ಕಾಂಗ್ರೆಸ್ ಸರಕಾರ ದೇಶದ ಬಡವರನ್ನು ಅನ್ನ ಕೊಟ್ಟು ಕಾಪಾಡಿದ ಇತಿಹಾಸವಿದೆ ಆದರೆ ಕಳೆದ ಹತ್ತು ವರ್ಷದಲ್ಲಿ ಅನ್ನ ಕಿತ್ತುಕೊಳ್ಳುವ ಕೆಲಸ ಮಾಡಿದೆ. ಅಕ್ಕಿ ಹಗರಣ ಭಾರತದ ರೈತರ ಮೇಲೆ ಬರೆ ಎಳೆಯುವ ಕೆಲಸ ಮಾಡಿದೆ. ಯುಪಿಎ ಅಕ್ಕಿ ಸರಬರಾಜು ಮಾಡುವುದರಲ್ಲಿ ಕೊಳ್ಳೆ ಹೊಡೆದು ಘನ ಸಾಧನೆ ಮಾಡಿತು.
ಕೇಂದ್ರ ಸರಕಾರ ಅನ್ನ ಕಸಿದುಕೊಂಡಿದ್ದಲ್ಲದೆ ಚಿನ್ನದ ಬೆಲೆ ಏರಿಸಿದ್ದಲ್ಲದೆ ಕಲ್ಲಿದ್ದಲು ಕೂಡಾ ತಿನ್ನುವ ಕೆಲಸ ಮಾಡಿತು. ಕಲ್ಲಿದ್ದಲು ನುಂಗಿದ ಮಾನ್ಯ ಪ್ರಧಾನಿಗಳು ಎಲ್ಲಿಯೂ ಈ ವಿಷಯ ಕುರಿತು ಮಾತೆ ಆಡಲಿಲ್ಲ ಹೈಕಮಾಂಡ ಕೂಡಾ ಅದರ ಗೋಜಿಗೆ ಹೋಗಲಿಲ್ಲಾ ಕಲ್ಲಿದ್ದಲು ಹಗರಣ ಮಾಡಿ ಮನಸ್ಸು ಕಲ್ಲು ಮಾಡಿ ಕೂತರು ಕಾಂಗ್ರೆಸ್ಸಿನವರು.
ನಮ್ಮ ದೇಶ ಅನೇಕ ಕ್ರೀಡೆಗಳ ತವರೂರು ಅನೇಕ ಹಿರಿಯ ಕಿರಿಯ ಆಟಗಾರರನ್ನು ಕೊಟ್ಟ ಶ್ರೇಯಸ್ಸು ಈ ದೇಶಕ್ಕೆ ಸಲ್ಲುತ್ತದೆ. ಕಾಮನ್ ವೆಲ್ತ್ ಗೇಮ್ಸ್ ಈ ದೇಶದಲ್ಲಿ ನಡೆದಾಗ ಆಟದಲ್ಲೂ ಕಾಂಗ್ರೆಸ್ ಹೊಸ ಆಟ ಆಡಿ ಕಾಮನ್ ವೆಲ್ತ್ ಕ್ರೀಡಾಕೂಟದ ಹಗರಣದಲ್ಲಿ ಭಾಗಿಯಾಯಿತು ಕೋಟಿ ಲೆಕ್ಕದಲ್ಲಿ ಹಣ ನುಂಗಿ ಇಡಿ ದೇಶವೆ ತಲೆ ತಗ್ಗಿಸುವ ಕೆಲಸ ಮಾಡಿತು.
ಥೋರಿಯಂ ಹಗರಣ, ಆದರ್ಶ ಹೌಸಿಂಗ ಹಗರಣ, ಐಪಿಎಲ್ ಹಗರಣ, ಸತ್ಯಂ ಹಗರಣ ಏಳು ಸಾವಿರ ಕೋಟಿ, ಎಲ್ ಐ ಸಿ ಹಗರಣ, ಇಸ್ರೋ ಹಗರಣ, ವಿಐಪಿಗಳಿಗಾಗಿ ಪಡೆದ ಹೆಲಿಕ್ಯಾಪ್ಟರ್ ಹಗರಣ , ಟೆಟ್ರಾಟ್ರಕ್ ಖರೀದಿ ಒಪ್ಪಂದ, ಜಿ.ವಿ.ಕೆ.ಸಿಂಗ ಹದಿನಾಲ್ಕು ಕೋಟಿ ಲಂಚ, ವೋಟಿಗಾಗಿ ಗರಿ ನೋಟು, ವಿಶ್ವಾಸ ಮತಯಾಚನೆ ಸಮಯದಲ್ಲಿ ಲಂಚ , ಮ್ಯಾಚ್ ಫಿಕ್ಸಿಂಗ್ ಹೀಗೆ ಇವರ ಪಟ್ಟಿ ಬೆಳಿಯುತ್ತಾ ಹೋಗುತ್ತದೆ.
