ಶೈಕ್ಷಣಿಕ ಅಭಿವೃದ್ಧಿಗೆ ಮುಖ್ಯ ರುವಾರಿಗಳು ನಮ್ಮ ಶಿಕ್ಷಕರು, ನಮ್ಮ ದೇಶದಲ್ಲಿ ಅತೀ ಕಡಿಮೆ ಸಂಬಳ ಪಡೆಯುವ ಹುದ್ದೆ ಶಿಕ್ಷಕರ್ದಾಗಿದೆ. ಅವರ ಕೆಲಸ ಅಗಾಧವಾಗಿದೆ. ಒಬ್ಬ ಪ್ರಾಥಮಿಕ ಶಾಲಾ ಶಿಕ್ಷಕ ತನ್ನ ಮೊದಲ ತಿಂಗಳ ಸಂಬಳದಲ್ಲಿ ಈಗಿರುವ ಕಾಲಾಮಾನದಲ್ಲಿ ಬದುಕುವುದು ಕಷ್ಟಕರವಾಗಿದೆ ಎಂಬ ಸತ್ಯ ವ್ಯವಸ್ಥೆ ಅರೆಯಬೇಕಿದೆ. ಶಿಕ್ಷಕರ ಶ್ರೇಯೋಭಿವೃದ್ಧಿಗಾಗಿ ಶಿಕ್ಷಕರ ಸಂಬಳದ ವ್ಯವಸ್ಥೆ ಕುರಿತು ಯೋಚಿಸಬೇಕಿದೆ. ನಮ್ಮ ಶಿಕ್ಷಕರಿಗೆ ನಿರಂತರ ಪ್ರೋತ್ಸಾಹದಾಯಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಶಿಕ್ಷಕರಿಗೆ ಶಿಕ್ಷಕ ವೃತ್ತಿ ಮಾಡಲು ಹುಮ್ಮಸ್ಸು ಮೂಡಿಬರುವಂತಹ ಅವಕಾಶಗಳನ್ನು ಒದಗಿಸಬೇಕಾಗಿದೆ. ಪುಟಿದೇಳುವ ಶಿಕ್ಷಕರನ್ನು ತಯಾರಿಗೊಳಿಸಬೇಕಿದೆ.
ಶಿಕ್ಷಕರನ್ನು ಕಡೆಗಣಿಸುವ ಪದ್ಧತಿ ಕೊನೆಯಾಗಬೇಕು. ಶಿಕ್ಷಕ ವೃತ್ತಿ ಸಾಮಾನ್ಯವಲ್ಲವೆನ್ನುವಂತಹ ವಾತಾವರಣ ನಿರ್ಮಾವಾಗಬೇಕು. ಅವರ ಪ್ರೋತ್ಸಾಹದಲ್ಲಿ ನಮ್ಮ ಶೈಕ್ಷಣಿಕ ಅಭಿವೃದ್ಧಿ ನಿಂತಿದೆ. ಈ ಪ್ರೋತ್ಸಾಹದಿಂದ ಮಕ್ಕಳ ಕಲಿಕೆಯ ಫಲಿತಾಂಶದಲ್ಲಿ ಗಣನೀಯವಾದ ಬದಲಾವಣೆ ಕಾಣಬಹುದಾಗಿದೆ. ಶಿಕ್ಷಕರು ತೃಪ್ತಿಕರವಾದ ಜೀವನ ನಡಿಸಿದರೆ ಮಾತ್ರ ನಮ್ಮ ಮಕ್ಕಳ ಕಲಿಕೆ ತೃಪ್ತಿಕರವಾಗುವುದರಲ್ಲಿ ಯಾವ ಸಂಶಯವು ಇಲ್ಲಾ. ನಮ್ಮ ದೇಶದ ಭವಿಷ್ಯ ನಾಲ್ಕು ಗೋಡೆಗಳ ಮಧ್ಯದೊಳಗೆ ಶಿಕ್ಷಕ ನಿರ್ಮಿಸುತ್ತಾನೆ. ಶಿಕ್ಷಕ ಗಟ್ಟಿಯಾಗಿದ್ದರೆ ಮಾತ್ರ ಗಟ್ಟಿಯಾದ ಮಕ್ಕಳನ್ನು ತಯಾರಿ ಮಾಡಲು ಸಾಧ್ಯವಾಗುತ್ತದೆ.
