ಇವರೊಬ್ಬ ಬ್ರಹ್ಮಚಾರಿ, ಸ್ವಯಂ ಹಿತಕ್ಕಿಂತ ದೇಶ ಹಿತವೇ ಜನಹಿತವೇ ಮೂಲಮಂತ್ರವಾಗಬಹುದೆಂಬ ನಂಬಿಕೆ ಸುಳ್ಳಾಗಿಸಿದರು. ಕಾಂಗ್ರೆಸ್ ಸರಕಾರದ ಯೋಜನೆಗಳನ್ನು ಮೊದಲು ಆಧಾರ್, ಜಿಎಸ್ ಟಿಯನ್ನು ಸಾರಾಸಗಟಾಗಿ ವಿರೋಧಿಸಿದ ಮೋದಿ ಅವುಗಳನ್ನೇ ಅಚ್ಚುಕಟ್ಟಾಗಿ ಮುಂದುವರೆಸಿದರು. ಇದೀಗ ಬದುಕಿಗೆ ಎಷ್ಟು ಆಧಾರ ನೀಡಿದರೊ ತಿಳಿದಿಲ್ಲ ಆದರೆ ಆಧಾರ್ ಯೋಜನೆ ಮಾತ್ರ ಎಲ್ಲಾ ಕಡೆಗೆ ಕಡ್ಡಾಯಗೊಳಿಸಿದರು. ಜಿ.ಎಸ್.ಟಿ ಎಂಬ ಅಸ್ತ್ರ ಬಳಿಸಿ ಶ್ರೀಮಂತರಿಗೆ ಲಾಭ ಮಾಡಿ ಬಡವರ ಪಾಲಿಗೆ ನಷ್ಟ ಮಾಡಿದರು. ಏರಿದ ಬೆಲೆಗೆ ಸಾಮಾನ್ಯ ಜನರು ತತ್ತರಿಸಿದರು. ಹಲವು ಯೋಜನೆಗಳಿಗೆ ಹೊಸ ನಾಮಕರಣ ಮಾಡಿದರೆ ವಿನ: ಹೊಸತನ್ನು ಮಾಡುವಲ್ಲಿ ಮೋದಿಜಿ ಯಶಸ್ವಿಯಾಗಲಿಲ್ಲ. ಈ ದೇಶದ ನಿರೂದ್ಯೋಗಿಗಳ ಆಶಾಕಿರಣವಾಗಬೇಕಿದ್ದ ಮೋದಿಜಿ ನಿರಾಶೆ ಮಾಡಿದರು. ಜಿ.ಎಸ್.ಟಿ ಮತ್ತು ನೋಟ್ ರದ್ಧತಿಯಿಂದ ನಿರುದ್ಯೋಗ ಸೃಷ್ಠಿಯಾಯಿತು. ಅದ್ಯಾವುದೊ ಏರಿತು ಮತ್ಯಾವುದೊ ಇಳಿಯಿತು ಮತ್ತದೇ ಹಳೆಯ ಆಡಳಿತವನ್ನು ರಾಜಕಾರಣವನ್ನು ನೆನಪು ಮಾಡಿತು. ಹೊಸ ಕನಸು ಹೊತ್ತ ಮತದಾರನ ಮನದೊಳಗೆ ಹುಸಿ ಮುನಿಸು ಮೂಡಿತು.
