ಕಲಬುರ್ಗಿಯವರ ಪ್ರಾಥಮಿಕ ಶಿಕ್ಷಣ ಯರಗಲ್ಲಿನಲ್ಲಿ, ಮಾಧ್ಯಮಿಕ ಶಿಕ್ಷಣ ಸಿಂದಗಿಯಲ್ಲಿ ಜರುಗಿತು. ಅವಿಭಕ್ತ ಕುಟುಂಬದಿಂದ ಬಂದವರು. ವಿಜಾಪುರ ವಿಜಯಾ ಕಾಲೇಜ್ನಲ್ಲಿ ಬಿ.ಎ.(ಕನ್ನಡ)ಪದವಿಯನ್ನು ಪ್ರಥಮ ವರ್ಗದಲ್ಲಿ ಮತ್ತು ಯು.ಜಿ.ಸಿ. ಶಿಷ್ಯವೇತನದ ಸಹಾಯ ಪಡೆದು ಗಳಿಸಿದರು. 1962 ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ, ಸ್ನಾತಕೋತ್ತರ ಪದವಿ ಪಡೆದರು. 1962 ರಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬೋಧಕರಾಗಿ ಸೇವೆ ಪ್ರಾರಂಭಿಸಿದ ಕಲಬುರ್ಗಿಯವರು, 1966ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾದರು. 1982 ರಲ್ಲಿ ಅಲ್ಲಿಯೇ ವಿಭಾಗ ಮುಖ್ಯಸ್ಥರಾದರು. ಹಂಪಿಯಲ್ಲಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಇವರು ಇದೀಗ ನೆನಪು ಮಾತ್ರವಾಗಿದ್ದಾರೆ.
ಡಾ.ಎಂ.ಎಂ.ಕಲಬುರ್ಗಿಯವರು ಸಾಹಿತ್ಯ, ಸಂಸ್ಕೃತಿ, ಜಾನಪದ, ಶಾಸನ, ಇತಿಹಾಸ, ಹಸ್ತಪ್ರತಿಶಾಸ್ತ್ರ ಮೊದಲಾದ ಕ್ಷೇತ್ರಗಳಲ್ಲಿ ಸಂಶೋಧನೆಗಳನ್ನು ಮಾಡಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಜಾನಪದ ಸಮ್ಮೇಳನವನ್ನು ರೂಪಿಸಿದವರಲ್ಲಿ ಒಬ್ಬರು. ಕನ್ನಡ ವಿಶ್ವವಿದ್ಯಾಲಯದಲ್ಲಿ ದೇಸಿ ಸಮ್ಮೇಳನವನ್ನು ಸ್ಥಾಪಿಸಿದವರು ಡಾ| ಕಲಬುರ್ಗಿ. ಗದಗಿನ ಶ್ರೀ ತೋಂಟದಾರ್ಯ ಮಠದ ವೀರಶೈವ ಅಧ್ಯಯನ ಸಂಸ್ಥೆಯ ಸಂಸ್ಥಾಪಕರು. ಇದಲ್ಲದೆ ಮೈಸೂರಿನ ಸುತ್ತೂರು ಮಠದ ಸಮಗ್ರ ವಚನ ಸಾಹಿತ್ಯ ಪ್ರಕಟಣಮಾಲೆಯ, ಬೆಳಗಾವಿಯ ನಾಗನೂರು ಮಠದ ವೀರಶೈವ ಅಧ್ಯಯನ ಅಕಾಡೆಮಿಯ ಹಾಗೂ ಶಿವಮೊಗ್ಗೆಯ ಆನಂದಪುರ ಮಠದ ಮಲೆನಾಡು ವೀರಶೈವ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ.
