ಶಾಲೆಯಂಬ ಸಂಭ್ರಮದ ಮುಖ ನೋಡದ ಹಲವು ಮಕ್ಕಳು, ಈ ದೇಶದಲ್ಲಿ ದಿನೆ ದಿನೆ ಹೆಚ್ಚಾಗುತ್ತಿದ್ದಾರೆ. ಈ ಸಂಭ್ರಮವನ್ನು ಅರ್ಧಕ್ಕೆ ನಿಲ್ಲಿಸುವ ಮಕ್ಕಳು ಇದ್ದಾರೆ. ಹಲವು ಒತ್ತಡಗಳ ಮಧ್ಯೆ ಶಾಲೆಯಂಬ ಜೀವನಕ್ಕೆ ಕೊಡಲಿಯಿಟ್ಟು, ತಮ್ಮ ಹೂವಿನಂತಹ ಬದುಕಿನಲ್ಲಿ ತಾವೆ ಮುಳ್ಳುಗಳಾಗಿಸಿಕೊಳ್ಳುವ ಮಕ್ಕಳಿವರು. ಶಾಲೆಯಂದರೆ ಅಪಾರ ಪ್ರೀತಿಯಿದ್ದರು ಅಪ್ಪ ಬೈಯುವನು ಎಂಬ ಕಾರಣ ಒಂದು ಮಗುವಿನದ್ದಾರೆ, ಮನೆಯ ವಾತಾರವರಣ ಸರಿಯಿಲ್ಲಯಂಬುವುದು ಇನ್ನೊಂದು ಮಗುವಿನದ್ದು. ಸರಕಾರ ಅನ್ನ, ಬಟ್ಟೆ, ಉಚಿತ ಕೊಟ್ಟಿರಬಹುದು ನನ್ನ ತಂದೆ ತಾಯಿ ಸಮಸ್ಯೆ ಇಷ್ಟರಿಂದ ಮುಗಿಯುವದಲ್ಲವೆಂಬ ಸತ್ಯ ಸರಕಾರ ಅರಿತಿದೆಯಾ ಎಂಬ ಪ್ರಶ್ನೆ ಈ ಮಕ್ಕಳು ಕೇಳುವ ಎಲ್ಲಾ ಅಧಿಕಾರವನ್ನು ಪಡೆದಿದ್ದಾರೆ.
ಇಂದು ಶಾಲೆಯನ್ನು ಬಿಟ್ಟು ಕೂಲಿ ಮಾಡುವ ಮಕ್ಕಳ ಬಗ್ಗೆ ಚಿಂತಿಸಬೇಕಿದೆ. ಸರಕಾರ ಶಿಕ್ಷಣ ಕೊಟ್ಟ ವ್ಯವಸ್ಥೆಯನ್ನು ಗಮನಿಸಿದರೆ ಶಾಲೆ ಬಿಡುವ ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳು ಇರಲೇಬಾರದು ಆದರೂ ಇದ್ದಾರೆ ಎಂಬುವುದು ಈ ದೇಶದ ಶಿಕ್ಷಣ ವ್ಯವಸ್ಥೆಯ ದೊಡ್ಡ ದುರಂತವೆ ಸರಿ. ಎಲ್ಲವೂ ಉಚಿತ ವಿದ್ಯೆಯು ಖಚಿತ ಹತ್ತನೆಯ ತರಗತಿವರೆಗೂ ಕಡ್ಡಾಯ ಪಾಸ್ ಇದ್ದರು ನಮ್ಮ ಮಕ್ಕಳೆಂಬ ಮಹಲ್ ಸುಂದರ ಮಹಲ್ ಆಗುತ್ತಿಲ್ಲವೆಂಬುವುದು ಯೋಚಿಸಬೇಕಾದ ಅವಶ್ಯಕತೆಯಿದೆ.
