ಅಂದು “ಅವ್ವ”ನನ್ನು ಅಗೆದ ನೆಲದೊಳಗೆ ಹೂಳುತ್ತಿದ್ದರು. ನಾನು ಚೀರಾಡಿ ಅಳುತ್ತಿದ್ದೆ. ನಮ್ಮ ಸಂಬಂಧಿಕರೆಲ್ಲ ನನಗೆ ಸಂತೈಸುತ್ತಿದ್ದರು. ನನ್ನವ್ವನಿಗೆ ನೆಲದೊಳಗೆ ಹಾಕಬ್ಯಾಡರೊ ಎಂದು ಜೋರಾಗಿ ಚೀರಾಡುತ್ತಾ ಎಲ್ಲರಿಗೆ ಕಲ್ಲು ತೂರಾಡಿ ಹೊಡೆಯುತ್ತಿದ್ದೆ. ಇಷ್ಟೆಲ್ಲ ನಡೆಯುತ್ತಿದ್ದದ್ದು ನಾನು ಆಗ 5ನೇ ತರಗತಿಯಲ್ಲಿ ಓದುತ್ತಿದ್ದೆ. ನನ್ನ ಹೆತ್ತೊಡಲು ನನ್ನಿಂದ ದೂರವಾಗಿತ್ತು. ಅದೇ ರಾತ್ರಿ ಅವ್ವನಿಲ್ಲದ ಸಂಧರ್ಭದೊಳಗೆ ಮೂಡಿಬಂದ ದು:ಖ ದುಮ್ಮಾನದ ನೆನಪೆ ನಾ ಬರೆದ ಮೊದಲ ಅಕ್ಷರಗಳು ಅವು ಏನು ಎಂಬ ಅರಿವಿರಲಿಲ್ಲ, ಆದರೆ ಅಲ್ಲಿ ಅವ್ವನ ಅದಮ್ಯ ಪ್ರೀತಿಯಿತ್ತು, ದು:ಖವಿತ್ತು, ಅವಳು ನನ್ನ ಏಕೆ ತೊರೆದು ಹೋದಳು ಎಂಬ ಕೋಪವಿತ್ತು. ಒಡಲೊಳಗೆ ಅದ್ಯಾವುದೊ ಶಕ್ತಿ ನನ್ನ ದು:ಖಕ್ಕೆ ಅಕ್ಷರ ರೂಪ ಕೊಡುವಂತೆ ಮಾಡಿತು
ಬೆಳಕು ಕೊಡುವ ದೀಪವು ಬಾಳಿನಲ್ಲಿ ಆರಿಹೋದಂತೆ.
ಎಂಬ ಸಾಲುಗಳು ಮೂಡಿದವು. ಆ ಸಮಯದಲ್ಲಿ ಕವಿತೆಯಂದರೇನು ಎಂಬ ಕಲ್ಪನೆ ನನ್ನಲ್ಲಿ ಇರಲಿಲ್ಲ. ಮುಂದೆ ಶಾಲೆಯಲ್ಲಿ ಒಂದು ದಿನ ಆ ಅಕ್ಷರಗಳನ್ನು ನೋಡುತ್ತಾ ಕಣ್ಣೀರು ಹರೆಸುತ್ತಾ ಕುಳಿತಿದ್ದೆ ಅವ್ವ ತುಂಬಾ ನೆನಪಾಗುವ ವ್ಯಕ್ತಿ ನನ್ನ ಜೀವನದಲ್ಲಿ ಅತ್ಯಂತ ಪ್ರೀತಿ ಅಷ್ಟೆ ಹೊಡೆತ ಕೊಟ್ಟ ವ್ಯಕ್ತಿ ಅವಳು. ಈ ಸಂದರ್ಭದಲ್ಲಿ ನನ್ನ ಪ್ರೀತಿಯ ಗುರುಗಳಾದ ಶ್ರೀ ಸಿದ್ಧರಾಮಪ್ಪ ಅವರು ಅದನ್ನು ನೋಡಿ ಏನ್ ಒಳ್ಳೆಯ ಹಾಡು ಬರೆದಿದ್ದಿಯಾ ಇದನ್ನು ಶಾಲೆಯ ಕಾರ್ಯಕ್ರಮದಲ್ಲಿ ಹಾಡು ಎಂದರು. ಅದರಂತೆ ಹಾಡಿದೆ ಅಲ್ಲಿಂದ ಪ್ರಾರಂಭವಾದ ಕವಿತೆ ಇಂದಿಗೂ ನಿಂತಿಲ್ಲ.
