ಭಾರತ ಒಂದು ಬಹು ಪರಂಪರೆಯ ರಾಷ್ಟ್ರ. ಇಲ್ಲಿ ಪ್ರಜಾಪ್ರಭುತ್ವದ ನೆಲೆಯಿದೆ. ಸಾವಿರಾರು ಪವಿತ್ರ ನದಿಗಳ ಸೆಲೆಯಿದೆ. ಹಲವು ಕಲೆಗಳ ಕಲಾತ್ಮಕವಿದೆ. ಹಲವು ಮಾಹಾನ್ ವ್ಯಕ್ತಿಗಳ ಪ್ರಭಾವವಿದೆ. ಇತ್ತೀಚೆಗೆ ನಾವೆಲ್ಲ ಸಂಭ್ರಮದ ಬುದ್ಧ, ಬಸವ & ಅಂಬೇಡ್ಕರ್ ಅವರ ಜನ್ಮ ದಿನಾಚರಣೆಗಳನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿದೇವು. ಅವರ ಗುಣಗಾನ, ಅವರ ಮಾತಿನ ಪಠಣ ಮಾಡಿದೇವು. ಇನ್ನೇನು ಈ ಮೂವರು ಮಾಹಾನ್ ವ್ಯಕ್ತಿಗಳು ನಮ್ಮ ಪಕ್ಕದಲ್ಲಿಯೆ ಇದ್ದಾರೆ ಎಂಬುವಷ್ಟು ಸಂತಸ ನಮ್ಮಲ್ಲಿ ಮನೆ ಮಾಡಿತ್ತು.
ನಾನು ಒಂದು ಚಿಕ್ಕ ಹಳ್ಳಿಗೆ ಉಪನ್ಯಾಸ ನೀಡಲು ಹೋಗಿದ್ದೆ, ಅಲ್ಲಿ ಅತ್ಯಂತ ಹಿರಿಯರು ಆಗಮಿಸಿದ್ದರು. ಆ ವೇದಿಕೆಯಲ್ಲಿ ಅತೀ ಸಣ್ಣ ಹುಡುಗನ ಹಾಗೆ ಕಂಡಿದ್ದು ಜೊತೆಗೆ ಅಲ್ಲಿರುವ ಹಲವು ವಿಷಯಗಳು ಕಾಡಿದ್ದು ಮುಜುಗರ ತಂದಿತು. ಏಕೆಂದರೆ ಅಷ್ಟು ಹಿರಿಯರೆನಿಸಿಕೊಂಡವರು ಅಂಬೇಡ್ಕರ್ ರ ಬಗ್ಗೆ ತಿಳಿದಿರುವ ಜ್ಞಾನ ಮಾಹಿತಿ ಕಂಡು ಖೇದವೆನಿಸಿತು. ಹೇಗೆ ಈ ವ್ಯವಸ್ಥೆ ನಮ್ಮನ್ನು ನಮ್ಮ ಜ್ಞಾನವನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ ಎಂಬ ಆತಂಕ ಹುಟ್ಟಿಸಿತು. ಆ ಸಭೆಗಳಲ್ಲಿ ಎಲ್ಲರೂ ಹುಟ್ಟಿಸುವ ಹಲವು ಆತಂಕಗಳು ಮತ್ತು ಮಾಹಿತಿಗಳು ನಮ್ಮ ಸಮಾಜವನ್ನು ಬೆರೆಯಡೆಗೆ ಒಯ್ಯೂತ್ತವೆ ಎಂಬ ಕನಿಷ್ಠ ಜ್ಞಾನ ನಾವೆಲ್ಲ ಪಡೆದುಕೊಳ್ಳಬೇಕು. ಆ ಹಿರಿಯರು ಅಲ್ಲಿರುವ ಗ್ರಾಮಸ್ಥರು ಅಂಬೇಡ್ಕರ್ ಅವರನ್ನು ಅರ್ಥಮಾಡಿಕೊಂಡ ರೀತಿ ಎಲ್ಲವೂ ಕಂಡು ತುಂಬಾ ದು:ಖವೆನಿಸಿತು. “ಒಬ್ಬ ವ್ಯಕ್ತಿಯನ್ನು ತಪ್ಪಾಗಿ ಅರ್ಥೈಸಿಕೊಂಡು ಸಮಾಜದಲ್ಲಿ ಅದನ್ನೆ ಬಿತ್ತುವುದಕ್ಕಿಂತ ದೊಡ್ಡ ತಪ್ಪು ಮತ್ತೊಂದಿಲ್ಲವೆನಿಸಿತು”.
