ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ.
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ.
“ನಾವು ಬದಲಾದರೆ, ನಾಡು ತಾನಾಗಿಯೇ ಬದಲಾಗುತ್ತದೆ.” ಪ್ರಸ್ತುತ ಭಾರತದಲ್ಲಿ, ನಾವು ಎಂಬ ಪದ ಮರೆಯಾಗಿ ನೀವು ಎಂಬ ಪದ ಹೆಚ್ಚಾಗಿ ಬಳಕೆಯಾಗುತ್ತಿದೆ. ಭಾವನಾತ್ಮಕವಾಗಿ ನಾವೆಲ್ಲ ಬೇರೆಯೊಬ್ಬರ ಮೇಲೆ ಗೂಬೆಕೂರಿಸುವ ಕೆಲಸ ಮಾಡುತ್ತಿದ್ದೇವೆ. ಹನ್ನೆರಡನೇಯ ಶತಮಾನದಲ್ಲಿ ಶರಣರೆ ಈ ಮಾತನ್ನು ಹೇಳಿದ್ದಾರೆ. ನಾವೆಲ್ಲ ನೀವು ಸರಿಯಾಗಿ ಎಂದು ಹೇಳುವುದಕ್ಕಿಂತ ನಾವೆಲ್ಲ ಸರಿಯಾದರೆ ನಾಡು ಉಳಿಯುತ್ತದೆ ಎಂಬ ಮಾತನ್ನು ಮರೆಯುತ್ತಿದ್ದೇವೆ.
ನಮ್ಮ ಸುತ್ತಮುತ್ತಲಿನ ಅನೇಕ ವಿದ್ಯಮಾನಗಳಿಗೆ ನಾವೆಲ್ಲ ಸ್ಪಂದಿಸುವ ಸಮಯದಲ್ಲಿ ಇದೆಲ್ಲ ಅವರ ಕೆಲಸ ನಮ್ಮದಲ್ಲಾ ಎಂಬ ವಿಷಯ ಮುಂದಿಡುತ್ತೇವೆ. ಇತ್ತಿಚೆಗೆ ದೇಶದಲ್ಲಿ ಎದ್ದಿರುವ ಅನೇಕ ವಿದ್ಯಾಮಾನಗಳನ್ನು ಪರಿಗಣನೆಗೆ ತೆಗೆದುಕೊಂಡು ಒಂದು ಚಿಕ್ಕ ಅವಲೋಕನ ಮಾಡಿದಾಗ ಈ ವಿಷಯ ಹೆಚ್ಚಾಗಿದೆ ಎಂಬ ಸ್ಪಷ್ಟತೆ ಸಿಗುತ್ತದೆ. ಅವಸರದವರ ಮನೆಯಲ್ಲಿ ಅಕ್ಕಿಯಲ್ಲಿ ಕಲ್ಲನ್ನು ಕಾಣದೇ ತಿಂದು ಹಲ್ಲು ಮುರಿದುಕೊಂಡರು ಎಂಬಂತಾಗಿದೆ. ನಾವು ಅನೇಕ ವಿಷಯಗಳಿಗೆ ಅವಸರಕ್ಕೆ ಮೊರೆಹೋಗುತ್ತಿದ್ದೇವೆ. ಪ್ರತಿಕ್ಷಣ ನಡೆಯುವ ವಿದ್ಯಮಾನಗಳಿಗೆ ಸ್ಪಂದಿಸುತ್ತ ನಮ್ಮೊಳಗಿನ ಅದ್ಯಾವುದೊ ಒಂಟಿತನವನ್ನು ಪ್ರದರ್ಶನ ಮಾಡುತ್ತಿದ್ದೇವೆ. ಐಕ್ಯತೆಯ ನಾಡಿನಲ್ಲಿ ಅನೇಕತೆಯ ಬೀಡಿನಲ್ಲಿ ಹಲವು ಕೆಲಸಕ್ಕೆ ಬಾರದ ಚರ್ಚೆಗಳಿಗೆ ಗ್ರಾಸವಾಗುತ್ತಿದ್ದೇವೆ. ಸಧ್ಯ ಭಾರತದಲ್ಲಿ ನಾವೆಲ್ಲ ಏನು ಮಾತನಾಡಿದರೆ, ಏನು ಕೆಲಸ ಮಾಡಿದರೆ ಧೀಡೀರ್ ಪ್ರಚಾರಕ್ಕೆ ಬರುತ್ತೇವೆ ಎಂಬ ನಿಲುವು ನಮ್ಮದಾಗಿದೆ. ವಿಚಿತ್ರವಾದ ಹೇಳಿಕೆ ನೀಡಿದರೆ, ಇನ್ನಾವುದೊ ಧಾರ್ಮಿಕತೆಗೆ ಸಂಬಂಧಪಟ್ಟ ಹೇಳಿಕೆ ನೀಡಿದರೆ ನಾವು ಮುಂಚುಣಿಗೆ ಬರುತ್ತೇವೆ ಎಂಬ ಹುಚ್ಚಾಟಕ್ಕೆ ಬಿದ್ದು ಈ ರೀತಿ ಗೂಬೆಕೂರಿಸುವ ಕೆಲಸದಲ್ಲಿ ನಿರತರಾಗಿದ್ದೇವೆ.
ರೈತರ ಆತ್ಮಹತ್ಯೆ ಈ ದೇಶದಲ್ಲಿ ನಡೆದ ಮತ್ತೊಂದು ಭಯಬೀಳಿಸುವ ವಿದ್ಯಮಾನ. ಈ ವಿಷಯದಲ್ಲಿಯೂ ಎಲ್ಲರೂ ರಾಜಕೀಯ ಮಾಡಿದಂತು ಅಕ್ಷರಸಹ ಸತ್ಯ. ಆತ್ಮಹತ್ಯೆ ಮಾಡಿಕೊಂಡ ರೈತರ ಪರವಾಗಿ ಮಾತನಾಡಿ ಸರಕಾರವನ್ನು ಮುಜುಗರಕ್ಕೆ ಒಳಪಡಿಸಿ ಕೆಲವು ಜನ ಪ್ರಚಾರ ಪಡೆದರೆ, ಇನ್ನು ಕೆಲವು ಜನರು ಅವರ ವಿರುದ್ಧವೇ ಮಾತನಾಡಿ ಪ್ರಚಾರ ಪಡೆದಿದ್ದು ಮರೆಯಲು ಸಾಧ್ಯವಿಲ್ಲ. ನೆರಮನೆಯ ದು:ಖಕ್ಕೆ ಅಳುವವರ ಸಂಖ್ಯೆಗಿಂತ ಅವರ ದು:ಖಕ್ಕೆ ಮತ್ತಷ್ಟು ಎಣ್ಣೆ ಸುರಿಯುವ ಕೆಲಸ ಮಾಡಿದರೆ ಹೊರತು ಯಾರು ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ಯೋಚಿಸಲಿಲ್ಲ. ರೈತರು ಯಾವ ಉದ್ದೇಶಕ್ಕಾಗಿ ಆತ್ಮಹತ್ಯೆಯೆಂತಹ ವಿಚಾರಕ್ಕೆ ತಲೆಕೊಟ್ಟರು ಅವರಿಗೆ ಯಾವ ಸೌಲಭ್ಯ ಕೊಟ್ಟರೆ ಇದು ನಿಲ್ಲುತ್ತದೆ ಎಂಬ ವಿಚಾರವನ್ನು ಪ್ರಜೆಗಳು ಮಾಡಲಿಲ್ಲ ಪ್ರಜಾಪ್ರಭುಗಳು ಮಾಡಲಿಲ್ಲ ಆದರೆ ಆ ಕಾಲಘಟ್ಟಕ್ಕೆ ಅವರಿಗೆ ಎಷ್ಟು ಬೇಕೊ ಅಷ್ಟು ಪ್ರಚಾರ ಮಾತ್ರ ಎಲ್ಲರೂ ಮಾಡಿಕೊಂಡರು.
