ತೆರೆದು ನೋಡು ನಿನ್ನ ಪವಿತ್ರ ಒಳಗಣ್ಣನ್ನು
ಅನ್ಯಾಯ ಅಟ್ಟಹಾಸ ಮಾಡುತ್ತಿದೆ.
ಅಸಮಧಾನ ಹೊಗೆಯಾಡುತ್ತಿದೆ.
ಅಭಿವ್ಯಕ್ತಿ ಸ್ವಾತಂತ್ರ್ಯದ ಕೊಲೆಯಾಗುತ್ತಿದೆ.
ಕಣ್ಣೆದುರೆ ಸತ್ತ ಹೆಣ ಕಂಡರು, ಮೂಗು ಮುಚ್ಚಿಕೊಂಡು ಮುಂದೆ ಸಾಗುವ ಜನರಿದ್ದಾರೆ. ಪಕ್ಕದ ಮನೆಯಲ್ಲಿ ಅಕ್ಕ ಸತ್ತರೆ, ತಮ್ಮ ತಮ್ಮ ಮನೆಯಲ್ಲಿ ಸಕ್ಕರೆ ತುಪ್ಪ ಉಣ್ಣುವ ಪುಂಡ ಪೋಕರಿಗಳಿದ್ದಾರೆ. ನೆರೆಹೊರೆಯವರ ಕಷ್ಟ ನೂರಿದ್ದರು, ನಮ್ಮ ಮನೆಯಲ್ಲಿ ಹೋಳಿಗೆ ತುಪ್ಪವಿರಲಿಯೆಂಬ ಸ್ವಾರ್ಥದ ಜನರಿದ್ದಾರೆ.
ಜನರ ಬದುಕಿಗಾಗಿ ಒಳ್ಳೆಯದನ್ನು ಮಾಡುವರರನ್ನು ಈ ನಾಡಿನಲ್ಲಿ ಕೊಲ್ಲಲಾಗುತ್ತದೆ. ಈ ಮಾತಿಗೆ ಕಳೆದ ವರ್ಷ ಸಾಕ್ಷಿಯಾಯಿತು. ಕರ್ನಾಟಕದ ಕೊಪ್ಪಳದಲ್ಲಿ ತನ್ನ ಊರಿನ ಅವ್ಯವಸ್ಥೆ, ಗ್ರಾ.ಪಂ ಗೋಲ್ಮಾಲ್ ಮುಂತಾದವುಗಳ ಬಗ್ಗೆ ಬಹಿರಂಗವಾಗಿ ಹೇಳಿದ್ದೇ ತಪ್ಪು ಎನ್ನುವಂತೆ 2015 ಜ. 11 ರಂದು ವಿದ್ಯಾರ್ಥಿ ಯಲ್ಲಾಲಿಂಗನನ್ನು ದುಷ್ಕರ್ಮಿಗಳು ಬೆನ್ನಟ್ಟಿ ಕೊಲೆ ಮಾಡಿದ್ದರು. ಈ ಸುದ್ದಿ ಇಡಿ ನಾಡಿನ ಜನತೆಯಲ್ಲಿ ಭುಗಿಲನ್ನು ಉಂಟು ಮಾಡಿತು. ತನ್ನ ಗ್ರಾಮದ ಅನುಧಾನ ಜನತೆಯ ಬಾಗಿಲಿಗೆ ತಲುಪಲಿಯೆಂಬ ಮಾಹಾದಾಸೆ ಹೊಂದಿದ್ದ ಈ ಹುಡುಗನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಿ ಇಡೀ ರಾಜ್ಯದಲ್ಲಿ ಸಾಕಷ್ಟು ಸುದ್ದಿ ಮಾಡಿದ್ದ ಕೊಪ್ಪಳದ ವಿದ್ಯಾರ್ಥಿ ಯಲ್ಲಾಲಿಂಗನ ಕೊಲೆಯಾಗಿ ಇದೀಗ ಒಂದು ವರ್ಷ ಮುಗಿಯಿತು. ಯಲ್ಲಾಲಿಂಗನನ್ನು ಕಳೆದುಕೊಂಡ ಕುಟುಂಬ ಈಗಲೂ ಕಣ್ಣೀರು ಹಾಕುತ್ತಿದೆ. ಗ್ರಾಮದ ಅಭಿವೃದ್ಧಿಗಾಗಿ ಮಾತನಾಡಿದ್ದ ಯಲ್ಲಾಲಿಂಗ ಕೊಲೆಯಾದ ಮೇಲಾದರೂ ಆ ಗ್ರಾಮ ಸುಧಾರಿಸಿಲ್ಲ.
