯನ್ನು ನಾವು ನಮ್ಮ ಕೈಯಾರ ಕಿತ್ತು ಹೊಸಕಿ ಹಾಕುತ್ತಿದ್ದೇವೆ. ಮಕ್ಕಳ ಜೀವನ ಸ್ವತ: ತಂದೆ ತಾಯಿಗಳೆ ಕಸಿದುಕೊಳ್ಳುತ್ತಿದ್ದೇವೆ. ಹೆಣ್ಣು ಮಕ್ಕಳು ಇಂದು ಏನೆಲ್ಲ ಸಾಧನೆ ಮಾಡುತ್ತಿದ್ದರು ಅದೆಷ್ಟೊ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡುತ್ತಿದ್ದರು, ಈ ಬಾಲ್ಯವಿವಾಹದ ಮೇಲೆ ಮಾತ್ರ ಯಾವ ಪರಿಣಾಮವೂ ಬೀರುತ್ತಿಲ್ಲ. ಬಾಲ್ಯವಿವಾಹವು ಹಳ್ಳಿಗಳಲ್ಲಿ ಲಗ್ಗೆಯಿಲ್ಲದೆ ಓಡುತ್ತಿದೆ.
ಬಾಲ್ಯವಿವಾಹ ಕಾಯ್ದೆ ಜಾರಿಯಾಗಿರುವುದೇನೊ ಸತ್ಯ ಆದರೆ ಅದರ ಪ್ರಖರ ಮಾತ್ರ ಇನ್ನೂ ಆನೆಗತಿಯಲ್ಲಿಯೇ ಓಡುತ್ತಿದೆ. ಹೆಚ್ಚಾಗಿ ಬಾಲ್ಯವಿವಾಹಗಳು ಪಾಲಕರ ಆಸಕ್ತಿಯಿಂದಲೆ ನಡೆಯುತ್ತಿವೆ. ಮನೆಯಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಿದ್ದಾಗ, ಮೊದಲನೇ ಮಗಳಿಗೆ ವರ ಕೂಡಿಬಂದಾಗ ಆರ್ಥಿಕ ಸ್ಥಿತಿಗತಿ ಎದುರಾದಾಗ, ಒಳಗಿನ ಸಂಬಂಧಿಗಳಲ್ಲಿ ವಿಶ್ವಾಸವಿಲ್ಲದೆ ಹೋದಾಗ, ಇಂದಿನ ಯುವಜನತೆ ಪ್ರೀತಿಸಿ ಓಡಿಹೋಗುವ ಸ್ಥಿತಿಗತಿ ತಂದೆತಾಯಿಯ ಮನಸ್ಸಲ್ಲಿ ಅಚ್ಚಳಿಯದೆ ಉಳಿದಾಗ ಹೀಗೆ ಹತ್ತು ಹಲವು ಕಾರಣಗಳಿಂದ ಬಾಲ್ಯವಿವಾಹಗಳು ನಡೆಯುತ್ತಿವೆ. ಹೆತ್ತ ಜೀವಗಳೇ ಸದ್ದಿಲ್ಲದೆ ಹೆತ್ತ ಮಕ್ಕಳ ಜೀವನವನ್ನು ಹೊಸೆದು ಹಾಕುತ್ತಿರುವರು. ಪೂಜ್ಯ ತಂದೆ ತಾಯಿಯರೇ ಇನ್ನಾದರೂ ತಿಳಿಯಿರಿ ನಮ್ಮ ಮಕ್ಕಳನ್ನು ಈ ಬಾಲ್ಯವಿವಾಹದಿಂದ ಕಾಪಾಡಿ ಮಕ್ಕಳಿಗೆ ಈ ಬಾಲ್ಯವಿವಾಹದಿಂದ ಮುಕ್ತಿ ಕೊಡಿ. ನಮ್ಮ ಪೊರೆವ ಹೆಣ್ಣಿಗೆ ನ್ಯಾಯ ಕೊಡಿ. “ಆಗಲಿ ಬಿಡಿ ಹೆಣ್ಣಿಗೆ ಹದಿನೆಂಟು, ಈಗಲೇ ಏತಕೆ ತಾಳಿಯ ನಂಟು”