ನನ್ನ ಪ್ರಕಾರ ಕವಿತೆಯೆಂದರೆ ಅನುಭವದ ನೆಲೆಯಲ್ಲಿ ಅರಗಿಸಿಕೊಳ್ಳಲಾಗದ ಹಾಗೂ ಅರೆಗಿಸಿಕೊಂಡ ವಿಷಯಗಳು ಅಭಿವ್ಯಕ್ತಿ ಮಾಡುವ ರೀತಿಯೆ ಕವಿತೆ. ಕಳೆದು ಹೋದ ವಸ್ತು, ಉಳಿಸಿಕೊಂಡ ಪ್ರೀತಿ, ನಡೆದುಬಂದ ರೀತಿ, ನಡೆಯುತ್ತಿರುವ ರೀತಿ, ಎಲ್ಲವು ಕವಿತೆಯೇ ಆಗಿದೆ. ಕೆಲವುಬಾರಿ ಸಾಮಾಜಿಕ ಸಮಸ್ಯೆಗಳನ್ನು ಕಂಡಾಗ ಅದರ ಪರ ವಿರೋಧಗಳ ಬಗ್ಗೆ ನಮ್ಮ ಮನಸ್ಸಿನೊಳಗೆ ಮೂಡುವ ಅಕ್ಷರಗಳೆ ಕವಿತೆ. ಯಾವುದಾರು ಒಂದು ವಿಷಯ ಓದಿ ಮನನಮಾಡಿಕೊಂಡಾಗ ಅದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ವೇದಿಕೆಯಾಗಲಿವೆ ಕವಿತೆ.
ನಿಮಗೆ ಅತೀ ಸಂತೋಷವಾದಾಗ ಆಗುವ ಅನುಭವ ಮತ್ತೆ ಮತ್ತೆ ಸಿಗಲಾರದು ಅಂತೆಯೆ ಕವಿತೆ ಬೇಕಂತಲೆ ಬರೆಯುವ ಸುಸಜ್ಜಿತ ಕಟ್ಟಡವಲ್ಲಾ ಅದು ತಾನಾಗಿಯೇ ಸಮಯ ಸಂಧರ್ಭಕ್ಕೆ ತಕ್ಕಂತೆ ಬರೆಸಿಕೊಳ್ಳುವ ಗುಣ ಹೊಂದಿದೆ. ಒಂದು ವಿಷಯ ಒಪ್ಪಿಕೊಳ್ಳಬೇಕಾಗುವುದು ಅದರ ಭಾವ, ಅರ್ಥ, ಗೃಹಿಕೆ ಎಲ್ಲವು ಬೇಕು. ಪ್ರಾಸ, ಲಯ, ತಾಳ ಕೂಡ ಮುಖ್ಯ ಹಾಗಂತ ಅದನ್ನೆ ಕವಿತೆಯಂದು ಕರೆಯಲು ಸಾಧ್ಯವಿಲ್ಲ ಅವೆಲ್ಲ ಕವಿತೆಯೊಳಗೆ ಅವಿತು ಕುಳಿತವುಗಳು ಅವುಗಳಿಂದ ಕವಿತೆಗೆ ಮೇಕಪ್ ಮಾಡಬಹುದಷ್ಟೆ ಎಂಬುವುದು ನನ್ನ ಅಭಿಪ್ರಾಯ. ಮನುಷ್ಯನ ಅನುಭವ, ಆಸೆ, ಅಭಿಲಾಶೆ, ಅಭಿಪ್ರಾಯ, ಆತಂಕ, ಆಲೋಚನೆ, ವಿವೇಚನೆ,ಕೋಪ-ತಾಪ, ಸಂತೋಷ , ಸಾಮಾಜಿಕ ಪ್ರಜ್ಞೆ ಮತ್ತು ಜವಾಬ್ದಾರಿ ಇತ್ಯಾದಿಗಳನ್ನು ಹೊರಹಾಕುವಲ್ಲಿ ಅದನ್ನು ಜನರಿಗೆ ತಲುಪಿಸುವ ದಾರಿಗಳಲ್ಲಿ ಪ್ರಮುಖ ದಾರಿ ಈ ಕವಿತೆ. ನೈಜ ಅನುಭವಗಳಿಗೆ ಕಲಾತ್ಮಕತೆ ಕೊಡುವ ಕೈಚಳಕವೆ ಕವಿತೆ.
ಚಿಕ್ಕಂದಿನಲ್ಲಿ ಅವ್ವ ಹೊಡೆಯುತ್ತಿದ್ದಳು ಎಂದು ಅ.ಆ.ಇ.ಈ ಬರೆಯುತ್ತಿದ್ದೆ. ಶಾಲೆಯಲ್ಲಿ ಎಲ್ಲರ ಎದುರಿಗೆ ಶಿಕ್ಷಕರಿಂದ ಭೇಷ್ ಎನಿಸಿಕೊಳ್ಳಲು ಬರೆಯುತ್ತಿದ್ದೆ. ಸ್ವಲ್ಪ ದೊಡ್ಡವನಾದ ನಂತರ ಮನೆಯಿಂದ ದೂರವಾದಗ ಅವ್ವನ ಕೈ ಅಡಿಗೆ ನೆನಪಾಗಿ ಪತ್ರ ಬರೆಯಲು ಪ್ರಾರಂಭಿಸಿದೆ. ಇದೀಗ ಪ್ರಭುದ್ಧನಾಗಿ ಸಮಾಜದೊಳಗೆ ಜರುಗುತ್ತಿರುವ ಸಮಸ್ಯೆಗಳ ಕುರಿತು ಬರೆಯುತ್ತಿರುವೆ. ಮೊದಲಿನ ಕೆಲವುಗಳಿಗೆ ನಾನೇಕೆ ಬರೆಯುತ್ತೇನೆ ಎಂಬ ಪ್ರಶ್ನೆಗೆ ಉತ್ತರ ತುಂಬಾ ಸಾಮಾನ್ಯವೆನಿಸಬಹುದು ಆದರೆ ಪ್ರಭುದ್ಧನಾಗಿ ಸಮಾಜದೊಳಗೆ ಸಮಾಜದೊಂದಿಗೆ ಬದುಕವಾಗ ಬರೆಯುವ ಬರವಣಿಗೆ ನಮ್ಮೊಳಗಿನ ಸಾಮಾಜಿಕ ಪ್ರಜ್ಞೆ ಹಾಗೂ ಕಳಕಳಿಯ ಅಭಿವ್ಯಕ್ತಿಯಾಗಿದೆ.
ಸಮಾಜದ ಓರೆ ಕೋರೆಗಳನ್ನು ತಿದ್ದಲು, ಅಸಮಾನತೆ ಬಿರುಗಾಳಿಯನ್ನು ತಡೆಯಲು, ಅನ್ಯಾಯದ ಅಹಂನ್ನು ಮೆಟ್ಟಿಹಾಕಲು, ಲಗ್ಗೆಯಿಲ್ಲದೆ ಓಡುತ್ತಿರುವ ಆಡಂಬರ ಹಾಗೂ ಸಾಮಾಜಿಕ ಪಿಡುಗನ್ನು ತಡೆಯಲು, ಸಮಾಜದಲ್ಲಿ ಸಮಾನತೆ ತರಲು ನಾನು ಬರೆಯುತ್ತೇನೆ.
