ನಿಜವಾದ ಶಿಕ್ಷಣದ ಅರ್ಥವನ್ನು ಅನ್ವೇಷಿಸುತ್ತ ಹೋದರೆ, ಶಿಕ್ಷಣ ಎಂಬ ಪದವು ಒಂದು ಸಂಕೀರ್ಣ ಪದವಾಗಿದೆ. ಆದ್ದರಿಂದಲೇ ಈ ಪದಕ್ಕೆ ವಿಷಾಲವಾದ ಅರ್ಥ ಮತ್ತು ವ್ಯಾಪ್ತಿಗಳು ಹೊಂದಲ್ಪಟ್ಟೆವೆ. ಶಿಕ್ಷಣವೆಂದರೆ ವೈಯಕ್ತಿಕ ಬೆಳವಣಿಗೆ ಮತ್ತು ಸಾಮಾಜಿಕ ವಿಕಾಸ ಎಂದು ಎಲ್ಲರಿಂದಲೂ ಸಮ್ಮತವಾಗಿದೆ. ಆ ಶಿಕ್ಷಣವು ಒಂದು ಅರ್ಥದಲ್ಲಿ ನೋಡಿದರೆ, ಮಾನವನ ಉಗಮದಷ್ಟೇ ಪುರಾತನವೆಂದು ತೋರಿಬರುವುದು. ನಾಗರಿಕತೆಗಳ, ಏಳು ಬೀಳುಗಳ ಜೊತೆಯಲ್ಲಿ ಶಿಕ್ಷಣವೂ ಸಾಕಷ್ಟು ಬದಲಾವಣೆಗಳನ್ನು ಪಡೆದುಕೊಳುತ್ತಾ ವಿಕಾಸ ಹೊಂದಿ ಇವತ್ತಿನ ವಾಸ್ತವಕ್ಕೆ ಬಂದು ನಿಂತಿದೆ. ಶಿಕ್ಷಣ ನಿರಂತರವಾದ ಬದಲಾವಣೆಗಳೊಂದಿಗೆ ಹಲವು ಬಾರಿ ಸಾಣಿ ಹಿಡಿಯುವ ಮೂಲಕ ಪ್ರಸ್ತುತ ಶಿಕ್ಷಣ ಪದ್ಧತಿ ಎಲ್ಲರಿಂದಲೂ ಸಮ್ಮತಿಗೊಂಡು ಅನುಷ್ಠಾನವಾಗುತ್ತಿದೆ.
"ಶಿಕ್ಷಣವು ನಮ್ಮೆಲ್ಲ ಬಂದಗಳನ್ನು ಕಿತ್ತೊಗೆದು, ಪರಮ ಶಾಂತಿ, ಸುಖ, ಸೌರ್ಹಾದತೆಗಳನ್ನು ನೀಡುವ ಸಾಧನ. ಶಿಕ್ಷಣವು ನೀಡುವ ಸಂಪತ್ತೆಂದರೆ, ಆಂತರಿಕ ಬೆಳಕು, ಶಕ್ತಿಯಂದರೆ ಅದಮ್ಯ ಚೇತನ ತುಂಬಿದ ಶ್ರೇಷ್ಠತೆಯ ಪ್ರೀತಿ, ಸತ್ಯದ ಸರ್ವಾದಾ ಅಭಿವ್ಯಕ್ತಿ" ಎಂದು ರವೀಂದ್ರನಾಥ್ ಟಾಗೋರ್ ಉಲ್ಲೇಖಿಸುತ್ತಾರೆ. ಅದರಂತೆಯೆ``ಮಗುವು ಮಾನವನಾಗಿ, ನಾಗರಿಕನಾಗಿ ಎಲ್ಲರೊಡನೆ ಸ್ನೇಹ, ಘನತೆ ಮತ್ತು ಗೌರವದಿಂದ ವರ್ತಿಸುವಂತೆ ಮಾಡುವುದೇ ಶಿಕ್ಷಣ''. ಡಾ.ರಾಧಾಕೃಷ್ಣ ಅವರು ತಮ್ಮ ಶೈಕ್ಷಣಿಕ ತತ್ವ ಸಿದ್ಧಾಂತದಲ್ಲಿ ಉಲ್ಲೇಖಿಸಿದ್ದಾರೆ.
