ತಮಿಳು ನಾಡಿನ ರಾಜಕೀಯದಲ್ಲಿ ಆದ ಹಲವು ಚಮತ್ಕಾರಗಳನ್ನು ಸಿದ್ದರಾಮಯ್ಯ ಮಾಡಲು ಪ್ರಯತ್ನ ಮಾಡಿದರು ಆದರೆ ಇದು ಕರ್ನಾಟಕವಾದ್ದರಿಂದ ಅವುಗಳು ಕೈಗೂಡಲಿಲ್ಲ ಎಂಬ ಮಾತು ಅಷ್ಟೆ ಸತ್ಯ. ಹಿಂದುಳಿದ ಜನಾಂಗದ ಪರವಾಗಿರುವ ಅವರ ಅನೇಕ ಯೋಜನೆಗಳಿಂದ ಸಿದ್ದರಾಮಯ್ಯ ಜನರ ಮನಸ್ಸಲ್ಲಿ ಉಳಿಯುವಂತಾದರು ಆದರೆ ಯೋಜನೆಗಳನ್ನು ಸರಿಯಾದ ಅನುಷ್ಠಾನ ಹಾಗೂ ಅನುಪಾಲನೆಯಲ್ಲಿ ತುಂಬಾ ಎಡವಿದರು ಅಲ್ಲದೇ ಕೆಲವೊಂದು ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಮುಖಭಂಗ ಕೂಡ ಅನುಭವಿಸಿದರು.
ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಬಳಿಕ ಸಿದ್ದರಾಮಯ್ಯ ಸರ್ಕಾರ, ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆಗಳನ್ನೇ ಸಾಧನೆಗಳನ್ನಾಗಿ ಮುಂದಿಟ್ಟುಕೊಂಡು ಪ್ರಚಾರ ಪಡೆಯುತ್ತ ತನ್ನ ತನವನ್ನು ಕೊಚ್ಚಿಕೊಳ್ಳುತ್ತಲೇ ಬಂದಿತು. ತಮ್ಮ ಚುನಾವಣೆ ಸಮಯದಲ್ಲಿನ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ 165 ಭರವಸೆಗಳಲ್ಲಿ 90 ಭರವಸೆಗಳನ್ನು ಈಡೇರಿಸಿರುವುದಾಗಿ ಕಾಂಗ್ರೆಸ್ ಸರ್ಕಾರ ಹೇಳಿಕೊಳ್ಳುತ್ತಾ ಬಂದಿತು. ಬಿಪಿಎಲ್ ಕಾರ್ಡ್'ದಾರರಿಗೆ ಅನ್ನಭಾಗ್ಯ ಎಂಬ ಯೋಜನೆ ಒಂದೆಡೆ ರುಚಿಯಾಗಿದ್ದರೆ ಇನ್ನೊಂದೆಡೆ ಅಕ್ರಮ ಅಕ್ಕಿ ಮಾರಾಟವಾಗಿ ಹಲವು ರೀತಿಯ ಅವ್ಯವಹಾರ ನಡೆದು ಹೋದವು ನಡೆದ ಅವ್ಯವಹಾರಗಳಿಗೆ ಯಾವುದೇ ರೀತಿಯ ಶಿಕ್ಷೆಯಾಗಲಿ ತನಿಖೆಯಾಗಲಿ ಆಗಲಿಲ್ಲ ಆದರೂ ಯಾರಿಗೂ ತಿಳಿಯಲು ಇಲ್ಲ.
ಕರ್ನಾಟಕದ ಅಪೌಷ್ಠಿಕತೆ ಹೋಗಲಾಡಿಸುವ ಕನಸು ಹೊತ್ತ ಸಿದ್ದರಾಮಯ್ಯ ಯೋಜನೆಯ ದೂರದೃಷ್ಠಿ ರಚಿಸಿದೇ ಶಾಲಾ ಮಕ್ಕಳಿಗೆ ಕ್ಷೀರ ಭಾಗ್ಯ ಎಂಬ ಯೋಜನೆ ಘೋಷಿಸಿದರು. ಶಾಲೆಗಳಲ್ಲಿ ಕ್ಷೀರಭಾಗ್ಯ ಯೋಜನೆಯಿಂದ ಆದ ಸಾಧಕ ಬಾಧಕಗಳನ್ನು ಗಮನಿಸಲಿಲ್ಲ ಮಕ್ಕಳು, ಶಿಕ್ಷಕರು, ಸಮುದಾಯದ ಮೇಲೆ ಆದ ಕೆಲವು ಅಹಿತಕರ ಪರಿಣಾಮಗಳನ್ನು ಅವಸ್ಥೆಗಳನ್ನು ಕೊನೆಯವರೆಗೂ ಸರಿಮಾಡಲೇಯಿಲ್ಲ. ಪ್ರಾಥಮಿಕ ಹಂತದ ಮಕ್ಕಳಿಗೆ ಈ ಬಾರಿ ವಿಶೇಷವಾಗಿ ಶಾಲಾ ಬ್ಯಾಗ್ ವಿತರಣೆಯಾಯಿತು. ಅದು ಎಸ್.ಸಿ. ಮಕ್ಕಳಿಗೆ ಮಾತ್ರ ಪ್ರಾಥಮಿಕ ಹಂತದಲ್ಲಿ ಮಕ್ಕಳು ಕೆಲವು ತಾರತಮ್ಯಗಳನ್ನು ಅನುಭವಿಸಿದರು ಎಂಬ ವಿಷಯ ಸಿದ್ದರಾಮಯ್ಯ ಗಮನಿಸಲಿಲ್ಲ ಎನಿಸುತ್ತದೆ.
ರಾಜ್ಯ ಎಲ್ಲಾ ಜಾತಿ ಜನಾಂಗಗಳನ್ನು ಒಳಗೊಂಡಿದೆ. ಒಂದು ಸರಕಾರ ರಚನೆಯಾಗಿ ಅಧಿಕಾರಿಕ್ಕೆ ಬರಲು ಎಲ್ಲಾ ಜಾತಿಗಳು ಮೂಲಕಾರಣವಾಗುತ್ತವೆ ಆದರೆ ಸಿದ್ದರಾಮಯ್ಯ ಎಸ್ಸಿ-ಎಸ್ಟಿಗೆ ಹಣ ಮೀಸಲಿಡುವ ಕಾಯ್ದೆ ಜಾರಿ ಮಾಡಬೇಕೆಂಬ ಹೊಸ ನೀತಿ ಅನೇಕರಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತು. ಮೊದಲಿನಿಂದಲು ಜಾತಿ ಲೆಕ್ಕಾಚಾರವೇ ಮೇಲು ಮಾಡಿಕೊಂಡು ಅಧಿಕಾರ ನಡೆಸುತ್ತಿರುವರು ಎಂಬ ಪ್ರಶ್ನೆ ಮತ್ತೆ ಮತ್ತೆ ಕಾಡಿತು. ಈ ಕಾಯ್ದೆ ಅದೆಷ್ಟು ಸಮಂಜಸವಾಗಿ ಜಾರಿಗೆ ತರುವರೊ ಕಾದು ನೋಡಬೇಕು. ಈ ಕಾಯ್ದೆಯನ್ನು ಫಲಾನುಭವಿಗಳು ಸರಿಯಾಗಿ ಬಳಕೆ ಮಾಡಿಕೊಳ್ಳಲು ಅನುಪಾಲನೆ ಮಾಡದೇ ಹೋದಲ್ಲಿ ದುರುಪಯೋಗವಾಗುವದಂತು ಶತ ಪ್ರತಿಶತ ಸಿದ್ದ ಮಾನ್ಯ ಸಿದ್ದರಾಮಯ್ಯನವರೇ!
ಮುಖ್ಯಮಂತ್ರಿಗಳ ಇನ್ನೊಂದು ಪ್ರಮುಖ ಯೋಜನೆಯೆಂದರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆ, ಈ ಯೋಜನೆಯಲ್ಲಿ ಅನೇಕ ವಿಧ್ಯಾರ್ಥಿಗಳು ಲಾಭ ಪಡೆದಿರುವರು ಎಂಬ ಸತ್ಯದ ಜೊತೆಗೆ ಅದೆಷ್ಟೊ ಜನ ಇದನ್ನು ದುರುಪಯೋಗ ಪಡೆಸಿಕೊಂಡರು ಎಂಬ ಸತ್ಯ ಸರಕಾರ ಮರೆಯಿತು. ಅವರ ಪ್ರಣಾಳಿಕೆಯಂತೆ ಯೋಜನೆ ಘೋಷಣೆ ಮಾಡುವುದಷ್ಟೆ ಅವರ ಕೆಲಸವಾಗಿತ್ತು ಅದನ್ನು ಚಾಚುತಪ್ಪದೇ ಮಾಡಿ ಮುಗಿಸಿದ ಸಿದ್ದರಾಮಯ್ಯ ಎರಡು ವರ್ಷ ಮುಗಸಿದ ತೃಪ್ತಿಯಿದೆ ಎಂದಿದ್ದಾರೆ ಆದರೆ ಆ ಯೋಜನೆಗಳ ಸರಿಯಾದ ಅನುಪಾಲನೆ ಹಾಗೂ ಮೌಲ್ಯ ಮಾಪನ ಮಾಡುವಲ್ಲಿ ಸರಕಾರ ಸೋತಿದೆ ಎಂದು ಹೇಳಬಹುದು.
