ನಾವು ನೆನಪಿಡಬೇಕು, ಅಂದು ನಡೆದದ್ದು ಕೇವಲ ಒಂದು ಸುಧಾರಣೆಯಲ್ಲ, ಚಳವಳಿಯಲ್ಲ, ಒಂದು ಕ್ರಾಂತಿ ಎಂಬುದನ್ನು. ಶರಣರು ತಮ್ಮ ಕಾಲಕ್ಕಿಂತ ಮುಂದೆ ಹೋಗಿ ಆಲೋಚಿಸಿದ್ದರಿಂದ ಮತ್ತು ಅನುಷ್ಠಾನಕ್ಕೂ ಇಳಿಸಿದ್ದರಿಂದ, ಅದಕ್ಕೆಲ್ಲ ಆ ಯುಗ ಇನ್ನೂ ಪಕ್ವವಾಗಿಲ್ಲದ್ದರಿಂದ ಆ ಕ್ರಾಂತಿಯ ಯಶಸ್ಸು ಅಲ್ಪಾವಧಿಯದಾಗುವುದು ಅನಿವಾರ್ಯವಾಯಿತು. ಆದರೆ ಈ ಹೊತ್ತು ನಾವು ಶರಣರ ವಿಚಾರಧಾರೆಯನ್ನು ಕಡೆಯಪಕ್ಷ ಅರ್ಥ ಮಾಡಿಕೊಳ್ಳುವ ಸ್ಥಿತಿಯಲ್ಲಿದ್ದೇವೆ. ಹಾಗೆ ನೋಡಿದರೆ, ಅವರು ಇಂದಿಗೂ ಮುಂದಿದ್ದಾರೆ ಎನಿಸದಿರದು.
ಒಂದು ಕಡೆ ಪುರೋಹಿತಶಾಹಿಯನ್ನು ಪ್ರತಿಭಟಿಸಿ, ಇನ್ನೊಂದು ಕಡೆ ರಾಜಶಾಹಿಯನ್ನು ಧಿಕ್ಕರಿಸಿ, ಅನಿಷ್ಟ ಜಡ ವ್ಯವಸ್ಥೆಯನ್ನು ಛಿದ್ರಗೊಳಿಸುವ, ತನ್ಮೂಲಕ ಜನಶೋಷಣೆಯ ಸರ್ವ ಪ್ರಕಾರಗಳಿಗೂ ಪೂರ್ಣ ವಿರಾಮ ಹಾಕಿ ಸಕಲ ಜೀವಾತ್ಮರ ಲೇಸನ್ನು, ಸರ್ವೋದಯವನ್ನು ಸಾಧಿಸುವ ಆಶಯ ವಚನಕಾರರದಾಗಿತ್ತು. ಸಮಾನತೆಯ ಅಡಿಪಾಯದ ಮೇಲೆ ನಿಂತ ನವಸಮಾಜವೊಂದರ ನಿರ್ಮಾಣ ಅವರ ಗುರಿಯಾಗಿತ್ತು; ಒಂದು ತೆರನಾದ ಪ್ರಜಾಪ್ರಭುತ್ವದ ಸ್ಥಾಪನೆ ಆ ಜನಪರ ಆಂದೋಲನದ ಧ್ಯೇಯವಾಗಿತ್ತು. `ತಮಂಧಘನ'ವಾಗಿದ್ದ ಸಮಾಜಕ್ಕೆ `ಶಿವನ ಪ್ರಕಾಶ'ವನ್ನು ಹಾಯಿಸುವ ಕಾಯಕವನ್ನು ಕೈಗೊಂಡರು, ಶರಣರು.
