ಹಳ್ಳಿ ಬದುಕನ್ನು ಅನುಭವಿಸಿದ ದೇವೇಗೌಡರು ಮೇ 18, 1933 ರಂದು ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲೂಕಿನ ಹರದನಹಳ್ಳಿಯಲ್ಲಿ ಜನಿಸಿದರು. ಸಂಪ್ರದಾಯಸ್ತ ಕುಟುಂಬವಿದ್ದು, ಸಿವಿಲ್ ಎಂಜಿನಿಯರಿಂಗ್ನಲ್ಲಿ ಡಿಪೆÇ್ಲಮಾ ಪಡೆದ ಇವರಿಗೆ ಜನರ ಬಗ್ಗೆ ಇರುವ ಅಪಾರವಾದ ಕಾಳಜಿ ಮತ್ತು ನ್ಯಾಯಸಮ್ಮತ ಗುಣಗಳಿಂದ ರಾಜಕಾರಣಕ್ಕೆ ಸೇರಿದರು. ಆ ಸಮಯದಲ್ಲಿ ದೇಶದಲ್ಲಿ ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷ ಮಾತ್ರವಿತ್ತು. 1953ರಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರಾಗುವ ಮೂಲಕ ಅಧಿಕೃತ ರಾಜಕಾರಣಕ್ಕೆ ಪಾದಾರ್ಪಣೆ ಮಾಡಿದರು. 1962 ರವರೆಗೆ ಕಾಂಗ್ರೆಸ್ ಪಕ್ಷದಲ್ಲಿದ್ದು ನಂತರ, ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತು ವಿಧಾನ ಸಭೆಗೆ ಚುನಾಯಿತರಾದರು. ದೇವೆಗೌಡರು ಕರ್ನಾಟಕದಲ್ಲಿ ಅತೀಹೆಚ್ಚು ಮೈತ್ರಿ ಸರಕಾರ ರಚನೆ ಮಾಡಿದ್ದು ಕಾಂಗ್ರೆಸ್ನೊಂದಿಗೆ ಎಂದು ಇತಿಹಾಸ ಹೇಳುತ್ತದೆ. ದೇವೆಗೌಡರು ಮೂಲತ: ಕಾಂಗ್ರೆಸ್ನವರಾಗಿರುವುದೇ ಇದಕ್ಕೆ ಕಾರಣವಿರಬಹುದು.
ಸ್ವತಂತ್ರ ಅಭ್ಯರ್ಥಿಯಾಗಿ ಆ ಸಮುಯದಲ್ಲಿ ಮುಂದಿನ ಮೂರು ಚುನಾವಣೆಗಳಲ್ಲಿ ಸತತವಾಗಿ ಹೊಳೆನರಸೀಪುರ ಕ್ಷೇತ್ರದಿಂದ ವಿಧಾನಸಭೆಗೆ ಚುನಾಯಿತರಾದರು. 1972 ರಿಂದ 1976 ರವರೆಗೆ ಮತ್ತು ನವೆಂಬರ್ 1976 ರಿಂದ 1977 ರ ವರೆಗೆ ವಿಧಾನಸಭೆಯಲ್ಲಿ ವಿರೋಧಪಕ್ಷದ ನಾಯಕರಾಗಿದ್ದರು. 1975-76ರ ತುರ್ತು ಪರಿಸ್ಥಿತಿಯಲ್ಲಿ ಬಂಧನಕ್ಕೊಳಗಾಗಿದ್ದ ದೇವೇಗೌಡರು ನಂತರ ಕರ್ನಾಟಕ ಸರ್ಕಾರದಲ್ಲಿ ಲೋಕೋಪಯೋಗಿ ಮತ್ತು ನೀರಾವರಿ ಖಾತೆಗಳ ಸಚಿವರಾದರು. ಇದೇ ಸಮಯದಲ್ಲಿ ನಿರಾವರಿ ಕ್ಷೇತ್ರದಲ್ಲಿ ಗಣನೀಯವಾದ ಕೆಲಸ ಮಾಡಿದರು. 1987ರಲ್ಲಿ ನೀರಾವರಿ ಕ್ಷೇತ್ರದಲ್ಲಿ ಹೆಚ್ಚು ಕೆಲಸ ಮಾಡುವ ಮನಸ್ಸು ಹೊಂದಿದ್ದರು ಆದರೆ ಈ ಇಲಾಖೆಯ ಖಾತೆಗೆ ಸಾಕಷ್ಟು ಹಣ ಮಂಜೂರು ಮಾಡದೆ ಇದ್ದುದರ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದರು. 1991ರಲ್ಲಿ ಹಾಸನ ಲೋಕಸಭಾ ಕ್ಷೇತ್ರದಿಂದ ಲೋಕಸಭೆಗೆ ಚುನಾಯಿತರಾದರು. ಇದರಿಂದ ದೇವೆಗೌಡರ ರಾಜಕಾರಣ ರಾಜ್ಯದಿಂದ ಕೇಂದ್ರಕ್ಕೆ ಮುನ್ನುಗ್ಗಿತು. ದೇವೆಗೌಡರ ಬಗ್ಗೆ ಬರೆದ ಹಲವು ಪುಸ್ತಕಗಳಲ್ಲಿ “ಹಳ್ಳಿಯಿಂದ ದಿಲ್ಲಿತನಕ” ಎಂಬ ಪುಸ್ತಕದಲ್ಲಿ ಅವರ ರಾಜಕಾರಣ ಹಾಗೂ ಅವರ ಸಾಮಾಜಿಕ ಕೆಲಸಗಳು ಹೇಗೆ ಹಳ್ಳಿಯಿಂದ ದಿಲ್ಲಿ ರಾಜಕಾರಣಕ್ಕೆ ಶಿಫ್ಟ ಆಗಿದ್ದು ಬರೆದಿದ್ದಾರೆ.