ನಾನು ಆಗ ಇಮ್ಯಾಜಿನೇಷನ್ ಮಾಡಿಕೊಂಡಿದ್ದು ಇಷ್ಟು ಈ ಸಂದಭದಲ್ಲಿ ಆ ಮೂವರು ಮಾಹಾನ್ ವ್ಯಕ್ತಿಗಳು ಈ ಆಚರಣೆಗಳನ್ನು ಹೇಗೆ ಗೃಹಿಸುತ್ತಿರಬಹುದು. ನನ್ನ ಜನರು ಯಾವಾಗ ನನ್ನ ಬಗ್ಗೆ ಸರಿಯಾಗಿ ಓದುತ್ತಾರೆ, ನಾನು ಬರೆದ ಸಂವಿಧಾನ, ಬಸವ ಬರೆದ ವಚನಗಳು, ಬುದ್ಧ ನೀಡಿದ ಮಾರ್ಗಗಳನ್ನು ಯಾವಾಗ ಸರಿಯಾಗಿ ಅಥೈಸಿಕೊಳ್ಳುತ್ತಾರೆ ಎಂಬ ಚಿಂತೆ ಮಾಡುತ್ತಿದ್ದರು ಎನಿಸುತ್ತದೆ. ಬುದ್ಧ , ಬಸವ & ಅಂಬೇಡ್ಕರ್ ರನ್ನು ಅರ್ಥೈಸಿಕೊಳ್ಳದ ಹೊರತು ಮಾನವ ಜನ್ಮಕ್ಕೆ ಮುಕ್ತಿ ಅಲ್ಲಾ ಶಕ್ತಿನೂ ಇಲ್ಲವೆಂಬ ಸತ್ಯ ಅರೆಯಬೇಕಿದೆ. ಅವರು ನೀಡಿದ ಕೊಡುಗೆಗಳನ್ನು ಬರಿ ಹೊಗಳಿ ಹೊನ್ನ ಶೂಲಕ್ಕೇರಿಸುವ ಜನರೆ ಹೆಚ್ಚಾಗಿದ್ದಾರೆ ಅವುಗಳನ್ನು ಆಚರಿಸುವುದರ ಜೊತೆಗೆ ಅನುಸರಣೆ, ಅನುಪಾಲನೆ ಮಾಡುವ ಜನರು ತುಂಬಾ ಕಡಿಮೆಯಿದ್ದಾರೆ ಎಂಬುವುದು ಅತ್ಯಂತ ಆತಂಕಕಾರಿ ವಿಷಯವಾಗಿದೆ.
ಈ ಮೂವರು ಮಾಹಾನ್ ವ್ಯಕ್ತಿಗಳ ಜಯಂತಿಯಂತು ಸರಕಾರಗಳು ಗುತ್ತಿಗೆ ಆಧಾರದ ಮೇಲೆ ಆಚರಿಸುತ್ತವೆ. ಸರಕಾರಿ ಕಾರ್ಯಕ್ರಮವಾಗಿ ಮುಗಿಸಿ ಕೈತೊಳೆದುಕೊಳ್ಳಬೇಕು ಎಂಬ ಕಾಟಾಚಾರದ ಆಚರಣೆಯಾಗಿ ಮಾಡುತ್ತಾರೆ. ನಂಬಿದ ಜನರ ಆಶೋತ್ತರಗಳ ಗೋಪುರಕ್ಕೆ ಗಾಳಿಪಟದಷ್ಟೆ ಆಸೆ ತೋರಿಸಿ ಆಚರಣೆ ಮಾಡುತ್ತಾರೆ. ಇನ್ನು ಶಾಲೆಗಳಲ್ಲಿ ಈ ಆಚರಣೆಗಳು ಮಾಡಲು ಈ ಸಮಯದಲ್ಲಿ ರಜೆ ಘೋಷಣೆಯಾಗಿರುತ್ತದೆ. ಮಕ್ಕಳ ಪಾಲಿಗೆ ಈ ಮೂವರು ಮಾಹಾನ್ ವ್ಯಕ್ತಿಗಳ ಬಗ್ಗೆ ಚರ್ಚೆಯ ಮೂಲಕ ತಿಳಿಯುವ ಭಾಗ್ಯ ದೊರೆಯುವುದಿಲ್ಲ. ಆದೇಶದ ಪ್ರಕಾರ ಶಾಲೆಗಳಲ್ಲಿ ಕಾರ್ಯಕ್ರಮ ನಡೆಯುತ್ತದೆ ಅಲ್ಲಿ ಒಂದು ಪೂಜೆ & ಹೂವಿನ ಹಾರಕ್ಕೆ ಸೀಮಿತವಾಗುತ್ತಾರೆ ಈ ಮಾಹಾನ್ ವ್ಯಕ್ತಿಗಳು.