ಭಾರತ ಸರ್ಕಾರವು 14 ವರ್ಷದೊಳಗಿನವರ ಶಿಕ್ಷಣಕ್ಕೆ ಹೆಚ್ಚು ಒತ್ತನ್ನು ನೀಡುತ್ತಿದೆ. ಮಕ್ಕಳನ್ನು ಅಸುರಕ್ಷಿತ ಜಾಗಗಳಿಂದ ರಕ್ಷಿಸುವುದಕ್ಕಾಗಿ ಭಾರತ ಸರ್ಕಾರವು ಬಾಲ ಕಾರ್ಮಿಕ ಪದ್ದತಿಯನ್ನು ನಿಷೇದಿಸಿದೆ. ಅದೇನೇ ಆದರೂ ಸಾಮಾಜಿಕ ಸ್ಥಿತಿ ಮತ್ತು ಆರ್ಥಿಕ ಅಸಮತೋಲನದಿಂದ ಶಿಕ್ಷಣ ನೀಡುವುದು ಮತ್ತು ಬಾಲ ಕಾರ್ಮಿಕ ಪದ್ದತಿಯನ್ನು ನಿಷೇದಿಸುವುದು ಕಷ್ಟವಾಗಿದೆ. ಪ್ರಾಥಮಿಕ ಹಂತದಲ್ಲಿ ಶೇ.80 ರಷ್ಟು ಮಾನ್ಯತೆ ಪಡೆದ ಶಾಲೆಗಳನ್ನು ಸರ್ಕಾರ ನಿಯಂತ್ರಿಸುತ್ತದೆ. ಅದೇನೇ ಆದರೂ ಈ ಶಿಕ್ಷಣ ವ್ಯವಸ್ಥೆ ಬೃಹತ್ತಾದ ಕಂದಕದಿಂದ ನರಳುತ್ತಿದೆ.
ಆ ಕಂದಕ ಯಾವುದೆಂದರೆ ಗರಿಷ್ಟ ವಿದ್ಯಾರ್ತಿಗಳು ಮತ್ತು ಕನಿಷ್ಟ ಶಿಕ್ಷಕರ ಅನುಪಾತ, ಆರ್ಥಿಕ ವ್ಯವಸ್ತೆಯ ಕೊರತೆ ಮತ್ತು ಕನಿಷ್ಟ ಮಟ್ಟದ ಶಿಕ್ಷಕರ ತರಬೇತಿ, ಅನ್ನ, ಹಾಲು ಕೊಡುತ್ತಿರುವುದು. ಈ ಕಂದಕಕ್ಕೆ ಪ್ರಮುಖ ಕಾರಣವೆಂದರೆ ಸಂಪನ್ಮೂಲಗಳ ಕೊರತೆ ಮತ್ತು ರಾಜಕೀಯ ಇಚ್ಚಾಶಕ್ತಿಯ ಕೊರತೆ. ಪ್ರಮಾಣಿಕ ಅನುಷ್ಠಾನದ ಕೊರತೆ, ನಮ್ಮ ದೇಶದಲ್ಲಿ 5816673 ಪ್ರಾಥಮಿಕ ಶಿಕ್ಷಕರಿದ್ದಾರೆಂದು 2011ರಲ್ಲಿ ಭಾರತ ಸರ್ಕಾರ ಬಿಡುಗಡೆ ಮಾಡಿದ ಅಂಕಿಅಂಶಗಳಿಂದ ತಿಳಿಯುತ್ತದೆ. ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು 2009 ರ ಪ್ರಕಾರ 6-14 ವರ್ಷದೊಳಗಿನವರಿಗೆ ಶಿಕ್ಷಣವನ್ನು ಉಚಿತವಾಗಿ ನೀಡಲಾಗುತ್ತಿದೆ.
ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸರ್ಕಾರವು ಹಲವು ಪ್ರಯತ್ನಗಳನ್ನು ಮಾಡಿತು. ಪ್ರಸ್ತುತ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಗೆ ಜೀವತುಂಬಲು ಮತ್ತು ಪುನರ್ ರಚಿಸುವುದರೊಂದಿಗೆ ಡಿ.ಇ.ರ್.ಪಿ.(ಆISಖಿಖIಅಖಿ ಇಆUಅಂಖಿIಔಓ ಖಇಗಿIಖಿಂಐIZಂಖಿIಔಓ Pಖಔಉಖಂಒಒಇ)ಎಂಬ ಕಾರ್ಯಕ್ರಮವನ್ನು 1994 ರಲ್ಲಿ ಜಾರಿಗೊಳಿಸಲಾಯಿತು. ಈ ಯೋಜನೆಯ ಪ್ರಮುಖ ಉದ್ದೇಶ ಭಾರತದಲ್ಲಿನ ಶಿಕ್ಷಣವನ್ನು ಸಾರ್ವತ್ರಿಕರಣಗೊಳಿಸುವುದು. ಈ ಯೋಜನೆಗೆ ಕೇಂದ್ರ ಸರ್ಕಾರವು ಶೇ.85 ರಷ್ಟು ಅನುದಾನ ನೀಡಿದರೆ ಇನ್ನುಳಿದ ಶೇ.15 ರಷ್ಟು ಅನುದಾನವನ್ನು ರಾಜ್ಯ ಸರ್ಕಾರ ನೀಡುತ್ತದೆ.
ಈ ಯೋಜನೆಯಲ್ಲಿ 84000 ಪರ್ಯಾಯ ಶಾಲೆಗಳನ್ನು ಒಳಗೊಂಡಂತೆ ಒಟ್ಟು 160000 ಹೊಸ ಶಾಲೆಗಳನ್ನು ಪ್ರಾರಂಭ ಮಾಡಲಾಯಿತು. ಈ ಯೋಜನೆಯನ್ನು ಯುನಿಸೆಎಫ್. ಸೇರಿದಂತೆ ಇತರೆ ಅಂತರರಾಷ್ಟ್ರೀಯ ಸಂಸ್ಥೆಗಳು ಬೆಂಬಲಿಸಿದವು. ಕೆಲವೊಂದು ರಾಜ್ಯಗಳಲ್ಲಿ ಈ ಯೋಜನೆಯಿಂದ ಕಳೆದ ಮೂರು ವರ್ಷಗಳಲ್ಲಿ ಸಮಗ್ರ ದಾಖಲಾತಿ ಪ್ರಮಾಣ ಶೇ. 93ರಿಂದ 95ಕ್ಕೆ ಏರಿಕೆಯಾಯಿತು. ಶಿಕ್ಷಣದ ಸಾರ್ವತ್ರಿಕರಣಕ್ಕೆ ಇರುವ ಇನ್ನೊಂದು ಯೋಜನೆ ಎಂದರೆ ಸರ್ವ ಶಿಕ್ಷಣ ಅಭಿಯಾನ. ಇದು ಪ್ರಪಂಚದ ಅತ್ಯಂತ ಬೃಹತ್ ಯೋಜನೆ. ಇದರಿಂದ ವಿದ್ಯಾರ್ತಿಗಳ ದಾಖಲಾತಿ ಪ್ರಮಾಣ ಏರಿಕೆಯಾಯಿತೇ ಹೊರತು ಶಿಕ್ಷಣದ ಗುಣಮಟ್ಟದಲ್ಲಿ ಬದಲಾವಣೆಯಾಗಲಿಲ್ಲ ಎಂಬುವುದು ಹಲವು ಶೈಕ್ಷಣಿಕ ದಾಖಲೆಗಳು ನಮ್ಮ ಕಣ್ಣಮುಂದಿವೆ.
