ಪ್ರಸ್ತುತ ಭಾರತದಲ್ಲಿ ಮಾನವೀಯ ನೆಲೆಗಳ ವಿರುದ್ಧ ವಿದ್ಯಮಾನಗಳು ಜರುಗುತ್ತಿವೆ. ದೇಶದಲ್ಲಿ ಅಸಹಿಷ್ಣುತೆಯು ಮನೆಮಾಡಿದ್ದು, ಮಾನವೀಯತೆಯನ್ನು ಕೊಲ್ಲುತ್ತಿವೆ. ಅಭಿವ್ಯಕ್ತಿ ಸ್ವಾತಂತ್ರದ ಹರಣವಾಗುತ್ತಿದೆ. ಬರೆಯುವ ಕೈಗಳಿಗೆ, ಮಾತನಾಡುವ ತುಟಿಗಳಿಗೆ ಹಾಗೂ ಸಾಮಾಜಿಕ ಚಿಂತನೆಗಳಿಗೆ ಇಲ್ಲಿ ಬೆಲೆಯಿಲ್ಲದಾಗಿದೆ. ದೇಶಕ್ಕೆ ಸ್ವಾತಂತ್ರ ಬಂದು ದಶಕಗಳೆ ಕಳೆದರು, ಸಂವಿಧಾನ 100% ಅನುಷ್ಠಾನ ಸಾಧ್ಯವಾಗಿಲ್ಲ. ಭಾರತದ ಸಂವಿಧಾನ ಮುಂದಿನ ಸಾವಿರ ವರ್ಷಗಳ ಭವಿಷ್ಯ ದೃಷ್ಠಿಯಲ್ಲಿಟ್ಟುಕೊಂಡು ರಚನೆ ಮಾಡಿದ್ದು, ಅದರ ವಿರುದ್ಧ ನಡೆಯುವ ಅನೇಕ ವಿದ್ಯಮಾನಗಳು ದೇಶದ ಜನರಲ್ಲಿ ಪ್ರಜಾಪ್ರಭುತ್ವವನ್ನು ಪ್ರಶ್ನೆ ಮಾಡುವ ವಿದ್ಯಮಾನಗಳು ಪ್ರಜೆಗಳಲ್ಲಿ ಆತಂಕ ಹುಟ್ಟಿಸಿವೆ.
ಭಾರತದ ಇತಿಹಾಸ ಅದೊಂದು ಸಮಾನತೆ, ಸಹಕಾರ ಪ್ರಜಾಪ್ರಭುತ್ವವನ್ನು ಬಿಂಬಿಸುವದ್ದಾಗಿತ್ತು. ಭಾರತದ ಸಂಸ್ಕøತಿಯನ್ನು ಕಾಯುವುದು ಸಂವಿಧಾನದ ಮುಖ್ಯ ಆಶೆಯವಾಗಿತ್ತು. ದೇಶದಲ್ಲಿ ಸರ್ವರೂ ಸಮಾನರು ಎಂಬ ಸ್ಪಷ್ಟವಾದ ಆಶೆಯವನ್ನು ಬಿತ್ತರಿಸಿದ್ದು ಇದೀಗ ಇತಿಹಾಸವಾಗಿದೆ. ಪ್ರಸ್ತುತ ಭಾರತದಲ್ಲಿ ಇತಿಹಾಸವನ್ನು ಹಲವು ಕಾರಣಗಳಿಂದ ತಿರುಚಲಾಗುತ್ತಿದೆ ಅದರ ಚಿಕ್ಕ ಸಾರಾಂಶ ಕೊಡುವ ಆಶೆಯ ನನ್ನದು.
