“ಅದ್ಯಾವುದೋ ಸಾಹೇಬ್ರು ಬಂದು, ಮಣ್ಣು ಪರೀಕ್ಷೆ ಮಾಡಿ, ಈ ನೆಲದಾಗ ಹತ್ತಿ, ತೊಗರಿ ಬೆಳಿಬೇಕು ಅಂದ್ರು. ಇನ್ನೊಬ್ಬ ಸಾಹೇಬರು ಬಂದು ಸರಕಾರದಿಂದ ನೀರಿಗಾಗಿ, ಕೃಷಿಹೊಂಡ ಮಾಡಿಕೊಳ್ಳಿ ನೀರು ಆಗುತ್ತೇ ಹಣ ಕೂಡ ಸಿಗುತ್ತೆ ಅಂದ್ರು ಅದರಿಂದ ನೀರು ತುಂಬಿದವು ಅರ್ಧಹೊಲ ಹಾಳಾಯಿತು ಸರಕಾರ ಹೇಳಿದಂಗ ಏನು ಆಗಲೇಯಿಲ್ಲ.” ಹೀಗೆ ಅದೇಷ್ಟೊ ರೈತರು ಸರಕಾರದ ಹಲವು ನೀತಿಗಳಿಂದ ರೋಸಿ ಹೋಗಿದ್ದಾರೆ. ಅವರ ಬದುಕಿಗಾಗಿ ಗೂಳೆಯಂಬ ದಾರಿ ತುಳಿಯುತ್ತಿದ್ದಾರೆ. ಅದು ಅನಿವಾರ್ಯವೂ ಆಗಿದೆ.
ಯಾದಗಿರಿಯಂತಹ ಜಿಲ್ಲೆಯೊಂದರಲ್ಲೇ ಹೇಳುವುದಾರೆ ಹಳ್ಳಿಗಳಿಂದ ಇದೀಗ ಶೇಕಡಾ 60 ರಷ್ಟು ಸಣ್ಣರೈತರು ಗೂಳೆ ಹೋಗುತ್ತಿದ್ದಾರೆ. ಕೃಷಿಯನ್ನೆ ನಂಬಿ ಬದುಕುತ್ತಿರುವವರ ಬದುಕು ದುಸ್ತರವಾಗಿದೆ. ನೀವು ಯಾವುದಾದರೂ ಶಾಲೆ ಹೋಗಿ ಅಲ್ಲಿರುವ ಒಟ್ಟು 100 ಮಕ್ಕಳಿಗೆ, ನಿಮ್ಮ ತಂದೆ ತಾಯಿ ಎಲ್ಲಿದ್ದಾರೆ ಎಂದು ಕೇಳಿ ನೋಡಿ, 60 ಮಕ್ಕಳು ನಮ್ಮ ಪಾಲಕರು ಬೆಂಗಳೂರಿಗೆ ದುಡಿಯಲು ಹೋಗಿದ್ದಾರೆ ಎನ್ನುತ್ತಾರೆ. ಇನ್ನೂ ಕೆಲವು ಪಾಲಕರು ಅನಿವಾರ್ಯವಾಗಿ ತಮ್ಮ ಮಕ್ಕಳಿಗೆ ಶಾಲೆ ಬಿಡಿಸಿ, ಬೆಂಗಳೂರಿನಂತಹ ಮಾಯಾವಿನಗರದಲ್ಲಿ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ಸಿಮೆಂಟು ಇಟ್ಟಿಗೆಗಳಿಂದ ಮುಚ್ಚುತ್ತಿದ್ದಾರೆ. ಗಡಿಭಾಗದ ಯಾದಗಿರಿ, ರಾಯಚೂರು, ಕಲಬುರ್ಗಿ ಇತ್ಯಾದಿ ಜಿಲ್ಲೆಗಳಲ್ಲಿ ವಲಸೆ ಹೆಚ್ಚಾಗಿದೆ. ನರೇಗಾದಂತಹ ಬೃಹತ್ ಯೋಜನೆಯಿದ್ದರು, ವಲಸೆ ನಿಂತಿಲ್ಲ ಎನ್ನುವುದು ದುರಂತದ ಸಂಗತಿ.
