ಅನ್ನ ದೇವರ ಮುಂದೆ!
ಇನ್ನು ದೇವರುಂಟೆ!
ಅನ್ನವೇ ದೈವ ಸರ್ವಜ್ಞಾ !!
ಹಸಿವಿನ ಬಗ್ಗೆ ಹನ್ನರಡನೇಯ ಶತಮಾನದಲ್ಲಿ ಸರ್ವಜ್ಞಾ ಹೇಳಿದ್ದು. `ಓ ಅಯ್ಯ, ಅಮ್ಮಯ್ಯ ಹಸಿವೆಯನ್ನು ತಾಳಲಾರೆ, ಕಾಸೊಂದು ನೀಡುವೆಯಾ’ ಈ ಹಾಡು ಕೇಳಿದಾಗಲೆಲ್ಲ ಹಸಿವಿನ ಮಹತ್ವ ಅರಿವಾಗುತ್ತದೆ. ಒಬ್ಬ ಮನುಷ್ಯನಿಗೆ ಹಸಿವು ದೇಹದ ಪ್ರಾಕೃತಿಕ ಲಕ್ಷಣ. ಮನುಷ್ಯರಾದ ನಾವು ಎಲ್ಲವೂ ಸಹಿಸುವಂತೆ, ಹಸಿವು ಕೂಡ ತಕ್ಕಮಟ್ಟಿಗೆ ಸಹಿಸುವ ಶಕ್ತಿಯಿದೆ. ಭಾರತವೆಂಬ ಭವ್ಯ ದೇಶದಲ್ಲಿ ಇದೀಗ ಹಸಿವು ತಾಂಡವವಾಡುತ್ತಿದೆ. ಈ ದೇಶದಲ್ಲಿ ಆಡಳಿತ ಮಾಡಿರುವ ಪಕ್ಷಗಳು, ನಮ್ಮ ದೇಶವನ್ನು ದಶಕಗಳೇ ಆಳಿದರೂ ನಾವಿನ್ನು ಹಸಿವಿನಲ್ಲಿ ಮೊದಲ ಸ್ಥಾನ ಕಾಯ್ದುಕೊಂಡು ಅದನ್ನು ಮುಂದುವರೆಸಿಕೊಂಡಿರುವುದು ದುರಂತವೆ ಸರಿ.
ಕಾಂಗ್ರಸ್ ಪಕ್ಷದವರು "ಹಮ್ ದೇಶಕೊ ಐಸೆ ಬನಾಯಾ ಹೈ, ಇಸ್ ದೇಶಮೆ ಗರೀಬಿ ಕಮ್ ಕರೆಂಗೆ ಅಂತಿದ್ದರು" “ಗರೀಬಿ ಹಠಾವೊ” ಕೂಡ ಮಾಡಿದರು. ಇದೀಗ ಬಿಜೆಪಿಯವರು "ಹಮ್ ಇಸ್ ದೇಶಕೊ ಡಿಜಿಟಲ್ ಬನಾಯಿಂಗೆ" ಸೆಲ್ಫಿ ಬನಾಯಿಂಗೆ" ಎನ್ನುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ “ಇನವೆಷ್ಟ್” ಕರ್ನಾಟಕ ಮಾಡಿದರು. ನಮ್ಮನ್ನಾಳುವ ಸರಕಾರಗಳಿಗೆ, ದೇಶದಲ್ಲಿಯ ಹಸಿವಿನ ಬಗ್ಗೆ ಪ್ರಜ್ಞೆಯಿಲ್ಲವಾಗಿದೆ. ಕಳೆದಬಾರಿ ಮೌನವಾಗಿಯೇ ಹತ್ತು ವರ್ಷ ಆಡಳಿತ ಮುಗಿಸಿದ ಮೌನ ಮನಮೋಹನ. ಇದೀಗ ಪರದೇಶಗಳು ಸುತ್ತಿ, ಆಡಳಿತ ಮಾಡುತ್ತಿರುವರು ಇನ್ನೊಬ್ಬ ಮೌನ ಮೋದಿ. ಕಾಂಗ್ರೆಸ್ ಹಾಗೂ ಬಿಜೆಪಿ ಸರಕಾರದವರು “ಒಂದಾಗಿ, ಚೆಂದಾಗಿ, ಮುನ್ನಡೆಸುತ್ತಿದ್ದಾರೆ ಭಾರತ, ಅದಕ್ಕಾಗಿ ಟಿವಿ ಜಾಹಿರಾತಿನಲ್ಲಿ ಪ್ರಸಾರವಾಗುತ್ತಿದೆ. ದೇಶ ಬಡ ರಾಹಾಹೈ. ದೇಶ ಮುನ್ನಡೆಯುತ್ತಿದೆ ಅಲ್ಲವಾ?
