ಸರಕಾರ ಪ್ರಾಥಮಿಕ ಹಂತದಲ್ಲಿ ಹೆಚ್ಚಾಗಿ ಶಿಕ್ಷಕಿಯರನ್ನೇ ನೇಮಕ ಮಾಡಿಕೊಂಡಿರುವ ವಿಷಯ ಎಲ್ಲರಿಗೂ ತಿಳಿದಿದೆ ಜೊತೆಗೆ ಅವರ ರಕ್ಷಣೆಗೆ ಏನು ಕ್ರಮ ತೆಗೆದುಕೊಂಡಿದೆ ಎಂಬ ವಿಷಯ ಮಾತ್ರ ನಿಗೂಢವಾಗಿದೆ. ನಾನು ಕಂಡ ಅನೇಕ ಶಾಲೆಗಳು ನಗರದಿಂದ ತುಂಬಾ ದೂರದಲ್ಲಿ ಇವೆ. ಆ ಹಳ್ಳಿಗಳಿಗೆ ಇವತ್ತಿಗೂ ಸರಿಯಾಗಿ ಸಾರಿಗೆ ವ್ಯವಸ್ಥೆಯಿಲ್ಲ, ಖಾಸಗೀ ವ್ಯವಸ್ಥೆ ಶಿಕ್ಷಕಿಯರಿಗೆ ಸೇಫ್ಟಿಯೂ ಅಲ್ಲಾ. ಈ ವಿಷಯದ ಬಗ್ಗೆ ಇಲಾಖೆಯಾಗಲಿ, ಸರಕಾರವಾಗಲಿ ಹಾಗೂ ರಾಜಕಾರಣಿಗಳಾಗಲಿ ತಲೆಕೆಡಿಸಿಕೊಂಡಿಲ್ಲ. ಇಂಟಿರಿಯರ್ ಸ್ಥಳದಲ್ಲಿರುವ ಅನೇಕ ಶಾಲೆಗಳ ಶಿಕ್ಷಕಿಯರ ಪಾಡು ಯಾರು ಕೇಳುವವರಿಲ್ಲ. ನಮ್ಮ ಶಾಲೆಗೆ ಆ ಟೀಚರ್ ಸರಿಯಾದ ಸಮಯಕ್ಕೆ ಬರುವುದಿಲ್ಲ ಎಂಬ ಸಮುದಾಯದ ಜನರು ನಮ್ಮ ಶಿಕ್ಷಕಿಗೆ ಸರಿಯಾದ ಸಮಯ ಪಾಲನೆ ಮಾಡಲು ಸಾರಿಗೆ ವ್ಯವಸ್ಥೆಯಿಲ್ಲ ಎಂಬ ಕಲ್ಪನೆಯಿಂದ ದೂರವಿರುತ್ತಾರೆ. ಶಿಕ್ಷಕಿಯರನ್ನು ದೂರುವುದರಲ್ಲೇ ಕಾಲಕಳೆಯುತ್ತಾರೆ.
ನಾನು ಕಂಡ ಕಾರ್ಯಕ್ಷೇತ್ರದಲ್ಲಿ ನಡೆದ ಪುಟ್ಟ ಘಟನೆಯೊಂದು ನೆನಪಿಗೆ ತರುವುದಾದರೆ, “ಅವರು ಪ್ರಾಥಮಿಕ ಶಾಲಾ ಶಿಕ್ಷಕಿ, ಇನ್ನು ಯವ್ವನ ವಯಸ್ಸು ಸರಿಯಾಗಿ ಓದಿ ಅತೀ ಚಿಕ್ಕ ವಯಸ್ಸಿನಲ್ಲಿ ಸರಕಾರಿ ನೌಕರಿ ಸಿಕ್ಕ ಸಂತೋಷದಲ್ಲಿ, ಸರಕಾರಿ ಶಾಲೆಯತ್ತ ತನ್ನ ದೀಮಂತ ನಡೆ ನಡೆದರು. ಮನೆಯಲ್ಲಿ ಅಪ್ಪ ಅಮ್ಮ ಇಬ್ಬರೂ ಖಾಯಿಲೆ ಬಿದ್ದಿದ್ದಾರೆ, ಅಣ್ಣ ಸಾಮಾಜಿಕ ಕುಡುಕ ಜೊತೆಗೆ ಕೆಡುಕ, ಈಗ ನನ್ನ ಉದ್ಯೋಗ ದೂರದ ಹಳ್ಳಿಯಲ್ಲಿ ಆ ಹಳ್ಳಿಗೆ ಸಾರಿಗೆ ವ್ಯವಸ್ಥೆಯಿಲ್ಲ. ಇದ್ದ ಒಂದು ಖಾಸಗೀ ವ್ಯವಸ್ಥೆಯಲ್ಲಿ ಆ ಗ್ರಾಮದ ಒಂದೇ ಒಂದು ಟಾಂ ಟಾಂ ಮಾತ್ರ. ಆ ವಾಹನದ ಚಾಲಕನ ಮಾತು ಕೇಳಿದರೆ ದಿನಾಲು ಆತ್ಮಹತ್ಯೆಯಾಗುತ್ತದೆ. ಇರುವ ಒಬ್ಬನನ್ನು ಎದುರು ಹಾಕಿಕೊಂಡು ಆ ಗ್ರಾಮದಲ್ಲಿ ಕೆಲಸ ಮಾಡುವುದಾರೂ ಹೇಗೆ ಎಂಬ ಗೊಂದಲದಲ್ಲಿ ಆ ಚಾಲಕ ನೀಡುವ ಕಿರುಕುಳ ಕೂಡ ಸಹಿಸಿಕೊಳ್ಳಬೇಕು. ಇತ್ತ ಮೇಲಧಿಕಾರಿಗಳಿಗೆ ತೊಂದರೆಗಳನ್ನು ತಿಳಿಸಲು ಹೋದರೆ ಅಲ್ಲಿಯೂ ಹೇಸಿಗೆ ತಿನ್ನುವ ಜನ” ಇತ್ತ ಮನೆಯ ಸ್ಥಿತಿಯ ನೋಡಬೇಕೊ ಅಥವಾ ಸಮಾಜಿಕ ಸ್ಥಳದಲ್ಲಿರುವ ಸಮಸ್ಯೆಗಳನ್ನು ನೋಡಬೇಕೊ ಅಥವಾ ಇಂತಹ ಸಂದರ್ಭದಲ್ಲಿ ಭಾರತದ ಭವ್ಯ ಭವಿಷ್ಯವಾದ ಮಕ್ಕಳಿಗೆ ಪಾಠ ಕಲಿಸಬೇಕೊ ಇಂತಹ ಗೊಂದಲಗಳೊಗೆ ಬದಕುತ್ತಿರುವ ಅದೆಷ್ಟೋ ಶಿಕ್ಷಕಿಯರಿದ್ದಾರೆ ಅವರು ಯಾರ ಕಣ್ಣಿಗೂ ಕಾಣದೇ ಮರೆಯಾಗುತ್ತಿದ್ದಾರೆ. ಅಲ್ಲಲ್ಲಿ ಅಡಜೆಸ್ಟ್ ಅನ್ನುವ ಹೆಸರಿನಲ್ಲಿ ತಮ್ಮೊಳಗಿನ ಅದೆಷ್ಟೊ ನೋವುಗಳನ್ನು ಯಾರಿಗೂ ಹೇಳದೆ ಅನುಭವಿಸುತ್ತಿದ್ದಾರೆ.
ಶಿಕ್ಷಕರನ್ನು ಪೂಜಿಸುವ ಈ ಸಮಾಜದಲ್ಲಿ ಅವರ ಮೇಲೆ ದೌರ್ಜನ್ಯಗಳು ಕೂಡ ನಡೆಯುತ್ತಿವೆ ಎಂಬ ಸತ್ಯ ಮರೆಯುವಂತಿಲ್ಲ. ವಿಶೇಷವಾಗಿ ಶಿಕ್ಷಕಿಯರ ಕಷ್ಟಗಳು ಯಾವ ಸಂಧರ್ಭದಲ್ಲಿಯೂ ಚರ್ಚೆಯಾಗುತ್ತಿಲ್ಲ.
