ಅವರದ್ದು ಐವತ್ತರ ಆಸುಪಾಸಿನ ವಯಸ್ಸು, ಮನೆಯಲ್ಲಿ ನಾಲ್ಕು ಮಕ್ಕಳು, ಮೂರು ಹೆಣ್ಣುಮಕ್ಕಳು, ಚಿಕ್ಕ ವಯಸ್ಸಿನಲ್ಲಿಯೆ ಪತಿಯಾದವನು ಬದುಕಿನ ಅರ್ಧದಾರಿಯಲ್ಲಿಯೆ ಕೈಕೊಟ್ಟು ಹೋದ. ಆ ಶಿವನಿಗೆ ಇವರು ಸುಂದರ ಜೀವನ ನಡೆಸುವುದು ಇಷ್ಟವಿಲ್ಲದಂತೆ, ಎಳಿವಯಸ್ಸಿನಲ್ಲಿ ಅಂಗವಿಕಲತೆ, ಇವೆಲ್ಲದರ ಮಧ್ಯೆ ಅಂಗನವಾಡಿ ಕೆಲಸ ಮಾಡಬೇಕು. ನನಗಿರುವ ಈ ಸಂಬಳದಲ್ಲಿ ಮಕ್ಕಳ ಓದಿಸುವುದು, ಅವರ ಮದುವೆ ಮಾಡುವುದು, ಜೀವನ ನಡೆಸುವುದು ಎಷ್ಟು ಕಷ್ಟ ಎಂದು ಹೇಳಿವಾಗ, “ಆ ತಾಯಿಯ ಕಣ್ಣಲ್ಲಿ ಕಣ್ಣೀರು ಸದ್ದಿಲ್ಲದೆ ಕಣ್ಣರೆಪ್ಪೆಗಳ ಮೂಲಕ ಗಲ್ಲದ ಮೇಲೆ ಇಳಿದು ಕುಳಿತಿತ್ತು.” ಹೋಗಲಿ ಹೊರಗಡೆ ಏನಾದರು ಬೇರೆ ವ್ಯವಹಾರ ಮಾಡೋಣವೆಂದರೆ, ಜನರೆಲ್ಲ ಇವಳಿಗೇನು ಕಡಿಮೆಯಿದೆ, ಸರಕಾರಿ ನೌಕರಿಯಿದೆ, ಉಣ್ಣಕ್ಕೆ ಅಂಗನವಾಡಿ ಆಹಾರವಿದೆ ಎನ್ನುತ್ತಾರೆ. ಹೊರಗಿನವರಿಗೇನು ಗೊತ್ತು ಅಂಗನವಾಡಿ ಶಿಕ್ಷಕಿಯರ ಪಾಡು.
ಇನ್ನೊಬ್ಬರು ಇನ್ನು ಮೂವತ್ತು ದಾಟದ ಯುವತಿ, ಮನೆಯಲ್ಲಿ ಇಬ್ಬರೂ ಮಕ್ಕಳು ಕೆಲಸ ಒಂದುಕಡೆ ಮನೆ ಇನ್ನೊಂದು ಕಡೆ, ಅಂಗನವಾಡಿ ಕಾರ್ಯಕರ್ತೆಯಾಗಿ ಹತ್ತರಿಂದ ಹದಿನೈದು ವರ್ಷ ಕಳೆದರು ಆ ಗ್ರಾಮಕ್ಕೆ ಹೋಗಲು ಇವತ್ತಿಗೂ ಒಂದು ಸರಕಾರಿ ಬಸ್ಯಿಲ್ಲ. ನಾಲ್ಕು ಕಿ.ಮೀ. ನಡೆದುಕೊಂಡೆ ಹೋಗಿ ಡ್ಯೂಟಿ ಮಾಡಬೇಕು. ಒಬ್ಬ ಮಗಳಿಗೆ ಯಜಮಾನ ಜೀವಂತವಿರುವಾಗಲೇ ಮೆಡಿಕಲ್ ಮಾಡಿಸಿ ಅವರು ದೂರವಾಗಿದ್ದಾರೆ. ಇದೀಗ ಅಂಗನವಾಡಿ ಶಿಕ್ಷಕರಿಗೆ ಬರುವ ಸಂಬಳದಲ್ಲಿ ಮಗಳ ಮೆಡಿಕಲ್ಗೆ ಹಣ ಕಟ್ಟಲಾಗದೆ, ಅವರು ತೀರಿದ ಬಳಿಕ ಮೆಡಿಕಲ್ ಅರ್ಧಕ್ಕೆ ನಿಲ್ಲಿಸಿ, ಮಗಳೀಗೀಗ ಮದುವೆ ಮಾಡುವುದಕ್ಕೂ ಸಾಲ ಮಾಡಬೇಕಾದ ಪರಿಸ್ಥಿತಿಯಿದೆ. ಇನ್ನು ಇರುವ ಒಬ್ಬ ಮಗನ ಶಿಕ್ಷಣವು ಸಂಪೂರ್ಣಗೊಳಿಸಲು ಸಾಧ್ಯವಾಗುತ್ತದೆಯೊ ಇಲ್ಲವೊ ಎಂಬ ಆತಂಕದಿಂದಲೆ ಪ್ರತಿದಿನ ನಾಲ್ಕು ಕಿ.