ಕರ್ನಾಟಕದ ಮಟ್ಟಿಗೆ ಮಾತನಾಡುವುದದಾದರೆ, ಮಾನ್ಯ ಸಿದ್ದರಾಮಯ್ಯನವರ ಸರಕಾರ, ಬಡವರನ್ನು ಉದ್ಧರಿಸಲೆಂದೆ ಹಲವು “ಭಾಗ್ಯ” ಯೋಜನೆಗಳು ಜಾರಿಗೆ ತಂದಿದ್ದಾರೆ. ಈ ಭಾಗ್ಯ ಯೋಜನೆಗಳು, ನಿಜವಾದ ಫಲಾನುಭವಿಗಳ ಭಾಗ್ಯ ಎಷ್ಟು ಬದಲಿಸಿವೆ ಎನ್ನುವುದಕ್ಕಿಂತ, ರಾಜಕಾರಣಿಗಳ ಹಾಗೂ ಅಧಿಕಾರಿಗಳ ಭಾಗ್ಯ ಬದಲಿಸಿದಂತು ಅಕ್ಷರಸಹ: ಸತ್ಯ. ಕರ್ನಾಟಕ ಸರಕಾರದ ಯೋಜನೆಗಳ ಚೆನ್ನಾಗಿವೆ ಆದರೆ ಸರಕಾರ ಅವುಗಳ ಸರಿಯಾದ ಅನುಷ್ಠಾನದಲ್ಲಿ ಎಡವುತ್ತಿದೆ. ರಾಜ್ಯದಲ್ಲಿ ಪ್ರತಿಕ್ಷಣ ಹಸಿವಿನಿಂದ ಸಾಯುವವರ ಸಂಖ್ಯೆ ದಿನೆದಿನೆ ಹೆಚ್ಚಾಗುತ್ತಿದೆ. ದೇಹದ ಉಸಿರಿನ ಕೊನೆಯ ಘಳಿಗೆಯವರೆಗೆ ಈ ಹಸಿವನ್ನು ಹೊಸೆದುಕೊಂಡು ಬದುಕುತ್ತಿರುವವರ ಸಂಖ್ಯೆ ಏರುತ್ತಲೆಯಿದೆ. ಹಸಿವು ಮುಕ್ತ ಕರ್ನಾಟಕ ಮಾಡುತ್ತೇವೆ ಎಂಬ ದೃಢ ಸಂಕಲ್ಪ ತೊಟ್ಟ ಸಿದ್ದು ಸರಕಾರ ತನ್ನ ಯೋಜನೆಗಳ ಪುನರ್ ಅವಲೋಕನದ ಜೊತೆಗೆ ಪ್ರಮಾಣಿಕ ಅನುಷ್ಠಾನ ಮಾಡುವ ಅವಶ್ಯಕತೆಯಿದೆ.