ಶಿಕ್ಷಣ ಕ್ಷೇತ್ರದಲ್ಲಿ ಸರಕಾರದ ಜೊತೆಗೆ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳು ಕೆಲಸ ಮಾಡುತ್ತವೆ. ಅವುಗಳ ನೈಜ ಅನುಭವವನ್ನು ನಮ್ಮ ಮಕ್ಕಳು ಪಡೆಯುವಂತಾಗಬೇಕು. ಸಂಸ್ಥೆಗಳ ನೈಜತೆಯನ್ನು ಆಧಾರವಾಗಿಟ್ಟುಕೊಂಡು ಪಾಲ್ಗೊಳ್ಳುವಿಕೆಯನ್ನು ಖಾತ್ರಿಪಡಿಸಬೇಕು. ಸಂಸ್ಥೆಗಳ ಇನ್ನೋವೇಷನ್ ಸರಕಾರ ಬಳಸಿಕೊಳ್ಳಬೇಕು. ಅನುಷ್ಠಾನಗೊಳಿಸುವಲ್ಲಿ ಸಮರ್ಪಣಾ ಮನೋಭಾವ ದೂರದೃಷ್ಟಿಯ ಸಮರ್ಥ ಉತ್ಸಾಹೀ ಸಿಬ್ಬಂದಿ ನಿರೀಕ್ಷಿತ ಫಲಿತಾಂಶ ತರಬಲ್ಲರು. ಯಾವುದೇ ಭಯ ಮತ್ತು ಹಿಂಜರಿಕೆಯಿಲ್ಲದೆ ಸೇವೆಯನ್ನು ನೀಡುವ ಸ್ವಾತಂತ್ರ್ಯವನ್ನು ಅವರಿಗೆ ಕಲ್ಪಿಸಿಕೊಡಬೇಕಷ್ಟೇ.
ಶಿಕ್ಷಕರು ಭಯದ ವಾತಾವರಣದಲ್ಲಿ ಬದುಕುತ್ತಿರುವ ಅದೆಷ್ಟು ನೈಜ ಉದಾಹರಣೆಗಳಿವೆ. ವಿಶೇಷವಾಗಿ ಮಹಿಳಾ ಶಿಕ್ಷಕರ ಪಾಡು ಇನ್ನು ಹೇಳತೀರದು ಇತ್ತೀಚೆಗೆ ನಡೆದ ಕೆಲವು ಘಟನೆಗಳನ್ನು ಊಹಿಸಿಕೊಂಡರೆ ವ್ಯವಸ್ಥೆಯ ಅಸ್ತವ್ಯಸ್ತತೆತೆ ಭಯ ಹುಟ್ಟಿಸುತ್ತದೆ. ಶಿಕ್ಷಕರ ಮನಸ್ಸಿನೊಂದಿಗೆ ಇಲಾಖೆ ಕೆಲಸ ಮಾಡುವ ಅವಶ್ಯಕತೆಯಿದೆ. ಶಿಕ್ಷಕರು ಉತ್ತಸಾಹ ಕಳೆದುಕೊಳ್ಳದಂತೆ ಸರಕಾರ ಏನು ಮಾಡಬಹುದು ಎಂಬ ಚಿಂತನೆ ಮಾಡಬೇಕು. ಶ್ರಮಪಟ್ಟು ದುಡಿಯುವ ಶಿಕ್ಷಕರಿಗೆ ಸೂಕ್ತವಾದ ಅವಕಾಶ ಭಯಮುಕ್ತವಾದ ವಾತಾವರಣ ಇಲಾಖೆ ಒದಗಿಸಿಕೊಡಬೇಕು. ಶಿಕ್ಷಕರ ಆಸಕ್ತಿ ಹೆಚ್ಚಿಸುವ ಕಾರ್ಯಕ್ರಮಗಳನ್ನು ಶಾಲಾಮಟ್ಟದಲ್ಲಿ ಹಾಕಿಕೊಳ್ಳಬೇಕು. ಅವರ ಶಕ್ತಿ ಹೆಚ್ಚಿಸುವ ಸಾಮಥ್ರ್ಯ ಹೆಚ್ಚಿಸುವ ಪ್ರಯತ್ನಗಳು ಸರಕಾರದಿಂದ ಮಾಡಬೇಕಿದೆ.