ಯಲ್ಲಾಲಿಂಗ ಗಂಗಾವತಿ ತಾಲೂಕಿನ ಹುಲಿಹೈದರ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಕನಕಾಪುರ ಗ್ರಾಮದ ಯುವಕನಾಗಿದ್ದ. ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಈ ಯುವಕ ತಮ್ಮ ಗ್ರಾಮ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿ ಕುಗ್ರಾಮವಾಗಿದೆ. ಇಲ್ಲಿ ಅಭಿವೃದ್ಧಿಗಾಗಿ ಬಂದಿರುವ ಅನುದಾನ ದುರ್ಬಳಕೆಯಾಗಿದೆ ಎಂದು ಖಾಸಗಿ ವಾಹಿನಿಯೊಂದಕ್ಕೆ ಬೈಟ್ ಕೊಟ್ಟಿದ್ದ. ತನ್ನೂರಿನ ಪಂಚಾಯತಿಯಲ್ಲಿ ನಡೆದ ಅವವ್ಯಹಾರಗಳನ್ನು ಬಯಲಿಗೆಳೆಯುವುದರ ಜೊತೆಗೆ ತನ್ನ ಸುತ್ತಮುತ್ತಲಿನ ಜನತೆಗೆ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಯೋಚನೆ ಮಾಡಿದ ಈ ಹುಡುಗ ತನ್ನ ಸ್ವಯಂ ಹಿತವನ್ನು ಪರಿಗಣಿಸದೇ ಈ ಕೆಲಸಕ್ಕೆ ನಾಡಹಿತಕ್ಕಾಗಿ ಕೈಹಾಕಿದ ಆದರೆ ನಮ್ಮ ಸಮಾಜ ಮಾತ್ರ ಅವನ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಕೊಳ್ಳಿಯಿಟ್ಟಿತು.
ಇದನ್ನೇ ನೆಪ ಮಾಡಿಕೊಂಡ ಕನಕಗಿರಿ, ಹುಲಿಹೈದರ್ದಲ್ಲಿ ದರ್ಬಾರ್ ಮಾಡಿಕೊಂಡು ಎಲ್ಲವನ್ನು ತನ್ನ ಹಿಡಿತದಲ್ಲಿಟ್ಟಿಕೊಂಡಿದ್ದ ಪಾಪಿಗಳು ಹಾಗೂ ಸಮಾಜ ಘಾತುಕರು 2015 ಜ. 11 ರಂದು ಯಲ್ಲಾಲಿಂಗನನ್ನು ಬೆನ್ನಟ್ಟಿ ಕೊಪ್ಪಳದ ರೈಲ್ವೆ ನಿಲ್ದಾಣದ ಬಳಿ ಕೊಲೆ ಮಾಡಿ, ಶವವನ್ನು ರೈಲ್ವೆ ಹಳಿಯ ಮೇಲೆ ಹಾಕಿದ್ದರು. ಇದು ಸತ್ಯವೆಂದು ಎಲ್ಲರಿಗೂ ತಿಳಿದಿದ್ದರು ಯಾವ ಕಾನುನೂ ಕೂಡ ವಿದ್ಯಾರ್ಥಿಯ ಕೈಹಿಡಿಯಲಿಲ್ಲ. ಇಷ್ಟುದಿನಗಳು ಕಳೆದರು ಆ ಹುಡುಗನ ಆತ್ಮಕ್ಕೆ ಶಾಂತಿ ಸಿಗದೇ ಹೋಗಿದೆ. ಜನರ ಹಿತಕ್ಕಾಗಿ ಮಡಿದ ಆ ಹುಡುಗನ ಕೊಲೆಗೆ ಇಂದಿಗೂ ಕೊನೆಯಾಗಿಲ್ಲ ಎಂಬುವುದು ನಮ್ಮ ನಾಡಿನ ದುರಂತ ಕಥೆಯಾಗಿದೆ. ಆ ಹುಡುಗ ತಾನಾಯಿತು ತನ್ನ ಮನೆಯಾಯಿತು ಎಂಬ ವಿಚಾರವನ್ನು ಮಾಡಿ ಸುಮ್ಮನೆ ಕುಳಿತಿದ್ದರೆ ಅವರ ಗ್ರಾಮದಲ್ಲಿ ನಡೆಯುತ್ತಿರುವ ಅವ್ಯವಹಾರ ಪ್ರಜೆಗಳ ಹೆಸರಿನಲ್ಲಿ ನಡೆಯುತ್ತಿರುವ ಹಣದ ಹೊಳೆ ನಿಲ್ಲುತ್ತಿರಲಿಲ್ಲ. ಬದಲಿಗೆ ಪ್ರಜೆಗಳ ರಕ್ತ ಕುಡಿಯುವ ಕೆಲಸ ಜೋರಾಗಿಯೇ ನಡೆಯುತ್ತಿತ್ತು. ಅಂತಹ ಒಳ್ಳೆಯ ಕೆಲಸವನ್ನು ಮಾಡಿದವನ ಬಗ್ಗೆ ಸರಕಾರವಾಗಲಿ ಪ್ರಜಾಪ್ರಭುಗಳಾಗಲಿ ಎಚ್ಚರಿಕೆ ವಹಿಸಲಿಲ್ಲ ಅವನ ಕನಸು ನೆನಸು ಮಾಡಲೇಯಿಲ್ಲ ಎಂಬುವದು ದುರಂತವಾಗಿದೆ.