ಇನ್ನು ಭಾರತದಲ್ಲಿ ಅಧಿಕಾರ ಹಿಡಿದಿರುವ ಮಾನ್ಯ ಮೋದಿ ಸರಕಾರ ಕೂಡ ಏನೆಲ್ಲಾ ಮಾಡುತ್ತಿದೆ ಆದರೆ ಬಾರತದ ಹಸಿವು ನೀಗಿಸುವಲ್ಲಿ ಕೆಲಸ ಮಾಡುತ್ತಿಲ್ಲ. ಮೋದಿಯವರು ಪ್ರಧಾನಿಯಾದ ಬಳಿಕ ಎಣಿಕೆಗೆ ಸಿಗಲಾರದಷ್ಟು ಯೋಜನೆಗಳನ್ನು ಘೋಷಣೆ ಮಾಡಿದರು. ಅನುಷ್ಠಾನಕ್ಕೂ ತಂದರು ಆದರೆ ಭಾರತ ಇದೀಗ ಹಸಿವಿನಲ್ಲಿ ನಂಬರ್ ಒನ್ ಸ್ಥಾನ ಗಿಟ್ಟಿಸಿಕೊಂಡಿರುವ ಬಗ್ಗೆ ಮಾತನಾಡುತ್ತಿಲ್ಲ. ಪರದೇಶಗಳಲ್ಲಿ ಗಟ್ಟಿಯಾದ ಮೇಲುಧ್ವನಿಯಲ್ಲಿ ಭಾಷಣ ಮಾಡುವುದರಿಂದ ಭಾರತ ಹಸಿವು ಮುಕ್ತವಾಗಲು ಸಾಧ್ಯವೆ ಎಂಬ ಪ್ರಶ್ನೆ ಪ್ರಜಾ ವಲಯದಲ್ಲಿ ಏಳುತ್ತಿದೆ.
ಭಾರತದಲ್ಲಿ ಬಡತನ ಬಹುವ್ಯಾಪಕವಾಗಿದ್ದು, ವಿಶ್ವದ ಒಟ್ಟು ಬಡವರ ಸಂಖ್ಯೆಯಲ್ಲಿ ಮೂರನೇ ಒಂದು ಭಾಗ ರಾಷ್ಟ್ರದಲ್ಲಿದ್ದಾರೆಂದು ಅಂದಾಜು ಮಾಡಲಾಗಿದೆ. ಭಾರತದ ಯೋಜನಾ ಆಯೋಗ ಬಳಸಿದ ಮಾನದಂಡದ ಅನ್ವಯ 20014-2015ರಲ್ಲಿ ಜನಸಂಖ್ಯೆಯ 32.5% ಬಡತನ ರೇಖೆ ಕೆಳಗಿರುವ ಜನರಿದ್ದಾರೆಯೆಂದು ಅಂದಾಜು ಮಾಡಲಾಗಿದೆ. ಭಾರತದಲ್ಲಿ ಅಧಿಕ ಮಟ್ಟದ ಬಡತನಕ್ಕೆ ಬ್ರಿಟಿಷ್ ಆಡಳಿತದಡಿಯ ಇತಿಹಾಸ, ಅಪಾರ ಜನಸಂಖ್ಯೆ ಮತ್ತು ಕಡಿಮೆ ಸಾಕ್ಷರತೆ ಕಾರಣಗಳನ್ನು ನೀಡಲಾಗಿದೆ.
ಭಾರತದ ಜಾತಿ ಪದ್ಧತಿ ಮತ್ತು ಭಾರತದ ಸಮಾಜದಲ್ಲಿ ಮಹಿಳೆಯರ ಪಾತ್ರ ಸೇರಿದಂತೆ ಭಾರತದ ಸಾಮಾಜಿಕ ಸ್ವರೂಪ ಕೂಡ ಮುಖ್ಯವಾಗಿದೆ. ಕೃಷಿ ಮೇಲೆ ಹೆಚ್ಚು ಅವಲಂಬಿತವಾದ್ದರಿಂದ ಮತ್ತು ಭಾರತದ ಸ್ವಾತಂತ್ರ್ಯದ ನಂತರ ಆರ್ಥಿಕ ನೀತಿಗಳನ್ನು ಅಳವಡಿಸಲಾಗಿದ್ದರಿಂದ ಹಿಂದಿನ ಆರ್ಥಿಕ ಪ್ರಗತಿ ಕುಂಠಿತಗೊಂಡಿತು. ಭಾರತ ಸರ್ಕಾರ ಮತ್ತು ಸರ್ಕಾರೇತರ ಸಂಘಟನೆಗಳು ಬಡತನ ನಿವಾರಣೆಗೆ 1950ರ ದಶಕದಿಂದೀಚೆಗೆ ಹಲವಾರು ಕಾರ್ಯಕ್ರಮಗಳನ್ನು ಆರಂಭಿಸಿತು. ಹಲವು ಮಾಹಾನ್ ನಾಯಕರು ಈ ದೇಶದ ಹಲವು ಸಾಮಾಜಿಕ ಸಮಸ್ಯೆಗಳನ್ನು ಬುಡಸಮೇತ ಕಿತ್ತುಹಾಕಲು ಪ್ರಯತ್ನ ಮಾಡಿದರು. ಭಾರತದಲ್ಲಿರುವ ಬಡವರನ್ನು ಉದ್ಧರಿಸಬೇಕು, ಅವರ ಏಳ್ಗೆಯೇ ಪ್ರಮುಖವಾಗಬೇಕು ಎಂಬ ಮಹಾದಾಸೆ ಹೊಂದಿದ್ದರು. ಈ ದೇಶದ ಸಂವಿಧಾನ ರಚನೆ ಮಾಡುವಾಗಲೂ ಹಿಂದುಳಿದವರನ್ನು ಬಡವರನ್ನು ಅವರ ಹಸಿವಿನಿಂದ ಮುಕ್ತಗೊಳಿಸಬೇಕು ಎಂಬ ಮಾಹಾದಾಸೆ ಹೊಂದಿದ್ದರು.
