ಸುರೆ ಕುಡಿದವರು ಕೆಲರು ಹುಟ್ಟು ಹಾಕುವರು
ಬಿರುಗಾಳಿ ಬೀಸುವುದು, ಜನವೆದ್ದು ಕುಣಿಯುವುದು
ಉರುಳದಿಹುದಚ್ಚರಿಯೊ! ಮಂಕುತಿಮ್ಮ
ಇದೀಗ ಕರ್ನಾಟಕ “ಕಾವೇರಿ” ನದಿಯ ಹೆಸರಿನಲ್ಲಿ ಹೊತ್ತಿ ಉರಿಯುತ್ತಿದೆ. ಹಲವು ತಜ್ಞರು ಹಲವಾರು ರೀತಿಯಲ್ಲಿ ಈ ಪ್ರಕರಣವನ್ನು ಗಮನಿಸಿ ವಿವಿಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಎಲ್ಲಿ ನೋಡಿದರು ಕಾವೇರಿ ಗಲಭೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆಡಳಿತ ಪಕ್ಷಗಳು ತಮ್ಮ ಅಧಿಕಾರ ಉಳಿಸಿಕೊಳ್ಳಲು ನೀರಿನ ಬಗ್ಗೆ ಆಕಾಶದತ್ತ ತೋರಿಸಿ ಮುಂದಿನ ಜೂನ್ ವರೆಗೂ ಕುಡಿಯುವ ನೀರು ಮತ್ತು ಬೆಳೆಗಾಗಿ ನೀರು ಸಂಪೂರ್ಣ ಕೊಡುತ್ತೇವೆ ಎಂಬ ಭರವಸೆ ನೀಡುತ್ತಿದ್ದಾರೆ. ಇತ್ತ ವಿರೋಧ ಪಕ್ಷಗಳು ಮುಂದಿನ ಚುನಾವಣೆ ದೃಷ್ಠಿಯಲ್ಲಿಟ್ಟುಕೊಂಡು ಆಡಳಿತ ಪಕ್ಷದ ವಿರುದ್ಧ ಹೋರಾಟಗಳು ಮಾಡುತ್ತಿದ್ದಾರೆ. ಈ ಮಧ್ಯೆ ಜನಸಾಮಾನ್ಯರ ಬದುಕು ಹೀನಾಯವಾಗಿದೆ. ಅಮಾಯಕ ಜೀವಗಳು ಅಸುನೀಗುತ್ತಿವೆ. ಕರ್ನಾಟಕದ ಸಾಮಾನ್ಯ ಜನಜೀವನದ ಮೇಲೆ ಈ ಹೋರಾಟಗಳು ಘೋರ ಪರಿಣಾಮ ಬೀರುತ್ತಿರುವುದಲ್ಲದೆ ನಗರ ಪ್ರದೇಶಗಳು ಸುಟ್ಟು ಬೂದಿಯಾಗುತ್ತಿವೆ. ನಮ್ಮ ಆಸ್ತಪಾಸ್ತಿಗಳನ್ನು ಸ್ವತ: ನಾವೆ ಹಾಳು ಮಾಡುವಲ್ಲಿ ಯಶಸ್ವಿ ಪ್ರಜಾಪ್ರಭುತ್ವದ ಪ್ರದರ್ಶನ ಮಾಡುತ್ತಿದ್ದೇವೆ.
