ಭಾರತ ದೇಶ ಸ್ವಾತಂತ್ರಗೊಂಡ ನಂತರ ಇವರ ಏಳ್ಗೆಗಾಗಿಯೇ ಸರಕಾರಗಳು ಪರಿತಪಿಸುತ್ತಿದ್ದು, ಪ್ರತಿ ಬಜೆಟ್ ನಲ್ಲಿಯೂ ವಿಶೇಷ ಅನುದಾನ ಘೋಷಣೆ ಮಾಡುವ ಮೂಲಕ ಇವರ ಶ್ರೋಯೋಭಿವೃದ್ಧಿಗಾಗಿ ಶ್ರಮಿಸಲಾಗುತ್ತಿದೆ. ಯಾವುದೇ ಸರಕಾರ ಮತ ಪಡೆಯುವಾಗ ಮೊದಲು ಇವರ ಹೆಸರು ಹೇಳಿಯೇ ಅಧಿಕಾರ ಹಿಡಿಯುವುದು. ಇವರು ಎಂಬುವುರು ಯಾರು ಅಂದುಕೊಂಡೀರಾ ಅವರೇ ಈ ದೇಶದ ಮೂಲ ನಿವಾಸಿಗಳು ಬಡವರು, ಹಿಂದುಳಿದವರು, ನಿರ್ಗತಿಕರು.
ಸಾಮಾಜಿಕ ಸಮಸ್ಯೆಗಳನ್ನು ಹಾಸುಹೊದ್ದು ಇವತ್ತಿಗೂ ಒಂದು ಹೊತ್ತಿನ ಕೂಳಿಗೂ ಬಡೆದಾಡುವ ಇವರು ಸಾಮಾಜಿಕ ಕೆಳಸ್ಥರದಲ್ಲಿ ಜೀವಿಸುತ್ತಿದ್ದಾರೆ. ಗುಡಿಸಲೇ ಇವರಿಗೆ ಆಸರೆ ದಿನಗೂಲಿಯೇ ಇವರ ಹೊಟ್ಟೆ ತುಂಬಿಸುತ್ತದೆ. ಒಂದು ದಿನ ದುಡಿಯದೇ ಇದ್ದರೆ ಅವತ್ತಿನ ದಿನ ಉಪವಾಸ. ಯಾವುದೇ ವ್ಯಕ್ತಿ ಬರಲಿ ಯಾವುದೇ ಸರಕಾರ ಬರಲಿ ಇವರ ಪಾಡು ಮಾತ್ರ ತಪ್ಪಿಲ್ಲ. ದೇಶಕ್ಕೆ ಸ್ವಾತಂತ್ರ ಪೂರ್ವದಿಂದ ಸ್ವಾತಂತ್ರಗೊಂಡ ಅರವತ್ತರಲ್ಲಿಯೂ ಹೀಗೆ ಕಾಲಕಳೆಯುತ್ತಿದ್ದಾರೆ. ದಿನಬೆಳಗಾದರೆ ದಿನಗೂಲಿ ಮಾಡುವ ಇವರು ಸರಕಾರದ ಯೋಜನೆಗಳನ್ನು ಪಡೆಯುವಲ್ಲಿಯೂ ಎಡವಟ್ಟು ಮಾಡಿಕೊಳ್ಳುವಷ್ಟು ಮುಕ್ತ ಮನಸ್ಸಿನ ಜನರು.