ಜನತಾ ದಳಕ್ಕೆ ರಾಜ್ಯ ಮಟ್ಟದಲ್ಲಿ ಅಧ್ಯಕ್ಷರಾದ ದೇವೇಗೌಡರು 1994 ರಲ್ಲಿ ಕರ್ನಾಟಕ ರಾಜ್ಯದ 14 ನೆ ಮುಖ್ಯ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತ ಗೌಡರು ಅನೇಕ ಜನಪರವಾದ ಕೆಲಸಗಳನ್ನು ಮಾಡಿದರು. ಹೆಚ್ಚು ಕಾಲ ಉಳಿಯಬಲ್ಲ ಸಾಮಾಜಿಕ ಬದಲಾವಣೆ ತರಬಲ್ಲ ಕೆಲಸಗಳನ್ನು ಕೈಗೆತ್ತಿಕೊಂಡರು. ನಿರಾವರಿ ಕ್ಷೇತ್ರದಲ್ಲಿ ಅನೇಕ ಕೆಲಸಗಳು ಇವತ್ತಿಗೂ ಇಂದಿನ ಮುಖ್ಯಮಂತ್ರಿಯಾಗುವವರಿಗೆ ಮಾದರಿಯಾಗಿವೆ ಎಂದರೆ ತಪ್ಪಾಗದು. 1996 ರಲ್ಲಿ ಯಾವ ಒಂದು ರಾಜಕೀಯ ಪಕ್ಷಕ್ಕೂ ಲೋಕಸಭೆಯಲ್ಲಿ ಸ್ಪಷ್ಟ ಬಹುಮತವಿರಲಿಲ್ಲ. ಆಗ ಅನೇಕ ರಾಜಕೀಯ ಪಕ್ಷಗಳ ಮೈತ್ರಿತ್ವವಾದ ತೃತೀಯ ರಂಗ ದೇವೇಗೌಡರನ್ನು ತಮ್ಮ ನಾಯಕರಾಗಿ ಚುನಾಯಿಸಿತು. ದೇವೇಗೌಡರು ಮೇ 30, 1996 ರಂದು ಭಾರತದ 11 ನೆ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. 1997ರವರೆಗೆ ಪ್ರಧಾನ ಮಂತ್ರಿ ಸ್ಥಾನದಲ್ಲಿದ್ದ ದೇವೇಗೌಡರು ಹಲವು ರಾಜಕೀಯ ಕಾರಣಗಳಿಗೆ ರಾಜ್ಯದ ಕಡೆಗೆ ಮುಖಮಾಡುವಂತಾಯಿತು. ಕೇಂದ್ರದಲ್ಲಿಯ ಅವರ ಹಲವು ಕಾರ್ಯಕ್ರಮಗಳು ಈಗಲೂ ಉಲ್ಲೇಖವಾಗುತ್ತವೆ. ದೇವೆಗೌಡರ ಅವಧಿಯಲ್ಲಿನ ಕೆಲಸಗಳನ್ನು ರಾಜಕಾರಣದಲ್ಲಿ ಆಗಾಗ ಉಲ್ಲೇಖಗಳಾಗಿ ಬಳಸಿಕೊಳ್ಳುತ್ತಿರುವುದು ಕರ್ನಾಟಕ ಹೆಮ್ಮೆಯನಿಸುತ್ತದೆ.