ನಾನು ಅವರ ಒಂದು ಭಾಷಣದಲ್ಲಿ ಕೇಳಿದ್ದೆ ಈ ದೇಶದಲ್ಲಿ ತೈಲ ಬೆಲೆ ಗಗನಕ್ಕೇರಿದೆ ಅದಕ್ಕೆ ಕಾರಣ ಸರಿಯಾದ ಯೋಜನೆ ಯೋಚನೆಯಿಲ್ಲ. ನನಗೆ ಅಧಿಕಾರ ನೀಡಿ ನಿಮಗೆ ಅತೀ ಕಡಿಮೆ ಬೆಲೆಯಲ್ಲಿ ಪೆಟ್ರೋಲ್ , ಡೀಸೆಲ್ ಸಿಗುವಂತೆ ಮಾಡುತ್ತೇನೆ ಎಂದರು ಆದರೆ ಇದೀಗ ಈ ಬೆಲೆಯಲ್ಲಿ ದಿನಕ್ಕೊಂದು ರೂಪಾಯಿ ಇಳಿಕೆ ಮತ್ತೆ ಎರಡು ರೂಪಾಯಿ ಏರಿಕೆಯ ಕಣ್ಣಮುಚ್ಚಾಲೆ ಆಟ ಆಡುತ್ತಿದ್ದಾರೆ. ಹೋಗಲಿ ಎಲ್ ಪಿ ಜಿ ಆನ್ ಲೈನ್ ಮಾಡಿದರು ಎಂದು ಖುಷಿಪಡುವಷ್ಟಿಗೆ ಅದರ ಬೆಲೆ ಮುಗಿಲಮುಟ್ಟಿತು. ಸಿಲಿಂಡರ್ಗಳ ಸಂಖ್ಯೆಗಳಲ್ಲಿಯೂ ವ್ಯತ್ಯಾಸವಾಯಿತು. ಇದರಲ್ಲಿ ಭ್ರಷ್ಟಾಚಾರ ತಡೆಗಟ್ಟಿದರು ನಿಜಾ ಅದನ್ನು ಬೆಲೆ ಏರಿಕೆ ರೂಪದಲ್ಲಿ ವಸೂಲಿ ಮಾಡುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಜನಸಾಮಾನ್ಯರ ವಲಯದಲ್ಲಿ ಎದ್ದಿದೆ.
ಇನ್ನೊಂದು ಮೋದಿಯವರ ಭಾಷಣದಲ್ಲಿ ಆಸಕ್ತಿ ಹುಟ್ಟಿಸಿದ್ದು ಅಂದ್ರೆ ಕಪ್ಪು ಹಣ ವಾಪಸ್ ತರ್ತೀವಿ, ಜನ ಲೋಕಪಾಲ್ ಬಿಲ್ ತರ್ತೀವಿ ಎಂಬುವುದು ಆಯಿತುಬಿಡಪ್ಪ ಇನ್ನೇನು ಹದಿನೈದು ಲಕ್ಷ ಅಕೌಂಟಿಗೆ ಬರುತ್ತೆ ಮತ್ತೇನು ಅದರಲ್ಲಿ ಒಳ್ಳೆದೊಂದು ವ್ಯಾಪಾರ ಮಾಡಿದಾರಾಯಿತು ಮುಂದೆ ಅನುಕೂಲವಾಗಬಹುದೆಂಬ ಅನೇಕರ ಕನಸಿತ್ತು. ಸ್ವಿಸ್ ಬ್ಯಾಂಕ್ ನಲ್ಲಿ ಇರುವ ಭಾರತೀಯ ಹಣ ಟಿವಿಗಳಲ್ಲಿ ನೋಡಿದ್ದಿವಿ ಅದೆಲ್ಲ ನಮ್ಮ ಅಕೌಂಟ್ ಗೆ ಹಾಕತ್ತೀನಿ ಅಂದಾಗ ಎಷ್ಟೊ ಆನಂದವಾಗಿತ್ತು ಆದರೆ ಇದನ್ನು ಕಾಯುತ್ತಾ ಕುಳಿತುಕೊಳ್ಳುವಂತೆ ಮಾಡಿದರು. ಬಡವರಿಗೆ ಹಣ್ಣಿನ ಮರ ಬರಿ ದೂರದಿಂದಲೇ ತೋರಿಸಿದರು ಹಣ್ಣು ಕಿತ್ತು ಬಾಯಿಗೆ ಹಾಕಲೇಯಿಲ್ಲ ಆದರೆ ಒಳ ರಾಜಕೀಯ ಮಾಡಿ ರಸದ ಹಣ್ಣುಗಳು ಆಡಳಿತ ಮತ್ತು ವಿರೋಧ ಪಕ್ಷಗಳು ಹಂಚಿಕೊಂಡವೇನೊ ಎಂಬ ಸಣ್ಣ ಅನುಮಾನ ಓಟು ಹಾಕಿದವರ ಥೇಟು ತಲೆಯೊಳಗೆ ಓಡಾಡಿತು.