ಸಂವಿಧಾನವು ದೇಶದ ಜನರನ್ನು ಆಳುವ ಸರಕಾರದ ಮೂಲ ರಚನೆಯನ್ನು ನಿರ್ದಿಷ್ಟಪಡಿಸುತ್ತದೆ. ಅದು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳನ್ನು ಸರಕಾರದ ಮೂರು ಮುಖ್ಯ ಅಂಗಗಳಾಗಿ ಏರ್ಪಡಿಸುತ್ತದೆ. ಸಂವಿಧಾನವು ಪ್ರತಿ ಅಂಗದ ಅಧಿಕಾರದ ವ್ಯಾಖ್ಯೆಯನ್ನು ನೀಡುವದಲ್ಲದೆ, ಅವುಗಳ ಜವಾಬ್ದಾರಿಯನ್ನೂ ಖಚಿತಗೊಳಿಸುತ್ತದೆ. ವಿಭಿನ್ನ ಅಂಗಗಳ ನಡುವಿನ ಸಂಬಂಧವನ್ನೂ ಜನತೆ ಹಾಗೂ ಸರಕಾರದ ನಡುವಿನ ಸಂಬಂಧವನ್ನೂ ನಿಯಂತ್ರಿಸುತ್ತದೆ.
ಸಂವಿಧಾನವು ದೇಶದ ಎಲ್ಲ ಕಾನೂನುಗಳಿಗಿಂತ ಹೆಚ್ಚಿನ ಸ್ಥಾನವನ್ನು ಹೊಂದಿದೆ. ಸರಕಾರ ಮಾಡುವ ಪ್ರತಿಯೊಂದು ಕಾನೂನು ಸಂವಿಧಾನಕ್ಕೆ ಅನುಗುಣವಾಗಿರಬೇಕು. ಭಾರತದ ಸಂವಿಧಾನವು ದೇಶದ ಗುರಿಗಳು ಪ್ರಜಾಪ್ರಭುತ್ವ, ಸಮಾಜವಾದ, ಜಾತ್ಯತೀತತೆ ಮತ್ತು ರಾಷ್ಟ್ರೀಯ ಸಮಗ್ರತೆ ಎಂದು ಸ್ಪಷ್ಟಪಡಿಸುತ್ತದೆ. ಅದು ಪ್ರಜೆಗಳ ಹಕ್ಕುಗಳನ್ನು ಮತ್ತು ಕರ್ತವ್ಯಗಳನ್ನು ಖಚಿತವಾಗಿ ವಿಧಿಸುತ್ತದೆ. ಅವುಗಳ ಅನುಷ್ಠಾನಗೊಳಿಸುವುದು ಇಂದಿನ ಪ್ರಮುಖ ಅವಶ್ಯಕತೆಗಳಲ್ಲಿ ಒಂದಾಗಿದೆ.
ಸಂವಿಧಾನದ ಕುರಿತು ಇತ್ತೀಚೆಗಿನ ಕೆಲವು ಹೇಳಿಕೆಗಳು:
ಸಂವಿಧಾನ ಬದಲಾಯಿಸುತ್ತೇವೆ ಎನ್ನುವ ಮನಸ್ಸುಗಳು ಇರುವುದೇ ದೊಡ್ಡ ದುರಂತ. ಸ್ವತ: ಸಮವಿಧಾನವೇ ತಿದ್ದುಪಡಿಗೆ ಅವಕಾಶ ನೀಡಿದೆ.ಅದರ ಆಶೆಯಗಳನ್ನು ಎತ್ತಿ ಹಿಡಿಯಬಲ್ಲ ತಿದ್ದುಪಡಿಗಳು ಈಗಾಗಲೇ ಮಾಡಲಾಗಿದೆ.ಬದಲಾಯಿಸುತ್ತೇವೆ.ಹಾಗೂ ಒಪ್ಪುವಿದಿಲ್ಲ ಎಂಬ ಮಾತು ನಿಮ್ಮ ಮನಸ್ಸಿನ ವಿಕೃತಿಯನ್ನು ತೋರಿಸುತ್ತದೆ. ಬದಲಾಯಿಸಲು ಇದೇನು ಕಟ್ಟಿದ ಕಥೆಯಲ್ಲ ಬಡವರ ಬದುಕು ಹಸನಗೊಳಿಸಿದ ಗ್ರಂಥ. ಬಡವರ ಬಾಳಿನಲ್ಲಿ ಆಟವಾಡುವುದನ್ನು ನೀವೆಲ್ಲರೂ ಬಿಡಬೇಕಿದೆ.