ಕರ್ನಾಟಕದಲ್ಲಿ ಶಿಕ್ಷಣ ಇದೀಗ ಮತ್ತೆ ಮೇಲೇರುತ್ತದೆಯೊ ಅಥವಾ ಕೆಳಗಿಳುತ್ತಿದೆಯೊ ಯೋಚಿಸಬೇಕಾಗಿದೆ. ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಒಪ್ಪಂದದಲ್ಲಿ ಘೋಷಿಸಲ್ಪಟ್ಟಿರುವಂತೆ ಪ್ರತಿಯೊಬ್ಬ ಹಸಿದ ಮಗುವಿಗೂ ಆಹಾರವನ್ನು ಒದಗಿಸಬೇಕಾಗಿತ್ತು. ಮಧ್ಯಾಹ್ನ ಉಪಹಾರ ಯೋಜನೆಯು ಒಂದು ಪ್ರತಿಷ್ಠಿತ ಯೋಜನೆಯಾಗಿದ್ದು, ಮಕ್ಕಳು ಆರೋಗ್ಯ ಪೂರ್ಣವಾಗಿ ಶಕ್ತಿವಂತರು ಹಾಗೂ ದೃಢಕಾಯರಾಗಿ ಬೆಳೆಯಲು ಒಂದು ಸದವಕಾಶ ಕಲ್ಪಿಸುವ ಬದ್ಧತೆಯಿಂದ ಕೂಡಿದ್ದು, ಸಹಕಾರಿಯಾಗಿದೆ.
ಸದರಿ ಕಾರ್ಯಕ್ರಮದ ಪ್ರಮುಖ ಉದ್ದೇಶವು ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಹಸಿವು ನೀಗಿಸಿ ತನ್ಮೂಲಕ ಅವರ ಕಲಿಕಾ ಸಾಮರ್ಥ್ಯಗಳನ್ನೂ ಮತ್ತು ಸಾಧನೆಗಳನ್ನು ಹೆಚ್ಚಿಸುವುದಾಗಿದೆ. ಈ ಯೋಜನೆ ಎಷ್ಟು ಫಲಪ್ರಧವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ, ಇದು ಬಡಮಕ್ಕಳ ಪಾಲಿನ ಅಕ್ಷಯಪಾತ್ರೆ ಎಂದರೆ ತಪ್ಪಾಗುವುದಿಲ್ಲ. ಅನ್ನದ ಜೊತೆಗೆ ಇತ್ತೀಚೆಗೆ ರಾಜ್ಯ ಸರಕಾರ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆಯ ಮೂಲಕ ವಾರದಲ್ಲಿ 3 ದಿನ ಹಾಲು ಕೊಡುತ್ತಿದ್ದರು. ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಹಾಲನ್ನು ಕ್ಷೀರಭಾಗ್ಯ ಯೋಜನೆಯಡಿ 3 ರಿಂದ 5 ದಿನಕ್ಕೆ ಹೆಚ್ಚಿಸಲಾಗಿದೆ. ಇಲ್ಲಿ ಅನ್ನ, ಹಾಲು ಕೊಡುವುದರ ಜೊತೆಗೆ ಅಕ್ಷರ ಕಸಿದುಕೊಳ್ಳುತ್ತಿದ್ದಾರೆ ಎಂಬ ಅನುಮಾನ ಕಾಡತೊಡಗಿದೆ. ಅದ್ಯಾಕೆ ಹೀಗೆನಿಸುತ್ತಿದೆ ಎಂದರೆ ವಾಸ್ತವಾಂಶ ಸ್ವಲ್ಪ ಕೆದಕಲೇಬೇಕು.