ಮೊನ್ನೆ ಹಳ್ಳಿಯೊಂದನ್ನು ದಾಖಲಾತಿ ಆಂದೋಲನ ಕಾರ್ಯಕ್ರಮ ಮಾಡಿದ್ದೆ, ಆ ಗ್ರಾಮದಲ್ಲಿ ಒಟ್ಟು ಸಾವಿರದ ಆರು ನೂರಾ ಮುವತ್ತು ಜನಸಂಖ್ಯೆಯಿದೆ. ಅದರಲ್ಲಿ ಮಕ್ಕಳು ಒಟ್ಟು 473 ನಮ್ಮ ಲೆಕ್ಕಕ್ಕೆ ಬಂದ ದಾಖಲಾತಿ ಪ್ರಕಾರ ಅದರಲ್ಲಿ ಸರಿಯಾಗಿ 173 ಮಕ್ಕಳು ಡ್ರಾಪ್ ಔಟ್ ಶೇ.47ಕ್ಕೂ ಹೆಚ್ಚು ಮಕ್ಕಳು ಶಾಲೆಯಿಂದ ದೂರವಿದ್ದಾರೆ. ಆ ಗ್ರಾಮದಲ್ಲೇನು ಅಷ್ಟು ಕಿತ್ತು ತಿನ್ನುವ ಬಡತನವಿಲ್ಲ, ಪ್ರತಿ ಮನೆಗೆ ಸರಾಸರಿ ಎರಡು ಮೂಬೈಲ್ ಎಂಡ್ರಾಯಿಡ್ ಪೋನ್ ಗಳಿವೆ, ಎಲ್.ಇಡಿ.ಟಿವಿ ಎಲ್ಲಾ ಮನೆಗಳಲ್ಲಿಯೂ ಇವೆ. ಆದರೆ ಶಾಲೆ ಕಲಿಯುವದಕ್ಕೆ ಮಾತ್ರ ಯಾಕೆ ಅವಕಾಶವಿಲ್ಲವೆಂಬ ವಿಷಯ ಮಾತ್ರ ಆಘಾತಕಾರಿಯಾಗಿ ಕಾಡಿತು. ಹೀಗೆ ಹುಡುಕುತ್ತಾ ಹೋಗಲು ಹಲವು ವಿಷಯಗಳು ಹೊರಬಂದವು.
ಈ ಜನರಿಗೆ ಪಟ್ಟಣದ ಶೋಕಿ ಜೀವನ ಬೇಕಾಗಿದೆ. ಪ್ರತಿ ವರ್ಷ ಜೂನ್ ತಿಂಗಳಲ್ಲಿ ತಮ್ಮ ಎಲ್ಲಾ ಮಕ್ಕಳನ್ನು ಶಾಲೆಗೆ ಸೇರಿಸಿ ಜೂನ್ ತಿಂಗಳಿನಲ್ಲಿ ಸರಕಾರ ಕೊಡುವ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡು ನೇರವಾಗಿ ಬೆಂಗಳೂರು, ಹೈದ್ರಾಬಾದ್, ಬಾಂಬೆ ರೈಲುಗಾಡಿ ಹತ್ತಿ ಹೋಗಿಬಿಡುತ್ತಾರೆ. ಆ ನಗರಗಳಲ್ಲಿರುವ ಕೆಲವು ಶಾಲೆಗಳಿಗೆ ಹೋಗಿ ಅಲ್ಲಿಯೂ ಇದೇ ರೀತಿಯಾಗಿ ಮಾಡಿ ಶಾಲೆಯು ಎಲ್ಲಾ ಮಕ್ಕಳದ್ದು ಬರಿ ಅರ್ಧಮಾತ್ರ ಕಲಿಯಲು ಸಾಧ್ಯವಾಗುತ್ತದೆ. ವಲಸೆಯನ್ನು ಶೋಕಿಯಾಗಿ ಮಾಡಿಕೊಂಡಿರುವ ಇಲ್ಲಿನ ಜನರು ಶಿಕ್ಷಣವನ್ನು ತಮ್ಮ ಆಟಿಕೆ ಸಾಮಾನುಗಳಾಗಿ ಬಳಸಿಕೊಳ್ಳುತ್ತಿರುವುದು ಈ ಗ್ರಾಮದ ದುರಂತ.
ಇಲ್ಲಿ ಉಲ್ಲೇಖಿಸಿರುವ ಗ್ರಾಮ ಒಂದೆ ಅಲ್ಲಾ ಅನೇಕ ಗ್ರಾಮಗಳು ಇಂತಹ ಅನೇಕ ನೆಪಗಳನ್ನು ಒಡ್ಡಿ ಇಂದು ಮಕ್ಕಳ ಭವಿಷ್ಯದ ಜೊತೆಗೆ ಆಟವಾಡುತ್ತಿದ್ದಾರೆ. ಸರಕಾರಿ ಸೌಲಭ್ಯಗಳನ್ನು ಪಡೆಯುವುದು ಮಾತ್ರ ರೂಢಿಸಿಕೊಂಡು ಉಳಿದಿದ್ದನ್ನು ಗಾಳಿಗೆ ತೂರಿ ನಡೆಯುತ್ತಿದ್ದಾರೆ. ಇವರಿಗೆ ಯಾವುದೆ ಕಾನೂನು ಏನು ಮಾಡುವುದಿಲ್ಲವೆಂಬ ಮೊಂಡು ಧೈರ್ಯವಿದೆ. ಯಾರಾದರು ಅಧಿಕಾರಿಗಳು ಸ್ವಲ್ಪ ಕೇಳಿದರೆ ಸಾಕು ಅವರ ಉತ್ತರ ನಾವ್ ಬಡುವುರು ನಮಗೆಲ್ಲ ತಿಳಿಯಂಗಿಲ್ಲರಿ ಎಂದು ತಳ್ಳಿ ಹಾಕುತ್ತಾರೆ.
