ದೇಶದಲ್ಲಿ ಮೋದಿ ಬಡವರಿಗಾಗಿ ಜನ್-ಧನ್ ತಂದರೇನು, ರಾಜ್ಯದಲ್ಲಿ ಸಿದ್ಧರಾಮಯ್ಯ ಅನ್ನ-ಭಾಗ್ಯ ತಂದರೇನು ಅವೆಲ್ಲ ನಿಜವಾದ ಬಡವರಿಗೆ ತಲುಪಿಯೇ ಎಂಬ ನೈತಿಕ ಪ್ರಶ್ನೆ ಕಾಡುತ್ತದೆ. ನಮ್ಮ ದೇಶದಲ್ಲಿ ಸ್ವಾತಂತ್ರದ ನಂತರ ಪ್ರಸ್ತುತವರೆಗೂ ಬಡವರನ್ನೇ ಬಲಿಪಶುಗಳಾಗಿ ಮಾಡಿಕೊಂಡು ಅವರ ಹೆಸರಿನಲ್ಲಿ ಶ್ರೀಮಂತ ಕುಟುಂಬಗಳು ಬೆಳೆಯುತ್ತಿವೆ ಎಂಬ ಆತಂಕ ಕಾಡುತ್ತಿದೆ. ದೇಶದ ಮೂಲವಾದವರು ದೇಶ ಆಳುವಲ್ಲಿ ಹಿಂದೆಯಿದ್ದಾರೆ. ಇನ್ನು ಮುಂದುವರೆದ ಜನರ ಹಿಂದೆ ಜೈಕಾರ ಹಾಕುವ ಕೆಲಸದಲ್ಲಿಯೇ ನಿರತರಾಗಿದ್ದಾರೆ. ಅವರ ಬಲವರ್ಧನೆಯನ್ನು ಬರಿ ದಾಖಲೆಗಳಲ್ಲಿ ಬರೆಯುತ್ತಿವೆ ನಮ್ಮ ಸರಕಾರಗಳು. ಈ ಹಿಂದುಳಿದ ವರ್ಗವಾದ ದಲಿತರ ಬಗ್ಗೆ ಒಂದಿಷ್ಟು ಯೋಚಿಸುವ ನೈಜ ರಾಜಕಾರಣಿಗಳ ಕೊರತೆ ಎದ್ದು ಕಾಣುತ್ತದೆ. ಎಲ್ಲವೂ ಒಣಪ್ರತಿಷ್ಟೆಗಾಗಿ ರಾಜಕೀಯ, ಕುಟುಂಬ ರಾಜಕೀಯ ಮಾಡುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ದಲಿತರ ಸ್ಥಿತಿಗತಿಯನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಸರಕಾರಗಳು ಬರಿ ನಮೂನೆಗಳಲ್ಲಿ ಮಾಡಿವಿಯೇ ಹೊರತು ನೈಜ ಸುಧಾರಣೆಯಾಗಿಲ್ಲ.