ಇಷ್ಟೆಲ್ಲ ಮಾಡಿದ ಯುಪಿಎ ಒಳ್ಳೆಯ ಯೋಜನೆಗಳು ಮಾಡಿಲ್ಲವೆಂದರೆ ತಪ್ಪಾಗುತ್ತದೆ. ದೇಶದಲ್ಲಿ ಹೊಸದೊಂದು ಗುರುತಿನ ಚೀಟಿ ನೀಡಿದ್ದು ಕಾಂಗ್ರೆಸ್ ಅದೆ ಆಧಾರ, ಆರ್ ಟಿ ಇ ಕಾಯ್ದೆ ಜಾರಿಗೆ ತಂದು, ಶಿಕ್ಷಣದಲ್ಲಿ ಗಣನೀಯ ಬದಲಾವಣೆ ತಂದಿದೆ, 371 ಕಲಂ ಜಾರಿ ಮಾಡಿದೆ, ಆಹಾರ ಭದ್ರತಾ ಕಾಯ್ದೆಯಡಿ ಬಡವರನ್ನು ಮುಟ್ಟಿದೆ, ಲೋಕಪಾಲ್ ಬಿಲ್, ಆರನೆ ವೇತನ ಸರಕಾರಿ ನೌಕರರಿಗೆ ಕೊಟ್ಟ ವರ, ಹಲವು ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ , ಮಹಿಳಾ ಸಬಲೀಕರಣಕ್ಕಾಗಿ ಹಲವು ಯೋಜನೆಗಳು, ರೈತರಿಗಾಗಿ, ಬಡವರಿಗಾಗಿ , ಯುವಕರಿಗಾಗಿ, ಮಾಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಕೂಲಿ ಕೊಡುವ ಮಹತ್ವದ ಯೋಜನೆ , ಕೃಷಿಯಲ್ಲಿ ಗಣನೀಯ ಬದಲಾವಣೆ, ಪೋಲಿಯೋ ಮುಕ್ತ ಬಾರತ, ಈ ಪಟ್ಟಿಯೂ ತುಂಬಾ ಒಳ್ಳೆಯದೆ ಇದೆ.
ಕೇಂದ್ರ ಸರಕಾರ ಮೂರನೆ ಅವಧಿಗೆ ಅಧಿಕಾರ ಹಿಡಿಯಬೇಕಾದರೆ ಮೊದಲು ಕಾಂಗ್ರೆಸ್ನಲ್ಲಿರುವ ಭ್ರಷ್ಟಾಚಾರ ಸಾಬೀತಾಗಿ ಪ್ರಕರಣ ಎದುರಿಸುತ್ತಿರುವ ಶಾಸಕರ ಹಾಗೂ ಸಚಿವರ ಕೈ ಬಿಡಬೇಕು ಅದನ್ನು ಜನತೆಯ ಮುಂದೆ ಇಡಬೇಕು, ರಾಷ್ಟ್ರೀಯ ಯೋಜನೆಗಳ ಪ್ರತಿಯೊಂದು ಪರಿಶೀಲನೆ ಮಾಡಬೇಕು, ಕಳಂಕಿತರನ್ನು ಮೊದಲು ರಾಜಕೀಯದಿಂದ ದೂರವಿಡಬೇಕು, ಯುವಜನತೆಗೆ ಹೆಚ್ಚಿನ ಆದ್ಯತೆ ನೀಡಬೇಕು, ಈ ಅನುವಂಶೀಯ ರಾಜಕಾರಣಕ್ಕೆ ಮೊದಲು ಬ್ರೇಕ್ ಹಾಕಬೇಕು, ಪಕ್ಷದಲ್ಲಿ ಜಾತಿ ಹೆಸರು ಹೇಳಿ ಪಕ್ಷ ಹಾಳು ಮಾಡುವವರಿಗೆ ಬುದ್ದಿ ಕಲಿಸಬೇಕು, ರೈತರ ಯೋಜನೆಗಳನ್ನು ಇನ್ನಷ್ಟು ಬಲಪಡಿಸುವ ಲೆಕ್ಕಾಚಾರ ಮಾಡಬೇಕು,
ಈಗಾಗಲೇ ಆಡಳಿತ ಮಾಡಿರುವ ಹಿರಿಯ ರಾಜಕಾರಣಿಗಳ ಮಕ್ಕಳಿಗೆ ಟಿಕೇಟ್ ನೀಡುವ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು, ಪಕ್ಷ ಹಳ್ಳಿಯಿಂದಲೆ ಕಟ್ಟುವ ಕೆಲಸವಾಗಬೇಕು, ಸಾಮಾನ್ಯ ಜನರ ಬಳಿಗೆ ರಾಜಕೀಯ ಪ್ರತಿನಿಧಿಗಳು ಹೋಗಬೇಕು, ಈಗಾಗಲೆ ಮಾಡಿರುವ ತಪ್ಪುಗಳಿಗೆ ಕ್ಷಮೆ ಯಾಚಿಸಬೇಕು, ಹಗರಣದಲ್ಲಿ ಭಾಗಿಯಾದ ಮಾಹಾನುಭಾವರನ್ನು ಈ ಚುನಾವಣೆಯ ದೃಷ್ಠಿಯಿಂದ ಆದಷ್ಟು ದೂರವಿಡುವುದು ತುಂಬಾ ಸೂಕ್ತ, ಈಗಾಗಲೇ ಕೇಂದ್ರದಲ್ಲಿ ಸಚಿವರಾಗಿರುವ ಲೋಕಸಭೆ ಸದಸ್ಯರ ಹಾಗೂ ಸಚಿವರ ಕ್ಷೇತ್ರ ಪ್ರವಾಸ ಮಾಡಿ ಅವರು ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಏನು? ಎಂಬ ಪ್ರಗತಿ ಪರಿಶೀಲನೆ ನಡೆಸಬೇಕು, ಆ ಪ್ರಗತಿಯ ಜೊತೆಗೆ ಜನತೆಯ ಅಭಿಪ್ರಾಯವನ್ನು ಗಮನಿಸಿ ಅವರ ಮುಂದಿನ ರಾಜಕೀಯ ಭವಿಷ್ಯ ನಿರ್ಮಿಸಬೇಕು,
ಕಾಂಗ್ರೆಸ್ ತನ್ನ ರಾಜಕೀಯ ಭವಿಷ್ಯ ಉಳಿಸಿಕೊಳ್ಳಬೇಕಾದರೆ ಇದೀಗ ತುಂಬಾ ಜಾಣತನದಿಂದ ಮುನ್ನುಗ್ಗಬೇಕು ಇಲ್ಲವಾದರೆ ಕನಿಷ್ಠ ವಿರೋಧ ಪಕ್ಷದ ಸ್ಥಾನವು ಗತಿಯಿಲ್ಲದಂತಾಗುತ್ತದೆ. ಇಲ್ಲಿಯವರೆಗೂ ನಡೆದ ಎಲ್ಲಾ ಘಟನೆಗಳು ದೇಶದ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ ಅವುಗಳನ್ನು ಜನ ಮನಸ್ಸಿನಲ್ಲಿ ಇಟ್ಟುಕೊಂಡು ಬೇರೆ ರಾಜಕೀಯ ಪಕ್ಷಕ್ಕೆ ಬೆಂಬಲ ನೀಡಿದರೆ ಕಾಂಗ್ರೆಸ್ ಯಾವ ಮೂಲೆಗೂ ಇರುವುದಿಲ್ಲಾ ಅಲ್ಲದೆ ಜನರು ಈಗ ಮೊದಲಿನ ಹಾಗೆ ಆಸೆ ಆಮಿಷ್ಗಳಿಗೆ ಬಲಿಯಾಗುವವರಲ್ಲ ಜನತೆಯಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಾಗಿದೆ ತಿಳುವಳಿಕೆ ಹೆಚ್ಚಾಗಿದೆ ಯಾರಿಗೆ ಓಟು ಕೊಟ್ಟರೆ ದೇಶ ಉಳಿಯುತ್ತದೆ ಬೆಳಿಯುತ್ತದೆ ಎಂಬ ವಿಚಾರವಂತ ಸಮಾಜ ನಿರ್ಮಾಣವಾಗಿದೆ ಅದಕ್ಕಾಗಿ ಕಾಂಗ್ರೆಸ್ ಈಗಲಾದರು ಕಣ್ಣು ತೆರೆದು ಆಗಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಜನತೆಗೆ ಮನವರಿಕೆ ಮಾಡಿಕೊಡಲಿ ಜನರ ಮನಗೆಲ್ಲುವ ಕೆಲಸವಾಗಲಿ. ಈಗ ನೀವು ಅನುಷ್ಠಾನಕ್ಕೆ ತಂದಿರುವ ಯೋಜನೆಗಳು ನೈಜವಾಗಿ ಜನತೆಗೆ ಮುಟ್ಟಿವೆಯೆ? ಎಂಬ ವಿಷಯ ಖಾತ್ರಿ ಪಡಿಸಿಕೊಳ್ಳಿ ಇಲ್ಲವಾದರೆ ಪಂಚ ರಾಜ್ಯಗಳಲ್ಲಿನ ಫಲಿತಾಂಶ ಭಾರತದಲ್ಲಿ ಮರುಕಳಿಸಿದರೆ ಆಶ್ಚರ್ಯ ಪಡಬೇಕಾಗಿಲ್ಲ.