ಶರಣರು ಇಹ ಪರಗಳನ್ನು, ಲೌಕಿಕ ಪಾರಲೌಕಿಕಗಳನ್ನು ಬೇರೆ ಬೇರೆ ಘಟಕಗಳನ್ನಾಗಿ ಬಗೆಯಲಿಲ್ಲ, ಎರಡನ್ನೂ ಏಕಾಖಂಡವಾಗಿ ತೆಗೆದುಕೊಂಡರು ಎಂಬುದು ಮುಖ್ಯ. ಸ್ವರ್ಗ ಮರ್ತ್ಯಗಳು ಬೇರೆ ಬೇರೆ ಎಂಬ ನಂಬಿಕೆಯೇ ಎಲ್ಲ ಅನರ್ಥ, ಅನಾಚಾರಗಳ ಬೇರು. ಶರಣರಲ್ಲಿ ಅದಕ್ಕೆ ಅವಕಾಶವಿಲ್ಲ. ``ದೇವಲೋಕ ಮರ್ತ್ಯಲೋಕವೆಂಬುದು ಬೇರಿಲ್ಲ ಕಾಣಿ ರೋ'' ಎಂದು ಘೋಷಿಸುತ್ತಾರೆ, ಬಸವಣ್ಣ. ``ಆಚಾರವೇ ಸ್ವರ್ಗ, ಅನಾಚಾರವೇ ನರಕ'' ಇತ್ಯಾದಿಯಾಗಿ ಪುನರ್ ಮೌಲ್ಯಮಾಪನ ಮಾಡುತ್ತಾರೆ. ಈ ನೆಲದ ಮೇಲೆಯೆ ಸ್ವರ್ಗವನ್ನು ಅರಳಿಸುವುದು, ಮರ್ತ್ಯವನ್ನು ಕೈಲಾಸವನ್ನಾಗಿಸುವುದು ಶರಣರ ಆದರ್ಶವಾಗಿತ್ತು. ಸ್ವರ್ಗವೆಂಬುದು ಎಲ್ಲೋ ಇದೆ ಎಂದು ನಂಬಿದರೂ, ಅದರ ಕೀಲಿಕೈ ಮರ್ತ್ಯದಲ್ಲಿದೆಯೆಂಬುದನ್ನು ಮರೆಯಬಾರದು. ಸ್ವರ್ಗ ಪ್ರವೇಶದ ಅರ್ಹತೆಯನ್ನು ಭೂಮಿಯಲ್ಲೆ ಸಂಪಾದಿಸಬೇಕು. ``ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರು''.
ವಚನಕಾರರ ಆಧ್ಯಾತ್ಮಿಕ ಅಭೀಪ್ಸೆ ಎಷ್ಟು ತೀವ್ರವಾದುದೊ ಅಷ್ಟೇ ಪ್ರಗಾಢವಾದುದು ಅವರ ಸಾಮಾಜಿಕ ಪ್ರಜ್ಞೆ; ಅದಕ್ಕೂ ಬೆನ್ನೆಲುಬಾಗಿರತಕ್ಕದ್ದು ಅವರ ಅತೀವ ಮಾನವೀಯ ಧೋರಣೆ ಮತ್ತು ಜೀವ ಪ್ರೇಮ. ಅವರು ಎಲ್ಲವನ್ನೂ ಆಧ್ಯಾತ್ಮೀಕರಿಸಿದರು, ಆದರೆ ಏನೊಂದನ್ನೂ ಅಮಾನವೀಯಗೊಳಿಸಲಿಲ್ಲ.