ಇನ್ನು ಇಂಟರೆಸ್ಟಿಂಗ್ ವಿಷಯ ಅಂದ್ರೆ ಮೋದಿಜಿ ಮತ್ತು ಅವರ ಜನರೆಲ್ಲರೂ 2013ರಲ್ಲಿ 1 ಕೇಜಿ ತೊಗರಿ ಬೇಳೆ 85ರೂಗಳಿಗೆ ಮಾರಾಟವಾಗುತ್ತಿದ್ದುದ್ದನ್ನು ಬೆಲೆ ಏರಿಕೆಯಾಗಿದೆ ಎಂದು ಹೇಳಿದಾಗ ನನಗೆ ಖುಷಿಯಿತ್ತು ಅಂದ್ರೆ ಮೋದಿ ಅಧಿಕಾರಕ್ಕೆ ಬಂದ ಬಳಿಕ ತೊಗರಿ ಬೆಳೆ ಬೆಲೆ 30 ರಿಂದ 40 ಆಗಬಹುದು ಎಂದು ಊಹಿಸಿ ಮತ ಹಾಕಿದೆ ಆದರೆ, ತೊಗರಿ ಬೇಳೆ ಕಿಲೋ ಒಂದಕ್ಕೆ ರೂ 150 ರಿಂದ 200ರ ವರೆಗೆ ಬೆಲೆಯೇರಿತು ಪ್ರಧಾನಿಯವರು ಆ ಸಮಯದಲ್ಲಿ ವಿಮಾನ ಹಾರಾಟದಲ್ಲಿದ್ದರು ಅವರ ಪಾಲಿಗೆ ಯಾವುದು ಬೆಲೆ ಏರಿಕೆ ಅರ್ಥವೇ ಆಗಲಿಲ್ಲ. ಇನ್ನು ವಿಪರ್ಯಾಸವೆಂದರೆ ಅಮೇರಿಕಾ, ಪಾಕಿಸ್ಥಾನ ಇತ್ಯಾದಿ ದೇಶಗಳನ್ನು ಕಂಡರೆ ಉರಿಯುತ್ತಿದ್ದವರು ಈಗಲೂ ಉರಿಯುತ್ತಾರೆ ಅನಿಸುತ್ತಾರೆ ಆದರೆ ಆಮಂತ್ರಣವಿಲ್ಲದಿದ್ದರೂ ನವಾಜ್ ಶರೀಫರ ಜನ್ಮದಿನದಂದು `ಕೋಕ್ ಮತ್ತು ಬಿರಿಯಾನಿ'ಯನ್ನು ತಿನ್ನಲು ಪಾಕಿಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ ಅಮೇರಿಕಾದವರ ಜೊತೆಗೆ ಚಾಯಿಪೇ ಚರ್ಚಾ ಮಾಡಿದಾಗ ಮೋದಿಯವರು ಏನು ಹೇಳಿದ್ದರು ಈಗ ಏನು ಮಾಡುತ್ತಿದ್ದಾರೆ ಎಂಬ ಗೊಂದಲ ನಿಜಕ್ಕೂ ತಿಳಿಯದಾಗಿದೆ. ಇನ್ನೊಂದು ತುಂಬಾ ಚಿಕ್ಕ ವಿಷಯ ಆದರೆ ಬಡವನಾದ ನನಗೆ ತುಂಬಾ ದೊಡ್ಡದು. ಇದೇ ಮೂರು ವರುಷದ ಹಿಂದೆ ರೈಲ್ವೆ ಇಲಾಖೆಯಲ್ಲಿ ಟಿಕೇಟ್ ದರ ಪ್ಲಾಟ್ ಫಾರಂ ಟಿಕೇಟ್ 1 ರೂಪಾಯಿಯಿತ್ತು ಇದೀಗ ಎಷ್ಟಿದೆ ಗಮನಿಸಿ ರೈಲು ನಿಲ್ದಾಣಕ್ಕೆ ನಿಮ್ಮ ಸಂಬಂಧಿಕರನ್ನು ಬಿಳ್ಕೊಡಲು ಹೋದ್ರು ನೀವ್ ಹತ್ತು ರೂಪಾಯಿ ಕೊಡಲೇಬೇಕಾದ ಅನಿವಾರ್ಯವಿದೆ.