ಆಹಾರ ಮತ್ತಿತರ ಜೀವನಾವಶ್ಯಕ ವಸ್ತುಗಳಿಗೆ ಸಹಾಯಧನ, ಸಾಲಗಳಿಗೆ ಹೆಚ್ಚು ಅವಕಾಶ ಕಲ್ಪಿಸುವುದು, ಕೃಷಿ ತಂತ್ರಜ್ಞಾನಗಳು ಮತ್ತು ದರ ಬೆಂಬಲಗಳ ಸುಧಾರಣೆ, ಶಿಕ್ಷಣ ಮತ್ತು ಕುಟುಂಬ ಯೋಜನೆಗೆ ಉತ್ತೇಜನ ಇವುಗಳಲ್ಲಿ ಸೇರಿವೆ. ಈ ಕ್ರಮಗಳಿಂದ ಬರಗಾಲಗಳ ನಿವಾರಣೆಗೆ ನೆರವಾಯಿತು, ಪೂರ್ಣ ಬಡತನ ಮಟ್ಟಗಳು ಅರ್ಧಕ್ಕಿಂತಲೂ ಹೆಚ್ಚು ಕಡಿತಗೊಂಡಿತು ಮತ್ತು ಅನಕ್ಷರತೆ ಮತ್ತು ಅಪೌಷ್ಠಿಕತೆ ತನ್ನ ಸ್ಥಾನವನ್ನು ಕಾಯ್ದುಕೊಂಡು ಮುಂದುವರೆದಿದ್ದು ಇಂದಿಗೂ ಪ್ರಸ್ತುತವಾಗಿ ಉಳಿದುಕೊಂಡಿದ್ದು ಭಾರತದ ದುರಂತವಾಗಿದೆ.
ಹಸಿವು ಮುಕ್ತ ಭಾರತ ನಿರ್ಮಾಣ ಉದ್ದೇಶದಿಂದ ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದಿದ್ದರೂ, ಕೇಂದ್ರದಲ್ಲಿ ಸರ್ಕಾರ ಬದಲಾಗಿ ವರ್ಷಗಳು ಉರುಳಿದರು, ಭಾರತದಲ್ಲಿ ಹಸಿವು ಎಂಬುದು ಸಂಪೂರ್ಣವಾಗಿ ನಿರ್ಮೂಲನೆಯಾಗಿಲ್ಲ. ಪ್ರಜೆಗಳ ಹಸಿವು ನೀಗಿ ಹೊಟ್ಟೆ ತುಂಬಾ ಒಂದು ತುತ್ತಿನ ಕೂಳಿಗೂ ಗತಿಯಿಲ್ಲವಾಗಿದೆ. ಹಸಿವಿನ ಸಮಸ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿ ಭಾರತ ವಿಶ್ವದಲ್ಲೇ ಮೊದಲ ಸ್ಥಾನ ಪಡೆದಿದೆ. ಬರೋಬ್ಬರಿ 19.4 ಕೋಟಿ ಭಾರತೀಯರು ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿಯೊಂದು ತಿಳಿಸಿದೆ.
