ಅಂದು ಭಾರತವನ್ನು ಹೊರಗಿನಿಂದ ಬಂದ ಬ್ರೀಟಿಷರು ಆಳುತ್ತಿದ್ದರು ಇಂದು ನಮ್ಮ ಜಾತಿಯ ಜನರೊಳಗೆ ಒಗ್ಗಟ್ಟಿಲ್ಲಾ ಎಂಬ ಸತ್ಯ ಇಂತಹ ಘಟನೆಗಳು ಬಿಚ್ಚಿಡುತ್ತವೆ. ಸರಕಾರ ರಚನೆವೇಳೆ ಇರಬೇಕಾದ ಕಾಳಜಿ ಇಂದು ಮಾಡುತ್ತಿರುವ ಹೋರಾಟವು ಮುಖ್ಯವಾಗಿ ರಾಜಕೀಯ ಪ್ರೇರಿತ ಎಂಬ ಮಾತು ಮರೆಮಾಚುವಂತಿಲ್ಲ.
ಇನ್ನು ನಮ್ಮ ದೇಶದ ದಲಿತರ ಹೋರಾಟಕ್ಕೆ ಅತೀದೊಡ್ಡ ಇತಿಹಾಸವಿದೆ, ಪರಂಪರೆಯಿದೆ ಸುಮಾರು ಜೀವಗಳನ್ನು ಕಳೆದುಕೊಂಡಿದೆ. ಅನೇಕ ದಲಿತರ ಜೀವಗಳನ್ನು ಉಳಿಸಿದೆ ನ್ಯಾಯ ಒದಗಿಸಿದೆ. ನಾಡು ಕಟ್ಟುವ, ಜನ ಸಮುದಾಯ ಕಟ್ಟುವ ಕೆಲಸ ಮಾಡಿದೆ. ನಾಡಿನ ಪ್ರಮುಖ ಭಾಗಗಳಲ್ಲಿ ಪ್ರತಿಯೊಂದು ರಂಗದಲ್ಲಿ ತನ್ನ ಛಾಪು ಮುಡಿಸಿದೆ. ನಾಡಿನ ಮೂಲೆಮೂಲೆಯಲ್ಲಿರುವ ದಲಿತರನ್ನು ಒಗ್ಗೂಡಿಸುವ, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದೆ ಆದರೆ ಇತ್ತೀಚೆಗೆ ಈ ಹೋರಾಟಗಳು ರಾಜಕೀಯ ಪ್ರೇರಿತ ರೂಪತಾಳಿ ಹೋರಾಟದ ಹೆಸರಿನಲ್ಲಿ ರಾಜಕೀಯ ಪುಡಾರಿಗಳ ಕೈಗೊಂಬೆಯಾಗಿ ತಮ್ಮ ನಿಜವಾದ ಕೆಲಸ ಮರೆಯುತ್ತಿವೆ. ಸಾಮಾಜಿಕವಾಗಿ ಕೆಲಸ ಮಾಡಿ, ಜನರಲ್ಲಿ ಜಾಗೃತಿಯ ಸಂಕೇತ ಮೂಡಿಸಬೇಕಾದ ಸಂಘಟನೆಗಳು ರಾಜಕೀಯ ವಿಷಯದಲ್ಲಿ ಮೂಗುತೂರಿಸಿ ಬೇಡವಾದ ವಿಷಯಗಳನ್ನು ಬೇಕು ಎನ್ನುವ ವಿಚಾರ ಆಗಾಗ ಎತ್ತಿಕಟ್ಟಿ ಜನರನ್ನು ಅಡ್ಡದಾರಿ ಹಿಡಿಸುತ್ತಿವೆ. ಅಂತಹ ಬೆಳವಣಿಗೆ ಇದೀಗ ರಾಜ್ಯ ರಾಜಕೀಯದಲ್ಲಿ ನಡೆದು ತಣ್ಣಗಾಗಿದೆ.