ಇಷ್ಟಕ್ಕೂ ಆಚರಣೆಯಂದರೆ ಹೇಗಿರಬೇಕು ಬರಿ ಆಡಂಬರ ಮಾಡಿದರೆ ಲಕ್ಷಗಟ್ಟಲೆ ಹಣ ಖರ್ಚು ಮಾಡಿದರೆ ಸಾಕೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಏಳುತ್ತದೆ. ನಮ್ಮ ದೇಶದ ಈ ಆಚರಣೆಗಳೆಲ್ಲವು ಹಗಲು ಕಂಡ ಭಾವಿಗೆ ರಾತ್ರಿ ಬಿದ್ದರು ಎಂಬಂತೆ ಆಚರಿಸಲಾಗುತ್ತದೆ. ಎಲ್ಲವೂ ಕಾಟಾಚಾರದ ಆಚರಣೆ, ಎಲ್ಲರೂ ಪ್ರಚಾರ ಪಡೆಯುವ ಸರಕಾಗಿ ಬಳಕೆ ಮಾಡಲಾಗುತ್ತದೆ. ಈ ಮೂವರು ಮಾಹಾನ್ ವ್ಯಕ್ತಿಗಳು ಈ ನಾಡಿನಲ್ಲಿ ಅಷ್ಟೆ ಅಲ್ಲಾ ಇಡಿ ವಿಶ್ವಕ್ಕೆ ಹೆಸರಾದ ವ್ಯಕ್ತಿಗಳು. ಪ್ರಪಂಚ ಮೂಲೆ ಮೂಲೆಯಲ್ಲಿ ಇವರು ನೀಡಿದ ಕೊಡುಗೆಗಳು ಅಪಾರವಾಗಿವೆ. ಅದಕ್ಕಾಗಿ ಅವರ ಜನ್ಮದಿನಗಳ ಆಚರಣೆ ಬರಿ ಆಚರಣೆಯಾಗದೆ ಅನುಪಾಲನೆಯಾಗಬೇಕಿದೆ.
ಇವರ ಜೀನವ ಚರಿತ್ರೆಯನ್ನು ಮೊದಲು ನಮ್ಮ ಬೆಳೆಯುತ್ತಿರುವ ಮಕ್ಕಳಿಗೆ ನೀಡಬೇಕಿದೆ. ಅವರ ಜೀವನ ಯಶೋಗಾತೆಯನ್ನು ತಿಳಿಸಿ ತಪ್ಪಿಲ್ಲದೆ ಹೇಳಬೇಕಿದೆ. ಗಾಳಿಗೋಪುರದ ಮಾತುಗಳನ್ನು ಬಿಡಬೇಕಿದೆ. ನಮ್ಮ ಮಕ್ಕಳಲ್ಲಿ ಓದುವ, ಅಭ್ಯಾಸ ಮಾಡುವ ಮನಸ್ಸು ಬೆಳೆಸಬೇಕಿದೆ. ಆಡಂಬರಕ್ಕೆ ಖರ್ಚುಮಾಡಿ ಮೋಜುಮಾಡುವ ಆಚರಣೆಗಳಿಗೆ ಕಡಿವಾಣ ಹಾಕಿ ಅವರ ವ್ಯಕ್ತಿತ್ವದ ಪರಿಚಯ ಮಾಡುವ ಕಾರ್ಯಕ್ರಮಗಳನ್ನು ಹಳ್ಳಿಮಟ್ಟದಿಂದ ಕೈಗೊಳ್ಳಬೇಕಿದೆ. ಮನುಷ್ಯ ಮನಷ್ಯರ ನಡುವಿನ ದ್ವೇಷ, ಅಸುಯ್ಯ ಹೋಗಲಾಡಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕಿದೆ. ಪರಸ್ಪರ ಪ್ರೇಮ ಬೆಳೆಸುವ ಅಗತ್ಯವಿದೆ. ಆಚರಣೆ ಒಂದು ದಿನಕ್ಕೆ ಸೀಮಿತಗೊಳಿಸದೆ ವರ್ಷವಿಡಿ ಅವರ ಅಧ್ಯಯನದ ಜೊತೆಗೆ ನೈಜ ಜೀವನದಲ್ಲಿ ಆಚರಣೆ ಬಹುಮುಖ್ಯವಾಗಿದೆ. ಅವರ ಮಾರ್ಗಗಳನ್ನು ಅಳವಡಿಸಿಕೊಂಡು ಬದುಕುವ ಅವಶ್ಯಕತೆಯಿದೆ.