ನೀವೇನು ಸಂವಿಧಾನ ಬದಲಾಯಿಸೋದು ಹೀಗೆ ಮಾತನಾಡುತ್ತಾಯಿರಿ ಜನರೇ ನಿಮಗೆ ಬದಲಾಯಿಸುತ್ತಾರೆ. ಐದು ವರ್ಷ ಆಡಳಿತ ಮಾಡುವ ನಿಮಗೆ ಸಂವಿಧಾನವೇ ಅರ್ಥವಾಗದಿದ್ದರೆ ದೇಶವೇನು ಅಭಿವೃದ್ಧಿ ಮಾಡುತ್ತೀರಿ ಎಂಬ ಪ್ರಶ್ನೆ ಕಾಡುತ್ತದೆ.
ಡಾ.ಅಂಬೇಡ್ಕರ್ ಅವರು ಕೇಸರಿಯನ್ನು ಗೌರವಿಸುತ್ತಿದ್ದರು, ಭಾರತದ ಬಾವುಟವನ್ನು ಕೇಸರಿಮಯವಾಗಿ ಸ್ಥಾಪಿಸಬೇಕು ಎಂಬ ಸುಳ್ಳು ಸುದ್ದಿ ಇತ್ತಿಚೆಗೆ ಆರ್.ಎಸ್.ಎಸ್.ನವರು ಈ ವಿಷಯ ಪ್ರಸ್ತಾಪಿಸಿದ್ದರು. ಪ್ರಸ್ತುತ ಭಾರತದಲ್ಲಿ ಅಧಿಕಾರ ಹಿಡಿದವರು ಕೇಸರಿಗಳ ಹಿಂಬಾಲಕರಾಗಿರುವುದರಿಂದ ಇಂತಹ ವಿದ್ಯಮಾನಗಳು ಸಹಜವೆನಿಸುತ್ತವೆ. ಆರ್.ಎಸ್.ಎಸ್. ಒಂದು ಒಳ್ಳೆಯ ಸಂಘಟನೆಯಾಗಿದ್ದು, ಅದರಲ್ಲಿ ಮಾಡುವ ಕೆಲವು ವಿಚಾರಗಳು ಪಕ್ಕಾ ಮನುಷ್ಯ ವಿರೋಧಿಯಾಗಿದ್ದು ಪುರೋಹಿತ ಶಾಹಿ ಆಡಳಿತವನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತವೆ. ಅಸಮನತೆಯ ಬಿಂಬವನ್ನು ತೋರ್ಪಡಿಸುತ್ತದೆ. ಅಂಬೇಡ್ಕರ್ ಎಂಬ ಶಕ್ತಿಯನ್ನು ಯಾವ ಕಾಲಕ್ಕೆ ಹೇಗೆ ಬಳಕೆ ಮಾಡಬೇಕು ಎಂಬ ಕುತಂತ್ರ ಬುದ್ದಿ ಅರೆತಿದ್ದು, ಅದನ್ನು ಇದೀಗ ಹೀಗೆ ಸುಳ್ಳು ಸುದ್ದಿ ಹಬ್ಬಿಸಿ ಅಂಬೇಡ್ಕರ್ಯೆಂಬ ಬಡವರ ಸ್ವಾಭಿಮಾನವನ್ನು ದುರೂಪಯೋಗ ಪಡಿಸಿಕೊಳ್ಳುತ್ತಿರುವುದು ತಪ್ಪಾಗಿದೆ. ಇತಿಹಾಸವನ್ನು ತಿರುಚುವಿಕೆಯನ್ನು ಪ್ರಸ್ತುತ ಭಾರತದಲ್ಲಿ ಹಲವು ವಿದ್ಯಮಾನಗಳಲ್ಲಿ ಪ್ರಮುಖ ವಿದ್ಯಮಾನ ಇದಾಗಿದೆ.