ಹೀಗೆ ಮೋದಿಯವರು ಹೇಳಿದ್ದಕ್ಕೂ ಇದೀಗ ಮಾಡುತ್ತಿರುವುದಕ್ಕೂ ಬಹಳ ವ್ಯತ್ಯಾಸ ಉಂಟಾಗಿದೆ. ಇಲ್ಲಿ ಎಲ್ಲವೂ ಉಲ್ಲೇಖಿಸಲು ಸಾಧ್ಯವಾಗದಿರಬಹುದು. ಇದರಿಂದ ಒಂದು ಸತ್ಯ ಕಲಿಯುವುದೇನೆಂದರೆ ರಾಜಕಾರಣ ಎಂಬ ಭೂತ ಎಂತಹವರನ್ನು ಕೂಡ ವಶಕ್ಕೆ ಪಡೆಯುತ್ತದೆ. ಅಲ್ಲಿ ಹೋದ ಪ್ರತಿಯೊಬ್ಬರೂ ಸುಳ್ಳು ಹೇಳಲೇಬೇಕು. ಮೋಸ ಮಾಡಲೇಬೇಕು. ಓಟು ಹಾಕಿದವರನ್ನು ಕನ್ನ ಹಾಕಲೇಬೇಕು. ಇದೀಗ ಮೋದಿಜಿ ಅದನ್ನು ಮಾಡಿದ್ದಾರೆ ಎಂಬ ಸ್ಪಷ್ಟವಾದ ನಿಲುವುಗಳು ಕಾಣುತ್ತಿವೆ. ಆದರೂ ಜನರು ಇದನ್ನು ಸಹಿಸಿಕೊಳ್ಳುವ ವ್ಯವಧಾನ ಮಾತ್ರ ಕಳೆದುಕೊಂಡಿಲ್ಲ. ಇಲ್ಲಿ ಜನರು ಹಲವು ರೀತಿಯಲ್ಲಿ ಯೋಚಿಸುವವರಿದ್ದಾರೆ. ಮೊದಲನೇಯವರು ಇರಲಿಬಿಡಪ್ಪ ಎಪ್ಪತ್ತು ವರ್ಷ ತಿಂದು ತೇಗಿರುವ ದೇಶ ಮೋದಿ ಇನ್ನು ನಾಲ್ಕೆ ವರ್ಷ ಆಯಿತು ಎನ್ನುತ್ತಾರೆ. ಎರಡನೇಯವರು ಇಷ್ಟು ಕಡಿಮೆ ಸಮಯದಲ್ಲಿ ಎಲ್ಲಾ ಕೆಲಸ ಮಾಡುವುದು ಕಷ್ಟ ಇನ್ನೊಮ್ಮೆ ಅಧಿಕಾರ ಕೊಟ್ಟರೆ ದೇಶ ಅಭಿವೃದ್ಧ ಮಾಡತ್ತಾರೆ ಎನ್ನುತ್ತಾರೆ. ಮೂರನೇಯವರು ಏನ್ ಮಾಡತಾರೋ ಗೊತ್ತಿಲ್ಲ ಆದರೆ ಹವಾ ಇಟ್ಟುಕೊಂಡಾನಪ್ಪ ಎನ್ನುತ್ತಾರೆ. ನಾಲ್ಕನೇಯವರು ಮೋದಿಗೆ ಮುಂದಿನ ಚುನಾವಣೆಯಲ್ಲಿ ಓಟ್ ಹಾಕಬಾರದಪ್ಪ ನಮಗೇನು ಮಾಡಲಿಲ್ಲ ಎಂದು ಹಲುಬತ್ತಾರೆ. ಉಳಿದವರೆಲ್ಲರೂ ಇರಲಿ ಬಿಡಪ್ಪ “ದೊಡ್ಡಣ್ಣನ ವಿಷಯ, ಗಿಡ್ಡಣ್ಣನಿಗೆ ಯಾಕಪ್ಪ” ಎಂದು ಸುಮ್ಮನಾಗುತ್ತಾರೆ. ಇವರೆಲ್ಲರಲ್ಲಿ ನೀವ್ಯಾರಾಗುತ್ತೀರಿ ಎಂದು ನಿರ್ಧರಿಸಿ ಒಮ್ಮೆ ಯೋಚಿಸಿ.