ಯವ್ವಾ ಶರಣಮ್ಮ ಕೇಳದೇನಾ ನಾವು ಹುಟ್ಟದಾಗ ನಮ್ಮ ಅಪ್ಪ ಅವ್ವದೇರು ಆಗಲಿ ಯಾರೇ ಆಗಲಿ ನಮಗ ನಮ್ಮ ಭವಿಷ್ಯದ ಚಿಂತಿ ಯಾರು ಮಾಡರಲಿಲ್ಲ ಆದರೆ ಈಗ ಹೆಣ್ಣು ಮಕ್ಕಳು ಹುಟ್ಟಿದರ ಸಾಕು ಅವರಿಗೆ ಎಷ್ಟು ಶಿಕ್ಷಣಕ್ಕ, ಜೀವನಕ್ಕ ಸರಕಾರದೋರು ನಮ್ಮ ಮೋದಿ ಸಾಹೆಬರು ಯೋಜನೆಗಳು ಮಾಡ್ಯಾರಂತ ನಮ್ಮ ದೇಶದಾಗಿನ ಎಲ್ಲಾ ಹೆಣ್ಣು ಮಕ್ಕಳಿಗ ಇದು ಒಂದು ಒಳ್ಳೆಯ ಸುದ್ದಿ ಅಲ್ಲವೇನಾ? ಹೌದ ಬಿಡವ್ವ ನಮ್ಮ ಕೇಂದ್ರ ಸರಕಾರ ಇದೀಗ ನಮ್ಮೆಲ್ಲರ ಸಲುವಾಗಿ ಎಷ್ಟು ಒಳ್ಳೆಯ ಯೋಜನೆಗಳು ಮಾಡಿ ಒಳ್ಳೆಯ ಸರಾಕರ ಕೊಡಕತಾರ.
ಏನಪ್ಪ ರಾಮಪ್ಪ ಇವತ್ತಿನ ಸುದ್ದಿ ಕೇಳದೇನ ನಮ್ಮ ದೇಶದ ಪ್ರಧಾನಿಯವರು ನಮ್ಮಂತಹ ರೈತರಿಗಾಗಿಯೇ ಒಂದು ಕೃಷಿ ಚಾನಲ್(ಟಿವಿ) ಮಾಡಿದ್ದಾರಂತ ಅವರು ಒಂದು ವರ್ಷ ಆಡಳಿತ ಕೊಟ್ಟ ನೆನಪಲ್ಲೇ ಇದನ್ನು ಬಿಡುಗಡೆ ಮಾಡ್ಯಾರಂತ ಇದು ದಿನದ 24 ಗಂಟೇನು ಕೆಲಸ ಮಾಡತಾದ ಅಂತಾ ಕಿಸಾನರಿಗೆ ರೈತರಿಗೆ ಸಂಬಂದಪಟ್ಟ ಎಲ್ಲಾ ಮಾಹಿತಿ ಅದರಾಗ ತೋರಿಸಿತಾರಂತ. ಅದರಿಂದ ಯಾವ ಬೆಳಿ ಹ್ಯಾಂಗ ಬೆಳಿಬೇಕು ಹ್ಯಾಂಗ ಬೆಳದರ ಇಳುವರಿ ಹೆಚ್ಚ ಬರತಾದ ಅಂತಾ ನೋಡಿ ಕಲತು ನಾವು ಅದರಂಗ ಬೆಳದು ಒಳ್ಳೆಯ ಕೃಷಿ ಮಾಡಬೇಕಂತ ಅದಕ್ಕ ಇದು ಮಾಡ್ಯಾರ ಒಳ್ಳಯದಾತಲ್ಲೇನಪ್ಪ ಶಿವಪ್ಪ.