ಆ ಯುವಕ ತನ್ನ ಪ್ರಾಣವನ್ನು ಈ ಗ್ರಾಮದ ಅಭಿವೃದ್ಧಿಗಾಗಿ ನೀಡಿದ್ದನ್ನು ಆದರೆ ಆಗ್ರಾಮದಲ್ಲಿ ಇಷ್ಟಾದರು ಇನ್ನು ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ. ತಮ್ಮ ಮಗ ಗ್ರಾಮದ ಅವ್ಯವಸ್ಥೆ ಬಗ್ಗೆ ಹೇಳಿ ಸಾವನ್ನಪ್ಪಿದ್ದ. ಯಾವ ಪ್ರದೇಶ ಸರಿ ಇಲ್ಲವೆಂದು ಹೇಳಿದ್ದನೋ ಅಲ್ಲಿ ಒಂದು ವರ್ಷದ ನಂತರ ರಸ್ತೆ ಕಾಮಗಾರಿ ನಡೆಯುತ್ತಿದೆ. ಯಾವ ವಿಷಯಕ್ಕಾಗಿ ಮಗ ಜೀವ ಕಳೆದುಕೊಂಡನೋ ಅದರಂತೆ ಈ ಗ್ರಾಮದಲ್ಲಿ ಅಭಿವೃದ್ಧಿಯಾಗಬೇಕು ಎಂದು ಯಲ್ಲಾಲಿಂಗನ ತಾಯಿ ಕೆಂಚಮ್ಮ ಕಣ್ಣೀರಿಡುತ್ತಾ ಹೇಳುತ್ತಾರೆ. ಆ ತಾಯಿಯು ಕೂಡ ದಿನ ಕಳೆದಂತೆ ಸರಕಾರ ಹಾಗೂ ಪ್ರಜಾಪ್ರತಿನಿಧಿಗಳ ಮೇಲಿನ ಭರವಸೆ ಮಣ್ಣಾಗುತ್ತಿದೆ. ಯಾರು ಕೂಡ ದೇಶದ ಅಥವಾ ನಾಡಿನ ಹಿತವನ್ನು ಕಾಪಾಡುವಲ್ಲಿ ಮುಂದೆಬರುತ್ತಿಲ್ಲ ಎಂಬುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಹುಡುಗನ ಕೊಲೆಯು ಅನೇಕ ಯುವಕರ ಮನಸ್ಸಲ್ಲಿ ಹೊಸ ವಿಷಯವೊಂದನ್ನು ಹುಟ್ಟುಹಾಕಿದಂತು ನಿಜ. ತಮ್ಮ ಸುತ್ತಮುತ್ತ ಏನೆ ಅನ್ಯಾಯ ಕಂಡರು ಅದನ್ನು ಯಾರಿಗೂ ಹೇಳಬಾರದು ಎಂಬ ನಿಜವನ್ನು ಅರ್ಥಮಾಡಿಕೊಂಡಿದ್ದಾರೆ. ನಾಡಿನಾಗಿ ನಮ್ಮ ಗ್ರಾಮಕ್ಕಾಗಿ ಅಭಿವೃದ್ಧಿ ಚಿಂಥನೆ ಮಾಡಿದೆ ನಮ್ಮನ್ನು ಕೊಲ್ಲುತ್ತಾರೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಕಣ್ಣೆದುರೆ ತಪ್ಪು ನಡೆದರು ನಾವೇನು ಮಾತನಾಡುವಂತಿಲ್ಲ ಇಲ್ಲವಾದಲ್ಲಿ ನಮಗೂ ಕೂಡ ಯಲ್ಲಾಲಿಂಗ ತರಹವೇ ಕೊಲೆ ಮಾಡುತ್ತಾರೆ ಎಂಬ ಭುಗಿಲು ಹುಟ್ಟಿರುವುದಂತು ಸತ್ಯವಾಗಿದೆ.