ಮೀ. ದೂರ ನಡೆದು ಕೆಲಸ ಮಾಡುತ್ತಿದ್ದಾರೆ. ಈಗಿರುವ ಅವರ ಸಂಬಳ ಯಾವುದ್ದಕ್ಕೂ ಸಾಕಾಗುವುದಿಲ್ಲ.
ಮತ್ತೊಬ್ಬರು ತಮ್ಮ ಜೀವನ ಪೂರ್ತಿ ಮದುವೆಯಾಗದೆ, ತನ್ನ ತಾಯಿ ತಮ್ಮಂದಿರಗಾಗಿ ಜೀವನ ಕಳೆಯುತ್ತಿರುವರು. ಅಂಗನವಾಡಿ ಶಿಕ್ಷಕಿಯ ಸಂಬಳ ಅಮ್ಮನ ಬೀಪಿ ಮಾತ್ರೆ ಖರೀದಿಗೂ ಸಾಕಾಗುವುದಿಲ್ಲ. ಮೂವರು ತಮ್ಮಂದಿರ ಮದುವೆ ಮಾಡುವುದು ಹೇಗೆ ಎಂಬ ಪ್ರಶ್ನೆಯಲ್ಲಿ ಜೀವನ ಕಳೆಯುತ್ತಿದ್ದಾರೆ. ವಯಸ್ಸಾದರು ಹಣದ ಕೊರತೆಯಿಂದ ಮದುವೆಯ ಗೊಡವಿಗೆ ಹೋಗದೆ ಬದುಕು ಕಳೆಯುತ್ತಿದ್ದಾರೆ.
ಈ ಮೂವರು ತಾಯಂದಿರ ಕಥೆ ಕೇಳಿದ ಬಳಿಕ ನಿಮಗೆ ಅಂಗನವಾಡಿ ಶಿಕ್ಷಕರ ವಾಸ್ತವತೆ ಅರಿವಾಗಿರುತ್ತದೆ. ಭಾರತದಲ್ಲಿ ಪೂರ್ವಪ್ರಾಥಮಿಕ ಶಿಕ್ಷಕರಿಗೆ ಕಡಿಮೆ ಸಂಬಳ ನೀಡುವುದರಿಂದ ಹಲವು ಕಥೆಗಳು ನಿಮ್ಮ ಅಹವಾನೆಗೆ ಬಂದಿರುತ್ತವೆ. ಇಲ್ಲಿ ನಾನು ಅಮ್ಮಂದಿರನ್ನು ತುಂಬಾ ಗೌರವ ಪೂರ್ವಕವಾಗಿ ಕಾಣುವ ಮೂಲಕ ಅವರ ಕರುಣಾಜನಕ ಕಥೆಗಳನ್ನು ಕೇಳಿದ ಹಿನ್ನಲೆಯಲ್ಲಿ ಉಲ್ಲೇಖಿಸಿದ್ದೇನೆ. ಈ ದೇಶದಲ್ಲಿ ಅಂಗನವಾಡಿ ಶಿಕ್ಷಣ ಬಹುಮುಖ್ಯವಾಗುತ್ತದೆ ಆದರೆ ಅಲ್ಲಿ ದುಡಿಯುವ ಶಿಕ್ಷಕರಿಗೆ ಸಂಬಳ ಮಾತ್ರ ಕಡಿಮೆ. ಗುಣಾತ್ಮಕ ಶಿಕ್ಷಣ ಕೊಡಿ ಎಂದು ಹೇಳುವ ಸರಕಾರಗಳು ಅವರಿಗೆ ನೀಡುವ ಸಂಬಳ ಅವರ ಬದುಕಿನ ಹಸಿವು ನೀಗಿಸುತ್ತದೆಯೆ ಎಂಬ ವಿಚಾರ ಮಾತ್ರ ಮಾಡುವುದಿಲ್ಲವೆಂಬುವುದು ವಿಪರ್ಯಾಸ.
ಪೂರ್ವಪ್ರಾಥಮಿಕ ಶಿಕ್ಷಣ ಮಕ್ಕಳ ಬದುಕಿನಲ್ಲಿ ಬಹಳ ಮುಖ್ಯಪಾತ್ರವಿದೆ. ಅಲ್ಲಿನ ಕೆಲಸದ ಲಿಸ್ಟ ಕೇಳಿದರೆ ಬೆರಗಾಗುತ್ತೀರಿ. ಸರಕಾರದ ಯಾವುದೇ ಯೋಜನೆ ಜನರಿಗೆ ತಲುಪಿಸಲು ಅಮ್ಮಂದಿರು ಬೇಕು ಆದರೆ ಅವರ ಹಸಿವು ನೀಗಿಸುವಷ್ಟು ಸಂಬಳ ಕೊಟ್ಟರೆ ಸರಕಾರಕ್ಕೆ ತೊಂದರೆಯಾಗುತ್ತದೆ ಹೇಗಿದೆ ನೋಡಿ ಸರಕಾರಗಳ ದಗಲಬಾಜಿ ಆಟ. ಪೂರ್ವಪ್ರಾಥಮಿಕ ಶಿಕ್ಷಣ, ಪೌಷ್ಠಿಕ ಆಹಾರ ವಿತರಣೆ, ಜನಗಣತಿ, ದನಗಳ ಗಣತಿ, ಗರ್ಬಿಣಿಯರ ಆರೈಕೆ, ಅಪೌಷ್ಠಿಕ ಮಕ್ಕಳ ಆರೈಕೆ ಹೀಗೆ ಹತ್ತು ಹಲವು ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಅಂಗನವಾಡಿ ಅಮ್ಮಂದಿರಿಗೆ ಅನ್ಯಾಯವಾಗುತ್ತಿದೆ ಎಂಬುವುದು ನಿನ್ನೆ ಇವತ್ತಿಂದಲ್ಲ. ಹಲವು ವರ್ಷಗಳಿಂದ “ಕೆಲಸ ಹೆಚ್ಚು ಸಂಬಳ ಕಡಿಮೆ” ತೆಗೆದುಕೊಳ್ಳುತ್ತಿರುವ ಏಕೈಕ ಉದ್ಯೋಗಿಯಂದರೆ ಅವರು ಅಂಗನವಾಡಿ ಶಿಕ್ಷಕರು.
ಇಡಿ ದೇಶ ಪೂರ್ವ ಪ್ರಾಥಮಿಕ ಶಿಕ್ಷಣದ ಗುಣಮಟ್ಟದ ಮೇಲೆ ನಿಂತಿದೆ. ಪೂರ್ವಪ್ರಾಥಮಿಕ ಶಿಕ್ಷಣ ಗುಣಮಟ್ಟವಾಗಬೇಕಾದರೆ ಅಂಗನವಾಡಿ ಅಮ್ಮಂದಿರ ಸಂಬಳ ಹೆಚ್ಚುಮಾಡಿ ಅವರಿಗೂ ಗೌರವ ನೀಡಿ ಆಗಮಾತ್ರ ಪೂರ್ವಪ್ರಾಥಮಿಕ ಶಿಕ್ಷಣ ಉತ್ತಮಗೊಳ್ಳುತ್ತದೆ. ಇವತ್ತು ಎಷ್ಟೊ ಜನ ಅಂಗನವಾಡಿ ಶಿಕ್ಷಕರು ಸಂಬಳ ಕಡಿಮೆಯಿರುವುದನ್ನು ನೆಪಮಾಡಿಕೊಂಡು ಬೋದನೆಯಲ್ಲಿ ಕಡಿಮೆ ತೊಡಗಿಸಿಕೊಳ್ಳುತ್ತಾರೆ. ಕೊಡುವ ಸಂಬಳ ಅವರ ಕೆಲಸಕ್ಕೆ ಸರಿಹೊಂದುವುದಿಲ್ಲ ಎಂಬುವುದು ಎಲ್ಲರು ಗಮನಿಸಬೇಕಾದ ವಿಚಾರವಾಗಿದೆ.