ಇನ್ನೊಂದು ವಿಷ್ ಗೊತ್ತಾತೇನಪ್ಪ ಶಿವಪ್ಪ, ಸರಾಕಾರದೋರು ಇತ್ತೀಚಿಗಿ ಇನ್ನೊಂದು ಕೆಲಸ ಮಾಡ್ಯಾರಂತ ಅದೇನೊ ವಿದೇಶದಾಗ ನಮ್ಮ ದೊಡ್ಡ ದೊಡ್ಡ ಜನ ಕೂಡಿಟ್ಟಿರುವ ಕೋಟಿ ಕೋಟಿ ರೊಕ್ಕಾ ನಮ್ಮ ದೇಶಕ ತಂದು ಹಂಚತಾರಂತ ಇದೀಗ ಕೆಲವು ಜನರು ಹೆಸರು ಬಹಿರಂಗ ಮಾಡ್ಯಾರಂತ ಅವೆಲ್ಲ ನಮ್ಮ ದೇಶದ ಬಡವರ ಹೊಟ್ಟಿಮ್ಯಾಲ ಹುಡಿದ್ ಗಳಿಸಿದ ಹಣ ಅಂತ ಅದಕ್ಕ ಸರಕಾರದ ಮತ್ತ ಜನರಿಗೆ ಮೋಸ ಮಾಡಿ ಗಳಿಸಿದ ಹಣ ನಮ್ಮ ಮೋದಿ ಸಾಹೆಬರು ಹೊರಗ ತರತಾರಂತ, ಇದು ಒಂದು ಒಳ್ಳೆಯ ಕೆಲಸ ನೋಡಪ್ಪ. ನೆನಪಿರಲಿ ನೋಡಪ್ಪಾ ನಮ್ಮ ಮೋದಿಯವರು 21ನೇಯ ತಾರಿಖಿಗಿ "ಯೋಗ" ದಿನ ಮಾಡತಾರಂತ ಅದರಿಂದ ಎಲ್ಲರಿಗೂ ರೋಗ ಮುಕ್ತಿ ಎಂದ ಹೇಳ್ಯಾರ್.
ಇವೆಲ್ಲ ಮಾತುಗಳು ಇದೀಗ ನಮ್ಮ ಹಳ್ಳಿಗಳಲ್ಲಿ ಗೊತ್ತಿದ್ದೋ ಗೊತ್ತಿಲ್ಲದ್ದೋ ಜನರು ಮಾತನಾಡುತ್ತಿರುವ ವಿಷಯವಂತು ಸತ್ಯ. ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಇದೀಗ ಒಂದು ವರ್ಷ ಆಚರಿಸಿಕೊಳ್ಳುವ ಹಂತದಲ್ಲಿರುವಾಗ ಅವರ ಹಲವು ಯೋಜನೆಗಳ ಮೂಲಕ ಜನಮಾನಸದಲ್ಲಿ ಇದ್ದಾರೆ. ಅವರು ದೇಶ ಸುತ್ತುತ್ತಿರಬಹುದು ಆದರೆ ಅವರು ಮಾಡಿರುವ ಕೆಲಸಗಳು ಜನರಲ್ಲಿಗೆ ತಲುಪಿವೆ ಎನ್ನುಲು ಇಷ್ಟು ಸಾಕು ಎನಿಸುತ್ತದೆ. ಒಂದೊಂದಾಗಿ ದಾಳಗಳನ್ನು ಬೀಸುತ್ತಿರುವ ಮೋದಿಯವರು ಜನರ ಮನದೊಳಗೆ ನಿಧಾನಕ್ಕೆ ಇಳಿಯುತ್ತಿದ್ದಾರೆ. ಅವರು ಯೋಚಿಸುತ್ತಿರುವ ರೀತಿ ನೀತಿಗಳೆಲ್ಲವೂ ದೂರದೃಷ್ಠಿ, ಜನರ ಹಿತದೃಷ್ಠಿ ಹೊಂದಿವೆ. ಅವರು ಎಲ್ಲಿಯೂ ರಾಜಕೀಯ ಲಾಭ ಮಾಡಿಕೊಳ್ಳುವ ಯೋಜನೆಗಳನ್ನು ಘೋಷಣೆ ಮಾಡಿ ಅದರಿಂದ ಜನರಿಗೆ ಮೋಸ ಮಾಡುವ ಕೆಲಸ ಮಾಡುತ್ತಿಲ್ಲ ಎಂಬುವುದು ಅನೇಕ ಯೋಜನೆಗಳಿಂದ ಸ್ಪಷ್ಟಪಡುತ್ತದೆ.