ಕಾವೇರಿ ನದಿಯು ಇತಿಹಾಸ ಹೊಂದಿರುವ ಪ್ರಾಕೃತಿಕ ನದಿಯಾಗಿದೆ. ಕಾವೇರಿ ಜಲಾನಯನ ಪ್ರದೇಶ 27,700 ಚದುರ ಮೈಲಿಗಳಷ್ಟಿದ್ದು, ಕಾವೇರಿಯ ಉಪನದಿಗಳಲ್ಲಿ ಶಿಂಶಾ, ಹೇಮಾವತಿ, ಅರ್ಕಾವತಿ, ಕಪಿಲಾ, ಕಬಿನಿ, ಲಕ್ಷ್ಮಣ ತೀರ್ಥ ಮತ್ತು ಲೋಕಪಾವನಿ ನದಿಗಳನ್ನು ಹೆಸರಿಸಬಹುದು. ಕಾವೇರಿ 'ದಕ್ಷಿಣ ಗಂಗೆ'ಯೆಂದು ಪ್ರಸಿದ್ಧಿ ಪಡೆದ ಕರ್ನಾಟಕದ ಮಹಾನದಿ. ತುಲಾಮಾಸದಲ್ಲಿ ಕಾವೇರಿ ಸ್ನಾನ ಮಾಡಿದರೆ ಸಕಲ ಪಾಪಗಳೂ ನಾಶವಾಗುವುದೆಂಬ ನಂಬಿಕೆಯಿದೆ. ಕೊಡಗರು ಕಾವೇರಿಯನ್ನು ತಮ್ಮ ಕುಲದೈವದಂತೆ ಪೂಜಿಸುತ್ತಾರೆ. ಕಾವೇರಿಯು ಪುರಾಣಗಳಲ್ಲಿ ವರ್ಣಿಸಲಾದ ಸಪ್ತ ಪುಣ್ಯ ನದಿಗಳಲ್ಲಿ ಒಂದು, ಹಾಗೂ ದಕ್ಷಿಣದಲ್ಲಿರುವ ಏಕೈಕ ಮಹಾ ನದಿ.
ಬ್ರಹ್ಮನ ಮಗಳಾದ ಲೋಪಾಮುದ್ರೆಯು ಭೂಲೋಕದಲ್ಲಿ ಲೊಕೊದ್ಧಾರಕ್ಕಾಗಿ ವಾಸಿಸುತಿದ್ದಳು. ಕವೇರನೆಂಬ ಮುನಿಯು ಬ್ರಹ್ಮನನ್ನು ಕುರಿತು ತಪಸ್ಸನ್ನಾಚರಿಸಿ ಬ್ರಹ್ಮನಿಂದ ವರವನ್ನು ಪಡೆದನು. ನದಿಯ ಉಗಮಕ್ಕಾಗಿ ಮುನಿಗಳು ಸೂಕ್ತಜಾಗದ ಅನ್ವೇಷಣೆಯಲ್ಲಿ ಇರುವುದನ್ನು ತಿಳಿದಿದ್ದ ಗಣೇಶ ಇದೇ ಜಾಗ ಸೂಕ್ತವಾಗಿದೆ ಎಂದೆನಿಸಿ ಕಮಂಡಲವನ್ನು ನೆಲದ ಮೇಲೆ ಇಟ್ಟುಬಿಟ್ಟನು. ಅಲ್ಲಿಯೇ ಹಾರಾಡುತ್ತಿದ್ದ ಕಾಗೆಯೊಂದು ಕಮಂಡಲವನ್ನು ತಾಕುವಂತೆ ಕುಳಿತುಕೊಂಡಿತು. ಅಷ್ಟರಲ್ಲಿ ಹಿಂತಿರುಗಿದ ಅಗಸ್ತ್ಯ ಮುನಿಗಳು ಕಾಗೆಯನ್ನು ನೋಡಿ ಧಾವಂತದಿಂದ ಅದನ್ನು ಓಡಿಸಲು ಪ್ರಯತ್ನಿಸಿದಾಗ ಕಮಂಡಲದ ನೀರು ಚೆಲ್ಲಿತು. ಸಣ್ಣ ಪ್ರಮಾಣದ ಜಲವು ಜಲಧಾರೆಯಾಗಿ ನದಿಯಾಗಿ ಹರಿಯಿತು. ತಲಕಾವೇರಿಯ ಸ್ಥಳವನ್ನು ಈಗಲೂ ಪವಿತ್ರವೆಂದು ಪರಿಗಣಿಸಲಾಗುತ್ತಿದ್ದು, ಇಲ್ಲಿ ನಿತ್ಯ ಪೂಜೆ ಪುನಸ್ಕಾರಗಳು ನಡೆಯುತ್ತಿವೆ. ಇಂತಹ ಪವಿತ್ರ ನದಿಯ ಸಲುವಾಗಿ ಇಂದು ಅಮಾಯಕ ಜೀವಗಳು ಬಲಿಯಾಗುತ್ತಿರುವುದು ಅಕ್ಷ್ಯಮ್ಯ ಅಪರಾಧವೆನಿಸುತ್ತದೆ. ಆಳುವ ಸರಕಾರಗಳು ಸರಿಯಾದ ವ್ಯವಸ್ಥೆಯನ್ನು ಮಾಡದೆ ಜನರಿಗೆ ಮೋಸ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ.