ಭಾರತದಲ್ಲಿ ಪ್ರಚಾರ ಗಿಟ್ಟಿಸುವಂತೆ ಮಾಡಿದ್ದು ಇತ್ತಿಚೆಗಿನ ದಲಿತ ವಿದ್ಯಾರ್ಥಿಯ ಸಾವು. ಆ ವಿದ್ಯಾರ್ಥಿ ದಲಿತ ಹೌದೊ ಅಲ್ಲವೊ ಅದು ಎರಡನೇಯ ವಿಚಾರ ಆದರೆ ಅವನೊಬ್ಬ ಈ ದೇಶದ ಪ್ರಜೆಯೆಂಬ ಮಾತನ್ನು ಯಾರು ಆಡಲಿಲ್ಲ. ಕೆಲವರು ಅವನು ದಲಿತ ಎಂಬ ವಿಚಾರಕ್ಕೆ ಪ್ರಚಾರ ಪಡೆದರೆ ಇನ್ನು ಕೆಲವರು ಅವನು ದಲಿತನಲ್ಲಾ ಅದಕ್ಕ ಸರಕಾರ ಹೊಣೆಯಲ್ಲಾ ಎಂಬ ವಿಚಾರಕ್ಕೆ ಪ್ರಚಾರ ಪಡೆದರು. ಒಬ್ಬರು ಸತ್ತರೆ ಅದನ್ನು ಹೇಗೆಲ್ಲ ನಾವು ಸಂಭ್ರಮ ಪಡುತ್ತೇವೆ ಎಂಬುವುದನ್ನು ಬಿಡಿಸಿ ಹೇಳುವ ಸ್ಥಿತಿಗತಿಗಳು ನಮ್ಮ ದೇಶದಲ್ಲಿ ಮಾತ್ರ ಸಾಧ್ಯ ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ. ಪ್ರತಿಯೊಂದರಲ್ಲಿಯೂ ರಾಜಕೀಯ ಹುಡುಕುವ ಇವರು ತಮ್ಮ ಬೇಳೆ ಹೇಗೆ ಬೇಯಿಸಿಕೊಳ್ಳಬಹುದೆಂಬ ವಿಚಾರದತ್ತ ಗಮನಕೊಡುತ್ತಾರಯೇ ಹೊರತು ಆ ಸಮಸ್ಯೆಯ ಪರಿಹಾರದ ಬಗ್ಗೆ ನಾವೆಲ್ಲ ಗಮನ ಕೊಡುವುದೇಯಿಲ್ಲ. ಈ ವಿದ್ಯಮಾನದಲ್ಲಿ ನಷ್ಟ ಅನುಭವಿಸಿದ್ದು ಆ ಸಾವಾದ ವ್ಯಕ್ತಿ ಹಾಗೂ ಆತನ ಕುಟುಂಬ ಪ್ರಚಾರದ ಲಾಭ ಪಡೆದುಕೊಂಡಿದ್ದು ಮಾತ್ರ ಮಾಹಾನ್ ಮುತ್ಸದ್ದಿಗಳು ಅಲ್ಲವಾ?