ನಿಯಮದ ಪ್ರಕಾರ ಪಾರ್ಥನೆಯ ಮುಂಚೆ ಅಥವಾ ಪ್ರಾರ್ಥನೆಯ ಬಳಿಕ ಕೆಲವು ನಿಮಿಷಗಳ ಕಾಲ ಹಾಲನ್ನು ಮಕ್ಕಳಿಗೆ ಕೊಡಬೇಕು. ವಾಸ್ತವದಲ್ಲಿ ಹಾಲು ಕೊಡುವುದೇ ಒಂದು ಪ್ರತಿಷ್ಠೆಯಾಗಿ ವಿಧ್ಯಾರ್ಥಿ ಜೀವನದ ಹಲವು ಘಂಟೆಗಳು ಹಾಲಿನ ಅಮಲಿನೊಳಗೆ ಕಳೆದು ಹೋಗುತ್ತಿದೆ. ಇನ್ನು ಮಕ್ಕಳ ಸಂಖ್ಯೆ ಹೆಚ್ಚಿರುವ ಶಾಲೆಗಳಲ್ಲಿ ಹಾಲಿನ ದರ್ಬಾರ ತುಂಬಾಯಿದೆ. ಮಕ್ಕಳ ಕೈಯಲ್ಲಿ, ಶಾಲೆಯ ಬ್ಯಾಗಿನಲ್ಲಿ ಹಾಲು & ಊಟದ ಪಾತ್ರೆಗಳು ಪುಸ್ತಕ & ಪೆನ್ನುಗಳಿಗಿಂತ ಹೆಚ್ಚು ಸದ್ದು ಮಾಡುತ್ತವೆ ಎಂಬ ಸತ್ಯ ಮರೆಮಾಚುತ್ತಿದೆ. ಮಕ್ಕಳು ಹಾಲನ್ನು ಅಷ್ಟು ಬೇಗ ಕುಡಿದು ಮುಗಿಸುವುದಿಲ್ಲ ಅವರಿಗೆ ಅವರದ್ದೆ ಆದ ಸಮಯ ಬೇಕಾಗುತ್ತದೆ. ಇನ್ನು ಅಡುಗೆ ಮಾಡುವವರು ಅದೇ ಗ್ರಾಮದವರಾಗಿರುವುದರಿಂದ ಅವರು ಕೂಡ ಸರಿಯಾದ ಸಮಯಕ್ಕೆ ಬಂದು ಹಾಲು ಹಾಕುವುದು ವಾಸ್ತವದಲ್ಲಿ ಸರಿಯಾದ ಸಮಯಕ್ಕೆ ಆಗುತ್ತಿಲ್ಲ. ಇದರಿಂದ ಹಾಲು & ಅನ್ನ ಅಕ್ಷರದ ಕಲಿಕೆಯ ಜಾಗ ಪಡೆದುಕೊಳ್ಳುತ್ತಿರುವುದು ಆತಂಕಕಾರಿ ವಿಷಯವಾಗಿದೆ. ನಾನು ಇಲ್ಲಿ ಯೋಜನೆಯನ್ನು ವಿರೋಧಿಸುತ್ತಿಲ್ಲ ಅದರ ಅನುಷ್ಠಾನ & ಅದರ ಸೂಕ್ತ ಮೇಲ್ವೀಚಾರಣೆಯ ಕೊರತೆಯಿಂದ ಹೇಗೆ ಮಕ್ಕಳ ಕಲಿಕೆಯ ಮೇಲೆ ಪರಿಣಾಮ ಬೀರುತ್ತಿದೆ ಎಂಬುವುದನ್ನು ಸರಕಾರದ ಗಮನಕ್ಕೆ ತರಲು ಪ್ರಯತ್ನಿಸುತ್ತಿರುವೆ.