ಕೊಡಗಿನ ಬಳಿಯ ಬೆಟ್ಟಗಳನ್ನು ಬಿಟ್ಟ ನಂತರ ಕಾವೇರಿ ನದಿ ದಕ್ಷಿಣ ಪ್ರಸ್ಥಭೂಮಿಯ ಮೇಲೆ ಪೂರ್ವಕ್ಕೆ ಹರಿಯುತ್ತದೆ. ಈ ನದಿಯಲ್ಲಿ ಮೂರು ದ್ವೀಪಗಳಿವೆ ಕರ್ನಾಟಕದಲ್ಲಿ ಶ್ರೀರಂಗಪಟ್ಟಣ ಮತ್ತು ಶಿವನಸಮುದ್ರ, ಹಾಗೂ ತಮಿಳುನಾಡಿ ನಲ್ಲಿ ಶ್ರೀರಂಗ. ಶಿವನಸಮುದ್ರದಲ್ಲಿ ಈ ನದಿ 320 ಅಡಿಗಳ ಎತ್ತರದಿಂದ ಧುಮುಕಿ, ಗಗನಚುಕ್ಕಿ ಮತ್ತು ಭರಚುಕ್ಕಿ ಎಂಬ ಜಲಪಾತಗಳನ್ನು ಸೃಷ್ಟಿಸುತ್ತದೆ.
ಭಾರತದ ಮೊದಲ ಜಲವಿದ್ಯುದಾಗಾರ ಇಲ್ಲಿ 1902 ರಲ್ಲಿ ಕಟ್ಟಲ್ಪಟ್ಟು ಬೆಂಗಳೂರು ನಗರಕ್ಕೆ ವಿದ್ಯುಚ್ಛಕ್ತಿಯನ್ನು ಒದಗಿಸುತ್ತಿತ್ತು. ಹೊಗೇನಕಲ್ ಜಲಪಾತವಾಗಿ ಬಿದ್ದಾದ ಮೇಲೆ ತಮಿಳುನಾಡನ್ನು ಪ್ರವೇಶಿಸುವ ಈ ನದಿ, ತಂಜಾವೂರು ಜಿಲ್ಲೆಯ ಮುಖಾಂತರ ಹರಿದು ಕೊನೆಗೆ ಇಬ್ಭಾಗವಾಗಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ.
ಕರ್ನಾಟಕದಲ್ಲಿ ಕಾವೇರಿ ನದಿಗೆ ಹನ್ನೆರಡು ಜಲಾಶಯ ಮತ್ತು ಅಣೆಕಟ್ಟುಗಳಿವೆ. ಈ ಎಲ್ಲ ಅಣೆಕಟ್ಟುಗಳ ಮುಖ್ಯೋದ್ದೇಶ ನೀರಾವರಿ. ಮಡದಕಟ್ಟೆಯ ಬಳಿ ಇರುವ ಅಣೆಕಟ್ಟಿನಿಂದ ಹೊರಡುವ ಕಾಲುವೆ 72 ಮೈಲಿಗಳಷ್ಟು ಉದ್ದವಿದ್ದು, 10,000 ಎಕರೆಗಳ ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ಒದಗಿಸುತ್ತದೆ. ಇದೇ ಕಾಲುವೆ ಮೈಸೂರು ನಗರಕ್ಕೆ ಕುಡಿಯುವ ನೀರಿನ ಸೌಲಭ್ಯವನ್ನೂ ಭಾಗಶಃ ಒದಗಿಸುತ್ತದೆ.