ಡಾ| ಎಂ.ಎಂ.ಕಲಬುರ್ಗಿಯವರು ಸೃಜನಶೀಲ ಹಾಗೂ ಸಂಶೋಧನೆ ಈ ಎರಡೂ ಪ್ರಕಾರಗಳಲ್ಲಿ ಎಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಈ ಶತಮಾನದ ಶ್ರೇಷ್ಠ ಚಿಂತಕರಲ್ಲೊಬ್ಬರೆಂದು ಹೆಸರುವಾಸಿಯಾದ ಕಲಬುರ್ಗಿಯವರು ಸದಾ ಓದು, ಬರಹ, ಚಿಂತನೆ, ಪ್ರಕಟಣೆ, ಮಾರ್ಗದರ್ಶನ ಮತ್ತಿತರ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಅತ್ಯಂತ ಸರಳ ವ್ಯಕ್ತಿತ್ವದ ವಿನಯಶೀಲರಾದ ಅವರು ಕನ್ನಡದ ಕ್ರಿಯಾಶೀಲ ಚೇತನವೆಂದು ಹೆಸರಾಗಿದ್ದರು. ಈ ಹೆಸರು ಇದೀಗ ಮರೆಯಾಗಿ ಕನ್ನಡ ಸಾಹಿತ್ಯ ಲೋಕ ಬಡವಾಗಿದೆ.
ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಸಂಶೋಧನೆಯು ಕಲಬುರ್ಗಿಯವರ ಪ್ರಧಾನ ಆಸಕ್ತಿಯಾಗಿದೆ. ಅವರು ಎಪ್ಪತ್ತೈದಕ್ಕೂ ಹೆಚ್ಚು ಪುಸ್ತಕಗಳನ್ನೂ ನಾಲ್ಕು ನೂರಕ್ಕೂ ಹೆಚ್ಚು ಸಂಶೋಧನ ಲೀಖನಗಳನ್ನೂ ಪ್ರಕಟಿಸಿದ್ದಾರೆ. ಈ ಬರವಣಿಗೆಯ ವ್ಯಾಪ್ತಿ ಮತ್ತು ಆಳಗಳು ಗಮನೀಯವಾಗಿವೆ. ಕಲಬುರ್ಗಿಯವರಲ್ಲಿ ಉತ್ತರ ಕರ್ನಾಟಕದ ಹಿರಿಯ ವಿದ್ವಾಂಸರ ವಿಶಿಷ್ಟ ಲಕ್ಷಣಗಳು ಮತ್ತು ಹಳೆಯ ಮೈಸೂರಿನ ಕಡೆಯ ವಿದ್ವತ್ ಪರಂಪರೆಯ ಅನನ್ಯ ಲಕ್ಷಣಗಳ ಸಂಯೋಜನೆಯನ್ನು ಕಾಣಬಹುದು.
ಕಲಬುರ್ಗಿಯವರು 30 ಕ್ಕೂ ಹೆಚ್ಚು ಪ್ರಾಚೀನ ಕೃತಿಗಳನ್ನು ಸಂಪಾದನೆ ಮಾಡಿದ್ದಾರೆ. ಶಿವಯೋಗ ಪ್ರದೀಪಿಕಾ, 1976 ಕೊಂಡಗುಳಿ ಕೇಶಿರಾಜನ ಕೃತಿಗಳು, 1978 ಬಸವಣ್ಣನ ಟೀಕಿನ ವಚನಗಳು. 1978 ಸಿರುಮನಾಯಕನ ಸಾಂಗತ್ಯ, ನೀರು ನೀರಡಿಸಿತ್ತು (ಕವನಗಳು) ಕೆಟ್ಟಿತ್ತು ಕಲ್ಯಾಣ, (ನಾಟಕ) ಇವು ಕರ್ನಾಟಕ ಸಾಹಿತ್ಯವನ್ನು ಶ್ರೀಮಂತಗೊಳಿಸಿವೆ.
ಕಲಬುರ್ಗಿಯವರು ತಮ್ಮ ಸಾಧನೆಗಾಗಿ ಅನೇಕ ಪ್ರಶಸ್ತಿಗಳು ಮತ್ತು ಗೌರವಗಳನ್ನು ಪಡೆದಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವಪ್ರಶಸ್ತಿ, ಪಂಪ ಪ್ರಶಸ್ತಿ, ಚಿದಾನಂದ ಪ್ರಶಸ್ತಿ ಮತ್ತು ವಿಶ್ವಮಾನವ ಪ್ರಶಸ್ತಿ ಪಡೆದಿದ್ದಾರೆ. ಅವರು ಬರೆದಿರುವ ಆರು ಪುಸ್ತಕಗಳು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನಗಳನ್ನು ಪಡೆದಿವೆ. ಕಲಬುರ್ಗಿ-60 ಮತ್ತು ಮಹಾಮಾರ್ಗಗಳು ಈ ವಿದ್ವಾಂಸರಿಗೆ ಸಲ್ಲಿಸಿರುವ ಅಭಿನಂದನ ಗ್ರಂಥಗಳಲ್ಲಿ ಮುಖ್ಯವಾದವು. ಇವುಗಳನ್ನು ಕೊಟ್ಟು ಕೈ ಈಗ ಕಾಣುತ್ತಿಲ್ಲ.