ಜನಸಾಮಾನ್ಯರ ಪಾಲಿಗೆ ಧರ್ಮವನ್ನು ಸ್ಪಷ್ಟೀಕರಿಸಿ ಗ್ರಾಹ್ಯವನ್ನಾಗಿ ಮಾಡಿದ್ದು ವಚನಕಾರರ ಒಂದು ದೊಡ್ಡ ಸಾಧನೆ. ಅವರ ಧರ್ಮದ ಪರಿಕಲ್ಪನೆ ಸರಳವಾದುದು ಮತ್ತು ಯಥಾರ್ಥವಾದುದು. ``ದಯವೇ ಧರ್ಮದ ಮೂಲವಯ್ಯ'' ಎಂದು ಸಾರುತ್ತಾರೆ ಬಸವಣ್ಣ. ಜೀವಕಾರುಣ್ಯ, ಅಹಿಂಸೆ, ಸದಾಚಾರಗಳು ಧರ್ಮದ ತಳಹದಿ. ಧರ್ಮ ಬೇರೆ, ಮತ ಬೇರೆ. ಮತ ವಿಧಿಗಳನ್ನು,ಆಚರಣೆ ಗಳನ್ನು ಪುರಸ್ಕರಿಸುತ್ತದೆ. ಅವುಗಳಿಂದ ಪ್ರಯೋಜನವಿಲ್ಲ. ``ಆಚಾರವೆಂಬುದು ಹಾವಸೆಗಲ್ಲು'' ಎನ್ನುತ್ತಾರೆ, ಬಸವಣ್ಣ. ಹೀಗಾಗಿ ಧರ್ಮದ ನೈಜ ಸ್ವರೂಪವನ್ನು ವಚನಕಾರರು ಅನಾವರಣಗೊಳಿಸಿದರು; ಅದು ಎಲ್ಲರೂ ಅವಲಂಬಿಸಬಹುದಾದ್ದು, ಅನುಸರಿಸಬಹುದಾದ್ದು ಎಂದು ತೋರಿಸಿಕೊಟ್ಟರು.
ಮಾನವೀಯ ದೌರ್ಬಲ್ಯಗಳನ್ನು ಒಪ್ಪಿಕೊಂಡವರು ವಚನಕಾರರು. ಮನುಷ್ಯ ಹುಟ್ಟಿನಿಂದಲೇ ಪರಿಪೂರ್ಣ ಎಂಬುದು ಅವರ ತಿಳುವಳಿಕೆಯಲ್ಲ. ಆದರೆ ವಿಕಾಸದಲ್ಲಿ ಅವರಿಗೆ ವಿಶ್ವಾಸ; ಸಾಧನೆಯಿಂದ ನರ ಹರನಾಗಬಲ್ಲ ಎಂಬುದವರ ನಂಬಿಕೆ. ಎಲ್ಲರಿಗೂ ವೈರಾಗ್ಯವನ್ನು ವಿಧಿಸಬಯಸಲಿಲ್ಲ, ಶರಣರು; ಏಕೆಂದರೆ ``ಒಲಿವೆನೆಂಬುದು ಕಾಯಗುಣ'' ಎಂಬುದನ್ನು ಅವರು ಬಲ್ಲವರಾಗಿದ್ದರು. `ಒಡಲುಗೊಂಡವ ಹಸಿವ, ಒಡಲುಗೊಂಡವ ಹುಸಿವ? ನೀನೆನ್ನಂತೊಮ್ಮೆ ಒಡಲಗೊಂಡು ನೋಡಾ'' ಎಂದು ಶಿವನಿಗೆ ಸವಾಲು ಹಾಕುತ್ತಾನೆ, ಜೇಡರ ದಾಸಿಮಯ್ಯ. ಒಟ್ಟಿನಲ್ಲಿ, ತಪ್ಪು ಮಾಡುವುದು ಮನುಷ್ಯ ಸ್ವಭಾವ. ಆದರೆ ತಿದ್ದಿಕೊಳ್ಳಬೇಕು, ಗೆದ್ದುನಿಲ್ಲಬೇಕು ಎಂಬುದು ಶರಣರ ಮತ. ನಾನಾ ಪ್ರಲೋಭನೆಗಳ ಕಾಟದ ಹಾಗೂ ಅವುಗಳ ವಿರುದ್ಧ ನಡೆದ ಉಗ್ರವಾದ ಹೋರಾಟದ ಜ್ವಲಂತ ದಾಖಲೆಗಳೆ ಆಗಿವೆ, ಬಹುಪಾಲು ವಚನಗಳು.