ತಮ್ಮ ಮಕ್ಕಳನ್ನು ಕೂಲಿಗೆ ನೂಕಿ ತಾವು ಐಶ್ಯಾರಾಮಿ ಜೀವನ ಮಾಡಬೇಕು ಎಂಬ ಅದೆಷ್ಟೊ ಪಾಲಕರು ಭಾರತದಂತಹ ದೊಡ್ಡ ದೇಶದಲ್ಲಿ ಜೀವಂತವಾಗಿದ್ದಾರೆ. ಮಗ ಬೇಡಿಕೊಂಡು ಬಂದ ಭೀಕ್ಷೆಯನ್ನು ಚಪ್ಪರಿಸಿಕೊಂಡು ಚಪಲ ತೀರಿಸಿಕೊಳ್ಳುವ ಅಪ್ಪಂದಿರಿರುವ ಇಲ್ಲಿ ಮಕ್ಕಳು ಶಿಕ್ಷಣ ಉಚಿತ ದೊರೆತರು ಅಷ್ಟೆ ದೊರೆಯದಿದ್ದರು ಅಷ್ಟೆ. ಶಿಕ್ಷಣದ ಚಿಂಥನೆ ಬದಲಾಗಬೇಕಾಗಿರುವುದು ಪಾಲಕರ ಮನದೊಳಗೆ ಎಂಬುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.
ಒಬ್ಬ ಸಾಕ್ಷರತೆಯಿಲ್ಲದ ಪಾಲಕ ತನ್ನ ಮಕ್ಕಳ ಸಾಕ್ಷರತೆಯ ಬಗ್ಗೆ ಕಲ್ಪನೆ ತಾಳಿ ನಾನು ಕಲಿಯಲಿಲ್ಲ ನನ್ನ ಮಕ್ಕಳಾದರು ಕಲಿಯಲಿ ಎಂಬ ಧೃಢ ನಿರ್ಧಾರ ತಾನಾಗಿಯೆ ಮಾಡದ ಹೊರತು ಉಚಿತ ಶಿಕ್ಷಣ ಸರ್ವರಿಗೂ ಶಿಕ್ಷಣ ದೊರೆಯುವುದು ಅಸಾಧ್ಯವಾಗಿದೆ. ಅಸಮತೋಲನ ಬದುಕಿನಲ್ಲಿ ಅಸಂಬದ್ಧತೆಗಳೆ ಹೆಚ್ಚಾಗುತ್ತವೆಯೆ ಹೊರತು ಬೇರೆನು ಇಲ್ಲಾ. ಪಾಲಕರು ಹೇಗೆ ತಮ್ಮ ವಯಕ್ತಿಕ ಬದುಕಿಗೆ ಮಹತ್ವ ಕೊಡುತ್ತಾರೊ ಹಾಗೆ ಮಕ್ಕಳ ಶಿಕ್ಷಣದ ಬದುಕಿಗೂ ಅಷ್ಟೆ ಮಹತ್ವ ಕೊಡಬೇಕು. ಇಂದು ಮಗ ತಂದ ಭಿಕ್ಷಾಟನೆಯಲ್ಲಿ ಜೀವನ ಸಾಗಿಸುವ ಪಾಲಕರು, ಭೀಕ್ಷೆ ಬೇಡಿಯಾದರು ನನ್ನ ಮಗನನ್ನು ಓದಿಸುತ್ತೇನೆ ಎಂಬ ದೃಢ ಸಂಕಲ್ಪ ಮಾಡಿದಾಗ ಮಾತ್ರ ಸರ್ವರಿಗೂ ಶಿಕ್ಷಣ ದೊರೆತು ಶಿಕ್ಷಣ ಸಾರ್ವತ್ರೀಕರಣ ಸಾಧ್ಯವಾಗುತ್ತದೆ. ಭಾರತದ ಸಂವಿಧಾನದ ಆಶೆಯ ಇಡೇರುತ್ತದೆ. ಅದಕ್ಕಾಗಿ ಪಾಲಕ ಪೋಷಕರಲ್ಲಿ ಒಂದು ವಿನಂತಿಯಂದರೆ ಕಳುಹಿಸಬೇಡಿ ಕೂಲಿಗೆ, ಕಳುಹಿಸಿಕೊಡಿ ಶಾಲೆಗೆ.