ಈ ಆಚರಣೆಗಳಲ್ಲಿ ಸಮಾಜದ ಕೆಲವು ಜನರು ಒಣಪ್ರತಿಷ್ಠೆ ತೋರುತ್ತಾ, ಕೆಲವರನ್ನು ಹೆದರಿಸುತ್ತಾ, ತಮ್ಮ ಬೇಳೆ ಬೇಯಿಸಿಕೊಳ್ಳುವುದನ್ನು ಬಿಡಬೇಕಿದೆ. ನಮ್ಮ ಸಮಾಜದ ಒಳಿತಿಗಾಗಿ ಒಳ್ಳೆಯ ಕೆಲಸಗಳನ್ನು ಮಾಡಬೇಕಿದೆ. ಸಂಭ್ರಮದ ಹೆಸರಿನಲ್ಲಿ ಸುಲಿಗೆ ಮಾಡುವುದನ್ನು ಮುದ್ದಾಮ ನಿಲ್ಲಿಸಬೇಕಿದೆ. ಮಾಹಾನ್ ವ್ಯಕ್ತಿಗಳ ಹೆಸರಿನಲ್ಲಿ ಓಟು ಕೇಳುವುದನ್ನು ಬ್ಯಾನ್ ಮಾಡಬೇಕಿದೆ. ಈ ಮಾಹಾನ್ ವ್ಯಕ್ತಿಗಳ ಹೆಸರು ಹೇಳಿ ಅಮಾಯಕ ಸಮಾಜದ ಜನರನ್ನು ಸುಲಿಗೆ ಮಾಡುವುದಕ್ಕೆ ಕಡಿವಾಣ ಹಾಕಬೇಕಿದೆ. ಬುದ್ಧ,ಬಸವ & ಅಂಬೇಡ್ಕರ್ ಅವರ ಜನ್ಮ ದಿನಾಚರಣೆಗಳನ್ನು ಮಾಡುವುದರ ಜೊತೆಗೆ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಮಾಜಿಕ ಅಭಿವೃದ್ಧಿ ಮಾಡಬೇಕಾಗದದ್ದು ಇಂದಿನ ಅಗತ್ಯವಾಗಿದೆ ಅಲ್ಲವೆ?
ಕೊನೆಯ ತುತ್ತು: “ಬುದ್ಧ, ಬಸವ & ಅಂಬೇಡ್ಕರ್ ಅವರು ಯಾವತ್ತೂ ತಮ್ಮ ಜಯಂತಿಯನ್ನು ಆಚರಿಸಿ ಎಂದು ಹೇಳಿಲ್ಲಾ, ಬದಲಿಗೆ ಅವರು ಈ ಸಮಾಜದಲ್ಲಿ ಸರ್ವಸಮಾನತೆ ನೆಲೆಸಬೇಕು, ಎಲ್ಲರೂ ಒಂದಾಗಿ ಬಾಳಬೇಕು ಎಂದು ಬಯಸಿದವರು. ಎಲ್ಲಿಯವರೆಗೂ ನಾವು ಬರಿ ಆಚರಣೆಗೆ ಜೋತು ಬೀಳುತ್ತೇವೆಯೊ, ಅಲ್ಲಿಯವರೆಗೂ ಅಳವಡಿಸಿಕೊಳ್ಳುವ ಗುಣ ಬರುವುದಿಲ್ಲ. ಆಚರಣೆ, ಆಡಂಬರ ನಿಲ್ಲಿಸಿ ಅನುಪಾಲನೆ, ಅನುಷ್ಠಾನ, ಅನುಕರಣೆ ಜಾರಿಗೆ ತನ್ನಿ. ಈ ಮೂವರು ಮಾಹಾನ್ ವ್ಯಕ್ತಿಗಳ ಜಯಂತಿಗಳ ಆಚರಣೆಗೆ ಅರ್ಥಕೊಡಿ”