ಪುರುಷರ ಸ್ಥಾನಮಾನವನ್ನೇ ವಚನಕಾರರು ಸ್ತ್ರೀಯರಿಗೂ ನೀಡಿದರೆನ್ನುವುದು ಅತ್ಯಂತ ಪ್ರಾಮುಖ್ಯದ ವಿಚಾರ. ಲಿಂಗವನ್ನು ಪತಿ ಸ್ಥಾನದಲ್ಲಿರಿಸಿ ತಾವು ಸತಿ ಸ್ಥಾನದಲ್ಲಿ ನಿಂತ ಶರಣರು ಹೆಣ್ಣನ್ನು ಕೀಳಾಗಿ ಕಾಣುವುದು ಶಕ್ಯವಿರಲಿಲ್ಲ. ಅಂತೂ ಮಹಿಳೆಯರು ಮತ್ತು ಸಮಾಜದ ನಿಮ್ನ ವರ್ಗಗಳಿಂದ ಬಂದ ಸಾಮಾನ್ಯರು ಕೂಡ ಎಂತಹ ಬೌದ್ದಿಕ, ಆಧ್ಯಾತ್ಮಿಕ ಎತ್ತರಕ್ಕೇರಬಲ್ಲರೆಂಬುದನ್ನು ಹನ್ನೆರಡನೆಯ ಶತಮಾನದ ಕ್ರಾಂತಿ ನಿಚ್ಚಳವಾಗಿ ನಿದರ್ಶಿಸಿತು. ಹೆಣ್ಣು ಗಂಡಿನ ಪಾಲಿಗೆ ಕೇವಲ ಕಾಮದ ಗೊಂಬೆಯಲ್ಲ ಅಥವಾ ಸಹಧರ್ಮಿಣಿ ಮಾತ್ರವಲ್ಲ, ಅವಳು ಅವನ ಬದುಕಿನಲ್ಲಿ ಬೌದ್ದಿಕವಾಗಿ ಭಾಗವಹಿಸುವ `ವಿಚಾರ ಪತ್ನಿ' ಕೂಡ ಆಗಬಲ್ಲಳು, ಆಗಬೇಕು ಎಂಬುದು ಅಂದು ಸಿದ್ಧವಾದ ಸತ್ಯ.
ವಚನಕಾರರು ಕೊಟ್ಟ ಒಂದು ಚಿರಂತನ ಮಹಾಮೌಲ್ಯವೆಂದರೆ, ಕಾಯಕ. ಅದೊಂದು ಸಂಕೀರ್ಣ ತತ್ತ್ವ. ಅದು ಏಕಕಾಲದಲ್ಲಿ ಅಧ್ಯಾತ್ಮಿಕವೂ ಹೌದು, ಸಾಮಾಜಿಕವೂ ಹೌದು. ``ಕಾಯಕವೇ ಕೈಲಾಸ'' ಎಂಬ ಸೂಕ್ತಿ ಇದನ್ನೆ ಸೂಚಿಸುತ್ತದೆ. ``ಲಿಂಗವಾದರೂ ಕಾಯಕದೊಳಗು'' ಎಂಬ ಆಯ್ದಕ್ಕಿ ಮಾರಯ್ಯನ ಮಾತು ವಿಸ್ತಾರವಾದ ವ್ಯಾಖ್ಯಾನವನ್ನು ಬಯಸುವಂಥದು. ``ಕಾಯದ ಕಳವಳ'' ಕಾಯಕದಿಂದ ಹರಿಯುತ್ತದೆ ಎನ್ನುತ್ತಾರೆ ಬಸವಣ್ಣ. ಎಂದರೆ, ಅದರಿಂದ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಕ್ಷೇಮ ಸಿದ್ದಿಸುತ್ತದೆ. ವ್ಯಕ್ತಿಯ ಮತ್ತು ಸಮಾಜದ ಉತ್ಥಾನಕ್ಕೆ ಕಾಯಕವೇ ಶ್ರೇಷ್ಠ ಸಾಧನ. ಅದು ಜಾತಿ ವಿನಾಶಕ್ಕೂ ಸಮಾನತೆಗೂ ನೆರವಾಗಬಲ್ಲುದು; ಅರ್ಥವ್ಯವಸ್ಥೆಗಂತೂ ದೊಡ್ಡ ಕೊಡುಗೆಯಾಗಬಲ್ಲುದು.