ನನ್ನ ಬರವಣಿಗೆ ನನ್ನ ಅನುಭವದ ಅಭಿವ್ಯಕ್ತಿಯೇ ಹೌದು. ಇದರಿಂದ ಮನಸ್ಸಿಗೆ ತೃಪ್ಪಿ ಸಿಗುತ್ತದೆ. ಇದಕ್ಕೆ ತಾಜಾ ಉದಾಹರಣೆ ಕೊಡುವುದಾದರೆ. ಕಳೆದ ವರ್ಷ ಸಂಯುಕ್ತ ಕರ್ನಾಟಕದ ಸಾಪ್ತಾಹಿಕದಲ್ಲಿ “ಜ್ಞಾನೋದಯ” ಎಂಬ ಕಥೆ ಪ್ರಕಟವಾಗಿತ್ತು. ಆ ಕಥೆಯನ್ನು ಓದಿ ಅಂದಿನ ದಿನ ಸರಿ ಸುಮಾರು 500ಕ್ಕೂ ಹೆಚ್ಚು ಓದುಗರು ಕರೆ ಹಾಗೂ ಎಂ.ಎಸ್.ಎಸ್. ಮೂಲಕ ಆನಂದ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅವುಗಳಲ್ಲಿ ಇಬ್ಬರೂ ವ್ಯಕ್ತಿಗಳು ನನಗೆ ಮರೆಯಲಾರದ ಅಭಿಪ್ರಾಯ ನೀಡಿದರು. ಒಬ್ಬರು ಬೆಂಗಳೂರಿನ ಸಾಫ್ಟ್ ವೇರ್ ಉದ್ಯೋಗಿ “ಕಣ್ಣೀರ ತೆಗೆದು ಹೇಳಿದ ಸರ್. ನಾನು ನಿಮ್ಮ ಲೇಖನ ಓದಿ ಅತ್ತುಬಿಟ್ಟೆ, ಕಥೆ ಓದಿ ಮುಗಿಸಿದ ತಕ್ಷಣ ನನ್ನ ಮಗಳನ್ನು ನೋಡಲು ಹೊರಟಿರುವೆ, ನಾನು ಹಣ ಗಳಿಸುವ ನೆಪದಲ್ಲಿ ನನ್ನ ಪ್ರೀತಿಯ ಮಗಳನ್ನು ಮರೆತಿರುವೆ, ನಿಮ್ಮ ಕಥೆ ನನ್ನ ಕಣ್ಣು ತೆರೆಸಿತು, ನಾನು ನನ್ನ ಹೆಂಡತಿ ನಮ್ಮ ಮಗಳನ್ನು ದೂರಮಾಡಿ ಬರಿ ಹಣ ಗಳಿಸುವಲ್ಲಿ ನಿರತರಾಗದ್ದೇವೆ ಇದೀಗ ಮಗಳನ್ನು ಕಂಡು ಯಾರಾದರು ಒಬ್ಬರು ಕೆಲಸ ಬಿಟ್ಟು ನನ್ನ ಮಗಳು ದೊಡ್ಡವಳಾಗುವರೆಗೆ ಅವಳ ಜೊತೆಗಿದ್ದೆ ನೋಡಿಕೊಳ್ಳುತ್ತೇವೆ. ಎಂದರು. ಒಂದು ಬರವಣಿಗೆ ಸಾರ್ಥಕತೆ ಪಡೆಯಲು ಇಷ್ಟು ಸಾಕಲ್ಲವೆ?