ನಮ್ಮ ರಾಜ್ಯದಲ್ಲಿರುವ ಸ್ಥಳೀಯ ಸಂಪನ್ಮೂಲ ಕೇಂದ್ರಗಳನ್ನು ಅಭಿವೃದ್ಧಿಪಡಿಸಬೇಕಾದ ಅಗತ್ಯವಿದೆ. ಸಮೂಹ ಸಂಪನ್ಮೂಲ ಕೇಂದ್ರಗಳು ಹಾಗೂ ಕ್ಲಸ್ಟರ್ ಸಂಪನ್ಮೂಲ ಕೇಂದ್ರಗಳ ಬಲವರ್ಧನೆ ಅವಶ್ಯಕತೆಯಿದೆ. ಶಿಕ್ಷಕರ ಇಷ್ಟು ನೇಮಕಾತಿಯಾದರು ಶಿಕ್ಷಕರ ಕೊರತೆಯಿದೆ ಅದನ್ನು ಸಂಪೂರ್ಣವಾಗಿ ನಿಗಿಸಬೇಕಿದೆ. ಈ ಸಂಪನ್ಮೂಲ ಕೇಂದ್ರಗಳಲ್ಲಿನ ವ್ಯಕ್ತಿಗಳಿಗೆ ಸರಿಯಾದ ಅವಕಾಶ ನೀಡಬೇಕು. ಶೈಕ್ಷಣಿಕವಾಗಿ ಬಜೆಟ್ ಹಂಚಿಕೆ, ನೇಮಕಾತಿ ಸೇರಿದಂತೆ ಪ್ರತಿಯೊಂದರಲ್ಲೂ ಪಾರದರ್ಶಕತೆ ತರಬೇಕಿದೆ.
ಪ್ರಸ್ತುತ ಪಠ್ಯಕ್ರಮದಲ್ಲಿ ಜೀವನ ಕೌಶಲ್ಯಗಳ ಸೇರ್ಪಡೆ ಮತ್ತು ಆಧುನಿಕ ಬೋಧನಾ ವಿಧಾನಗಳ ಅಳವಡಿಕೆ ಅವಕಾಶಮಾಡಿಕೊಡಬೇಕು. ಇದಲ್ಲದೆ ಶಿಕ್ಷಕರು ಕೂಡ ರಾಜಕೀಯ ಒತ್ತಡ, ಹೆಚ್ಚುವರಿ ಕೆಲಸದ ಒತ್ತಡ, ಅಧಿಕಾರಿಗಳ ಕಿರುಕುಳದ ಒತ್ತಡದಲ್ಲಿ ನಲುಗಿಹೋಗಿದ್ದಾರೆ. ಇಂಥ ಎಲ್ಲ ಒತ್ತಡಗಳಿಂದ ಅವರನ್ನು ಮುಕ್ತಗೊಳಿಸಿದಾಗಷ್ಷೇ ಬೋಧನಾಗುಣಮಟ್ಟದಲ್ಲಿ ಹೆಚ್ಚಳ ಸಾಧ್ಯ. ಅದೇ ರೀತಿಯಾಗಿ ಸಂತೋಷದಾಯಕವಾದ ಕಲಿಕಾ ವಾತಾವರಣದ ನಿರ್ಮಾಣದಿಂದ ಮಕ್ಕಳ ಆಸಕ್ತಿ ಮತ್ತು ಕಲಿಕಾ ಸಾಮಥ್ರ್ಯ ಹೆಚ್ಚಾಗುತ್ತದೆ. ಇದು ಪರೋಕ್ಷವಾಗಿ ಶಾಲೆಬಿಡುವವರ ಸಂಖ್ಯೆಯು ಇಳಿಮುಖವಾಗುವಲ್ಲಿ ನೆರವಾಗುತ್ತದೆ.