ಸರಕಾರಗಳು ಮಾಡುವ ಯೋಜನೆಗಳನ್ನು ಈ ಜನರಿಗೆ ಮುಟ್ಟುವ ಮೊದಲೇ ಅರ್ಧಕ್ಕಿಂತ ಹೆಚ್ಚು ಕಡಿತಗೊಂಡು ಶ್ರೀಮಂತರ ಪಾಲಾಗುತ್ತಿವೆ. ಒಳ್ಳೆಯ ಲಾಭವನ್ನು ಮೇಲಿನ ಅಧಿಕಾರಿಗಳು ರಾಜಕಾರಣಿಗಳ ಪಾಲಾಗಿ ಕೊನೆಯಲ್ಲಿ ಉಳಿಯುವ ಜೊಳ್ಳು ಸೊಳ್ಳನ್ನು ಬಡವರ ಪಾಲಾಗಿ ಹೋಗುತ್ತಿದೆ. ಸಮಾಜದಲ್ಲಿರುವ ಅನೇಕ ದರ್ಪ ತೋರಿಸುವ ಜನರನ್ನು ಅರ್ಥಮಾಡಿಕೊಳ್ಳುವುದರೊಳಗೆ ಅವರ ಬದುಕಿನ ಜಾತ್ರೆ ಮುಗಿಸಿ ಇಹ ಲೋಕ ಬಿಡುತ್ತಿರುವರು. ಅನ್ನ, ಅಕ್ಷರ ಇವರ ಬಾಳಿನಲ್ಲಿ ಗಗನಕುಸುಮವಾಗಿಯೇ ಉಳಯುತ್ತಿದೆ. ವಲಸೆಯೆಂಬ ಬದುಕು ಇವರನ್ನು ಹಕ್ಕಿ ತಿನ್ನುತ್ತಿದೆ. ಚುನಾವಣೆಗಳು ಬಂದಾಗ ಎಲ್ಲಿಯೋ ಇದ್ದವರನ್ನು ಕರೆಸುತ್ತಾರೆ ಚುನಾವಣೆ ಮುಗಿದ ಬಳಿಕ ನಮ್ಮನ್ನು ನಮ್ಮ ಸಮಸ್ಯೆಯನ್ನು ಆಲಿಸುವವರು ಯಾರು ಇಲ್ಲವಾಗುತ್ತಾರೆ. ಬರಿ ನೆನಪುಗಳಲ್ಲಿಯೇ ಉಳಿಯುವ ಇವರು ಹೋರಾಟಗಳು ಚೀರಾಟಗಳು ನಡೆದಾಗ, ಪಾದಯಾತ್ರೆಗಳು ಮಾಡುವಾಗ ಸರಕಾರಕ್ಕೆ ನೆನಪಾಗುತ್ತಾರೆ.
ಇಂದಿನ ಪರಿಸ್ಥಿತಿಯಲ್ಲಿ ಬಡವರ ಬದುಕು ಆಟದ ಸಾಮಾನಿನಂತೆ ಬಳಕೆಯಾಗುತ್ತಿದೆ. ಎಲ್ಲಿ ನೋಡಿದರು ಬಡವರ ಬದುಕಿನ ಜೊತೆಗೆ ಕಣ್ಣ ಮುಚ್ಚಾಲೆ ಆಟ ಆಡುತ್ತಿದ್ದಾರೆ. ನಮ್ಮದು ಬಡವರ ಪಕ್ಷವೆಂದು ಅಧಿಕಾರ ಪಡೆದ ಪಕ್ಷಗಳು ಬಡವರ ಏಳ್ಗೆಯೇ ಮರೆಯುತ್ತಾರೆ. ಸಮಸ್ಯೆಯ ಸುಳಿಯಲ್ಲಿ ಸಿಕ್ಕ ಬಡವರ ಪಾಡು ಮತ್ತದೇ ಕಿತ್ತು ತಿನ್ನುವ ಬಡತನದೊಳಗೆ ಬಲಿಯಾಗುತ್ತದೆ.
ಇಂದು ಸುಮಾರು ಜನ ರೈತರು ಆತ್ಮ ಹತ್ಯೆಯೆಂಬ ಕಟ್ಟ ಯೋಚನೆ ಮಾಡಲು ಕಾರಣ ಮೂಲಕಾರಣ ಬಡತನ. ದೊಡ್ಡ ಕುಟುಂಬ ಅದರಲ್ಲಿಯೂ ಹೆಣ್ಣು ಹೆತ್ತ ರೈತನೊಬ್ಬ ತನ್ನ ಹೆಣ್ಣು ಮಕ್ಕಳ ಮದುವೆ ಮಾಡುವ ಚಿಂತೆ ದಿನಗಳೆದಂತೆ ಕಿತ್ತು ತಿನ್ನುತ್ತದೆ. ಯಾರ ಬಳಿಯು ಹೇಳದ ನೋವು ಬಡವ ಒಳಗೊಳಗೆ ಅನುಭವಿಸುತ್ತ ಬದುಕಿನ ಬಂಡಿಯನ್ನು ಎಳೆಯುತ್ತಾನೆ. ಈ ಸಮಾಜ ಶಿಕ್ಷಣದಿಂದಲೂ ವಂಚಿತವಾಗುತ್ತಿರುವುದು ನಾವೆಲ್ಲ ಗಮನಿಸಬೇಕಾದ ಸಂಗತಿಯಾಗಿದೆ. ಶಿಕ್ಷಣದಲ್ಲಿಯೂ ಭಾರಿ ಇಳಿಮುಖ ಕಂಡಿರುವ ಇವರು ಸಾಮಾಜಿಕ ಸ್ಥರದಲ್ಲಿ ಎಲ್ಲರಿಗಿಂತಲೂ ಸುಮಾರು ಕಡಿಮೆ ದರದಲ್ಲಿದ್ದಾರೆ ಎಂಬ ಸತ್ಯ ಯಾರಿಗೂ ಗೊತ್ತಿಲ್ಲದೇ ಓಡುತ್ತಿದೆ.