ವಚನಗಳು ಸಾಹಿತ್ಯವಾಗಬೇಕೆಂದು ಮೂಲತಃ ಉದ್ದಿಷ್ಟವಾದುವಲ್ಲ; ಆದರೂ ಅವುಗಳ ಕಾವ್ಯ ಸತ್ತ್ವ ಅಸಾಧಾರಣವಾದುದು. ಸಾಹಿತ್ಯ ರಚನೆಯ ನಿಲುವಿನಿಂದ ರಚಿತವಾದ ಅಸಂಖ್ಯ ಕೃತಿಗಳು ಸಾಹಿತ್ಯ ಚರಿತ್ರೆಯಲ್ಲಿ ನೀರಸವಾಗಿ ಸಾಲುಗಟ್ಟಿ ನಿಂತಿರುವಾಗ, ಈ ವಚನ ವಿದ್ಯಮಾನ ಸ್ವಾರಸ್ಯದ ಸಂಗತಿ; ವಿಸ್ಮಯದ್ದು ಕೂಡ. ಇದಕ್ಕೇನು ಕಾರಣ? ವಚನಕಾರರು ಸೌಂದರ್ಯ ಮೌಲ್ಯಕ್ಕೆ ಗುರಿಯಿಡದೆ, ಶಿವ ಮೌಲ್ಯವನ್ನು ಹಿಡಿದು ನುಡಿದರು; ಅವರ ನುಡಿಗೆ ಅಯಾಚಿತವಾಗಿ, ಸಹಜವಾಗಿ ಸೌಂದರ್ಯ ಒಲಿದು ಬಂತು. ವಚನ ಸಾಹಿತ್ಯ ಮನುಷ್ಯ ಜನ್ಮಕ್ಕೆ ಕೊಟ್ಟಿದ್ದು ತುಂಬಾಯಿದೆ ಅನುಸರಣೆ ಮಾಡುವ ಅವಶ್ಯಕತೆಯಿದೆ ಅಷ್ಟೆ.
ಮಾತು ಬಲ್ಲಾತ ಜಾಣನಲ್ಲ
ಗೀತವ ಬಲ್ಲಾತ ಜಾಣನಲ್ಲ
ಲಿಂಗವ ನೆರೆ ನಂಬಿದಾತ, ಆತ ಜಾಣನು!
ಗೀತವ ಹಾಡಿದೊಡೇನು?
ಶಾಸ್ತ್ರ ಪುರಾಣವ ಕೇಳಿದೊಡೇನು?
ವೇದ ವೇದಾಂತವನೋದಿದೊಡೇನು??
ಭಕ್ತಿಯಿಲ್ಲದವರನೊಲ್ಲ ಕೂಡಲ ಸಂಗಮದೇವ.
ಅಮೂರ್ತವನ್ನು ಮೂರ್ತಗೊಳಿಸುವುದರಲ್ಲಿ, ಬಯಲನ್ನು ರೂಪ ಮಾಡುವುದರಲ್ಲಿ ವಚನಕಾರರ ದಕ್ಷತೆ ದೊಡ್ಡದು. ಒಂದು ಸಣ್ಣ ಉದಾಹರಣೆಯನ್ನಷ್ಟೆ ಇಲ್ಲಿ ಗಣಿಸಬಹುದು. ``ಕಪ್ಪೆ ಸರ್ಪನ ನೆಳಲಲ್ಲಿ ಇಪ್ಪಂತೆ ಎನಗಾಯಿತ್ತಯ್ಯಾ'' ಎಂಬ ಬಸವಣ್ಣನವರ ವಚನದಲ್ಲಿ ಹೇಗೆ ಮೃತ್ಯುವಿನ ಘೋರ ಭೀಕರತೆ ಒಂದು ಸುಮೂರ್ತ ಚಿತ್ರದ ಮೂಲಕ ಧ್ವನಿತವಾಗುತ್ತದೆಂಬುದನ್ನು ಪರಿಭಾವಿಸಬೇಕು. ಕಪ್ಪೆ, ನೆರಳು, ಸರ್ಪಗಳ ರೂಪಕಗಳಲ್ಲಿ ಇಡೀ ಬದುಕನ್ನೆ ಅಡಗಿಸಿದೆ, ಬಸವ ಪ್ರತಿಭೆ. ಒಂದು ಕಡೆ ``ಕತ್ತೆ ಕುದುರೆಗೆ ಹುಟ್ಟಿದ ವೇಸರನಂತೆ'' ಎನ್ನುವಲ್ಲಿ ಅವರು ಕೊಡುವ ಹೇಸರಕತ್ತೆಯ ಹೋಲಿಕೆ ಎಷ್ಟು ನವೀನ ಮತ್ತು ಅರ್ಥಪೂರ್ಣ ಅಲ್ಲವೆ?