ಹಾಲನ್ನು ಮೊದಲು ಮೂರು ದಿನ ಕೊಡುವುದಕ್ಕೆ ಅನುಷ್ಠಾನದಲ್ಲಿ ಕೊರತೆಯಿದ್ದಾಗ ಅದನ್ನು ಇಡಿ ವಾರ ವಿಸ್ತರಿಸುವ ಮುನ್ನ ಅದಕ್ಕೆ ಅದರದ್ದೆ ಆದ ರೂಪುರೇಷುಗಳ ಮೂಲಕ ವಿಷ್ತರಣೆ ಮಾಡಿದರೆ ಉತ್ತಮವೆನಿಸುತ್ತದೆ. ನಾವು ಹಾಲು ಕೊಡವುದನ್ನು ವಿರೋಧಿಸುತ್ತಿಲ್ಲ ಅದರಿಂದ ಕಲಿಕೆಗೆ ಧಕ್ಕೆಯಾಗಬಾರದೆಂಬ ಆಶೆಯವಷ್ಟೆ. ಅಡುಗೆ ಸಾಹಾಯಕರ ಸೂಕ್ತ ಮೇಲ್ವೀಚಾರಣೆಯಾಗಲಿ, ಹಾಲು ಸಕಾಲಕ್ಕೆ ಎಲ್ಲಾ ಶಾಲೆಗಳಿಗೆ ತಲುಪಲಿ, ಗುಣಮಟ್ಟದ ಹಾಲನ್ನು ಪೂರೈಕೆ ಮಾಡಿ, ಸೂಕ್ತವಾದ ಸಮಯ ನಿಗದಿ ಮಾಡಿರಿ, ಅನ್ನ & ಹಾಲಿಗೆ ಪಾತ್ರೆಗಳು ಶಾಲೆಗಳಿಂದಲೆ ಪೂರೈಕೆಯಾಗಲಿ. ಹಾಲು ಎಲ್ಲಾ ಮಕ್ಕಳಿಗೆ ಸಿಗುವಂತಾಗಲಿ, ಕೆಲವು ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದೆ ಅಲ್ಲಿ ಹೆಚ್ಚಿನ ಅಡುಗೆ ಸಿಬ್ಬಂದಿ ನೇಮಕವಾಗಲಿ, ಶಿಕ್ಷಕರಿಂದ ಈ ಕೆಲಸ ದೂರವಿರಲಿ.
ನಮ್ಮ ಈ ಶಾಲೆಗಳಲ್ಲಿ ಉತ್ತಮ ಸಂಘಟನೆ, ಅಭಿವೃದ್ಧಿ, ಶಿಸ್ತು, ಸಾಮರಸ್ಯ ಸೃಷ್ಟಿಸುವ ದೃಷ್ಟಿಯಿಂದ ಉತ್ತಮ ಸಂಘಟನೆಯೊಂದಿಗೆ ಆರೋಗ್ಯಕರ ನಿಯಂತ್ರಣ ಗುಣಮಟ್ಟದ ಶೈಕ್ಷಣಿಕ ಅಭಿವೃದ್ಧಿಯೊಂದಿಗೆ ಯೋಜಿತ ಅಭಿವೃದ್ಧಿಗೆ ಪರಿಗಣಿಸಿ, ವಿದ್ಯಾರ್ಥಿಗಳಲ್ಲಿ ಉತ್ತಮ ಶಿಕ್ಷಣ, ವೈಜ್ಞಾನಿಕ ಮತ್ತು ಜಾತ್ಯಾತೀತ ದೃಷ್ಟಿಕೋನವನ್ನು ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ಸೃಷ್ಠಿಸುವಲ್ಲಿ ಅನ್ನ, ಹಾಲು ತೊಡಕಾಗುತ್ತಿದೆಯೆ ಅಥವಾ ಅದರ ಸರಿಯಾದ ಮೇಲ್ವೀಚಾರಣೆಯನ್ನು ಸೂಕ್ತವಾಗಿ ಮಾಡುವಲ್ಲಿ ಸರಕಾರ ಎಡುವುತ್ತಿದೆಯೆ ಎಂಬ ಅಂಶ ಗಮನಿಸಬೇಕಾಗಿದೆ. ಅನ್ನ, ಹಾಲಿಗೆ ಕೊಟ್ಟ ಮಹತ್ವ ಶಿಕ್ಷಣದ ಕಲಿಕೆಗೂ ನೀಡಬೇಕಾಗಿದೆ ಎಂಬುವುದಷ್ಟೆ ನನ್ನ ಕಳಕಳಿಯಾಗಿರುತ್ತದೆ.