ವಿಶೇಷವೆಂದರೆ, ಎರಡು ದಶಕಗಳ ಹಿಂದೆ ಆಹಾರಕ್ಕೆ ಪರದಾಡುವವರ ಸಂಖ್ಯೆಯಲ್ಲಿ ಭಾರತಕ್ಕಿಂತ ಮುಂದಿದ್ದ ಚೀನಾ, ಅಂಥವರ ಸಂಖ್ಯೆಯನ್ನು ತಗ್ಗಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ನಂ.1 ಪಟ್ಟದಿಂದ ಕೆಳಕ್ಕೆ ಇಳಿದಿದೆ.
ಇಪ್ಪತ್ಮೂರು ವರ್ಷಗಳ ಅವಧಿಯಲ್ಲಿ ಹಸಿವಿನಿಂದ ನರಳುವವರ ಸಂಖ್ಯೆಯನ್ನು ಅರ್ಧದಷ್ಟು ಇಳಿಸುವಲ್ಲಿ ಚೀನಾ ಸಫಲವಾಗಿದ್ದರೆ, ಇದೇ ಅವಧಿಯಲ್ಲಿ ಭಾರತ ಕೇವಲ 2 ಕೋಟಿ ಮಂದಿಯನ್ನು ಮಾತ್ರ ಹಸಿವಿನಿಂದ ಹೊರಕ್ಕೆ ತರುವಲ್ಲಿ ಯಶಸ್ವಿಯಾಗಿದೆ. 1990-92ನೇ ಸಾಲಿನಲ್ಲಿ ಭಾರತದಲ್ಲಿ ಹಸಿವಿನಿಂದ ಬಳಲುತ್ತಿದ್ದವರ ಸಂಖ್ಯೆ 21.01 ಕೋಟಿಯಷ್ಟಿತ್ತು. 2015ರಲ್ಲಿ ಅದು 19.46 ಕೋಟಿಗೆ ಕುಸಿದಿದೆ. ಒಟ್ಟಾರೆ ಜನಸಂಖ್ಯೆಯಲ್ಲಿ ಆಹಾರ ಅಭದ್ರತೆ ಎದುರಿಸುತ್ತಿರುವವರ ಪ್ರಮಾಣವನ್ನು ಕಡಿತಗೊಳಿಸಲು ಭಾರತ ದಾಪುಗಾಲು ಹಾಕಿದೆ. ಈ ದೇಶ ಜನಸಂಖ್ಯೆಯಲ್ಲಿ ಹೇಗೆ ಮೇಲುಗೈ ಸಾಧಿಸಿದೆಯೊ ಹಾಗೆ ಹಸಿವಿನಲ್ಲಿಯೂ ಮೇಲುಗೈ ಸಾಧಿಸಿದೆ ಎಂದು ತಿಳಿಸಲು ಕಷ್ಟವೆನಿಸುತ್ತದೆ.
ಭಾರತ ಕೈಗೊಂಡಿರುವ ಸಾಮಾಜಿಕ ಕಾರ್ಯಕ್ರಮಗಳು ಹಸಿವು ಹಾಗೂ ಬಡತನ ವಿರುದ್ಧ ಹೋರಾಟ ಮುಂದುವರಿಸುವ ವಿಶ್ವಾಸವಿದೆ ಎಂದು ವರದಿ ಸ್ಪಷ್ಟಪಡಿಸಿದೆ. ಜಾಗತಿಕ ಮಟ್ಟದಲ್ಲಿ 1999-92ನೇ ಸಾಲಿನಲ್ಲಿ ಒಂದು ಶತಕೋಟಿ ಜನರು ಆಹಾರಕ್ಕೆ ಪರದಾಡುತ್ತಿದ್ದರು. ಅಂಥವರ ಸಂಖ್ಯೆ 2014-15ನೇ ಸಾಲಿನಲ್ಲಿ 79.5 ಕೋಟಿಗೆ ಇಳಿಮುಖವಾಗಿದೆ ಎಂದು ವಿಶ್ವಸಂಸ್ಥೆ ವರದಿ ಮಾಡಿದೆ. 2014-15 ರಲ್ಲಿ ಭಾರತದಲ್ಲಿ 21.01 ಕೋಟಿ ಪ್ರಜೆಗಳು ‘ಹಸಿವೆಯನ್ನು ತಾಳಲಾರೆ’ ಎಂಬ ಗೀತೆ ಹಾಡುತ್ತಿದ್ದಾರೆ.