ಭಾರತದ ಸಂವಿಧಾನದಲ್ಲಿ ಮೀಸಲಾತಿಯನ್ನು ಪ್ರಶ್ನೆ ಮಾಡಿದ್ದು ಇತ್ತೀಚೆಗಿನ ಪ್ರಮುಖ ವಿದ್ಯಮಾನ. ಮೀಸಲಾತಿಯನ್ನು ಸರಿಯಾಗಿ ಗೃಹಿಸಿಕೊಳ್ಳದವರು, ಮೀಸಲಾತಿಯನ್ನು ನಿಲ್ಲಿಸಿ ಎಂದು ಹೇಳುತ್ತಾರೆ. ಭಾರತದ ಸಂವಿಧಾನದ ಪ್ರಕಾರ ರಾಜಕೀಯ ಮೀಸಲಾತಿಯನ್ನು ಸ್ವಾತಂತ್ರ ನಂತರ ಹತ್ತು ವರ್ಷ ಮಾತ್ರ ಎಂದು ಹೇಳಲಾಗಿದೆ. ಉದ್ಯೋಗ ಮತ್ತು ಉಳಿದ ಕ್ಷೇತ್ರದ ಮೀಸಲಾತಿಯನ್ನು ನಿರಂತರವೆಂದು ತಿಳಿಸಲಾಗಿದೆ. ಆದರೆ ಇದೀಗ ಒಟ್ಟಾರೆ ಮೀಸಲಾತಿಯನ್ನು ಪ್ರಶ್ನಿಸುವ ಯಾರೊಬ್ಬರು ಎಷ್ಟು ಮೀಸಲಾತಿ ಯಾರಿಗೆ ದೊರೆತಿದೆ ಎಂಬ ಸತ್ಯ ಅರೆಯಬೇಕಿದೆ. ಉದ್ಯೋಗ ಮತ್ತು ಇತರೆಯಲ್ಲಿನ ಮೀಸಲಾತಿಯನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ಪರಿಶಿಷ್ಠಜಾತಿ ಮತ್ತು ಪಂಗಡದಲ್ಲಿ ಸಂವಿಧಾನದ ಪ್ರಕಾರ 118 ಉಪಜಾತಿಗಳಿವೆ ಒಂದು ಮೀಸಲಾತಿಯನ್ನು ಇಷ್ಟು ಉಪಜಾತಿಗಳು ಹಂಚಿಕೊಳ್ಳಬೇಕು. ಸಂವಿಧಾನದ ಈ ವಿಷಯವನ್ನು ಅರೆಯದ ಜನರು ಮೀಸಲಾತಿಯ ವಿರುದ್ಧ ಮಾತನಾಡುವ ಧೈರ್ಯ ಮಾಡುತ್ತಾರೆ. ಮೀಸಲಾತಿಯನ್ನು ಸರಿಯಾಗಿ ಅರ್ಥೈಸಿಕೊಳ್ಳದವರು ಈ ರೀತಿಯಾಗಿ ಮಾತನಾಡುವುದು ಸಹಜ ಸಂಗತಿಯಾಗಿದೆ.
ಖಾಸಗಿ ಮೀಸಲಾತಿ ಸಂವಿಧಾನಿಕವಾಗಿದೆಯಾ? ಎಂಬುವುದು ಇತ್ತೀಚಿನ ಚರ್ಚೆಗಳಲ್ಲಿ ಪ್ರಮುಖ ಸ್ಥಾನ ಪಡೆಯುತ್ತದೆ. ಸಂವಿಧಾನದಲ್ಲಿ ಖಾಸಗಿ ಮೀಸಲಾತಿಯನ್ನು ನೇರವಾಗಿ ಹೇಳಿದ್ದು, ಹಿಂದುಳಿದ ವರ್ಗವನ್ನು ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ತರಬೇಕೆಂಬ ಆಸೆ ಹೊಂದಿರುವ ಭಾರತೀಯ ಸಂವಿಧಾನ ರಚನಾಕಾರರು, ಭಾರತದ ಮುಂದಿನ ಸುಮಾರು ವರ್ಷಗಳ ಭವಿಷ್ಯ ದೃಷ್ಠಿಯಲ್ಲಿಟ್ಟುಕೊಂಡು ಸಂವಿಧಾನ ರಚಿಸಲಾಯಿತು.
ಯಾವ ಯಾವ ಕ್ಷೇತ್ರದಲ್ಲಿ ಬಹುಜನರಿಗೆ ಮೀಸಲಾತಿಯನ್ನು ಕಲ್ಪಿಸಿದರೆ ಅವರ ಸಾಮಾಜಿಕ ಸಬಲೀಕರಣ ಸಾಧ್ಯವಾಗುತ್ತದೆ ಎಂಬ ಕಲ್ಪನೆ ಸಂವಿಧಾನ ರಚನಾಕಾರರಲ್ಲಿತ್ತು ಅದಕ್ಕಾಗಿಯೇ ಪ್ರಪಂಚದ ಬೃಹತ್ ಸಂವಿಧಾನವನ್ನು ನೀಡಲು ಸಾಧ್ಯವಾಗಿದೆ.
ಸಂವಿಧಾನದಲ್ಲಿ ಹೇಳಲಾಗಿರುವ ಅಭಿವ್ಯಕ್ತಿ ಸ್ವಾತಂತ್ರವನ್ನು ತಿರುಚಲಾಗಿದೆ. ಸಾಮಾಜಿಕ ಸಮಸ್ಯೆಯ ವಿರುದ್ಧ ಧ್ವನಿಯೆತ್ತಿದವರನ್ನು ಹತ್ಯೆ ಮಾಡಲಾಗುತ್ತಿದೆ. ಇತ್ತೀಚೆಗಿನ ಎಂ.ಎಂ.ಕಲಬುರಗಿ ಹಾಗೂ ಗೌರಿ ಅವರ ಸಾವು ಇದಕ್ಕೆ ತಾಜಾ ಉದಾಹರಣೆಯಾಗಿದೆ. ಜೆಎನ್ಯು ವಿವಾದದಲ್ಲಿ ಹಿಂದುಳಿದವರ ಧ್ವನಿಯೆನ್ನೆ ತಿರುಚುವಂತಹ ವಿದ್ಯಮಾನಗಳು ಪ್ರಸ್ತುತ ಭಾರತದಲ್ಲಿ ಯಾರ ಲಗ್ಗೆಯಿಲ್ಲದೆ ಓಡಿವೆ. ಕನ್ಹಯನಂತಹ ದೇಶಭಕ್ತರನ್ನು ದೇಶದ್ರೋಹಿಯೆಂಬ ಪಟ್ಟ ಕಟ್ಟಿರುವ ಪ್ರಸ್ತುತ ಭಾರತದಲ್ಲಿ ಸಂವಿಧಾನವನ್ನು ಹಲವು ವಿಧಾನಗಳಲ್ಲಿ ತಿರುಚಿಸುವ ಕೆಲಸ ನಡೆಯುತ್ತಿದೆ.