ಇನ್ನು ಈ ದೇಶದ ಸಾಲದ ಬಗ್ಗೆ ಮಾತನಾಡುವುದಾದರೆ ಎಲ್ಲರಿಗೂ ಸಾಲವಿದೆ. ಲಕ್ಷ ಲೆಕ್ಕದಲ್ಲಿ ಸಾಲಮಾಡಿದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಕೋಟಿ ಲೆಕ್ಕದಲ್ಲಿ ಸಾಲಮಾಡಿದ ಶ್ರೀಮಂತರು ತಲೆಮರೆಸಿಕೊಳ್ಳುತ್ತಾರೆ. ಕೆಲವರು ತರಿಗೆ ಕಟ್ಟದೇ ದೇಶಕ್ಕೆ ಮೋಸ ಮಾಡುತ್ತಾರೆ. ನಮ್ಮ ದೇಶದ ಬ್ಯಾಂಕುಗಳು ರಿಲಯನ್ಸ್ ಕಂಪೆನಿಗೆ 1.25 ಲಕ್ಷಕೋಟಿ, ವೇದಾಂತ ಕಂಪೆನಿಗೆ 1.03 ಲಕ್ಷಕೋಟಿ, ಎಸ್ಸಾರ್ ಕಂಪೆನಿಗೆ 1.01 ಲಕ್ಷಕೋಟಿ, ಅದಾನಿ ಕಂಪೆನಿಗೆ 96,000 ಕೋಟಿ ಹೀಗೆ ಹಲವಾರು ಉದ್ಯಮಿಗಳಿಗೆ ಕೋಟಿ ಕೋಟಿ ಸಾಲ ಕೊಟ್ಟಿದೆ. ಇವರೆಲ್ಲ ಅದ್ಹೇಗೆ ಸರಕಾರಕ್ಕೆ ಹಿಂದುರುಗಿಸುತ್ತಾರೆ ತಿಳಿಯದು ಮತ್ತೆ ಇವರೇಕೆ ಆತ್ಮಹತ್ಯೆ ಮಾಡಿಕೊಳ್ಳೋದಿಲ್ಲ ಎಂಬ ನಿಗೂಢ ಪ್ರಶ್ನೆಗೆ ಯಾರಲ್ಲಿಯೂ ಉತ್ತರವಿಲ್ಲ.
ನಮ್ಮ ರೈತರು ಲಕ್ಷ ಸಾಲಾ ತೆಗೆದುಕೊಳ್ಳೋಕೆ ನೂರಾರು ಕಾರಾರುಗಳಿರುತ್ತವೆ. ಹತ್ತು ಜನರಿಗೆ ಲಂಚ ಕೊಡಬೇಕು. ನೂರು ಜನರೆದುರು ಪೂಸಿ ಹೊಡಿಬೇಕು. ಶ್ಯೂರಿಟಿ ಕೊಡಬೇಕು ಆದರೆ ಕೋಟಿ ಲೆಕ್ಕದಲ್ಲಿ ಸಾಲ ಪಡೆದ ಈ ಕಂಪನಿ ಶ್ರೀಮಂತರು ಅದೇನು ಶ್ಯೂರಿಟಿ ಕೊಟ್ಟಿರಬಹುದು? ಲಕ್ಷದ ಲೆಕ್ಕದಲ್ಲೇ ವಾಪಸ್ಸು ಕೊಡುವುದು ಕಷ್ಟವೆನ್ನುವಂತಹ ಸಂದರ್ಭದಲಿ,್ಲ ಇವರ ಕೋಟಿಗಳು ದೇಶಕ್ಕೆ ವಾಪಸ್ಸಾಗುತ್ತಾ ಅಥವಾ ಗುಳುಂ ಸ್ವಾಹ: ಆಗುತ್ತೊ ದೇವರೆ ಬಲ್ಲ.
ವಿಜಯ್ಮಲ್ಯನಿಗೆ ಕೊಟ್ಟಿರೋ ಸಾಲ 9000 ಕೋಟಿ. ಅವನ ಒಟ್ಟಾರೆ ಆಸ್ತಿ ಮಾರಿದರು ಅಷ್ಟು ಸಾಲಾ ತೀರಿಸಕ್ಕಾಗಲ್ಲ ಎನ್ನುತ್ತಾರೆ ಆರ್ಥಿಕ ತಜ್ಞರು. ನಮ್ಮ ಸರ್ಕಾರವೇ ಅವರ ಸಾಲ ಮನ್ನಾ ಮಾಡಬಹುದು ಎನ್ನುವ ಮಾತುಯಿದೆ. ತಮ್ಮ ಬೆವರ ಸುರಿಸಿ ದುಡಿಯುವ ರೈತರ ಸಾಲಾಮನ್ನಾ ಮಾಡಿ ಎನ್ನುವುದಕ್ಕೆ ಹೋರಾಟ ಮಾಡುವಂತಹ ಪರಿಸ್ಥಿತಿಯಿದೆ. ಅಲ್ಲದೇ ಪಕ್ಷಗಳ ಮದ್ಯ ರಾಜಕೀಯ ಗುದ್ದಾಟ ಮಾಡುತ್ತಾರೆ.