ಕಾಂಗ್ರೆಸ್ ಮೊದಲಿನಿಂದಲೂ ಪ್ರಧಾನಿ ಹೆಸರು ಬಹಿರಂಗ ಪಡಿಸಿಲ್ಲಾ ಆದರೆ ಈಗಿನ ಹಲವು ಸುಳಿವುಗಳು ರಾಹುಲ್ ಗಾಂಧಿಯಂದು ಬಿಂಬಿಸುತ್ತಿವೆ ಆದರೆ ಕಾಂಗ್ರೆಸ್ನ ಒಳ ರಾಜಕೀಯದಲ್ಲಿ ಇನ್ನು ಹಿರಿಯ ಮಾಹಾನ್ ಮುತ್ಸದ್ದಿಗಳು ಇದನ್ನು ಒಪ್ಪುವುದಿಲ್ಲಾ ಮತ್ತೆ ಅನುವಂಶೀಯ ರಾಜಕಾರಣದಿಂದ ಕಾಂಗ್ರೆಸ್ನಲ್ಲಿ ಬಂಡಾಯ ಭುಗಿಲೇಳುವ ಲೆಕ್ಕಾಚಾರ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಎಲ್ಲವು ಸರಿಯಾಗಿದೆ ಎನ್ನುವ ಪಕ್ಷದಲ್ಲಿ ಪ್ರಧಾನಿ ಅಭ್ಯರ್ಥಿ ವಿಷಯದಲ್ಲಿ ಗೊಂದಲ ಸೃಷ್ಠಿಯಾಗುವ ಸಾಧ್ಯತೆಗಳು ಹೆಚ್ಚು ಅದಕ್ಕಾಗಿ ಸೂಕ್ತ ವ್ಯಕ್ತಿಯ ಆಯ್ಕೆ ಮಾಡಬೇಕಾದ ಜವಾಬ್ದಾರಿ ಕಾಂಗ್ರೆಸ್ನ ಮೊದಲ ಆದ್ಯತೆಯಾಗಬೇಕು. ಅಭ್ಯರ್ಥಿಯನ್ನು ಆರಿಸುವಾಗ ದೇಶದ ಹಿರಿಯರ ಚಿಂತಕರ ರಾಜಕೀಯ ಗುರುಗಳ ಸಲಹೆ ಪಡೆಯಬೇಕು ದೇಶದ ಚುಕ್ಕಾಣಿ ಹಿಡಿಯುವ ನಾಯಕ ಹೇಗೆ ಈ ದೇಶದ ಜನತೆಯ ಪಾಲಿಗೆ ಒಬ್ಬ ಉತ್ತಮ ನಾಯಕನಾಗುತ್ತಾನೆ ಎನ್ನುವ ವಿಚಾರ ದೃಷ್ಠಿಯಲ್ಲಿಟ್ಟುಕೊಂಡು ಈ ಆಯ್ಕೆ ನಡೆಯಬೇಕು.
ಮಾಹಾಜನಗಳೆ ಕಾಂಗ್ರೆಸ್ ಸರಕಾರ ಮಾಡಿರುವ ಆಡಳಿತ ಇಡಿ ದೇಶಕ್ಕೆ ಗೊತ್ತಿರುವ ಸಂಗತಿ ಪ್ರಜ್ಞಾವಂತರಾದ ತಾವುಗಳು ಈ ಪಕ್ಷದ ಆಡಳಿತ ಅನುಭವ ಪಡೆದಿರುವಿರಿ ಯಾವ ರೀತಿ ನಿಮ್ಮ ನಿರ್ಣಯ ಕೊಡುವಿರಿ ನಿಮಗೆ ಬಿಟ್ಟಿದ್ದು ಅದರ ಕೆಲವು ಸಾಧಕ ಭಾಧಕಗಳನ್ನು ಬಿಚ್ಚಿಡುವ ಕೆಲಸ ಮಾಡಿರುವೆ ಅಷ್ಟೆ. ಜನಾಭಿಪ್ರಾಯದ ಮುಂದೆ ಎಲ್ಲರು ತಲೆಬಾಗಲೇಬೇಕು ಏಕೆಂದರೆ ನಮ್ಮ ದೇಶ ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿದ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಅದನ್ನು ಉಳಿಸುವುದು ಅಳಿಸುವುದು ಸಾಮಾನ್ಯ ಜನರ ಕೈ ಬೆರಳಿನ ಮೇಲೆ ನಿಂತಿದೆ ಯೋಚಿಸಿ ಒಳ್ಳೆಯ ಜನಪರ ಸರಕಾರವನ್ನು ಈ ಭಾತರಕ್ಕೆ ಕೊಡಿ ಆಸೆ ಆಮಿಷ್ವೆಲ್ಲವನ್ನು ಬಿಡಿ.