ವಿಶ್ವ ಹಸಿವಿನ ಸೂಚ್ಯಂಕ (2014) ಪ್ರಕಾರ ಭಾರತದಲ್ಲಿ ಹಸಿವಿನ ಮಟ್ಟ ತಗ್ಗುವಿಕೆ ಕಂಡು ಬಂದಿದೆ. ಸದ್ಯ ದೇಶದಲ್ಲಿ ಶೇ.30.5ರಷ್ಟು ಹಸಿವಿನ ಪ್ರಮಾಣವಿದೆ ಎಂದು ಅಂದಾಜಿಸಲಾಗಿದೆ. 2005-06ನೇ ಸಾಲಿನಲ್ಲಿ ಈ ಪ್ರಮಾಣ ಶೇ.45ರಷ್ಟಿತ್ತು. ವಿಶ್ವದ ವಿವಿಧ ದೇಶಗಳಿಗೆ ಹೋಲಿಸಿದರೆ, ಹಸಿವು ಸೂಚ್ಯಂಕದಲ್ಲಿ 76 ರಾಷ್ಟ್ರಗಳಲ್ಲಿ ಭಾರತ 55ನೇ ರ್ಯಾಂಕ್ ಪಡೆದಿದ್ದು, ಕಳೆದ ವರ್ಷಕ್ಕಿಂತ 8 ಅಂಕ ಏರಿಕೆಯಾಗಿದೆ. ಬಿಸಿಯೂಟ ಯೋಜನೆ ಹಸಿವು ಮತ್ತು ಪೌಷ್ಟಿಕಾಂಶದ ಕೊರತೆ ತಗ್ಗಿಸುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎಂದು ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆ ಅಭಿಪ್ರಾಯಪಟ್ಟಿದೆ. ಇದರೊಂದಿಗೆ ಉದ್ಯೋಗ ಖಾತರಿ ಯೋಜನೆ, ಪಡಿತರ ವ್ಯವಸ್ಥೆಯಲ್ಲಿ ಸುಧಾರಣೆಗಳು ಹೆಚ್ಚಿನ ಪರಿಣಾಮ ಬೀರಿವೆ ಎಂದು ಹೇಳಲಾಗಿದೆ.
ವಿಶ್ವಾದ್ಯಂತ ಸುಮಾರು 87 ಲಕ್ಷ ಮಂದಿಗೆ ಸಾಕಷ್ಟು ಆಹಾರದ ಲಭ್ಯತೆ ಇಲ್ಲ. ಜಗತ್ತಿನಲ್ಲಿ 8 ಜನರಲ್ಲಿ ಓರ್ವ ಹಸಿವಿನಿಂದ ಬಳಲುತ್ತಿರುವುದಾಗಿ ಹೇಳಲಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣ ಅಭಿವೃದ್ಧಿ ಹೊಂದುತ್ತಿರುವ ಮತ್ತು ಬಡರಾಷ್ಟ್ರಗಳಲ್ಲಿದೆ. ಒಟ್ಟು ಹಸಿವಿನ ಪ್ರಮಾಣದಲ್ಲಿ ಮೂರನೇ ಎರಡು ಭಾಗದಷ್ಟು ಮಂದಿ ಏಷ್ಯಾ ಖಂಡಕ್ಕೆ ಸೇರಿದವರು. ನಂತರದ ಸ್ಥಾನವನ್ನು ಆಫ್ರಿಕಾದೇಶಗಳದ್ದು. ಆಫ್ರಿಕಾದಲ್ಲಿ ಪೌಷ್ಟಿಕಾಂಶದ ಕೊರತೆ ವಿಪರೀತವಾಗಿದ್ದು, ಪ್ರತಿ ವರ್ಷ 5 ವರ್ಷದ ಒಳಗಿನ ಶೇ.45ರಷ್ಟು ಮಕ್ಕಳು ಮೃತರಾಗುತ್ತದೆ ಎಂದು ಹೇಳಲಾಗಿದೆ.