ಕಾವೇರಿಯ ಹರಿವು ತನ್ನ ಮೂಲದಿಂದ ಮುಖಜಭೂಮಿಯಲ್ಲಿ ಸಮುದ್ರ ಸೇರುವವರೆಗಿನ ಕಾವೇರಿ ನದಿಯ ಒಟ್ಟು ಉದ್ದ 800 ಕಿ.ಮೀ.. ಕರ್ನಾಟಕದಲ್ಲಿ 320 ಕಿ.ಮೀ. ಹರಿದು 416 ಕಿ.ಮೀ. ತಮಿಳುನಾಡಿನಲ್ಲಿ ಹರಿಯುವುದು. ಮತ್ತು 64 ಕಿ. ಮೀ. ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಸಮಾನವಾದ ಗಡಿಯನ್ನು ರೂಪಿಸುವುದು. 320+32=342 ಕಿ.ಮೀ. ಕರ್ನಾಟಕದಲ್ಲಿ; 416+32 ಕಿ,ಮೀ. ತಮಿಳುನಾಡಿನಲ್ಲಿ ಹರಿದಂತಾಯಿತು. ತಮಿಳು ನಾಡಿನ ಮೆಟ್ಟೂರು ಎಂಬಲ್ಲಿ ಈ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಲಾಗಿದೆ. ಕರ್ನಾಟಕದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಅತಿ ಪ್ರಸಿದ್ಧ ಜಲಾಶಯ ಕೃಷ್ಣರಾಜಸಾಗರ. ಅದರ ಗರಿಷ್ಟ ಮಟ್ಟ 124.8 ಅಡಿ ಕಾವೇರಿ ಕಣಿವೆಯ ನೀರಿನಲ್ಲಿ ಅರ್ಧಕ್ಕಿಂತ ಹೆಚ್ಚು ಪಾಲನ್ನು ಈಗಾಗಲೆ ಗಿಟ್ಟಿಸಿದ್ದರೂ ತಮಿಳುನಾಡಿಗೆ ತೃಪ್ತಿ ಇಲ್ಲ. ಕಾವೇರಿ ಕಣಿವೆಯಲ್ಲಿರುವ ಒಟ್ಟು ನೀರು 740 ಟಿಎಂಸಿ ಅಡಿ. ಈ ಪೈಕಿ 419 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ, 270 ಟಿಎಂಸಿ ಅಡಿ ನೀರನ್ನು ಕರ್ನಾಟಕಕ್ಕೂ ನ್ಯಾಯಾಧಿಕರಣ ಈಗಾಗಲೆ ಹಂಚಿಕೆ ಮಾಡಿದೆ. ಮಳೆ ಕಡಿಮೆಯಾದಾಗ ಪ್ರಧಾನ ಮಂತ್ರಿಯವರ ಅಧ್ಯಕ್ಷತೆಯ ಕಾವೇರಿ ಆಯೋಗ ನೀರಿನ ಪ್ರಮಾಣವನ್ನು ನಿರ್ಧರಿಸುವುದು ಎಂಬ ನಿರ್ಣಯ ಕೂಡ ಮಾಡಿದ್ದಾಗಿದೆ ಆದರೆ ಇಂತಹ ಪರಿಸ್ಥಿತಿಯಲ್ಲಿ ಮೋದಿಯವರು ಮೌನವಾಗಿದ್ದು ಕಳೆದ ಬಾರಿಯ ಮೌನ ಮೋಹನರನ್ನು ಹೋಲುವಂತಾಗಿದ್ದಾರೆ. ದೇಶದ ಗಂಗೆಯ ಮೇಲೆ ಇರುವಷ್ಟು ಪ್ರೀತಿ, ಕಾವೇರಿಯ ಮೇಲೆ ಪ್ರಧಾನಿಯವರಿಗೆ ಇಲ್ಲವೆನ್ನುವುದೇ ಸೂಜಗದ ವಿಷಯವಾಗಿದೆ.