ಇನ್ನು ದಲಿತ ಮುಖ್ಯಮಂತ್ರಿಯಾಗಬೇಕು ಎಂಬ ಮಾತು ಕೇಳುತ್ತಿದ್ದಂತೆ ಜಿ.ಪರಮೇಶ್ವರ ಹಾಗೂ ಶ್ರೀ ಮಲ್ಲಿಕಾರ್ಜುನ ಖರ್ಗೆಯವರ ಹೆಸರು ಕೇಳಿಬರುತ್ತಿವೆ. ಇಷ್ಟಕ್ಕೂ ಇವರಿಬ್ಬರು ಯಾರು ದಲಿತರೆ ಹೌದು ಇಬ್ಬರ ಮಧ್ಯದೊಳಗೆ ವೈರತ್ವದ ಭಾವನೆ ಬಿತ್ತುವಲ್ಲಿ ಇಂದಿನ ರಾಜಕೀಯ ಪ್ರೇರಣೆ ನೀಡುತ್ತಿದೆ. ಮತ್ತದೇ ನಮ್ಮ ನಮ್ಮವರ ಒಳಗೊಳಗೆ ಜಗಳ ಹಚ್ಚಿ ಮೇಲ್ಜಾತಿಯವರು ಕುಳಿತು ತಮಾಷೆ ನೋಡುವ ಕಾಲ ಸನ್ನಿಹಿತ ಎನಿಸುತ್ತಿದೆ. ದಲಿತ ಮುಖ್ಯಮಂತ್ರಿ ಮಾಡಬೇಕು ಎನ್ನುವ ಚರ್ಚೆ ನಡೆದಾಗಲೆಲ್ಲ ದಲಿತ ರಾಜಕಾರಣಿಗಳು ತಮ್ಮೊಳಗಿನ ಆಶೆಯ ಬುತ್ತಿ ಬಿಚ್ಚುವುದ್ದಕ್ಕೂ ಹಿಂದೆಟು ಹಾಕುತ್ತಿದ್ದಾರೆ.
ದಲಿತ ಮುಖ್ಯಮಂತ್ರಿಯೆಂಬ ವಿಷಯದ ಸುತ್ತ ಹಣೆದ ಚೆರ್ಚೆಗೆ ಅನೇಕ ಜನರ ಬಾಯಿಗೆ ಸಿಕ್ಕು ವಿಚಿತ್ರ ಹೆಡ್ಲೈನ್ಗಳಿಗೆ ಅಣಿಯಾಗುತ್ತಿದೆ. ಕೆಲವು ಮಾಧ್ಯಮಗಳಂತು ನೇರವಾಗಿಯೇ ದಾಳಿಕಾರಕ ಮಾತುಗಳನ್ನು ಬರೆಯುತ್ತಿವೆ. ರಾಜ್ಯ ಸರಕಾರ ಇದೀಗ ಒಂದಿಷ್ಟು ಜನಪರ ಕೆಲಸಗಳಿಂದ ಯಾವ ಬೇಧಭಾವವು ಮಾಡದೇ ಒಂದು ಸ್ಥಿರ ಸರಕಾರ ಕೆಲಸ ಮಾಡುತ್ತಿದೆ. ಇಂತಹ ಸಮಯದಲ್ಲಿ ಈ ದಲಿತ ಮುಖ್ಯಮಂತ್ರಿ ಬೇಕೇ ಎಂಬ ಚರ್ಚೆ ತುಂಬ ಅರ್ಥಹೀನ ಎಂಬುವುದು ನನ್ನ ವಯಕ್ತಿಕ ಅಭಿಪ್ರಾಯ. ಇಷ್ಟಕ್ಕೂ ಇದೀಗ ದಲಿತರಿಗೆ ಮುಖ್ಯಮಂತ್ರಿ ಮಾಡಿದರೆ ಆಗುವುದಾದರೂ ಏನು ಯಾರಿಗೆ ಲಾಭವಾಗಲಿದೆ, ಒಬ್ಬ ಮುಖ್ಯಮಂತ್ರಿ ಹುದ್ದೆ ಅರೆಯಬೇಕಾದರೆ ಕೆಲವು ದಿನಗಳಾದರು ಬೇಕಾಗುತ್ತದೆ. ಇರುವ ಕೆಲವು ದಿನಗಳಲ್ಲಿ ಸ್ಥಾನದ ಬಗ್ಗೆ ಅರೆತುಕೊಳ್ಳುತ್ತಾ ಕುಳಿತರೆ ಮಾಡಬೇಕಾದ ಕೆಲಸಗಳು ನೆನಗುದಿಗೆ ಬೀಳುತ್ತವೆ. ಕಳೆದಬಾರಿ ಬರಿ ಮುಖ್ಯಮಂತ್ರಿಗಳನ್ನು ನಿರ್ಧಾರ ಮಾಡುವುದರಲ್ಲಿಯೇ ಬಿಜೆಪಿ ಸರಕಾರ ತನ್ನ ಅಧಿಕಾರದ ಅವಧಿ ಮುಗಿಸಿ ಜನರ ಕೆಂಗಣ್ಣಿಗೆ ಗಿರಿಯಾಗಿದ್ದು ಇದೀಗ ಇತಿಹಾಸ. ಅಂತಹ ಮತ್ತೊಂದು ಪರ್ವಕ್ಕೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಮಾಡುತ್ತಿದೆ.
