ಭಾರತೀಯ ಸಮಾಜದಲ್ಲಿ ಬಾಲ್ಯವಿವಾಹ ಪದ್ಧತಿಯು ಒಂದು ಸಾಮಾಜಿಕ ಸಂಗತಿಯಾಗಿದೆ. ಈ ಪದ್ಧತಿಯಲ್ಲಿ ಚಿಕ್ಕವಯಸ್ಸಿನ ಹುಡುಗಿಯರಿಗೆ ಸಾಮಾನ್ಯವಾಗಿ 15 ವಯಸ್ಸಿಗಿಂತ ಕೆಳಗಿನ ಹೆಣ್ಣು ಮಕ್ಕಳಿಗೆ ವಯಸ್ಸಾದ ಪುರುಷರೊಂದಿಗೆ ಮದುವೆ ಮಾಡುತ್ತಾರೆ. ಎರಡನೇ ವಿಧದ ಪದ್ಧತಿಯೇನೆಂದರೆ; ತಂದೆತಾಯಿಗಳು ಬಾಲ್ಯದಲ್ಲಿಯೇ ಗಂಡು ಮತ್ತು ಹೆಣ್ಣು ಶಿಶುವನ್ನು ಭವಿಷ್ಯದಲ್ಲಿ ಬಾಲ್ಯವಿವಾಹ ಮಾಡಿಸುವಂತೆ ಆಣೆಮಾಡಿರುತ್ತಾರೆ.
ಎಳೆ ವಯಸ್ಸಿನಲ್ಲಿ ಹುಡುಗಿಯರಿಗೆ ಮದುವೆಯಾಗಿ ಅವರು ಶೀಘ್ರ ಸಮಯದಲ್ಲಿಯೇ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದರಿಂದ ಬಹುಬೇಗನೆ ಮಕ್ಕಳಾಗಿ ಅವರು ಹಲವಾರು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವ ಸಂಭವವಿದೆ.
ಸ್ಥಾನಮಾನದ ಅರಿವಿರದ, ಸಬಲರಾಗಿಲ್ಲದ ಮತ್ತು ಇನ್ನೂ ಪ್ರೌಢಾವಸ್ಥೆಯನ್ನು ಹೊಂದದ ಚಿಕ್ಕ ಹುಡುಗಿಯರು ಮನೆಯಲ್ಲಿ ದೌರ್ಜನ್ಯ, ಲೈಂಗಿಕ ಶೋಷಣೆ ಮತ್ತು ಸಾಮಾಜಿಕ ಪ್ರತ್ಯೇಕತೆಗೆ ಗುರಿಯಾಗುವರು. ಬಾಲ್ಯದಲ್ಲಿ ಮದುವೆಯಾಗುವ ಕಾರಣದಿಂದ ಶಿಕ್ಷಣದ ಕೊರತೆಯುಂಟಾಗಿ, ಸಮರ್ಪಕ ಉದ್ಯೋಗ ಸಿಗದೆ ದೀರ್ಘಕಾಲದ ಬಡತನಕ್ಕೆ ತುತ್ತಾಗುತ್ತಾರೆ.
ಬಾಲ್ಯವಿವಾಹದಿಂದ ಹೆಣ್ಣುಮಕ್ಕಳು, ನಿಷ್ಕಾರಣವಾದ ಅಸಮಾನತೆ, ಖಾಯಿಲೆ ಮತ್ತು ಬಡತನದಂತಹ ಸಮಸ್ಯೆಗಳಿಗೆ ಸತತವಾಗಿ ಗುರಿಯಾಗುತ್ತಾರೆ. ಎಳೆ ವಯಸ್ಸಿನಲ್ಲಿಯೇ ಮದುವೆಯಾಗಿರುವುದರಿಂದ ಹೆಣ್ಣುಮಕ್ಕಳಿಗೆ ಇನ್ನೂ ದೈಹಿಕವಾಗಿ ಬಲ ಹೊಂದಿಲ್ಲದೆ ಇರುವುದರಿಂದ ತಾಯಿ ಮತ್ತು ಶಿಶು ಮರಣ ಪ್ರಮಾಣ ಹೆಚ್ಚಾಗುತ್ತದೆ.