ರಾಮಾಯಣ ಮತ್ತು ಮಾಹಾಭಾರತವನ್ನು ಮತ್ತೆ ಹಿಂದುಳಿದವರ ನಂಬಿಕೆಗಳ ಮೇಲೆ ಹೇರಲಾಗುತ್ತಿದೆ. ಹಲವು ವಿಧಾನಗಳಲ್ಲಿ ಬೆಳೆದುನಿಂತಿರುವ ತಂತ್ರಜ್ಞಾನದ ಮೂಲಕವು ಅವುಗಳನ್ನು ಹೇರಲಾಗುತ್ತಿದೆ. ವಿದ್ಯುನ್ಮಾನ ವಿಧಾನಗಳಿಂದಲೂ ಮಾಧ್ಯಮಗಳಿಂದಲೂ ಕೂಡ ಹಿಂದುಳಿದವರ ಮೇಲೆ ತಮ್ಮ ಪೂರೋಹಿತ್ಯವನ್ನು ಹೇರುವ ಸಂವಿಧಾನಿಕ ವಿರುದ್ಧವಾದ ಚಟುವಟಿಕೆಗಳ ಮೂಲಕ ಹೇರುವ ವ್ಯವಸ್ಥಿತಿ ಹುನ್ನಾರ ಮಾಡುತ್ತಿದ್ದಾರೆ.
ಮೀಸಲಾತಿಯೆಂಬ ಮಾಹಾನ್ ತಂತ್ರದ ಮೂಲಕವೇ ಅಧಿಕಾರ ಹಿಡಿದಿರುವ ರಾಜಕೀಯ ಧುರಿಣರು ರಾಜಕೀಯ ಮೀಸಲಾತಿಯ ಬಗ್ಗೆ ಚಕಾರೆಯೆತ್ತುವುದಿಲ್ಲ ಆದರೆ ಬಡವರ ಹೊಟ್ಟೆಯ ಮೇಲೆ ಹೊಡೆಯುವ ಮೀಸಲಾತಿಯ ಬಗ್ಗೆ ಮಾತ್ರ ಮಾತನಾಡುತ್ತಾರೆ. ಅದನ್ನು ಸರಿಪಡಿಸುವುದನ್ನು ಬಿಟ್ಟು ರದ್ದು ಮಾಡಿಯೆಂಬ ಮೊಂಡುವಾದ ಮಾಡುವ ಕೂಪ ಮಂಡೂಕಗಳಾಗಿ ಮಾರ್ಪಾಡಾಗುತ್ತಿದ್ದಾರೆ.
ಈ ಸಮಸ್ಯೆಗೆ ಪರಿಹಾರಗಳೇನು?
ಗ್ರಾಮೀಣಮಟ್ಟದಿಂದಲೇ ಸಂವಿಧಾನದ ಮಾಹಿತಿಯನ್ನು ಸಾಮಾನ್ಯ ಜನರಿಗೆ ತಿಳಿಸಬೇಕು. ಬೆಳೆಯುತ್ತಿರುವ ಮಕ್ಕಳಿಗೆ ವಿಶೇಷವಾಗಿ ಸಂವಿಧಾನ ಆಶೆಯವನ್ನು ಬಿತ್ತರಿಸುವ ಕಾರ್ಯಕ್ರಮದ ಮೂಲಕ ತಿಳಿಸಿಕೊಡಬೇಕು. ಸಂವಿಧಾನದಲ್ಲಿ ಹೇಳಲಾಗಿರುವ ಹಲವು ವಿಷಯಗಳನ್ನು ಹಲವು ವಿಧಾನಗಳ ಮೂಲಕ ಪ್ರಜೆಗಳಿಗೆ ಮನವರಿಕೆ ಮಾಡಿಕೊಡಬೇಕು.
ಶಾಲೆಯ ಪಠ್ಯದಲ್ಲಿರುವ ಭಾರತೀಯ ಸಂವಿಧಾನವನ್ನು ಶಾಲೆಯ ಆವರಣದಲ್ಲಿ ಆಚರಿಸುವ ಬಗೆಯನ್ನು ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ತಿಳಿಸಿಕೊಡಬೇಕು. ಹಕ್ಕು ಮತ್ತು ಕರ್ತವ್ಯಗಳನ್ನು ಸ್ಪಷ್ಟವಾಗಿ ಪ್ರಜೆಳಾಗಿರುವ ನಮ್ಮ ಮಕ್ಕಳಿಗೆ ತಿಳಿಸಿಕೊಡಬೇಕು. ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹ ನೀಡಬೇಕು.