ಇಷ್ಟು ನೀಡಿದ್ದ ಸಾಹಿತಿಯೊಬ್ಬ ಮರೆಯಾಗಿ ನೂರು ದಿನಗಳು ದೂರಾದರು, ಅವರ ನೆನಪು ಮರೆಯಾಗಿಲ್ಲ. ಅವರ ಸರಳತೆ ಹಾಗೂ ಸಜ್ಜನತೆ ಕನ್ನಡಿಗನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಇಂತಹ ವಿದ್ವಂಸರನ್ನು ಕಳೆದುಕೊಂಡ ಸಾಹಿತ್ಯ ಸಂಶೋಧನ ಲೋಕ ಇಂದು ಬಡವಾಗಿದೆ. ಸಂಶೋಧನ ಕ್ಷೇತ್ರದಲ್ಲೀಗ ನಿರವ ಮೌನ ಆವರಿಸಿದೆ. ಹಲವು ಮೂಢನಂಬಿಕೆಗಳ ವಿರುದ್ಧ ಧ್ವನಿಯೆತ್ತುವ ಧ್ವನಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಕಲಬುರ್ಗಿ ಗುಂಡೇಟಿಗೆ ಬಲಿಯಾದ ಬಳಿಕ, ಬಹುಜನರ ಕೂಗಿಗೆ ಬೆಲೆಯಿಲ್ಲದಾಗಿದೆ. ಅನ್ಯಾಯ ಇದೀಗ ಅಟ್ಟಹಾಸ ಮಾಡುತ್ತಿದೆ. ಎಲ್ಲಿಯೇ ಮುಖ ಮಾಡಿದರು ಭಯದ ವಾತಾವರಣ ಸೃಷ್ಠಿಯಾಗುತ್ತಿದೆ. ಸಮೃದ್ಧವಾಗಿರಬೇಕಾದ ಕರ್ನಾಟಕ ಸಾಹಿತ್ಯ ಲೋಕದಲ್ಲಿ, ಪ್ರಶಸ್ತಿ ವಾಪಸ್ಸಾತಿಗಳ ಪರ್ವವವೂ ಒಂದು ಹಂತ ತಲುಪಿದೆ. ಇನ್ನೆಷ್ಟು ಸಾಹಿತ್ಯದ ಸಂಭ್ರಮಗಳು ಮರೆಯಾಗಬೇಕು. ರಾಜ್ಯ ಮತ್ತು ಕೇಂದ್ರ ಸರಕಾರಗಳು ಕಲಬುರ್ಗಿಯವರ ಪ್ರಕರಣದಲ್ಲಿ ಕಣ್ಣ ಮುಚ್ಚಾಲೆ ಆಡುತ್ತಿರುವದಂತು ಸತ್ಯವಾಗಿದೆ. ನೂರು ದಿನಗಳಾದರು ಸಾಹಿತ್ಯ ಲೋಕದ ನೋವನ್ನು ಅರ್ಥಮಾಡಿಕೊಳ್ಳದ ಸರಕಾರಗಳು ಬೇಸರ ತರಿಸುತ್ತಿವೆ. ಕಲಬುರ್ಗಿಯವರ ಪ್ರಕರಣಕ್ಕೊಂದು ಕೊನೆ ಹಾಡಬೇಕು. ಮರಿಚಿಕೆಯಾಗಿಯೇ ಉಳಿದಿರುವ ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರ ಪ್ರಕರಣ ಕಂಡು ಯುವ ಸಾಹಿತಿಗಳು ಹಾಗೂ ಸಂಶೋಧಕರು ಭಯದ ವಾತಾವರಣದಲ್ಲಿ ಬದುಕುವ ಕಾಲ ಬೇಗ ಮರೆಯಾಗಲಿಯೆಂಬುವುದಷ್ಟೆ ನನ್ನ ಆಶೆಯ.
-ಕೆ.ಎಂ.ವಿಶ್ವನಾಥ ಮರತೂರ.