ಹೆಣ್ಣು ಮಕ್ಕಳು ಉತ್ತಮ ಶಿಕ್ಷಣ ಪಡೆದು, ಸುಶಿಕ್ಷಿತರಾದಲ್ಲಿ, ಬಾಲ್ಯ ವಿವಾಹದಂತಹ ಅನಿಷ್ಟ ಸಾಮಾಜಿಕ ಪಿಡುಗನ್ನು ನಿರ್ಮೂಲನೆ ಮಾಡಲು ಸಾಧ್ಯ. ಬಾಲ್ಯ ವಿವಾಹ ಮಾಡಿಸಲು ಪ್ರಯತ್ನಿಸುವವರಿಗೆ ಕಠಿಣ ಶಿಕ್ಷೆ ಕಾದಿದೆ
ಬಾಲ್ಯ ವಿವಾಹ ಪದ್ಧತಿಯು ಹೆಣ್ಣು ಮಕ್ಕಳ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ. ಶೈಕ್ಷಣಿಕವಾಗಿ ಹಿಂದುಳಿದ ಹೈದ್ರಾಬಾದ್-ಕರ್ನಾಟಕ ಪ್ರದೇಶದಲ್ಲಿ ಬಾಲ್ಯ ವಿವಾಹ ವ್ಯವಸ್ಥೆಯು ಉಳಿದೆಲ್ಲೆಡೆಗಳಿಗಿಂತ ಹೆಚ್ಚಿದೆ. ಈ ಅನಿಷ್ಟ ಪದ್ಧತಿಯನ್ನು ನಿರ್ಮೂಲನೆ ಮಾಡಲು ದೇಶದ ಸ್ವಾತಂತ್ರ್ಯ ಪೂರ್ವದಿಂದಲೂ ಅನೇಕ ಮಹನೀಯರು ಹೋರಾಟ ನಡೆಸುತ್ತ ಬಂದಿದ್ದಾರೆ.
ಬಾಲ್ಯ ವಿವಾಹ ಹೆಣ್ಣು ಮಕ್ಕಳ ಪಾಲಿಗೆ ನರಕದ ಕೂಪವಾಗಿ ಪರಿಣಮಿಸುತ್ತಿದೆ. ಮದುವೆ ಎಂಬುದು ಗೊಂಬೆಯಾಟವಲ್ಲ. ವೈವಾಹಿಕ ಬಂಧನದ ಬಗ್ಗೆ ಯಾವುದೇ ಅರಿವು ಹೊಂದಿಲ್ಲದ ಮಕ್ಕಳನ್ನು ವಿವಾಹ ಬಂಧನಕ್ಕೆ ದೂಡುವುದರ ಮೂಲಕ ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳಲಾಗುತ್ತಿದೆ.
ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದಾಗ ಹೈ-ಕ ಪ್ರದೇಶದ ಜಿಲ್ಲೆಗಳ ಬಹಳಷ್ಟು ಹೆಣ್ಣು ಮಕ್ಕಳು ಹೀನ ಸ್ಥಿತಿಯಲ್ಲಿದ್ದಾರೆ. 12 ರಿಂದ 13 ವರ್ಷಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹೆಣ್ಣು ಮಕ್ಕಳ ಮದುವೆಯಾಗುತ್ತಿದೆ. ಶಾರೀರಿಕವಾಗಿ ಬೆಳವಣಿಗೆ ಹೊಂದಿಲ್ಲದ ಹೆಣ್ಣು ಮಕ್ಕಳು ಬೇಗ ಮಕ್ಕಳನ್ನು ಹಡೆಯುವುದರಿಂದ, ಈ ಭಾಗದಲ್ಲಿ ತಾಯಿ-ಶಿಶುವಿನ ಮರಣ ಪ್ರಮಾಣ ಹೆಚ್ಚಾಗಿದೆ.