ಮಕ್ಕಳಲ್ಲಿ ಅಂಬೇಡ್ಕರ್ ಚಿಂತನೆ ಅವರ ಆಲೋಚನೆಗಳನ್ನು ರೂಢಿಗೊಳಿಸಿ ಮಕ್ಕಳು ಓದುವ ಬರೆಯುವ ಮನಸ್ಸು ಮಾಡುವಂತಹ ವಾತಾವರಣ ನಿರ್ಮಾಣ ಮಾಡಬೇಕು. ಪ್ರತಿ ಏರಿಯಾದಲ್ಲಿಯೂ ಅಂಬೇಡ್ಕರ್ ಅವರ ಬಗ್ಗೆ ಎಲ್ಲಾ ಮನಸ್ಸುಗಳಲ್ಲಿ ಉತ್ತಮವಾದ ಆಲೋಚನೆಗಳನ್ನು ಬಿತ್ತುವಲ್ಲಿ ಅವುಗಳನ್ನು ಪ್ರಮಾಣಿಕವಾಗಿ ಅನುಷ್ಠಾನಕ್ಕೆ ತರುವಲ್ಲಿ ಕಾರ್ಯನಿರ್ವಹಿಸಬೇಕು.
ಸಮಾಜದಲ್ಲಿನ ಅನಿಷ್ಠಪದ್ಧತಿಗಳನ್ನು ಹೋಗಲಾಡಿಸುವಲ್ಲಿ ಪ್ರಸ್ತುತ ಪ್ರಜೆಗಳ ಕರ್ತವ್ಯವೇನು? ಸಂವಿಧಾನದ ಪ್ರಕಾರ ಯಾವ ರೀತಿಯಾಗಿ ಕೆಲಸ ಮಾಡಿದರೆ ಸಂವಿಧಾನದ ಅನುಷ್ಠಾನ ಸಾಧ್ಯವಾಗುತ್ತದೆಂಬುದರ ಕಡೆಗೆ ಗಮನಕೊಡಬೇಕು. ಎಲ್ಲರೂ ಪ್ರಜ್ಞಾ, ಶೀಲ, ಕರುಣೆಗಳನ್ನು ಅಳವಡಿಸಿಕೊಂಡು ಬದುಕಿನ ದಾರಿಯಲ್ಲಿ ಸಹಜತೆಯನ್ನು ಸಂವಿಧಾನದ ಅನುಷ್ಠಾನದತ್ತ ಧಾಪುಗಾಲು ಹಾಕಬೇಕು.
ಉಪಸಂಹಾರ:
ದೇಶ ನನಗೇನು ಮಾಡಿದೆ ಎನ್ನುವುದಕ್ಕಿಂತ ದೇಶಕ್ಕಾಗಿ ನಾನೇನು ಮಾಡಿದೆ ಎನ್ನುವುದು ಬಹುಮುಖ್ಯವಾಗುತ್ತದೆ. ದೇಶದಲ್ಲಿ ಸಧ್ಯ ಹಲವು ವಿದ್ಯಮಾನಗಳು ತಾಂಡವವಾಡುತ್ತಿವೆ. ಸಂವಿಧಾನಿಕ ವಿರೋಧವಾದ ಹಲವು ಚಟುವಟಿಕೆಗಳು ಭಾರತದಲ್ಲಿ ನಡೆಯುತ್ತಿವೆ. ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗುತ್ತಿದೆ. ಹಿಂದುಳಿದವರನ್ನು ತಾಂತ್ರಿಕವಾಗಿ ತುಳಿಯುತ್ತಿರುವುದು ಕಂಡುಬರುತ್ತಿದೆ. ಪ್ರಸ್ತುತ ಭಾರತದಲ್ಲಿ ನಮ್ಮ ಶ್ರೇಷ್ಠವಾದ ಸಂವಿಧಾನವನ್ನು ತಿರುಚುವ ಮೂಲಕ ಹಿಂದುಳಿದವರ ಹಕ್ಕುಗಳಿಗೆ ಚುತಿ ಬರುವಂತಹ ವಿದ್ಯಮಾನಗಳು ನಡೆಯುತ್ತಿವೆ. ಪ್ರಸ್ತುತವಾಗಿ ದೇಶದ ಬಹುದೊಡ್ಡ ರಾಜಕೀಯ ಪ್ರೇರಿತವಾಗಿ ಅವಕಾಶಗಳ ವಂಚಿತವಾಗಿ ಮಾಡಲು ಹೊರಟಿರುವ ಗುಂಪೊಂದು ತನ್ನ ಸ್ವಯಂ ಇಚ್ಚಾಶಕ್ತಿಯನ್ನು ಬಲವಂತವಾಗಿ ಹೇರುವ ಎಲ್ಲಾ ಅವಕಾಶಗಳನ್ನು ನಡೆಸುತ್ತಿದೆ.