ಕರ್ನಾಟಕದಲ್ಲಿ ಹಸಿವಿನ ಪ್ರಮಾಣ ಅಷ್ಟೆನು ಹೇಳಿಕೊಳ್ಳುವಂತಹ ಬದಲಾವಣೆ ತಂದಿಲ್ಲ. ಕರ್ನಾಟಕವು ಭಾರತದ ಹಲವು ಹಸಿವಿನಿಂದ ಬಳಲುತ್ತಿರುವ ರಾಜ್ಯಗಳ ಸಾಲಿನಲ್ಲಿ ನಿಲ್ಲುತ್ತದೆ. ಕರ್ನಾಟಕದ ಅನ್ನಭಾಗ್ಯ ಎಂಬ ಯೋಜನೆಯಿಂದ ಸ್ವಲ್ಪ ಚೇತರಿಸಿಕೊಂಡಿದ್ದು ಕೂಡ ಸತ್ಯವಾಗಿದೆ. ಕರ್ನಾಟಕದಲ್ಲಿ ಹಸಿವಿನಿಂದ ಬಳಲಿ ಭೀಕ್ಷೆ ಬೇಡುವವರ ಸಂಖ್ಯೆ ಗಣನೀಯವಾಗಿದೆ. ಹಸಿವಿನಿಂದ ಸಾವುಗಳು ಸಂಭವಿಸುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ವರ್ಷಗಳು ಕಳೆದಂತೆ ಬಡವರ ಸಂಖ್ಯೆಯಲ್ಲಿ ಏರುಮುಖವಿದೆಯೆ ಹೊರತು ಇಳಿಮುಖ ಇಲ್ಲವೆಂಬುವುದು ಸ್ಪಷ್ಟವಾಗುತ್ತದೆ.
ಕಳೆದ ಕೆಲವು ವರ್ಷಗಳಲ್ಲಿ ಕರ್ನಾಟಕ ಮಹತ್ವದ ಹೆಜ್ಜೆ ರಾಷ್ಟ್ರಮಟ್ಟದಲ್ಲಿ ಇಟ್ಟಿದೆಯಾದರು, ಇಲ್ಲಿನ ಹಸಿವಿನ ಬಗ್ಗೆ ಅದರ ಮುಕ್ತತತೆಯ ಬಗ್ಗೆ ಅಷ್ಟೇನು ಚರ್ಚೆಯಾಗಿಲ್ಲ. ಕರ್ನಾಟಕದಲ್ಲಿ ನರೇಗಾದಂತಹ ಮಹತ್ವದ ಯೋಜನೆಗಳ ಅನುಷ್ಠಾನಕ್ಕೆ ಮುಂದಾಯಿತು. ವಿಪರ್ಯಾಸವೆಂದರೆ ಈ ಯೋಜನೆಗಳ ಸರಿಯಾದ ಪ್ರಮಾಣಿಕ ಅನುಷ್ಠಾನ ಹಾಗೂ ನೈಜವಾದ ಫಲಾನುಭವಿಗಳಿಗೆ ದೊರಕದೇಯಿದದ್ದು ದುರಂತವೆನ್ನಬಹುದಾಗಿದೆ.
ರಾಜಪ್ರಭುತ್ವ ಆಡಳಿತವಿರುವಾಗ, ರಾಜನು ತನ್ನ ಪ್ರಜೆಗಳ ಹಸಿವು ನೀಗಿಸುವ ಸಲುವಾಗಿ ಏನೆಲ್ಲಾ ಮಾಡುತ್ತಿದ್ದರು. ಇದೇ ಭಾರತದ ನೆಲದಲ್ಲಿ ತನ್ನ ಪ್ರಜೆಗಳ ಹಸಿವು ನೀಗಿಸಲು ಅದಷ್ಟೊ ರಾಜಪ್ರಭುಗಳು ತಮ್ಮ ಪ್ರಾಣವನ್ನು ಕೊಟ್ಟಿರುವ ಉಸಾಹರಣೆಗಳಿವೆ. ಇದೀಗ ನಮ್ಮ ಪ್ರಜಾಪ್ರತಿನಿಧಿಗಳು ಪ್ರಜಾಪ್ರಭುತ್ವ ದೇಶದಲ್ಲಿ ಪ್ರಜೆಗಳೆಲ್ಲ ಹಸಿವಿನಿಂದ ಸಾಯುವದನ್ನು ಕಣ್ಣಾರೆ ಕಂಡು ಸುಮ್ಮನಾಗಿದ್ದಾರೆ. ಈ ದೇಶದಲ್ಲಿ ಹೊಟ್ಟೆ ತುಂಬಿದವರ ನಡುವೆ ಹೊಟ್ಟೆ ಹಸಿದವರು ಕಾಣಾದಾಗಿದ್ದಾರೆ.