ಇನ್ನಾದರು ಸರಕಾರಗಳು ಪರಿಶಿಷ್ಠ ಜಾತಿ ಸಮುದಾಯಗಳ ಸಾಮಾಜಿಕ ಆರ್ಥಿಕ ಸ್ಥಿತಿಗತಿಯ ಸುಧಾರಣೆಗಾಗಿ ಸರ್ಕಾರ ವಿಶೇಷ ಪ್ರಾವಧಾನಗಳನ್ನು ಒದಗಿಸುವ ಪ್ರಯತ್ನಗಳನ್ನು ಮಾಡಿದರೂ, ಸಮಾಜದ ವರ್ತನೆಗಳು ಮತ್ತು ಪೂರ್ವಾಗ್ರಹಗಳು ಇನ್ನೂ ಸಾಕಷ್ಟು ಪ್ರಗತಿಪರವಾಗಿಲ್ಲ. ಸರಿಯಾಗಿ ಅನುಷ್ಠಾನವಾಗಿಲ್ಲ. ಸಾಮಾಜಿಕ ಮತ್ತು ಸಾಂಸ್ಕøತಿಕ ವಲಯಗಳಲ್ಲಿ ಇನ್ನೂ ದಲಿತರ ಸೇರ್ಪಡೆಯಲ್ಲಿ ನೈಜತೆಯಲ್ಲಿ ಮಾನಸಿಕವಾಗಿ, ದೈಹಿಕವಾಗಿ ತುಂಬಾ ಅಂತರವಿದೆ. ದಲಿತರು ಇನ್ನು ಹಲವಡೆ ಸ್ವಂತ ಆಸ್ತಿಗಳನ್ನು ಹೊಂದಿಲ್ಲ. ಮನೆಗಳನ್ನು ನೈಜವಾಗಿ ಹೊಂದಿಲ್ಲ. ನೀರು, ಆರೋಗ್ಯ ಮತ್ತು ಶಿಕ್ಷಣಗಳಂತಹ ಮೂಲಭೂತ ಅಗತ್ಯಗಳನ್ನು ಒದಗಿಸುವಲ್ಲಿರುವ ತಾರತಮ್ಯತೆಗಳು ಅನೇಕ ಕಡೆ ಇರುವ ಸಾಮಾನ್ಯ ಅನುಭವವಾಗಿದೆ. ಪ್ರತಿಬಾರಿ ಚುನಾವಣೆಗಳು ಬಂದಾಗ ಬಲಿಯಾಗುವುದು ದಲಿತರ ಬದುಕು ಮಾತ್ರ. ಯಾವುದೇ ರಾಜಕಾರಣಿಗೆ ದಲಿತರ ಸ್ಥಿತಿಗತಿ ಸುಧಾರಿಸುವ ಬಯಕೆ ಮಾತ್ರ ಇಲ್ಲ.
ಪಂಚಾಯಿತಿಗಳು, ಎಸಡಿಎಂಸಿಗಳು, ಸ್ಥಳೀಯ ಸಮುದಾಯಗಳಂತಹ ಸಾಮಾಜಿಕ ಸಂಸ್ಥೆಗಳಲ್ಲಿ ದಲಿತರಿಗೆ ಮೀಸಲಾತಿ ಕಡ್ಡಾಯಗೊಳಿಸಿದ್ದರೂ ಸಹ ಇದರ ಅನುಷ್ಠಾನದಲ್ಲಿ ಇನ್ನೂ ಕೆಲವು ತಾರತಮ್ಯಗಳಿವೆ. ಎಲ್ಲವೂ ಕೊಟ್ಟಿದ್ದೇವೆಯೆಂಬ ನೆಪದಲ್ಲಿ ಎಲ್ಲವೂ ಮೇಲ್ವರ್ಗದ ಪಾಲಾಗಿದೆ ಇದಕ್ಕೆ ತಕ್ಕ ಉದಾಹರಣೆ ಸ್ಥಳೀಯ ಗ್ರಾಮ ಪಂಚಾಯತಿಗಳು ಆಳ್ವಿಕೆಯನ್ನು ಆ ಗ್ರಾಮದ ಗೌಡರೆ ಮಾಡುತ್ತಾರೆ. ದಾಖಲೆಯಲ್ಲಿ ಹೆಸರು ಮಾತ್ರ ದಲಿತರದ್ದಾಗಿರುತ್ತದೆ. ಸಮಾಜದಲ್ಲಿ, ಪ್ರತಿಭಟಿಸುವ, ಪ್ರಶ್ನಿಸುವ ಸ್ವಾತಂತ್ರ್ಯ ಮತ್ತು ಸಮಾಜದಲ್ಲಿ ಸಹಭಾಗಿತ್ವದ ಗ್ರಹಿಕೆಗೆ ಸಂಬಂಧಿಸಿದಂತೆ, ಮೂಲಭೂತ ಸೌಲಭ್ಯಗಳನ್ನು ಪಡೆಯುವಲ್ಲಿ ಈ ಸಮುದಾಯದವರು ಎದುರಿಸುವ ಸಮಸ್ಯೆಗಳು ಮತ್ತು ಸಾಮಾಜಿಕ ಹಾಗೂ ಆರ್ಥಿಕ ತಾರತಮ್ಯತೆಗಳ ವಿರುದ್ಧ ಪ್ರತಿಭಟಿಸಲು ತಮ್ಮ ದನಿಯೆತ್ತುವಲ್ಲಿ ಅವರು ಎದುರಿಸುವ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಈ ವಂಚಿತ ಸಮುದಾಯಗಳ ಸಾಮಾಜಿಕ ಆರ್ಥಿಕ ವಾಸ್ತವ ಪರಿಸ್ಥಿತಿಗಳನ್ನು ತಿಳಿದುಕೊಂಡು ಅದರ ವಿರುದ್ಧ ಧ್ವನಿಯೆತ್ತುವ ಧ್ವನಿ ಮಾತ್ರ ಮಾಯವಾಗಿದೆ ದಲಿತ ವರ್ಗವನ್ನು ಮೇಲೆತ್ತುವ ಜನರು ಮಾತ್ರ ಇಲ್ಲವಾಗಿದ್ದಾರೆ.
ನಿರ್ಧಿಷ್ಟವಾಗಿ ಭೂ ಹಿಡುವಳಿ, ಕೃಷಿಯೇತರ ಸ್ಥಾಪನೆಗಳ ಮಾಲೀಕತ್ವ, ಪಕ್ಕಾ ಮನೆಗಳು ಮತ್ತು ವಾಹನಗಳು, ಇತ್ಯಾದಿ ಅಂಶಗಳನ್ನೊಳಗಂಡ ಜೀವನ ಮಟ್ಟಕ್ಕೆ ಸಂಬಂಧಿಸಿದಂತೆ, ಇತರೆ ಸಮುದಾಯಗಳ ಹೋಲಿಕೆಯಲ್ಲಿ ದಲಿತರ ಜೀವನ ಮಟ್ಟ ಸಾಮಾನ್ಯವಾಗಿ ಉತ್ತಮವಾಗಿರುವುದಿಲ್ಲ. ಆದ್ದರಿಂದ ಇದನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ. ಒಟ್ಟಾರೆಯಾಗಿ ದಲಿತ ಸಮುದಾಯದ ಆರ್ಥಿಕ ಸ್ಥಿತಿಗತಿ ಕೆಳಮಟ್ಟದಲ್ಲಿರುವುದಲ್ಲದೆ, ದಲಿತ ಮಹಿಳೆಯರು ಲಿಂಗ ಸಂಬಂಧಿ ಅಸಮಾನತೆಗೆಳಿಗೆ ಸಂಬಂಧಿಸಿದಂತೆ ತಮ್ಮದೇ ಆದ ಸಮಸ್ಯೆಗಳನ್ನು ಹೊಂದಿದ್ದಾರೆ.
ಸರ್ಕಾರವು, ನಿರ್ಧಿಷ್ಟವಾಗಿ, ಮಹಿಳೆಯರ ಉತ್ತಮ ಆರೋಗ್ಯಕ್ಕಾಗಿ ವಿಶೇಷ ಗಮನವನ್ನು ಹೊಂದಿದ್ದು, ಈ ಆರೋಗ್ಯ ಸೌಲಭ್ಯಗಳು ದಲಿತ ಮಹಿಳೆಯರಿಗೆ ದೊರೆಯುವ ಕುರಿತಂತೆ ನಾವು ವಿಮರ್ಶಾತ್ಮಕ ನೋಟವನ್ನು ಹೊಂದಬೇಕಾದದ್ದು ಅತೀ ಅಗತ್ಯವಿದೆ. ಇದೇ ರೀತಿ, ದಲಿತರ ಅಭಿವೃದ್ಧಿಗೆ ಮೂಲಭೂತವಾಗಿರುವ ಮತ್ತೊಂದು ಮುಖ್ಯವಾದ ವಲಯ, ಶಿಕ್ಷಣ ಇದರ ಕಡೆ ಗಮನ ನೀಡುವಾಗ, ಶಾಲಾ ದಾಖಲಾತಿ, ಕ್ರಮಬದ್ಧ ಹಾಜರಾತಿ ದಲಿತ ಮಕ್ಕಳ ಸ್ಥಿತಿಗತಿ ಸೇರಿದಂತೆ ದಲಿತ ಮಕ್ಕಳ ಶೈಕ್ಷಣಿಕ ಸ್ಥಿತಿಗತಿಯ ಕಡೆ ವಿಮರ್ಶಾತ್ಮಕ ದೃಷ್ಠಿಕೋನ ಬೀರಬೇಕಾದ ಅಗತ್ಯವಿದೆ.