ಇದೊಂದು ಈ ನಾಡಿನ ಆತಂಕಕಾರಿ ಬೆಳವಣಿಗೆಯಾಗಿದೆ. ದೇಶ ಕಂಡ ಅನೇಕ ಸಾವು ನೋವುಗಳಲ್ಲಿ ಮುಂಚುಣಿಯಲ್ಲಿ ನಿಲ್ಲುತ್ತದೆ. ದೇಶಕ್ಕಾಗಿ ಒಳ್ಳೆಯದನ್ನು ಮಾಡಿದವರ ಪಾಡು ಕೊಲೆಯೇ ಗತಿಯಾಗಿ ಎಂಬ ಮಾತನ್ನು ಕಾನೂನು ನ್ಯಾಯಪರವಾಗಿಲ್ಲ ಎಂಬುವುದನ್ನು ತೋರಿಸಿಕೊಟ್ಟ ಸಾವು ಇದಾಗಿದೆ. ಯುವ ಪೀಳಿಗೆಯನ್ನು ದಾರಿ ತಪ್ಪಿಸುವ ಸಾವು ಇದಾಗಿದೆ. ಯುವಕರ ಪಡೆಯಲ್ಲಿ ತಲೆಗಗ್ಗಿಸುವಂತಹ ವಾತಾವರಣ ನಿರ್ಮಾಣ ಮಾಡಿದಂತು ಸತ್ಯವಾಗಿದೆ. ಯುವಕ ಯಲ್ಲಾಲಿಂಗ ಬದುಕಿದ್ದರೆ ಎಂತಹ ಸಾಧನೆ ಮಾಡುತ್ತಿದ್ದನೊ ಎಂಬ ಯೋಚನೆ ಮಾಡಿದರೆ ನಿಜಕ್ಕೂ ಇದೊಂದು ಸೂಕ್ತವಾದ ಅಭಿವ್ಯಕ್ತಿ ಸ್ವಾತಂತ್ರದ ಕೊಲೆಯೆಂಬುವಲ್ಲಿ ಸಂದೇಹವಿಲ್ಲ. ಸ್ವಾಮಿ ವಿವೇಕಾನಂದರು ಎದ್ದೇಳಿ ಭಾರತೀಯರೆ ಎಂದು ಹೇಳಿದರು ಆದರೆ ನಮ್ಮ ಯುವಕ ಅನ್ಯಾಯದ ವಿರುದ್ಧ ಎದ್ದು ಸಿಡಿದು ಪ್ರತಿಭಟಿಸಿದ್ದಕ್ಕೆ ಈ ಸಮಾಜ ಆ ಬಡಪಾಯಿ ಯುವಕನ ಕೊಲೆ ಮಾಡಿತು. ಕೊಲೆ ಮಾಡಿದವರು ರಾಜಾರೋಷವಾಗಿ ಉಳಿದರು ಅನ್ಯಾಯದ ವಿರುದ್ಧ ಹೋರಾಡಿದವರು ಸದ್ದಿಲ್ಲದೇ ಮಡಿದರು. ಇದು ನಮ್ಮ ದೇಶದ ದುರಂತ ಪರಿಸ್ಥಿತಿಯಾಗಿದೆ.
ಕನ್ನಡ ಕುಲದೇವತೆಯೇ ನಿನ್ನ ಕನ್ನಡ ಮಕ್ಕಳು ಕೊಲೆಯಾಗುವ ಬಗೆಯನ್ನು ಗಮನಿಸುವೆಯಾ? ಗಲಿಬಿಲಿಗೊಂಡ ಯುವಕರನ್ನು ಸಂತೈಸುವೆಯಾ? ಸಾವಿನ ಸುಳಿಯಲಿ ಸಿಗುವ ಸಹಜ ಪ್ರಜೆಗಳ ಕಾಪಾಡುವೆಯಾ? ನ್ಯಾಯಕ್ಕಾಗಿ ತಮ್ಮ ಪ್ರಾಣ ಕೊಡುವವರನ್ನು ಪ್ರೀತಿ ವಿಶ್ವಾಸಕ್ಕೆ ತೆಗೆದುಕೊಳ್ಳುವೇಯಾ? ಅಸಹನೆಯ ಬದುಕಿನಲ್ಲಿ ಅಸುನಿಗುವವರ ಕೈಹಿಡಿದು ನಡೆಸುವೆಯಾ? ನಾಡಸೇವೆಯಲ್ಲಿ ನೈಜತೆಯ ತೋರುವವರಿಗೆ ನಿನ್ನ ಅಮೃತ ಹಸ್ತವ ಚಾಚುವೆಯಾ?