ನಲಿಕಲಿ ಪ್ರಾಥಮಿಕ ಮಕ್ಕಳಲ್ಲಿ ಹೊಸ ಸಂಚಲನ ಮೂಡಿಸಿದೆ. ಈ ಯೋಜನೆಯಲ್ಲಿ ಕೆಲಸ ಮಾಡುವವ ಶಿಕ್ಷಕರ ಬಗ್ಗೆ ಸರಕಾರ ಹೆಚ್ಚಿನ ಕಾಳಜಿವಹಿಸಬೇಕು. ನಲಿಕಲಿಯ ಕೆಲಸವನ್ನು ಮಾಡಿರುವ ಶಿಕ್ಷಕನಿಗೆ ನೈಜತೆ ಗೊತ್ತಿರುತ್ತದೆ. ಅತ್ಯಂತ ಹೆಚ್ಚಿನ ಶ್ರಮ, ತಾಳ್ಮೆ, ಬೇಡುವ ಕೆಲಸವದು. ನಲಕಲಿ ಪಾಠ ಮಾಡುವ ಶಿಕ್ಷಕರಿಗೆ ಒಂದು ದಿನ ಏನಾದರು ಮನಸ್ಸಿಗೆ ಕಿರಿಕಿರಿ ಎನಿಸಿದರೆ ಇಡಿ ನಲಿಕಲಿ ವ್ಯವಸ್ಥೆಯೇ ಅದಲು ಬದಲಾಗುತ್ತದೆ. ಈ ಕಾರಣಕ್ಕಾಗಿಯೇ ಇಂದು ಅನೇಕ ಶಾಲೆಗಳಲ್ಲಿ ನಲಿಕಲಿ ಯೋಜನೆ ನಮಗೆ ಹೊರೆಯಾಗಿ ಪರಿಣಮಿಸಿದೆ.
ನಲಿಕಲಿ ಕಾರ್ಯಕ್ರಮವು ನಮ್ಮ ರಾಜ್ಯದಲ್ಲಿ ಇನ್ನು ಪ್ರಮಾಣಿಕವಾಗಿ ಅನುಷ್ಠಾನಗೊಳ್ಳಬೇಕಾದ ಅಗತ್ಯವಿದೆ. ಮಕ್ಕಳ ಶ್ರೋಯೋಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಆಡುತ್ತ ಕಲಿಯುವ ಪದ್ಧತಿಯನ್ನು ರಾಜ್ಯದ ಪ್ರತಿ ಶಾಲೆಯು ಉತ್ತಮ ಅನುಷ್ಟಾನಕ್ಕೆ ಬದ್ಧವಾಗಬೇಕು ಆಗ ಮಾತ್ರ ಶೈಕ್ಷಣಿಕ ಅಭಿವೃದ್ಧಿ ಸಾಧ್ಯವಾಗುತ್ತದೆ. ರಾಜ್ಯ ಹಾಗೂ ದೇಶದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಎಲ್ಲರೂ ಕೈಜೋಡಿಸಿ ದುಡಿಯಬೇಕಾದ ಅಗತ್ಯವಿದೆ. ಎಲ್ಲರೂ ಸೇರೆ ಒಗ್ಗಟ್ಟಾಗಿ ಈ ಶೈಕ್ಷಣಿಕ ಪ್ರಗತಿಯ ತೇರನ್ನು ಪ್ರಬುದ್ಧವಾಗಿ ಎಳೆಯಬೇಕಿದೆ ಇದು ಎಲ್ಲರ ಮನಸ್ಸಿನಲ್ಲಿ ಹೊಳೆಯಬೇಕಿದೆ ಅಲ್ಲವಾ?
-ಕೆ.ಎಂ.ವಿಶ್ವನಾಥ ಮರತೂರ.
ಯುವ ಬರಹಗಾರರು