ಈ ಒಂದು ವರ್ಷದ ಅವಧಿಯಲ್ಲಿ ಮಾನ್ಯ ಮೋದಿಯವರು ಭಾರತಕ್ಕೆ ಒಂದಿಷ್ಟು ಭದ್ರ ಬುನಾದಿಯನ್ನು ಹಾಕಿದ್ದಾರೆ ಎಂದು ದೃಢವಾಗಿ ಹೇಳಬಹುದಾಗಿದೆ. ಎಲ್ಲವನ್ನು ಒಂದು ವರ್ಷದಲ್ಲಿಯೇ ಮುಗಿಸಲು ಸಾಧ್ಯವಿಲ್ಲ ಎಂಬುವುದನ್ನು ಸ್ವತ: ಮೋದಿಯವರೇ ಒಪ್ಪಿಕೊಂಡು ಮುಂದಿನ ದಿನಗಳಲ್ಲಿ ಮತ್ತಷ್ಟು ಬಲಗೊಳ್ಳುವ ದೇಶದ ಅಭಿವೃದ್ಧಿಯಾಗುವ ಯೋಜನೆಗಳನ್ನು ಹಾಕಿಕೊಳ್ಳುವ ದೃಷ್ಠಿ ಸ್ಪಷ್ಟವಾಗಿ ಕಾಣುತ್ತಿದೆ. ಈ ಸರಕಾರದ ಇನ್ನೊಂದು ಉತ್ತಮ ಅಂಶವೆಂದರೆ ಎಲ್ಲಿಯೂ ಕಳಂಕವನ್ನು ಈ ಕಳೆದ ಒಂದು ವರ್ಷದಲ್ಲಿ ಹೊತ್ತಿಲ್ಲ ಸಣ್ಣ ಪುಟ್ಟ ಮನಸ್ತಾಪಗಳು ಬಿಟ್ಟರೆ ಹಗರಣಗಳಾಗಲಿ ಮೋಸ ವಂಚನೆಯಾಗಲಿ ಜೈಲುವಾಸವಾಗಲಿ ನಡೆದಿಲ್ಲ ಅದೊಂದು ತೃಪ್ತಿಕೊಡುವ ಸಂಗತಿಯಾಗಿದೆ. ಮಾನ್ಯ ನರೇಂದ್ರ ಮೋದಿಯವರು ಇನ್ನು ಮುಂದೆ ಮಾಡಬೇಕಾಗಿರುವ ಹಲವು ಪ್ರಮುಖ ಕೆಲಸಗಳೆಂದರೆ ಈಗಾಗಲೇ ಘೋಷಿಸಿರುವ ಯೊಜನೆಗಳು ಜನರಿಗೆ ತಲುಪಲು ಮಾಡಬೇಕಾದ ಕೆಲಸವೇನು ಎಂದು ಅರೆಯಬೇಕು. ಜನರಲ್ಲಿಗೆ ಯೋಜನೆಗಳು ಮುಟ್ಟುವ ನಿಟ್ಟಿನಲ್ಲಿ ಕೆಲಸಗಳಾಗಬೇಕು ಮೋದಿಯವರು ಸಾಧ್ಯವಾದರೆ ಪ್ರತಿ ರಾಜ್ಯಕ್ಕೂ ಪ್ರವಾಸ ಮಾಡಲಿ ದೇಶ ಸುತ್ತಲಿ ಅದರ ಜೊತೆಗೆ ರೈತರ ಹಳ್ಳಿಗಳನ್ನು ಸುತ್ತಲಿ ಅಲ್ಲಿರುವ ಅನೇಕ ಯೋಜನಗೆಳ ಸಾರ್ಥಕತೆ ಕಾಣಲಿ ಆಗ ಮಾತ್ರ ಎಲ್ಲವೂ ಸರಿಯಾಗುತ್ತದೆ ಜೊತೆಗೆ ಜನರ ಮನದೊಳಗೆ ಮೋದಿ ಶಾಶ್ವತವಾಗಿ ಉಳಿಯುತ್ತಾರೆ.
-ಕೆ.ಎಂ.ವಿಶ್ವನಾಥ ಮರತೂರ.
ಯುವ ಬರಹಗಾರ.