ಹೆಚ್ಚು ಕಡಿಮೆ ಶೇ.80ರಷ್ಟು ಕಾವೇರಿ ನೀರು ತನಗೇ ಸಲ್ಲಬೇಕು ಎಂಬುದು ತಮಿಳುನಾಡಿನ ಆಗ್ರಹ. ಅರ್ಥಾತ್ 740 ಟಿಎಂಸಿಗಳಲ್ಲಿ 566 ಟಿಎಂಸಿ ತನ್ನ ನ್ಯಾಯಯುತ ಪಾಲು ಎನ್ನುತ್ತದೆ. ಹೀಗಾಗಿ 419ಕ್ಕೆ ಸಮಾಧಾನ ಇಲ್ಲ. ಕರ್ನಾಟಕದ ಪಾಲಿನ ನೀರಿಗೆ ಕತ್ತರಿ ಹಾಕಿ ಮತ್ತಷ್ಟು ನೀರು ಪಡೆದುಕೊಳ್ಳುವ ಪ್ರಯತ್ನ ನಿರಂತರ. ಕರ್ನಾಟಕ 465 ಟಿ.ಎಂ.ಸಿ, ಕೇರಳ 99.8 ಟಿ.ಎಂ.ಸಿ, ತಮಿಳುನಾಡು 573.5 ಟಿ.ಎಂ.ಸಿ ಮತ್ತು ಪಾಂಡಿಚೇರಿ 9.35 ಟಿ.ಎಂ.ಸಿಯಂತೆ ಒಟ್ಟು 1,150 ಟಿ.ಎಂ.ಸಿ ನೀರಿನ ಬೇಡಿಕೆಯನ್ನು ಮಂಡಿಸಿದ್ದು ವಾಸ್ತವವಾಗಿ ನೀರಿನ ಲಭ್ಯತೆಯ ಪ್ರಮಾಣ ಸುಮಾರು 740 ರಿಂದ 800 ಟಿ.ಎಂ.ಸಿ ಎಂದು ಅಂದಾಜು ಮಾಡಲಾಗಿದೆ. ತಮಿಳುನಾಡಿನ ಪ್ರತಿವರ್ಷವು ಈ ಕಿರಿಕಿರಿ ಇದ್ದೆ ಇದೆ. ನಮ್ಮ ರಾಜ್ಯದಲ್ಲಿ ಯಾವುದೇ ಸರಕಾರ ಅಧಿಕಾರದಲ್ಲಿದ್ದರು ಕನಿಷ್ಠ ನೀರನ್ನು ನ್ಯಾಯಾಧಿಕರಣದ ಆದೇಶದಂತೆ ನೀರು ಇಲ್ಲಿಯವರೆಗೂ ಬಿಡಲಾಗಿದೆ. ಈ ನದಿ ವಿವಾದದ ಕುರಿತು ಗಟ್ಟಿ ನಿಲುವನ್ನು ಯಾವುದೇ ಸರಕಾರಗಳು ಮಾಡಲು ಸಾಧ್ಯವಾಗಿಲ್ಲ. ನ್ಯಾಯಾಧಿಕರಣಕ್ಕೆ ಖಡಕ್ಕೆ ಪ್ರಶ್ನೆ ಕೇಳಿ ಉತ್ತರ ಪಡೆಯುವ ಸಾಹಸ ಮಾಡಲಾಗುತ್ತಿಲ್ಲ. ಕರ್ನಾಟಕದಲ್ಲಿ ಹುಟ್ಟಿ ಹರೆಯುವ ಕಾವೇರಿಯಿಂದ ಕರ್ನಾಟಕದವರಿಗೆ ಕುಡಿಯುವಷ್ಟು ನೀರಿಲ್ಲದ ಸ್ಥಿತಿಗತಿ ನಮ್ಮದಾಗಿದೆ. ಈ ರಾಜ್ಯದ ಜನರಿಗೆ ಇದಕ್ಕಿಂತ ವಿಪರ್ಯಾಸದ ಸಂಗತಿ ಮತ್ತೊಂದಿಲ್ಲವೆನಿಸುತ್ತದೆ.