ನಾಗರೀಕ ಬದುಕನ್ನು ಅವಹೇಳನ ಮಾಡುವಲ್ಲಿ ಪ್ರಸ್ತುತ ಭಾರತದ ಪುರೋಹಿತಶಾಹಿ ಆಡಳಿತ ಒಂದು ಹಂತಕ್ಕೆ ಯಶಸ್ವೀಯಾಗುವಲ್ಲಿ ಮುಂದೆ ಸಾಗುತ್ತಿದೆ ಆದರೆ ಅದರ ಬೆನ್ನಲೆ ಜೀವಪರ ಹಾಗೂ ದಲಿತಪರ ಧ್ವನಿಗಳಿಗೆ ಸೂಕ್ತವಾದ ಉತ್ತರ ಕೊಡಬೇಕಾಗುತ್ತಿದೆ ಎಂಬ ಭೀತಿಯು ಇದೆ. ಭಾರತದ ಒಟ್ಟಾರೆ ಜನಸಂಖ್ಯೆಯಲ್ಲಿ ಗಣನೀಯವಾದ ಪಾತ್ರ ನಿರ್ವಹಿಸುವ ಹಿಂದುಳಿದ ವರ್ಗವು ತನ್ನ ಕೋಪ ತಾಪಗಳನ್ನು ತಾಳಿದ್ದು ಅವೆಲ್ಲ ತನ್ನದೇ ಆದ ರೀತಿಯಲ್ಲಿ ಪುಟಿದೇಳುವ ಸಾಧ್ಯತೆಗಳು ಹೆಚ್ಚಾಗಿವೆ. ಇತಿಹಾಸದ ಹಲವು ವಿಶೇಷತೆಗಳನ್ನು ತಿರುಚಿಹಾಕುವಲ್ಲಿ ಇಂದು ಮುನ್ನುಗ್ಗುತ್ತಿರುವ ಇವರು ಕೊನೆಗೆ ಶೇಷವಾಗಿ ಉಳಿಯುವರು ಎಂಬ ಸತ್ಯ ಮರೆತಿರುವಂತೆ ಕಾಣುತ್ತಿದೆ. ಏನೆಯಿರಲಿ ಪ್ರಸ್ತುತ ಭಾರತದ ಹಿಂದುಳಿದವರ್ಗ ಹಾಗೂ ಭಾರತದ ಎಲ್ಲಾ ಪ್ರಜೆಗಳು ಸಂವಿಧಾನದ ಉತ್ತಮ ಪ್ರಮಾಣಿಕ ಅನುಷ್ಠಾನದತ್ತ ಯೋಚಿಸಬೇಕಿದೆ. ಸಂವಿಧಾನವನ್ನು ಪ್ರಮಾಣಿಕವಾಗಿ ಅನುಷ್ಠಾನಗೊಳಿಸಿದರೆ ದೇಶದ ಅಭಿವೃದ್ಧಿ ನೂರು ಪ್ರತಿಶತ ಸಾಧ್ಯತೆಗಳಿವೆ ಒಮ್ಮೆ ಯೋಚಿಸಿ ನೋಡಿ.