ದೇಶದಲ್ಲಿ ದಲಿತರು ಉತ್ತಮವಾದ ಶಿಕ್ಷಣ, ಆರೋಗ್ಯ, ಜೀವನೋಪಾಯ, ಮೂಲಭೂತ ಸೌಲಭ್ಯಗಳು, ತಾರತಮ್ಯದಿಂದ ಆಂತರಿಕವಾಗಿ ಬಾಹ್ಯಾವಾಗಿ ತೊಲಗಿದಾಗ ಮಾತ್ರ ದೇಶದ ಸ್ವಾತಂತ್ರಕ್ಕೆ ನಜವಾದ ಅರ್ಥಬರುತ್ತದೆ. “ಸಾಮಾಜಿಕ ಅಸಮಾನತೆ ಸಾಧಿಸದ ಹೊರತು ಸ್ವರಾಜ್ಯಕ್ಕೆ ಅರ್ಥವಿಲ್ಲ” ವೆಂದು ಅಂಬೇಡ್ಕರ್ ಹೇಳಿದ್ದಾರೆ. ಇದೀಗ ದೇಶದಲ್ಲಿ ಅಸಮಾನತೆಯೆಂಬ ಭೂತ ಆಂತರಿಕವಾಗಿ ಯಾರಿಗೂ ಅರ್ಥವಾಗದ ರೀತಿಯಲ್ಲಿ ಮನೆಮಾಡಿದೆ. ಯಾರು ಇಲ್ಲದ ಸ್ಥಳದಲ್ಲಿ ಅಸಮಾನತೆ ಮನೆಮಾಡಿದೆ. ದಲಿತರ ಬಾಳಿನಲ್ಲಿ ಆಂತರಿಕವಾಗಿ ಭುಗಿಲೆದ್ದು ನಿಷೇದಿತ ಪ್ರದೇಶದೊಳಗೆ ಕುಡಿಯೊಡೆದರು ಯಾರ ಕಣ್ಣಿಗೂ ಕಾಣದೇ ಕುಳಿತಿದೆ. ದಲಿತರ ಬಾಳನ್ನು ಚೇಳು ನೋವಿನ ಹಾಗೆ ಚಿಕ್ಕದಾಗಿ ಮೈಯೆಲ್ಲ ಏರತೊಡಗಿದೆ. ಇದಕ್ಕೆ ಸೂಕ್ತ ಪ್ರಸ್ತುತ ಉದಾಹರಣೆಯೆಂದರೆ ಇತ್ತೀಚಿಗೆ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಲ್ಲಿ ದಲಿತ ಕುಟುಂಬಗಳು ಇದ್ದಾವೆಂಬ ಸತ್ಯ ಪ್ರಮಾಣಿಕವಾಗಿ ಅರಿಯಬೇಕು. ಇಂತಹ ದಶಕಗಳ ಸ್ವಾತಂತ್ರ ಇತಿಹಾಸವಿರುವ ದೇಶದಲ್ಲಿ ಪ್ರತಿ ರಂಗದಲ್ಲಿಯೂ ತಾರತಮ್ಯ ತನ್ನ ಅಡ್ಡಗಾಲನ್ನು ಹಾಕಿದ್ದು ಸೂಕ್ಷ್ಮಿವಾಗಿ ಒಳಗಣ್ಣಿನಿಂದ ಗಮನಿಸಬೇಕಾದ ಅಗತ್ಯವಿದೆ ಎನಿಸುತ್ತದೆ ಅಲ್ಲವೆ? ಒಮ್ಮೆ ನಿಮ್ಮ ಒಳಗಣ್ಣಿನಿಂದ ಸಮಾಜದಲ್ಲಿ ಹಿಂದುಳಿದ ವರ್ಗದವರನ್ನು ಗಮನಿಸಿ ಸೂಕ್ಷ್ಮವಾಗಿ ಗಮನಿಸಿ ನೋಡಿ.
-ಕೆ.ಎಂ.ವಿಶ್ವನಾಥ ಮರತೂರ.
ಯುವ ಬರಹಗಾರರು.