ಪ್ರತಿವರ್ಷ ಕಾವೇರಿ ನದಿ ನೀರಿನಿಂದ ತುಂಬಿದ ತಕ್ಷಣ ಈ ಎರಡು ರಾಜ್ಯಗಳ ಮದ್ಯೆ ವಿವಾದ ಪ್ರಾರಂಭವಾಗುತ್ತದೆ. ಈ ವಿವಾದಕ್ಕೊಂದು ಮುಕ್ತಾಯ ಹಾಡುವ ವಿಚಾರ ಮಾತ್ರ ಯಾರು ಮಾಡುತ್ತಿಲ್ಲ. ಎಲ್ಲರೂ ಬಂದ್ ಮಾಡಬೇಕು ಸರಕಾರಿ ಆಸ್ತಿಪಾಸ್ತಿ ಹಾಳ ಮಾಡಬೇಕು ಎಂಬ ವಿಚಾರದತ್ತ ಕೇಂದ್ರಿಕೃತವಾಗಿದ್ದಾರೆಯೆ ಹೊರತು ಸಮಸ್ಯೆ ಬಗೆಹರೆಸುವ ಮನಸ್ಸು ಮಾಡುತ್ತಿಲ್ಲ. ಇನ್ನು ಮುಂದಾದರು ಈ ರಾಜ್ಯದ ತಜ್ಞರು ಒಂದೆಡೆ ಸೇರಿ ರಾಜಕೀಯ ಮಾಡದೇ ವಿಜ್ಞಾನಿಗಳ ಜಲತಜ್ಞರ ಸರಿಯಾದ ಅಭಿಪ್ರಾಯ ಪಡೆದು ಕರ್ನಾಟಕದ ಜನಸಾಮಾನ್ಯರಿಗೆ ನೀರಿನ ವಿವಾದವನ್ನು ಮತ್ತೆ ಮರುಕಳಿಸದಂತೆ ಮಾಡಿದರೆ ಒಳಿತಾಗುತ್ತದೆ.
ಕೊನೆಯ ತುತ್ತು: ನೀರು ಕೊಡಬೇಕಾದ ಸರಕಾರಗಳು, ಜನರಿಗೆ ವಿಷ ಕೊಡುವ ಕೆಲಸ ಮಾಡುತ್ತಿವೆ. ಸಮಸ್ಯೆಗೆ ಪರಿಹಾರ ಕೊಡಬೇಕಾದ ಜನಪ್ರತಿನಿಧಿಗಳು ರಾಜಕೀಯ ಅಧಿಕಾರಕ್ಕಾಗಿ ಜನರ ಸಮಸ್ಯೆ ಹೆಚ್ಚು ಮಾಡುತ್ತಿರುವುದು ವಿಪರ್ಯಾಸವಾಗಿದೆ. ನೀರಿಗಾಗಿ ಬರಗಾಲ ಎದುರಿಸಿದ್ದು ಪ್ರಕೃತಿದತ್ತ ಒಂದೆಡೆಯಾದರೆ ಇದ್ದ ನೀರನ್ನು ಬೇರೆಯವರಿಗೆ ನೀಡಿ ಕೈಚೆಲ್ಲಿ ಕುಳಿತುಕೊಳ್ಳುವ ರಾಜಕೀಯ ಬಿಡಬೇಕಾಗಿದೆ. ಪ್ರಸ್ತುತ ಕಾವೇರಿ ನೀರಿನ ಜೊತೆಗೆ ಕಾವೇರಿನ ನಾಡಿನ ಜೀವನ ಕೂಡ ಕಾಪಾಡಬೇಕಾಗಿದೆ.