ಜಾತಿ ಬೇಧವಿಲ್ಲದ ಸಮಾಜ ನಿರ್ಮಾಣದ ಕನಸು ಹೊತ್ತ ಅನೇಕ ಸಾಮಾಜಿಕ ಸುಧಾರಕರು ಒಂದು ಒಳ್ಳೆಯ ಸಮಾಜ ಕಟ್ಟಲು ಶ್ರಮಿಸಿದರು. ಸಮಾಜದೊಳಗಿನ ಎಲ್ಲರೂ ಸಮಾಬಾಳು ಮಾಡುವ ಕನಸು ಹೊತ್ತು ತಮ್ಮ ಬಂಗಾರದಂತಹ ಬದುಕನ್ನೆ ಮುಡುಪಾಗಿಟ್ಟರು. ಎಲ್ಲಾ ಸಮಾಜದ ಮಕ್ಕಳಿಗೂ ಶಿಕ್ಷಣ ದೊರೆತು ದಾಖಲಾದ ಮಗು ಉತ್ತಮ ಶಿಕ್ಷಿತನಾಗಲಿ ಎಂಬ ಆಶೆಯ ಹೊಂದಿದರು. ನಮ್ಮ ಗ್ರಾಮಕ್ಕೊಂದು ಶಾಲೆಯ ನೀಡಿ ಶಾಲೆಗಳಲ್ಲಿ ದಾಖಲಾಗಿರುವ ಮಕ್ಕಳು ಕಡ್ಡಾಯ ಶಿಕ್ಷಣ ಕಾಯ್ದೆಯ ಅನುಷ್ಠಾನದಿಂದಾಗಿ, ಎಲ್ಲಾ ವಿದ್ಯಾರ್ಥಿಗಳಂತೆಯೇ ಈ ಹಿಂದುಳಿದ ಜನಾಂಗಗಳು ಕೂಡ ಉತ್ತಮ ಹಾಗೂ ಗುಣತ್ಮಕ ಶಿಕ್ಷಣ ಸಮಾನ ದಾಖಲಾತಿ ಹಾಗೂ ಹಾಜರಾತಿ ಸಿಗಲಿ ಎಂಬ ಆಶೆಯ ಸರಕಾರಗಳು ಇಟ್ಟುಕೊಂಡಿದ್ದವು ಸಾಮಾಜದ ಕೆಳಸ್ಥರದಲ್ಲಿ ವಾಸವಾಗಿರುವ ಎಲ್ಲಾ ಮಕ್ಕಳು ಕಡ್ಡಾಯ ದಾಖಲಾಗಿ ಕಲಿಯಬೇಕೆಂಬ ಬಯಕೆಯಿಟ್ಟಿದ್ದರು. ಶಾಲಾ ಹಾಜರಾತಿಗೆ ಸಂಬಂದಿಸಿದಂತೆ ಎಲ್ಲಾ ಮಕ್ಕಳಂತೆ ಈ ಮಕ್ಕಳು ಕೂಡ ಕಲಿಯಬೇಕು ಬೆಳೆಯಬೇಕು ಎಂಬ ಆಶೆಯ ಸರಕಾರಗಳು ಹೊಂದಿವೆ.