ನಾನು ನನ್ನ ಸುತ್ತಮುತ್ತಲಿನ ವಾತಾವರಣ ತಿಳಿಗೊಳಿಸಲು ಬರೆಯುತ್ತೇನೆ. ನನ್ನ ಕಣ್ಣ ಮುಂದಿನ ವಿಷಯನ್ನು ಅಚ್ಚಳಿಯದಂತೆ ಉಳಿಯುವಂತೆ ಮಾಡಲು ಬರೆಯುತ್ತೇನೆ. ಸರಳ, ಕಠಿಣ ವಿಷಯವನ್ನು ಸ್ವಾರಸ್ಯಕರವಾಗಿ ಹೇಳಿದರೆ ನಾವು ಅದನ್ನು ನೆನಪಿಟ್ಟುಕೊಳ್ಳುತ್ತೇವೆ ಅದಕ್ಕೆ ಬರೆಯುತ್ತೇನೆ. ಕೆಲವು ಸಂದರ್ಭ ಹಾಗೂ ನೆನಪುಗಳು ಯಾವತ್ತು ಮಾಸಿ ಹೋಗಬಾರದು ಎಂಬ ಕಾರಣಕ್ಕೆ ಅವುಗಳನ್ನು ಬರವಣಿಗೆಗೆ ತರುತ್ತೇನೆ. ಒಡಲೊಳಗಿನ ಕಿಚ್ಚು, ಸತ್ಯ, ಸಂತಸ, ಮಾಹಿತಿ, ಪ್ರೀತಿ, ಕಾಳಜಿ, ಸಾಮಾಜಿಕ ಬದ್ಧತೆ, ಎಲ್ಲವು ಎಲ್ಲರಿಗೂ ದೊರೆಯಲಿ ಎಂಬ ಕಾರಣಕ್ಕೆ ಬರೆಯುತ್ತೇನೆ. ಇದರಲ್ಲಿ ನನ್ನ ವಯಕ್ತಿಕ ಆತ್ಮ ತೃಪ್ತಿ ಎಲ್ಲದ್ದಕ್ಕೂ ಮುಖ್ಯವಾಗುತ್ತದೆ. ಈ ಬರವಣಿಗೆ ಮುಗಿಸಿದ ಬಳಿಕ ಸಿಗುವ ಆತ್ಮ ತೃಪ್ತಿಗಾಗಿ ಬರೆಯುತ್ತೇನೆ. ಕೂಡಿಟ್ಟ, ಕಟ್ಟಿಕೊಂಡ, ಹರಡಿಕೊಂಡ, ಕ್ರೋಢಿಕೃತ ಅನುಭವ ಹಾಗೂ ಅಭಿಪ್ರಾಯಗಳನ್ನು ಸಮಾಜದೊಂದಿಗೆ ಹಂಚಿಕೊಳ್ಳುವುದರಿಂದ ಸಮಾಜಕ್ಕೆ ನನ್ನ ಕೈಲಾದ ಸೇವೆ ಕೊಡುವುದಕ್ಕಾಗಿ ಬರೆಯುತ್ತೇನೆ. “ ಈ ಸಮಾಜ ನನಗೇನು ಕೊಟ್ಟಿದೆ ಎನ್ನುವುದ್ದಕ್ಕಿಂತ ನಾನು ಸಮಾಜಕ್ಕೆ ಏನು ಕೊಟ್ಟಿರುವೆ” ಎಂಬ ತತ್ವದ ಮೂಲಕ ಬರವಣಿಗೆ ಮಾಡುತ್ತೇನೆ. ನನಗೂ ಸಂತೋಷವಿದೆ ನನ್ನ ಸುತ್ತಮುತ್ತಲು ಈ ಬರವಣಿಗೆಯಿಂದ ಸಂತೋಷ ನೆಮ್ಮದಿ ಸಿಗುತ್ತದೆ ಅದಕ್ಕಾಗಿ ಬರೆಯುತ್ತೇನೆ.