ಜೀವನ ಇರುವವರೆಗೂ ವಚನಗಳನ್ನು ಆಲಿಸಿ ಅವುಗಳಲ್ಲಿಯ ಅರ್ಥವನ್ನು ಬದುಕಿನಲ್ಲಿ ಅನ್ವಯಿಸಿಕೊಂಡರೆ ಮನುಷ್ಯ ಜನ್ಮ ಸಾರ್ಥಕತೆಯೆಡೆಗೆ ಸಾಗುತ್ತದೆ. ವಚನಕಾರರು ಆಡಿದಂತೆ ಮಾಡಿ ತೋರಿದವರು ತಮ್ಮ ಬದುಕಿನಲ್ಲಿ ಅನ್ವಯಿಸಿಕೊಂಡು ತೋರಿದವರು. ತಮ್ಮ ಸಕಲ ಭಾಗ್ಯಗಳನ್ನು ಬಿಟ್ಟು ತ್ಯಾಗಿಯಾಗಿ ಬದುಕಿದವರು. ನಂಬಿಕೆಗಳ ಬುನಾದಿಯ ಮೇಲೆ ಜೀವನದ ಯಶೋಗಾತೆಗಳನ್ನು ಕಟ್ಟಿ ಸಮಾಜಕ್ಕೆ ಸ್ವತ: ಮಾದರಿಯಾಗಿ ನಿಂತವರು. ಸಮಾಜದೊಳಿಗ ಅನೇಕ ಅನಿಷ್ಠ ಪದ್ಧತಿಗಳನ್ನು ಹೋಗಲಾಡಿಸುವಲ್ಲಿ ಶ್ರಮವಹಿಸಿದವರು. ನಾವು ನಮ್ಮ ಜೀವನವನ್ನು ವಚನದಲ್ಲಿ ವಿಲೀನವಾಗಿಸಿದರೆ ಸಾಕು ಬದುಕಿನ ಅದೆಷ್ಟು ಕಷ್ಟಗಳನ್ನು ಸಹಿಸಿಕೊಂಡು ಸೇವನೆಯೆನ್ನು ಮಾಡಿಕೊಂಡು ಸುಂದರವಾದ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಯಶಸ್ವೀಯಾಗುವೇವು. ಸಾರ್ಥಕ ಬದುಕು ರಚನೆಯಾಗಲು ಸಾತ್ವಿಕ ತತ್ವವುಳ್ಳ ವಚಗಳು ಅವಶ್ಯಕವಾಗಿವೆ. ನಾವು ಮತ್ತು ನಮ್ಮ ಬದುಕನ್ನು ವಚನಗಳೊಂದಿಗೆ ಅನ್ವರ್ಥಗೊಳಿಸಿ ಬದುಕಿ ನೋಡಿ ಬದುಕು ಸಾರ್ಥಕವಾಗುತ್ತದೆ.
ಕೆ.ಎಂ.ವಿಶ್ವನಾಥ ಮರತೂರ.