ರಾಜ್ಯ ಹಾಗೂ ಕೇಂದ್ರ ಸರಕಾರದ ನೇತೃತ್ವದಲ್ಲಿ ಚಾಲನೆಗೊಂಡ ಈ ದೇಶದ ಇನ್ನೊಂದು ದೌರಭಾಗ್ಯದ ಯೋಜನೆಯೆಂದರೆ ಗ್ರಾಮೀಣ ಭಾಗದಲ್ಲಿ ಶೌಚಾಲಯ ನಿರ್ಮಾಣ ಮತ್ತು ಅದರ ಬಳಕೆ. ಕುಡಿಯುವ ನೀರಿಗಾಗಿ ಆಹಾಕಾರ ಎದ್ದಿರುವಾಗ ಶೌಚಾಲಯ ಕಟ್ಟಿ ಅದಕ್ಕೆ ನೀರು ಬಳಿಸಿ ಅದನ್ನು ಉಪಯೋಗಿಸುವರೇ ನಮ್ಮ ಜನ ಎಂಬ ಕನಿಷ್ಠ ಆಲೋಚನೆ ಸರಕಾರಗಳು ಮಾಡಲೇಯಿಲ್ಲ. ಹಳ್ಳಿಗಳಲ್ಲಿ ಈ ಯೋಜನೆ ಹೇಗೆ ಹಳ್ಳ ಹಿಡಿದಿದೆ ಎಂಬ ವಿಷಯ ಯೋಚಿಸಿದರೆ ಅರ್ಥವಾಗುತ್ತದೆ. ಶೌಚಾಲಯ ನಿರ್ಮಾಣ ಹಾಗೂ ಜಳಕದ ಕೋಣೆ ನಿರ್ಮಾಣ ಹಳ್ಳಿಗಳಲ್ಲಿ ಹಳ್ಳಕ್ಕೆ ಹರೆದು ನೀರಲ್ಲಿ ನೀರಾಗಿ ಮುಳಗಿ ಹೋಗುತ್ತಿವೆ ಎಂಬ ವಿಚಾರ ಯಾರು ಮಾಡಲೇಯಿಲ್ಲ.
ಗ್ರಾಮ ಪಂಚಾಯತಿಯ ದಾಖಲೆಗಳ ಪ್ರಕಾರ ಪ್ರತಿ ಹಳ್ಳಿಯಲ್ಲಿಯೂ ಶೌಚಾಲಯಗಳ ನಿರ್ಮಾಣವಾಗಿವೆ ಮತ್ತು ಬಳಕೆಯಾಗುತ್ತಿವೆ ಆದರೆ ನೈಜವಾಗಿ ಯಾವುದೇ ಗ್ರಾಮಮದಲ್ಲಿ ಈ ಶೌಚಾಲಯಗಳು ಬಳಕೆಯಾಗುತ್ತಿಲ್ಲ ಎಂಬ ಸತ್ಯ ಮಾತ್ರ ಮರೆಯುವಂತಿಲ್ಲ.. ಹೀಗೆ ಹಲವು ಯೋಜನೆಗಳನ್ನು ಘೋಷಣೆ ಮಾಡಿರುವ ಮುಖ್ಯಮಂತ್ರಿಗಳು ಅನುಪಾಲನೆ, ಅನುಷ್ಠಾನ, ಮೌಲ್ಯಮಾಪನ ಎಂಬ ಮುಖ್ಯ ವಿಷಯಗಳತ್ತ ಗಮನ ಕೊಡಲೇಬೇಕು. ಈ ಎರಡು ವರ್ಷದುದ್ದಕ್ಕೂ ಗಮನ ಕೊಡಲೇಯಿಲ್ಲ ಇನ್ನು ಮೂರು ವರ್ಷಗಳಲ್ಲಿ ಬರಿ ಹೊಸ ಯೋಜನೆಗಳು ಘೋಷಣೆ ಮಾಡುತ್ತಾ ಹೋದರೆ ಕರ್ನಾಟಕ ಅಭಿವೃದ್ಧಿಯಾಗುವುದಿಲ್ಲ ಎಂಬ ಸತ್ಯ ಮುಖ್ಯಮಂತ್ರಿಗಳು ಅರೆಯಬೇಕು ಮತ್ತು ಅನುಷ್ಠಾನಕ್ಕೆ ತರಬೇಕು.
ಕೆ.ಎಂ.ವಿಶ್ವನಾಥ ಮರತೂರ.
ಲೇಖಕರು.