ದಲಿತರಿಗೆ ಸ್ಥಾನಗಳ ಅವಕಾಶ ಸಿಗಬೇಕು ಎಂಬುವುದು ಸ್ವಾಗರ್ಹವಾದ ವಿಚಾರ ಆದರೆ ರಾಜ್ಯದ ಹಿತದೃಷ್ಠಿಯಿಂದ ಸ್ಥಿರ ಸರಕಾರದ ವಿಚಾರವನ್ನು ಎಲ್ಲರೂ ಒಪ್ಪಲೇಬೇಕು. ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡ ಒಬ್ಬ ಪ್ರಮುಖ ರಾಜಕಾರಣಿಯೆಂಬ ವಿಚಾರ ಮಾತ್ರ ಯಾರು ಮರೆಯಬಾರದು. ಅವರ ಅದೆಷ್ಟೊ ಜನಪರ ಕೆಲಸಗಳು ಇಂದು ರಾಜ್ಯದಲ್ಲಿ ಎಲ್ಲಾ ಜನರಲ್ಲಿ ಮನೆಮಾತಾಗಿದೆ ಮುಖ್ಯಮಂತ್ರಿಯವರು ಹಿಂದುಳಿದ ದಲಿತರ ಪರ ನಿಲುವಿನ ವ್ಯಕ್ತಿಯೇ ಆಗಿದ್ದಾರೆ ಹೀಗಿರುವಾಗ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಅವರ ಬೆಂಬಲಿಗರಲ್ಲಿ ಕೋಪ ತರುವಂತಹ ಕೆಲಸ ಇದೀಗ ಸಂಘಟನೆಗಳು ಮಾಡುತ್ತಿವೆ ಇದು ನಿರರ್ಥಕವೂ ಹೌದು.
ದಲಿತರಿಗೆ ಮುಖ್ಯಮಂತ್ರಿ ಸ್ಥಾನಕ್ಕಿಂತ ಸಂವಿಧಾನದ ಆಶೆಯದಂತೆ ಸಮಾಜದ ಅಭಿವೃದ್ಧಯಾಗಬೇಕಾದ ಅವಶ್ಯಕತೆಯಿದೆ. ಇದೀಗ ನಮ್ಮ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ದಲಿತ ಅಭಿವೃದ್ಧಿ ಸೂಚ್ಯಾಂಕದ ಅಧ್ಯಯನ ಮಾಡಲಾಗುತ್ತಿದೆ. ಅಲ್ಲಿನ ಸೂಚ್ಯಂಕಗಳನ್ನು ಆಧಾರವಾಗಿಟ್ಟುಕೊಂಡು ಮಾನವ ಅಭಿವೃದ್ಧಿ ಅಧ್ಯಯನದಲ್ಲಿ ದಲಿತರ ಅಭಿವೃದ್ಧಿ ಸೂಚ್ಯಂಕ ಯಾವ ಮಟ್ಟದಲ್ಲಿದೆ ಎಂಬ ವಿಷಯ ಅರೆತು ಈ ಸಂಘಟನೆಗಳು ಸಮಾಜದ ಏಳ್ಗೆಯ ಬಗ್ಗೆ ಜಾಗೃತಿಯ ಬಗ್ಗೆ ಯೋಚಿಸಲು ಈ ಅಧ್ಯಯನದಿಂದ ನಾವೆಲ್ಲದ್ದೇವೆ ಎಂಬ ಸ್ಪಷ್ಟವಾದ ಮಾಹಿತಿ ಸಿಗಲಿದೆ ಇದರಿಂದ ನಮ್ಮ ಹೋರಾಟ ಚೀರಾಟಗಳು ಪ್ರಾರಂಭವಾಗಲಿ ಈ ಸಮಾಜದಲ್ಲಿರುವ ಅದೆಷ್ಟು ಮಕ್ಕಳು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸಂಪೂರ್ಣಗೊಳಿಸಿದ್ದಾರೆ ಎಂಬ ವಿಷಯದತ್ತ ಗಮನಕೊಡಲಿ ನಮ್ಮ ರಾಜ್ಯದ ಸಂಘಟನೆಗಳ ಹೋರಾಟವು ಜನಪರವಾಗಿರಲಿ ರಾಜಕೀಯದಿಂದ ದೂರವಿರಲಿ ಎಂಬುವುದೇ ನನ್ನ ಆಶೆಯ.