ರೈತರ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುವ ಸರಕಾರಗಳು ಜನಪ್ರತಿನಿಧಿಗಳು ಬರಬೇಕಿದೆ. ದೇಶದ ಬೆನ್ನೆಲುಬನ್ನು ಕಾಯಬೇಕಾದ ಅತೀ ಜರೂರತ್ತಿದೆ. ದೇಶಕ್ಕೆ ಅನ್ನ ಬೆಳೆಯುವ ಕೈಗಳನ್ನು ನಾವೆಲ್ಲರೂ ಒಂದಾಗಿ ಕಾಯಬೇಕು. ಸಾಲಬಾಧೆಗೆ ಬಲಿಯಾಗುವ ರೈತರ ಕುಟುಂಬಗಳನ್ನು ಕಾಪಾಡಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿ. ರೈತನೆಂದರೆ ನಮ್ಮ ಜೀವನಾಡಿ. ಅವನ ಬದುಕು ನಮಗೆ ಅಮೂಲ್ಯವಾಗಿದೆ. ಪ್ರಾಕೃತಿಕ ಲಕ್ಷಣಗಳಾದ ಅತೀವೃಷ್ಠಿ ಮತ್ತು ಅನಾವೃಷ್ಠಿ ಸಂದರ್ಭದಲ್ಲಿ ರೈತನ ಬಾಳಿನಲ್ಲಿ ಬಿರುಗಾಳಿ ಬೀಸಲಿದೆ. ಅದನ್ನು ತಡೆಯುವ ಶಾಶ್ವತವಾದ ಯೋಜನೆಗಳನ್ನು ಸರಕಾರಗಳು ಯೋಜಿಸಬೇಕಿದೆ.
ಇದೀಗ ಚುನಾವಣೆ ಹತ್ತಿರ ಬರುತ್ತಿವೆ, ಪಕ್ಷಗಳು ರೈತರ ಸಮಸ್ಯೆಗಳನ್ನು ಬಗೆಹರೆಸುತ್ತೇವೆ ಎಂಬ ಆಮಿಷ್ಯ ತೋರಿಸಿ, ಮತ ಕೇಳುತ್ತಾರೆ. ಅವರ ಪ್ರಣಾಳಿಕೆಯಲ್ಲೀಗ ರೈತರ ಬಗ್ಗೆ ಕಾಳಜಿ ಹೆಚ್ಚಾಗುತ್ತದೆ. ಈಗಿರುವ ಕಾಳಜಿ ಅಧಿಕಾರ ಹಿಡಿದ ಬಳಿಕ ಇರುವುದಿಲ್ಲ. ಅಂತಹ ಪಕ್ಷಗಳಿಗೆ ಮತ್ತು ರಾಜಕಾರಣಿಗಳಿಗೆ ನಮ್ಮ ದೇಶದ ರೈತರು ತಕ್ಕ ಪಾಠವನ್ನು ಕಲಿಸಬೇಕು. ರೈತರ ಸಮಸ್ಯೆಗಳನ್ನು ನೈಜ ಪರಿಹಾರ ಕ್ಷೇತ್ರಮಟ್ಟದಲ್ಲಿ ಅನುಷ್ಠಾನಕ್ಕೆ ತರುವ ವ್ಯಕ್ತಿಗಳನ್ನು ಮತ್ತು ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ, ಇಲ್ಲವಾದಲ್ಲಿ ಅನ್ನ ಕೊಡುವ ರೈತರ ಸಮಸ್ಯೆಗಳು ಪರಿಹಾರ ಕಾಣದೇ ಉಳಿಯುತ್ತವೆ. “ಅನ್ನ ಬೆಳೆಯುವ ರೈತ ಮುನಿಸಿಕೊಂಡರೆ, ನಾವೆಲ್ಲ ಮಣ್ಣು ತಿನ್ನಬೇಕಾಗುತ್ತದೆ” ಎಚ್ಚರ!