ಆದರೆ ಬಡತನದ ಕುಟುಂಬಗಳ ಮಕ್ಕಳು ಕಲಿಯುವ ಪ್ರಮಾಣದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಿದೆ. ಶಾಲೆಗೆ ಹಾಜರಾಗುವ ಮಕ್ಕಳ ಸಂಖ್ಯೆಯಲ್ಲಿಯೂ ಸಹ ತುಂಬಾ ಕಡಿಮೆಯಿದೆ. ಈ ವರ್ಗದ ವಿದ್ಯಾರ್ಥಿಗಳು ಪ್ರಾಥಮಿಕ ಹಂತವಾದ ಏಳನೇಯ ತರಗತಿ ಮತ್ತು ಪ್ರೌಢಶಾಲೆಯ ಹತ್ತನೇಯ ತರಗತಿಗೆ ಶಿಕ್ಷಣವನ್ನು ನಿಲ್ಲಿಸುತ್ತಿದ್ದಾರೆ. ಅತೀ ಕಡಿಮೆ ಪ್ರತಿಶತ ವಿದ್ಯಾರ್ಥಿಗಳು ಮಾತ್ರ ಹಿರಿಯ ಪ್ರಾಥಮಿಕ ಶಿಕ್ಷಣದ ನಂತರ ಪ್ರೌಢ ಶಾಲೆಗಳಿಗೆ ದಾಖಲಾಗುತ್ತಿದ್ದಾರೆ ಶಿಕ್ಷಣ ಉಚಿತ ಮತ್ತು ಕಡ್ಡಾಯವಿದ್ದರು ಈ ಸಮಸ್ಯೆಯಿಂದ ಬಡವರಾರು ಹೊರಬಂದಿಲ್ಲವೆಂಬ ಕಟುಸತ್ಯ ಮರೆಯುವಂತಿಲ್ಲ.
ಭಾರತದ ಬಡವರು ಹೀಗೆ ಅನೇಕ ಸಾಮಾಜಿಕ ತಾರತಮ್ಯಗಳನ್ನು ಸಹಿಸಿಕೊಳ್ಳುತ್ತ ಚುನಾವಣೆ ಬಂದಾಗ ಓಟು ಹಾಕುತ್ತ ತಮ್ಮ ಸ್ಥಾನಗಳನ್ನು ಮಾತ್ರ ಇದ್ದಲ್ಲಿಯೇ ಇರುವಂತೆ ಭದ್ರವಾಗಿ ಕಾಪಾಡಿಕೊಳ್ಳುತ್ತ ನಡೆದಿದ್ದಾರೆ. ಸಾಮಜಿಕ ಸ್ಥರವನ್ನು ಏರುಗತಿಯಲ್ಲಿ ಮುನ್ನುಗ್ಗಬೇಕಾದ ಇವರು ಇಳಿಮುಖವಾಗಿ ಆಮೆಗತಿಯಲ್ಲಿ ಪ್ರಗತಿ ಕಾಣುತ್ತಿದ್ದಾರೆ. ಸರಕಾರದ ಬೊಕ್ಕಸಕ್ಕೆ ಇವರ ಹೆಸರಿನಿಂದಲೇ ಹಲವು ಹಣ ಹರೆದು ಖರ್ಚಾಗುತ್ತಿದೆ. ಅಭಿವೃದ್ಧಿ ಮಾತ್ರ ಶೂನ್ಯವಿದೆ. ತಾರತಮ್ಯಗಳನ್ನು ಹೋಗಲಾಡಿಸುವುದ್ದಕ್ಕಾಗಿಯೇ ಕಾನೂನುಗಳನ್ನು ರೂಪಿಸಲಾಗುತ್ತಿದೆ ಆದರೆ ಅವುಗಳಿಂದಲೇ ಬಡವರ ಭವಿಷ್ಯಕ್ಕೆ ಪೆಟ್ಟಾಗುತ್ತಿದೆ ಎಂಬ ಕಟುಸತ್ಯವನ್ನು ಮರೆಮಾಚುವಂತಿಲ್ಲ. ಇನ್ನಾದರು ಜನಪ್ರತಿನಿಧಿಗಳು ಹಾಗೂ ಸರಕಾರಗಳು ಈ ಜನರ ಮನದೊಳಗಿನ ಮಾತನ್ನು ಆಲಿಸಲಿ ನೈಜ ಅಭಿವೃದ್ಧಿಯತ್ತ ಗಮನಹರೆಸಲಿಯೆಂಬುವುದೇ ನನ್ನ ಆಶೆಯ.
-ಕೆ.ಎಂ.ವಿಶ್ವನಾಥ ಮರತೂರ.
ಲೇಖಕರು.