ಈ ದೇಶಕ್ಕೆ ಕಾಡುತ್ತಿರುವ ಬಹುದೊಡ್ಡ ಪಿಡುಡುಗೆಂದರೆ ಬಡತನ. ಭಾರತವನ್ನು ಸರ್ವಶ್ರೇಷ್ಠ ದೇಶಗಳ ಸಾಲಿಗೆ ನಿಲ್ಲಿಸಬೇಕಾದರೆ ಇಲ್ಲಿನ ಬಡತನ ಸಂಪೂರ್ಣ ನಿರ್ಮೂಲನೆಯಾಗಬೇಕು. ಆಹಾರ ಭದ್ರತಾ ಕಾಯಿದೆ ಜಾರಿಯಲ್ಲಿರುವ ಭಾರತದಲಿ,್ಲ ಹಸಿವಿನಿಂದ ಸಾಯುವವರ ಸಂಖ್ಯೆ ಸಂಪೂರ್ಣವಾಗಿ ನಿಲ್ಲಬೇಕು. ದೇಶವು ಬೆಳೆದಂತೆ ಸ್ಲಂಗಳು ಬೆಳೆಯುವುದು ಕಡಿಮೆಯಾಗಬೇಕು. ಸ್ವಚ್ಛತೆಗೆ ಆಧ್ಯತೆ ಕೊಡುವ ಸ್ವಚ್ಛತಾ ಅಭಿಯಾನ ತನ್ನ ಪ್ರಮಾಣಿಕ ಅನುಷ್ಠಾನದತ್ತ ಧಾಪುಗಾಲಿಡಬೇಕು. ಬಡತನ ರೇಖೆಗಿಂತ ಕೆಳಗಿರುವ ಪ್ರಜೆಗಳು ಕಡಿಮೆಯಾಗಿ ದೇಶವು ಹಸಿವಿನಿಂದ ಬಳಲುವವರ ಸಂಖ್ಯೆಯಲ್ಲಿ ಸಂಪೂರ್ಣವಾದ ಇಳಿಮುಖ ಕಾಣಬೇಕು. ದುಡಿಯುವ ಕೈಗಳಿಗೆ ಸರಿಯಾದ ಕೂಲಿ ಸಿಗಬೇಕು. ಓದುವ ಮನಸ್ಸುನಗಳಿಗೆ ಸರಿಯಾದ ಉದ್ಯೋಗ ಸಿಗಬೇಕು. ಇಲ್ಲಿನ ಪ್ರತಿ ಮಗುವಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ದೊರೆಯಬೇಕು. ಅಪೌಷ್ಠಿಕತೆ ಮರೆಯಾಗಬೇಕು. “ಹಸಿವೆಂಬ ಹೊನಲಿನಲ್ಲಿ ಹೊನ್ನು ಬೆಳೆಯುವ ಭಾರತ” ಹಸಿವು ಮುಕ್ತವಾಗಿ ಎಲ್ಲರಿಗೂ ಹೊಟ್ಟೆ ತುಂಬಾ ಆಹಾರ ಸಿಗುವಂತಾಗಲಿ ಎಂಬುವುದಷ್ಟೆ ನನ್ನ ಆಶೆಯ.
-ಕೆ.ಎಂ.ವಿಶ್ವನಾಥ ಮರತೂರ.
ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿ ಹಾಗೂ ಯುವ ಬರಹಗಾರ
ಮೂ: 9686714046