ಹೆರಿಗೆ ನಂತರ ತಾಯಿಯ ಸಾವು, ಹುಡುಗನಿಗೆ ಮತ್ತೆ ಮದುವೆ ಇಂತಹ ಪ್ರಕರಣಗಳೇ ಈ ಭಾಗದಲ್ಲಿ ಹೆಚ್ಚಾಗಿ ನಡೆಯುತ್ತಿದೆ. 18 ವರ್ಷಕ್ಕೂ ಮೊದಲು ಹೆಣ್ಣು ಮಕ್ಕಳಲ್ಲಿ ಶಾರೀರಿಕ ಬೆಳವಣಿಗೆ ಆಗಿರುವುದಿಲ್ಲ. ಇದಕ್ಕೂ ಮೊದಲೇ ಮದುವೆ ಮಾಡಿಸುವುದರಿಂದ ಇವರಿಗೆ ಹುಟ್ಟುವ ಮಗು ಉತ್ತಮ ಆರೋಗ್ಯ ಹೊಂದಲು ಸಾಧ್ಯವಿಲ್ಲ, ಆ ಹೆಣ್ಣು ಮಕ್ಕಳೂ ಮಾನಸಿಕ ದೌರ್ಬಲ್ಯಕ್ಕೆ ಒಳಗಾಗುತ್ತಿದ್ದಾರೆ.
ಶಾಲೆ ಬಿಡುವ ಹೆಣ್ಣು ಮಕ್ಕಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಮದುವೆ ಎಂಬ ವೈವಾಹಿಕ ಜೀವನದ ಬಗ್ಗೆ ಅರಿಯುವುದರ ಮೊದಲೇ ವಿಧವೆಯರಾಗುತ್ತಿದ್ದಾರೆ. ಇದು ಈ ಭಾಗದಲ್ಲಿನ ವಾಸ್ತವಿಕ ಸಂಗತಿಯಾಗಿದೆ. ಮದುವೆಗೆ ಸರ್ಕಾರ ಗಂಡಿಗೆ 21 ವರ್ಷ, ಹೆಣ್ಣಿಗೆ 18 ವರ್ಷ ಕನಿಷ್ಟ ವಯೋಮಿತಿಯನ್ನು ನಿಗದಿಪಡಿಸಿ ಕಾಯ್ದೆ ಜಾರಿಗೊಳಿಸಿದೆ. ಬಾಲ್ಯ ವಿವಾಹ ಪದ್ಧತಿಯನ್ನು ನಿಷೇಧಿಸಿ ಸರ್ಕಾರ ಕಾಯ್ದೆ ಜಾರಿಗೊಳಿಸಿದ್ದರೂ, ಈ ಭಾಗದಲ್ಲಿ ಬಾಲ್ಯ ವಿವಾಹಗಳು ಹೆಚ್ಚಾಗಿ ನಡೆಯುತ್ತಿದೆ ಎಂದರೆ, ಪರಿಸ್ಥಿತಿಯ ಗಂಭೀರತೆಯನ್ನು ನಾವೆಲ್ಲರೂ ಅರ್ಥೈಸಿಕೊಳ್ಳಬೇಕಾಗಿದೆ. ಈ ಅನಿಷ್ಟ ಪಿಡುಗನ್ನು ಸಂಪೂರ್ಣವಾಗಿ ತೊಲಗಿಸಬೇಕಾಗಿದೆ. ಸಾಮೂಹಿಕ ವಿವಾಹಗಳನ್ನು ನಡೆಸುವಂತಹ ಸಂಘ-ಸಂಸ್ಥೆಗಳು, ಸಂಘಟನೆಗಳು, ಮುಖಂಡರುಗಳು ಯಾವುದೇ ಕಾರಣಕ್ಕೂ ಬಾಲ್ಯ ವಿವಾಹಕ್ಕೆ ಅವಕಾಶ ಮಾಡಿಕೊಡಬಾರದು.