ಶ್ರೀ ಹೆಚ್.ಡಿ.ದೇವೇಗೌಡರ ಅವರು ಸಾಮಾಜಿಕ-ಆರ್ಥಿಕ ಅಭಿವೃದ್ಧಿಯ ಸುಧಾರಕರು ಹಾಗೂ ಭಾರತದ ಭವ್ಯ ಸಂಸ್ಕøತಿ ಪರಂಪರೆಯ ಪ್ರಶಂಸಕರು ಎನ್ನಲಾಗುತ್ತದೆ. ಶ್ರೀದೇವೇಗೌಡರು 20 ವರ್ಷದ ಯುವಕನಾಗಿದ್ದಾಗಲೇ ಸಕ್ರಿಯ ರಾಜಕಾರಣಕ್ಕೆ ಧುಮುಕಿದರು. ಯುವ ರಾಜಕಾರಣಕ್ಕೆ ಮುನ್ನುಡಿ ಬರೆದಿದ್ದು ಇದೀಗ ಇತಿಹಾಸವಾಗಿದೆ. ಮಧ್ಯಮ ವರ್ಗದ ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದ ಗೌಡರಿಗೆ ರೈತನ ಬದುಕಿನ ಕಷ್ಟಗಳು ಚೆನ್ನಾಗಿ ತಿಳಿದಿದ್ದವು. ಗೌಡರು ಬಡ ರೈತರು, ಸೌಲಭ್ಯ ವಂಚಿತರು ಹಾಗೂ ಸಮಾಜದ ದುರ್ಬಲ ವರ್ಗಗಳ ಒಳಿತಿಗಾಗಿ ತಾವೊಬ್ಬ ಹೋರಾಟಗಾರನಾಗುವುದಾಗಿ ಘೋಷಿಸಿದ್ದರು. ಈ ಘೋಷಣೆ ಅವರ ರಾಜಕೀಯ ದಿಕ್ಕನ್ನೆ ಬದಲಿಸುವಲ್ಲಿ ಕಾರಣವಾಯಿತು. ಅಲ್ಲಿಂದ ಇಲ್ಲಿಯವರೆಗೆ ಹಿಂದೆ ತಿರುಗಿ ನೋಡದ ಗೌಡರು ರಾಜ್ರ ರಾಷ್ಟ್ರ ರಾಜಕಾರಣದಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸುತ್ತಲೆ ನಡೆದರು. ಆನರ ಮನದೊಳಗೆ ಬೆಳೆಯುತ್ತಲೆ ಹೆಜ್ಜೆಯಿಟ್ಟರು. ಇವತ್ತಿನ ರಾಜಕಾರಣಕ್ಕೆ ಮಾದರಿ ರಾಜಕಾರಣಿಯಾಗಿ ಮುಂದುವರೆಯುತ್ತಲೆಯಿದ್ದಾರೆ. ಈ ಇಳಿ ವಯಸ್ಸಿನಲ್ಲಿಯೂ ಚಾಣಕ್ಯ ರಾಜಕಾರಣ ಮಾಡುತ್ತಿದ್ದಾರೆ. ಅಧಿಕಾರ ಗದ್ದುಗೆ ಗುದ್ದಾಟದಲ್ಲಿ ಅಧಿಕಾರದ ಗದ್ದುಗೆ ಏರಿ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾರೆ.