ಹಾಗಾದರೆ ಇದಕ್ಕೆಲ್ಲ ಯಾರು ಹೊಣೆಯೆಂಬ ವಿಷಯ ಚರ್ಚೆಗೆ ಗ್ರಾಸವಾದಾಗ ನನಗನಿಸಿದ್ದು ಈ ಶಿಕ್ಷಕಿಯರ ಕಷ್ಟಗಳಿಗೆ ಎಲ್ಲರೂ ಕಾರಣರು ಅವರೆಲ್ಲ ಸೇರಿಯೇ ಬಗೆಹರಿಸುವ ಕೆಲಸ ಮಾಡಬೇಕಿದೆ. ಮೊದಲು ಆಯಾ ಗ್ರಾಮದ ಜನರು ನಮ್ಮ ಶಾಲೆಯ ಶಿಕ್ಷಕಿಯರ ಬಗ್ಗೆ ಕಾಳಜಿ ವಹಿಸಬೇಕು. ಅವರನ್ನು ದೂರವುದು ಬಿಟ್ಟು ಅವರಿಗೆ ಕೆಲಸ ಮಾಡಲು ಪ್ರೋತ್ಸಾಹ ನೀಡಬೇಕು. ತಮ್ಮ ಗ್ರಾಮದಲ್ಲಿ ಸರಕಾರಿ ಸಾರಿಗೆಯ ವ್ಯವಸ್ಥೆ ಮಾಡಲು ಪ್ರಯತ್ನಿಸಬೇಕು. ಖಾಸಗೀ ಸಾರಿಗೆ ವ್ಯವಸ್ಥೆಯಲ್ಲಿಯೂ ಬದಲಾವಣೆ ತರಬೇಕು. ಅಧಿಕಾರಿಗಳು ಹಾಗೂ ಸಹಸಿಬ್ಬಂದಿಗಳು ಕೂಡ ಈ ದೆಸೆಯಲ್ಲಿ ಶಿಕ್ಷಕಿಯರಿಗೆ ಸಹಕಾರ ನೀಡಬೇಕು. ಇನ್ನು ಶಿಕ್ಷಕಿಯರ ಮನೆಯಲ್ಲಿರುವ ವಾತಾವರಣವು ಕೂಡ ಬದಲಾಗಬೇಕು. ಶಿಕ್ಷಕಿಯರು ಸರಿಯಾಗಿ ಕೆಲಸ ಮಾಡುವಂತಹ ವಾತಾವರಣ ನಿರ್ಮಾಣ ಮಾಡುವುದರಲ್ಲಿ ಅವರ ಪಾತ್ರವು ಹಿರಿಯದ್ದು ಹೀಗೆ ಎಲ್ಲರೂ ಶಿಕ್ಷಕಿಯರಿಗೆ ಸಹಕಾರ ನೀಡಿ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಬೇಕು. ಇಲಾಖೆಯಲ್ಲಿ ಅರ್ಧಪಾಲು ಶಿಕ್ಷಕಿಯರೇ ಇರುವಾಗ ಅವರ ಕ್ಷೇಮಕ್ಕಾಗಿ ಸರಕಾರವು ಕೂಡ ಹಲವು ವ್ಯವಸ್ಥೆಗಳನ್ನು ಮಾಡಬೇಕಾದ ಅಗತ್ಯವಿದೆ. ಶಿಕ್ಷಕಿಯರ ಕ್ಷೇಮಾಭಿವೃದ್ಧಿ ಸಂಘಗಳು ನಿರ್ಮಾಣವಾದರು ತಪ್ಪೇನಿಲ್ಲ
ಏಕೆಂದರೆ ಗಂಡು ಶಿಕ್ಷಕರೆಲ್ಲ ತುಂಡು ಬಿಟ್ಟಕೊಂಡು ಹಲವು ಸಮಸ್ಯೆ ಬಗೆಹರಿಸಿಕೊಳ್ಳುತ್ತಾರೆ ಆದರೆ ಹೆಣ್ಣು ಶಿಕ್ಷಕಿಯರ ಗೋಳ್ಯಾರು ಕೇಳದಾಗಿದೆ ಅದಕ್ಕೆ ಸೂಕ್ತವಾದ ವೇದಿಕೆ ಕಲ್ಪಿಸುವ ಚಿಂತನೆ ಮಾಡಬೇಕಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಗಂಡು ಶಿಕ್ಷಕರ ಪಾತ್ರಕ್ಕಿಂತ ಹೆಚ್ಚು ಶಿಕ್ಷಕಿಯರ ಪಾತ್ರವಿದೆ. ಹಾಗಾಗಿ ಶಿಕ್ಷಕಿಯರ ಮೇಲಿನ ದೌರ್ಜನ್ಯಗಳು ತಡೆಯುವ ಕೆಲಸವಾಗಬೇಕಿದೆ. ಶಿಕ್ಷಕಿಯರು ನಮ್ಮ ಶಾಲೆಯ ಮಕ್ಕಳ ಭವಿಷ್ಯ ನಿರ್ಮಿಸುವಲ್ಲಿ ಗಣನೀಯವಾದ ಪಾತ್ರ ನಿರ್ವಹಿಸುತ್ತಾರೆಯೆಂಬ ಸತ್ಯ ಮರೆಯುವಂತಿಲ್ಲ. ಏಕೆಂದರೆ ಮನುಷ್ಯ ಜೀವಿಗಳಿಗೆ ಮೊದಲು ಸತ್ಯ ಅಸತ್ಯ ಒಳ್ಳೆಯದು ಕೆಟ್ಟದ್ದು ಮಾತು ಕಲಿಸಿದ ಮೊದಲ ಶಿಕ್ಷಕಿ ತಾಯಿ ಅಲ್ಲವೆ?
ಕೆ.ಎಂ.ವಿಶ್ವನಾಥ ಮರತೂರ.
ಮು: ಪೋ: ಮರತೂರ.
ತಾ: ಚಿತ್ತಾಪೂರ ಜಿ: ಕಲಬುರಗಿ 585229
ಮೂ: 9686714046