ಬಾಲ್ಯ ವಿವಾಹವನ್ನು ನಡೆಸುವವರಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು. ಅಲ್ಲದೆ ಅಂತಹವರನ್ನು ಬಂಧಿಸಲು ಹಿಂಜರಿಯುವುದಿಲ್ಲ. ಒಂದು ವೇಳೆ ತಮ್ಮ ಸುತ್ತ ಮುತ್ತಲು ಯಾವುದೇ ಬಾಲ್ಯ ವಿವಾಹ ನಡೆಯುವ ಬಗ್ಗೆ ಸಾರ್ವಜನಿಕರ ಗಮನಕ್ಕೆ ಬಂದಲ್ಲಿ ಕೂಡಲೆ 1098 ಸಹಾಯವಾಣಿ ಉಚಿತ ಕರೆಗೆ ಮಾಹಿತಿ ನೀಡಿ, ಮಾಹಿತಿ ನೀಡುವವರ ವಿವರವನ್ನು ಸಂಪೂರ್ಣ ಗೌಪ್ಯವಾಗಿಡಲಾಗುವುದು. ಸಾರ್ವಜನಿಕರು, ಪ್ರಜ್ಞಾವಂತರು ಬಾಲ್ಯ ವಿವಾಹ ಪದ್ಧತಿಯನ್ನು ನಿರ್ಮೂಲನೆಗೊಳಿಸಲು ಸರ್ಕಾರದೊಂದಿಗೆ ಕೈಜೋಡಿಸಿ, ಆರೋಗ್ಯಪೂರ್ಣ ಸಮಾಜ ನಿರ್ಮಿಸಲು ಸಹಕರಿಸಬೇಕು.
ಬಾಲ್ಯ ವಿವಾಹ ತಡೆಗಟ್ಟಲು ಸರ್ಕಾರಿ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರ ನೇತೃತ್ವದಲ್ಲಿ ರಾಜ್ಯ ಮಟ್ಟದ ಕೋರ್ ಕಮಿಟಿ ರಚನೆ ಮಾಡಿತ್ತು. ಈ ಸಮಿತಿಯು ಬಾಲ್ಯವಿವಾಹ ನಿರ್ಮೂಲನೆಗೆ ಹತ್ತು ಹಲವು ಕ್ರಮಗಳ ಶಿಫಾರಸು ಮಾಡಿದೆ. ಪ್ರಥಮ ಹಂತದಲ್ಲಿ ಬಾಲ್ಯ ವಿವಾಹವನ್ನು ತಡೆಗಟ್ಟಲು ರಾಜ್ಯದ 13 ಜಿಲ್ಲೆಗಳಲ್ಲಿ ಆಂದೋಲನವನ್ನು ಹಮ್ಮಿಕೊಳ್ಳಲಾಗಿತ್ತು.
ಅಲ್ಲದೆ ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ ಜಾರಿಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಸರ್ಕಾರ 2011 ರ ನವೆಂಬರ್ 14 ರಿಂದ 2012 ರ ನವೆಂಬರ್ 13 ರವರೆಗೆ ಬಾಲ್ಯ ವಿವಾಹ ವಿರುದ್ಧ ಆಂದೋಲನ ವರ್ಷ ಎಂದು ಘೋಷಿಸಿದೆ ಆದರೂ ಬಾಲ್ಯವಿವಾಹ ನಿಂತಿಲ್ಲವೆಂಬುವುದು ಈ ದೇಶದ ದುರಂತವಾಗಿದೆ.
ಬಡತನ ಹೆಣ್ಣುಮಕ್ಕಳ ಕಡಿಮೆ ಶಿಕ್ಷಣ ಮಟ್ಟ ಹೆಣ್ಣು ಮಕ್ಕಳನ್ನು ಆರ್ಥಿಕವಾಗಿ ಹೊರೆ ಎಂದು ಭಾವಿಸುವುದರಿಂದ ಹೆಣ್ಣುಮಕ್ಕಳಿಗೆ ಕಡಿಮೆ ಸ್ಥಾನಮಾನ. ಸಾಮಾಜಿಕ ಪದ್ಧತಿ ಮತ್ತು ಸಂಪ್ರದಾಯಗಳು. ಬಾಲ್ಯವಿವಾಹದ ವಿರುದ್ಧ ಕಾನೂನನ್ನು ರಚಿಸುವುದು. ಹೆಣ್ಣುಮಕ್ಕಳಿಗೆ ಹೆಚ್ಚು ಶಿಕ್ಷಣ ದೊರಕುವಂತೆ ಮಾಡುವುದು. ಹಾನಿಕಾರವಾದ ಸಾಂಸ್ಕೃತಿಕ ಪದ್ಧತಿಗಳನ್ನು ಬದಲಾಯಿಸುವುದು. ಸಮುದಾಯ ಕಾರ್ಯಕ್ರಮಗಳನ್ನು ಬೆಂಬಲಿಸುವುದು. ವಿದೇಶಿ ನೆರವನ್ನು ಗರಿಷ್ಠಗೊಳಿಸುವುದು. ಬಾಲಿಕಾ ವಧುಗಳ ಅಗತ್ಯತೆಯನ್ನು ಪೂರೈಸುವುದು.
ಬಾಲ್ಯ ವಿವಾಹ ತಡೆ ಕಾಯ್ದೆ. ಬಾಲ್ಯ ವಿವಾಹವನ್ನು ನಿಗ್ರಹಿಸಲು ಹಾಗೂ ಮದುವೆಯನ್ನು ಊರ್ಜಿತಗೊಳಿಸಲು ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಮದುವೆಗಳನ್ನು ನೋಂದಣಿ ಮಾಡಿಸುವುದನ್ನು ಕಡ್ಡಾಯ ಮಾಡಲಾಗಿದೆ. ಇಂತಹ ಸ್ಥಿತಿಯಲ್ಲಿಯೂ ಸಾಮೋಹಿಕ ವಿವಾಹಗಳೆಂಬ ಗೂಡಿನೊಳಗೆ ಈ ಬಾಲ್ಯ ವಿವಾಹಗಳು ನುಸುಳಿ ಹೋಗುತ್ತಿವೆ. ದೊಡ್ಡ ದೊಡ್ಡ ಸ್ವಾಮಿಜಿಗಳ ಆಶಿರ್ವಾದ ಪಡೆದು ಚಿಕ್ಕ ಚಿಕ್ಕ ಮಕ್ಕಳ ಬಾಳಿನಲ್ಲಿ ಬಾಲ್ಯವಿವಾಹವೆಂಬ ಭೂತ ಪ್ರವೇಶ ಮಾಡುತ್ತಿದೆ.
ಈ ದೇಶದ ಆಸ್ತಿ ನಮ್ಮ ಮಕ್ಕಳು ಅವರ ಬಾಳಿನಲ್ಲಿ ಚೆಲ್ಲಾಟವಾಡುತ್ತಿರುವರು ದೊಡ್ಡವರು. ನಾಡನ್ನು ಕಟ್ಟುವ ಈ ಮಕ್ಕಳನ್ನು ನಾವೆಲ್ಲ ಬಾಲ್ಯ ವಿವಾಹವೆಂಬ ಭೂತದಿಂದ ಸಂಪೂರ್ಣವಾಗಿ ಬಿಡಿಸಬೇಕಿದೆ. ಈ ಸಾಮಾಜಿಕ ಅನಿಷ್ಠ ಪದ್ಧತಿಯನ್ನು ಬೇರು ಸಮೇತ ಕುತ್ತು ಹಾಕಬೇಕಿದೆ. ಇದಕ್ಕಾಗಿ ಸರಕಾರ, ಸಾರ್ವಜನಿಕರು, ಸಂಘಸಂಸ್ಥೆಗಳು ಒಟ್ಟಾಗಿ ದುಡಿಯಬೇಕಿದೆ. ಈ ದೇಶದಲ್ಲಿ ಪೋಲಿಯೋ ನಿರ್ಮೂಲನಾ ಮಾದರಿಯಲ್ಲಿ ಬಾಲ್ಯ ವಿವಾಹ ನಿರ್ಮೂಲನೆ ಮಾಡಿದರೆ ಈ ದೇಶ ಅಭಿವೃದ್ಧಿಯ ಪಥದತ್ತ ಸಾಗುತ್ತದೆ. ಬನ್ನಿ ಹಾಗಾದರೆ ನಮ್ಮ ಸುತ್ತಮುತ್ತ ಬಾಲ್ಯ ವಿವಾಹಗಳು ನಡೆಯುತ್ತಿದ್ದರೆ ತಡೆಯಲು ಪ್ರಯತ್ನ ಮಾಡೋಣಾ. ಎಳೆಯ ಕಂದಮ್ಮಗಳ ಬಾಳನ್ನು ಬೆಳಗಿಸೋಣಾ.