ಪ್ರಜಾಸತ್ತಾತ್ಮಕ ವ್ಯವಸ್ಥೆಯ ಕೆಳ ಸ್ತರದಿಂದ ಆರಂಭಿಸಿದ ಇವರ ಹೋರಾಟದ ಬದುಕು ರಾಜಕೀಯ ರಂಗದಲ್ಲಿ ಹಂತ ಹಂತವಾಗಿ ಮೇಲೇರಿತು. ಪ್ರಜೆಗಳ ಬದುಕನ್ನು ಅರೆತ ರಾಜಾ ಪ್ರಜೆಗಳ ಬದುಕನ್ನು ಹಸನು ಮಾಡಬಲ್ಲ ಎಂಬ ಸತ್ಯ ಅನುಷ್ಠಾನಗೊಳಿಸಿದರು. ಇವತ್ತಿಗೂ ಅವರ ರಾಜಕಾರಣವನ್ನು ಇಷ್ಟಪಡುವ ಮನಸ್ಸುಗಳಿವೆ. ಅವರ ರಾಜಕೀಯ ಬದುಕನ್ನು ಅನುಕರಣೆ ಮಾಡುವ ಜನರಿದ್ದಾರೆ. ಸ್ವಾತಂತ್ರ್ಯ ಮತ್ತು ಸಮಾನತೆಯ ಹರಿಕಾರರಾದ ಇವರು 1975-76ರಲ್ಲಿ ಕೇಂದ್ರ ಸರ್ಕಾರದ ಮೇಲೆ ಆಕ್ರೋಶಗೊಂಡರು ಹಾಗೂ ತುರ್ತು ಪರಿಸ್ಥಿತಿ ದಿನಗಳಲ್ಲಿ ಜೈಲು ವಾಸ ಅನುಭವಿಸಿದರು. ಶ್ರೀ ದೇವೇಗೌಡರು ಈ ಅವಧಿಯಲ್ಲಿ ಹೆಚ್ಚು ಕಾಲ ಓದುವುದರಲ್ಲಿ ತೊಡಗಿ ತಮ್ಮ ಜ್ಞಾನವನ್ನು ಇನ್ನಷ್ಟು ಸಮೃದ್ಧಗೊಳಿಸಿದರು. ನಿರಂತರ ಓದುವಿಕೆ ಹಾಗೂ ಆ ಅವಧಿಯಲ್ಲಿ ಕಾರಾಗೃಹದಲ್ಲಿದ್ದ ಭಾರತೀಯ ರಾಜಕಾರಣದ ಇತರ ಮುತ್ಸದ್ದಿಗಳ ಜೊತೆ ಒಡನಾಟವು ಅವರ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ನೆರವಾಯಿತು. ಬಂಧಮುಕ್ತರಾದ ನಂತರ ಅವರು ದೃಢ ವ್ಯಕ್ತಿಯಾಗಿ ಹೊರ ಹೊಮ್ಮಿದರು. ಜನರ ಆಶೋತ್ತರಗಳಿಗಾಗಿ ಮಿಡಿಯುವ ಈ ಹಿರಿಯ ಹೃದಯ ಇದೀಗ ಮತ್ತೊಮ್ಮೆ ತಮ್ಮ ರಾಜಕೀಯ ಚಾಣಕ್ಯತನವನ್ನು ಪ್ರದರ್ಶನ ಮಾಡಿದ್ದು ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆದು ಅಧಿಕಾರದ ಗದ್ದುಗೆ ಹಿಡಿದಿದ್ದಾರೆ.
1991ರಲ್ಲಿ ಹಾಸನ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ ಅವರು ವಿಶೇಷವಾಗಿ ರೈತರು ಒಳಗೊಂಡಂತೆ ರಾಜ್ಯದ ಸಮಸ್ಯೆಗಳನ್ನು ಪ್ರಸ್ತಾಪಿಸುವಲ್ಲಿ ಮುಂಚೂಣಿ ಪಾತ್ರ ವಹಿಸಿದರು. ಸಂಸತನಲ್ಲಿ ರೈತರ ಬವಣೆ ಮತ್ತು ಸಂಕಷ್ಟಗಳ ಮೇಲೆ ಬೆಳಕು ಚೆಲ್ಲಿ ಕೃಷಿಕರ ದನಿಯಾದರು. ಸಂಸತ್ ಮತ್ತು ಅದರ ಸಂಸ್ಥೆಗಳ ಘನತೆ ಮತ್ತು ಗೌರವಗಳನ್ನು ಎತ್ತಿ ಹಿಡಿಯುವಲ್ಲಿಯೂ ಸಹ ಇವರು ಹೆಸರು ಮಾಡಿದರು. ಜನವರಿ 1995ರಲ್ಲಿ ಶ್ರೀ ದೇವೇಗೌಡರು ಸ್ವಿಟ್ಜರ್ಲೆಂಡ್ಗೆ ಪ್ರವಾಸ ಕೈಗೊಂಡು, ಅಂತಾರಾಷ್ಟ್ರೀಯ ಆರ್ಥಿಕ ತಜ್ಞರ ಸಮಾವೇಶದಲ್ಲಿ ಪಾಲ್ಗೊಂಡರು. ಯುರೋಪ್ ಮತ್ತು ಮಧ್ಯಪೂರ್ವ ರಾಷ್ಟ್ರಗಳಿಗೆ ಇವರು ಕೈಗೊಂಡ ಪ್ರವಾಸವು ಓರ್ವ ಸಮರ್ಪಣಾ ಮನೋಭಾವ ರಾಜಕಾರಣಿಯ ಸಾಧನೆಗಳಿಗೆ ಸಾಕ್ಷಿಯಾಗುತ್ತದೆ. ಅವರ ಸಿಂಗಾಪುರ ಪ್ರವಾಸವು ರಾಜ್ಯಕ್ಕೆ ತುಂಬಾ ಅಗತ್ಯವಾದ ವಿದೇಶಿ ಬಂಡವಾಳವನ್ನು ತರುವಲ್ಲಿ ಯಶಸ್ವಿಯಾಗಿದ್ದು, ಅದು ಅವರ ವ್ಯವಹಾರಿಕ ಜಾಣ್ಮೆಯನ್ನು ಸಾಬೀತುಪಡಿಸುತ್ತದೆ. 1989ರಲ್ಲಿ ಜನತಾ ಪಕ್ಷದ ಅವರ ಸಮೂಹವು ಕರ್ನಾಟಕದಲ್ಲಿ ತಾನು ಸ್ಪರ್ಧಿಸಿದ 222 ವಿಧಾನಸಭಾ ಕ್ಷೇತ್ರಗಳಲ್ಲಿ ಕೇವಲ 2 ಕ್ಷೇತ್ರಗಳಲ್ಲಿ ಮಾತ್ರ ಗೆದ್ದು ಅತ್ಯಂತ ಕಳಪೆ ಸಾಧನೆ ಮಾಡಿತು. ಶ್ರೀ ದೇವೇಗೌಡರು ತಾವು ಸ್ಪರ್ಧಿಸಿದ ಎರಡು ಕ್ಷೇತ್ರಗಳಲ್ಲಿ ಪರಾಭವಗೊಂಡು ತಮ್ಮ ರಾಜಕೀಯ ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ಸೋಲಿನ ರುಚಿ ಕಂಡರು. ಸೋಲಿನ ಮೇಲೆ ಗೆಲವಿನ ಗೋಪುರ ಕಟ್ಟಿಕೊಂಡ ಗೌಡರು ರಾಜಕಾರಣದಲ್ಲಿ ಅತ್ಯಂತ ಮೇರುಗತಿಯನ್ನು ಸ್ಥಾಪಿಸುವಂತಾಗಿದ್ದು ಇತಿಹಾಸ.
ಈ ಬಾರಿ ಕರ್ನಾಟಕದ ರಾಜಕಾರಣ ಅತ್ಯಂತ ಕುತುಹಲ ಮೂಡಿಸಿತ್ತು. ಅತಂತ್ರ ವಿಧಾನಸಭೆ ಎಂಬ ಸಮೀಕ್ಷೆ ಎಲ್ಲಾಕಡೆ ಹರೆದಾಡುತ್ತಿತ್ತು. ರಾಷ್ಟ್ರ ಪಕ್ಷಗಳೆರಡು ರಾಜಕೀಯ ಆಟ ಮುಗಿಸಿ ಪ್ರಾದೇಶಿಕ ಪಕ್ಷದ ಮುಂದೆ ಮಂಡೆಯೂರಿದ್ದು ಇದೀಗ ದೇವೆಗೌಡರು ಕರ್ನಾಟಕ ಕಿಂಗ್ ಮೇಕರ್ ಆಗಿ ಬದಲಾದರು. ಇಬ್ಬರ ಜಗಳ ಮಧ್ಯೆ ಮೂರನೇಯವರಿಗೆ ಲಾಭ ಎನ್ನುವ ಗಾದೆ ಮಾತು ಸತ್ಯ ಮಾಡಿದರು. ಇದೀಗ ಕರ್ನಾಟಕದಲ್ಲಿ ಮಣ್ಣಿನ ಮಗನ ಆಡಳಿತ ಪ್ರಾರಂಭವಾಗಿದೆ. ರಾಜ್ಯರಾಜಕಾರಣ ದೇವೆಗೌಡರ ಮನೆ ಮೆಟ್ಟಿಲು ಹತ್ತಿದೆ. ಅಧಿಕಾರದ ಅದೃಷ್ಠ ದೇವತೆ ತಂದೆ ಮಕ್ಕಳ ಪಾಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಜನತೆ ಒಂದು ಸ್ಥಿರ ಮತ್ತು ಜನಪರ ಆಡಳಿತ ಕೊಡಲಿದ್ದಾರೆ ಎಂಬ ಭರವಸೆಯೊಂದಿಗೆ ಆಶಿಸುತ್ತೇನೆ. ಮೈತ್ರಿ ಸರಕಾರದ ಆಡಳಿತ ಸಾರ್ವಜನಿಕರಿಗೆ ಸಿಹಿಯಾಗಿರಲಿ ಎಂದು ಆಶಿಸುತ್ತೇನೆ.