ಇತಿಹಾಸದ ಕಾಲದಲ್ಲಿ ದಲಿತರು ಹಿಂದುಳಿದವರ ಬದುಕು ದುಡಿಯುವುದರಲ್ಲಿಯೇ ಮುಳುಗಿ ನಲುಗುತ್ತಿತ್ತು. ಮೇಲ್ಜಾತಿಯವರ ಸೇವೆ ಮಾಡುವುದರಲ್ಲಿಯೇ ನಿತರವಾಗಿರುತ್ತಿತ್ತು. ಪ್ರತಿಬಾರಿಯು ಹಿಂದುಳಿದವರ ಕೆಳವರ್ಗದವರ ವಿಷಯಗಳು ಬಹುತೇಕ ಮೌನವೇ ತಾಳಿವೆ ಮತ್ತು ರಾಜಕೀಯ ಲಾಭವನ್ನು ಪಡೆದಿವೆ ಎಂಬ ಸತ್ಯ ಮರೆಯುವಂತಿಲ್ಲ ಈ ಬಾರಿಯ ದಲಿತ ಮುಖ್ಯಮಂತ್ರಿ ಚರ್ಚೆಯೂ ಕೂಡ ಮೌನದಲ್ಲಿಯೇ ಮುಳಗಿದಹೋಯಿತು. ದಲಿತರೊಬ್ಬರು ಈ ರಾಜ್ಯದ ಮುಖ್ಯಮಂತ್ರಿಯಾಗಿ ಕೆಲವರ್ಗದ ಸಮುದಾಯಕ್ಕೆ ಸಮಾಜಕ್ಕೆ ನ್ಯಾಯ ದೊರಕಲಿದೆ ಎಂಬ ಆಸೆ ಇದೀಗ ಗಗನಕುಸುಮವಾಗಿದೆ. ದಿಲಿತರ ಹಾಗೂ ಹಿಂದುಳಿದವರ ಅಭಿವೃದ್ಧಿಯ ಅನೇಕ ವಿಷಯಗಳು ನೆನಗುದಿದೆ ಬೀಳುತ್ತವೆ. ನಮ್ಮ ರಾಜ್ಯದಲ್ಲಿ ಮುಂದೆ ಹೋಗುವರು ಹೋಗುತ್ತಿದ್ದಾರೆ. ಹಿಂದುಳಿದವರು ಮತ್ತಷ್ಟು ಹಿಂದಕ್ಕೆ ತಳ್ಳಲ್ಲಪಡುತ್ತಿದ್ದಾರೆ. ಶ್ರೀಮಂತ ಮತ್ತಷ್ಟು ಶ್ರೀಮಂತನಾಗುತ್ತಿದ್ದಾನೆ. ಬಡವ ಮತ್ತಷ್ಟು ಬಡವನಾಗುತ್ತಿದ್ದಾನೆ ಎಂಬ ಸತ್ಯ ಅರಿವಿಲ್ಲದೆ ತನ್ನ ಕಾರ್ಯ ಮಾಡುತ್ತಿದೆ. ದಲಿತ ಮುಖ್ಯಮಂತ್ರಿ ಚರ್ಚೆಯು ಕೂಡ ಕೆಳವರ್ಗದವರ ಯೋಜನೆಗಳಂತೆ ಒಂದಿಷ್ಟು ಹೋರಾಟ ಚೀರಾಟ ಹಾದಿ ಹುಟ್ಟು ಹಾಕಿ ಸುಸ್ತಾಗಿ ತನ್ನ ಸಾಮಾಜಿಕ ಸ್ಥಿತಿಗತಿ ಇಷ್ಟೆ ಎಂಬ ನಿರಾಸೆಯ ಭಾವದಿಂದ ಸಮಾಜದೊಳಗೆ ತೆವಳುತ್ತ ಆಮೆಗತಿಯ ಅಭಿವೃದ್ಧಿ ಹಾದಿಯಲ್ಲಿ ಸಾಗಿದೆ. ಸೋಗಲಾಡಿ ಸಮಾಜದ ಮುಂದೆ ಸೋತಿದೆ. ಸತ್ಯ ಸತ್ತಿದೆ.