ನಮ್ಮ ರಾಷ್ಟ್ರದಲ್ಲಿ ಎಲ್ಲರೂ ಒಬ್ಬರು ಇನ್ನೊಬ್ಬರ ಮೇಲೆ ಹೇರುವ ಕೆಲಸ ಮಾಡುವುದರಲ್ಲಿ ನೀಸ್ಸೀಮರು. ಯಾರಿಗೂ ಮೈಮುರಿದು ಕೆಲಸ ಮಾಡಿ ಬದಲಾವಣೆ ತರಬೇಕೆಂಬ ಭಾವನೆ ಉಳಿದಿಲ್ಲ. ಕರುಳು ಕುಕ್ಕುವ ಜನರನ್ನು ಹೊತ್ತು ನಿಂತಿದೆ ಈ ಭಾರತ. ಸ್ವಹಿತಕ್ಕಾಗಿ ಬಡೆದಾಡುವ ಜನರ ಸಂಖ್ಯೆ ದಿನೆ ದಿನೇ ಹೆಚ್ಚಾಗುತ್ತಿದೆ. ಕರುಣೆಯಿಂದ ಕಂಬನಿಯ ಮಿಡಿಯುವ ಹೃದಯಗಳು ತುಂಬಾ ವಿರಳ ರೀತಿಯಲ್ಲಿ ಕಾಣುತ್ತಿದ್ದಾರೆ. ಅನಾದಿಕಾಲದಿಂದಲು ಅವಕಾಶಗಳನ್ನು ಪಡೆದವರೆ ಮುಂಚುಣಿಯಲ್ಲಿ ಕಾಣುವಂತಹ ಕಾಲವಾಗಿದೆ. ಯಾರಿಗೆ ಕೇಳಿದರು ನೀವು ಬದಲಾಗಬೇಕು, ಅವರು ಬದಲಾಗಬೇಕು, ಅದು ಸರಿಯಾಗಬೇಕು, ಇದು ಸರಿಯಾಗಬೇಕು, ಎಂಬ ಮಾತು ಬರುತ್ತದೆಯೇ ಹೊರತು ನಾನು ಸರಿಯಾಗಬೇಕು ಎಂಬ ಮಾತು ಮಾತ್ರ ಯಾರ ಬಾಯಿಯಲ್ಲಿಯೂ ಬರುವುದಿಲ್ಲ. ಇದನ್ನು ಕೂಡ ನಾವು ಸ್ವಅಸಹಿಷ್ಣು ಎಂದು ಕರೆಯಬಹುದಾಗಿದೆ.
ದೇಶ ಕಟ್ಟುವ ಕೆಲಸದಲ್ಲಿ ನಾವೆಲ್ಲ ಒಂದಾಗಿ ದುಡಿಯಬೇಕು ಎಂಬ ಮಾತನ್ನು ಪುರಾತನ ಕಾಲದಿಂದಲು ಕೇಳುತ್ತಾ ಬಂದಿದ್ದೇವೆ. ಸಮಾಜದಲ್ಲಿ ಕಹಿಯಾದ ಕಳೆಯನ್ನು ಕೀಳುತ್ತಾ ಬಂದಿದ್ದೇವೆ. ಬ್ರಿಟೀಷರು ನಮ್ಮನ್ನು ಒಡದಾಳುವ ನೀತಿ ರೂಪಿಸಲು ಮೂಲ ಕಾರಣ ನಮ್ಮಲ್ಲಿ ಒಗ್ಗಟ್ಟಿಲ್ಲದ್ದು ಎಂಬ ಕಹಿಸತ್ಯ ನಾವೆಲ್ಲ ಮರೆಯಬಾರದು. ಸಧ್ಯ ಭಾರತದಲ್ಲಿಯೂ ಬ್ರಿಟೀಷರು ಒಕ್ಕರಿಸಿದರೆ ಅವರ ಒಡೆದಾಳುವ ನೀತಿಗೆ ಇಲ್ಲಿ ಸಧ್ಯ ಪ್ರಾಶಸ್ತ್ಯವಾದ ವಾತಾವರಣ ನಿರ್ಮಾಣವಾಗಿದೆ. ರಾಜಕೀಯವೆಂಬ ಹುಚ್ಚು ಆಟದೊಳಗೆ ಎಲ್ಲರೂ ಮಗ್ನನಾಗಿದ್ದಾರೆ. ಈ ವಾತಾವರಣದಲ್ಲಿ ಎಲ್ಲರನ್ನು ಏನಾದರು ಒಡೆದು ಆಳಿದ ನೀತಿ ಬ್ರಿಟೀಷರು ಅನುಸರಿಸಿದರೆ ಮತ್ತೆ ಅವರ ಕೈಗೆ ಅಧಿಕಾರ ಕೊಡುವುರೇನೊ ಎಂಬ ಆತಂಕ ಕಾಡುತ್ತಿದೆ. ಇದೀಗ ಕಾಂಗ್ರೆಸ್ ನವರು ಬಿಜೆಪಿ ಮೇಲೆ ಬಿಜೆಪಿಯವರು ಕಾಂಗ್ರಸ್ ಮೇಲೆ ಗೂಬೆ ಕೂರಿಸುವ ಕೆಲಸ ಬಿಟ್ಟು ಬೇರೆ ಅಭಿವೃದ್ಧಿಪರ ಕೆಲಸಗಳಂತು ಯೋಚನೆ ಮಾಡುತ್ತಲೇಯಿಲ್ಲ ಎಲ್ಲವು ರಾಜಕೀಯದ ಚದುರಂಗದಾಟದಲ್ಲಿ ಬಿಜಿಯಾಗಿ ಪ್ರಜೆಗಳ ಆಶೋತ್ತರಕ್ಕೆ ಮಣ್ಣೆರಚುವ ಕೆಲಸ ಮಾಡುತ್ತಿದ್ದಾರೆ. ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳರೆಡು ತಮ್ಮ ತಮ್ಮಲ್ಲೇ ಹೊಡೆದಾಡಿಕೊಳ್ಳುವದನ್ನು ಬಿಡಬೇಕಿದೆ. ಲೋಕದ ಡೊಂಕನ್ನು ತಿದ್ದುವುದು ಬಿಟ್ಟು ಎಲ್ಲರೂ ಅವರವರ ಡೊಂಕನ್ನು ತಿದ್ದಿಕೊಂಡು ದೇಶದಲ್ಲಿಯ ಪ್ರಜೆಗಳ ಆಶೋತ್ತರಗಳಿಗೆ ಕಿವಿಗೊಟ್ಟರೆ ಒಂದಿಷ್ಟು ಅಭಿವೃದ್ಧಿಯಾಗಿ ದೇಶದ ಅನೇಕ ಸಮಸ್ಯೆಗಳು ಬಗೆಹರೆಯುತ್ತವೆ. ಅದನ್ನು ಬಿಟ್ಟು ಬರಿ ಹೇಳಿಕೆ ನೀಡುವುದು, ಟೀಕೆ ಮಾಡುವುದು, ಪ್ರಚಾರ ಪಡೆಯುವುದು ಮಾಡಬಾರದು. ಪ್ರಜೆಗಳ ಸಮಸ್ಯೆಗಳೇನು? ಅವುಗಳನ್ನು ಎಲ್ಲರೂ ಸೇರಿ ಹೇಗೆ ನಿವಾರಿಸಬೇಕು? ದೇಶವನ್ನು ಅಭಿವೃದ್ಧಿ ಪಥದತ್ತ ಹೇಗೆ ಕೊಂಡಯ್ಯಬೇಕು? ಎಂಬ ಸತ್ಯವನ್ನು ಅರೆಯಬೇಕು. ಐಕ್ಯತೆ ಹೊಂದಿರುವ ಭಾರತದಲ್ಲಿ ಅನೈತಿಕತೆಗೆ ತಿಲಾಂಜಲಿ ಹಾಡಬೇಕು. ನೀವಲ್ಲಾ, ನಾವೆಲ್ಲ ಎಂಬ ಭಾವನೆ ಎಲ್ಲರಲ್ಲಿ ಬರಬೇಕು. ಯೋಚಿಸಿ ನೋಡಿ ನಿಮಗೆ ಅರ್ಥವಾಗುತ್ತದೆ.
-ಕೆ.ಎಂ.ವಿಶ್ವನಾಥ ಮರತೂರ.