ಇವತ್ತಿನ ಆರ್ಥಿಕತೆ, ಬೆಲೆ ಏರಿಕೆಗಳ ಮಧ್ಯೆ ಈಗಿರುವ ಸಂಬಳದಲ್ಲಿ ಅಂಗನವಾಡಿ ಶಿಕ್ಷಕರ ಬದುಕು ನಡೆಸುವುದು ಬಹಳ ಕಷ್ಟವಾಗಿದೆ. ಹಳ್ಳಿಗಳಲ್ಲಿಯು ಯಾವುದೇ ಸೌಕರ್ಯಗಳು ಸಿಗುವುದು ಕಷ್ಟವಾಗಿದೆ. ಇವರಿಗೆ ಕಡಿಮೆ ಸಂಬಳ ಇರುವ ಕಾರಣಕ್ಕೂ ಈ ಸರಕಾರಿ ನೌಕರಿಗೆ ಬೆಲೆಯಿಲ್ಲವೆನ್ನುವುದು ಕೂಡ ಒಂದು ವಾದವಿದೆ. ಅಂಗನವಾಡಿ ಶಿಕ್ಷಕರೆಂದರೆ ಅಸಡ್ಡೆ ಮನೋಭಾವ ಅನೇಕರಿಗಿದೆ. ನಮ್ಮ ತಾಯಿ ಬಳಿಕ ಸ್ಥಾನವಿರುವುದು ನಮ್ಮ ಅಂಗನವಾಡಿ ಶಿಕ್ಷಕರಿಗೆ ಮಾತ್ರ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಳ್ಳೆಯ ಮನಸ್ಸು ಮಾಡಬೇಕು. ಉನ್ನತ ಶಿಕ್ಷಣಕ್ಕೆ ನೀಡುವ ಅನುದಾನಕ್ಕಿಂತ ಪೂರ್ವಪ್ರಾಥಮಿಕ ಶಿಕ್ಷಣ ನೀಡಿದರೆ ಒಳಿತಾಗುತ್ತದೆ. ಇವತ್ತು ಪಿಜಿಯಲ್ಲಿ ಅನೇಕರು ಫೇಲ್ಆಗಿ ನಿರೂದ್ಯೋಗಿಗಳಾಗಲು ಕೆಜಿಯಲ್ಲಿ ಸರಿಯಾದ ಶಿಕ್ಷಣ ಸಿಗದೇಯಿರುವುದು ಎಂಬುವುದು ಅರ್ಥಮಾಡಿಕೊಳ್ಳಬೇಕು. ಈ ವಿಷಯವನ್ನು ನಮ್ಮ ದೇಶದ ಹಲವು ರಾಜ್ಯಗಳು ಅರ್ಥಮಾಡಿಕೊಂಡು ಈಗಾಗಲೇ ಅಂಗನವಾಡಿ ಶಿಕ್ಷಕರ ಸಂಬಳ ಹೆಚ್ಚು ಮಾಡಿದ್ದಾರೆ. ಕರ್ನಾಟಕದಲ್ಲಿಯೂ ಈ ಕೆಲಸ ಮಾಡಬೇಕು ಪೂರ್ವಪ್ರಾಥಮಿಕ ಶಿಕ್ಷಣ ಬೋದಿಸುವ ಅಂಗನವಾಡಿ ತಾಯಂದಿರ ಬೇಡಿಕೆಗಳನ್ನು ಈಡೇರಿಸಿ ಎಂಬುವುದು ನನ್ನ ಬಲವಾದ ಆಗ್ರಹ.