ಇಂದು ಅಂತಹ ಅಪ್ರತಿಮ ದೇಶಭಕ್ತ, ಆಧುನಿಕ ಭಾರತದ ವಿಕಾಸಕ್ಕೆ ಅಸ್ತಿಭಾರ ನಿರ್ಮಿಸಿದ ಪ್ರಮುಖರಲ್ಲೊಬ್ಬರಾದ ಗೋಪಾಲ ಕೃಷ್ಣ ಗೋಖಲೆಯವರ ಜನ್ಮದಿನ. ಈ ವರ್ಷ ಅವರ 150ನೇ ಜನ್ಮವರ್ಷ ಕೂಡ. ಸ್ವಾತಂತ್ರ್ಯಪೂರ್ವ ಭಾರತದ ಮಹಾನ್ ರಾಜಕೀಯ ನಾಯಕರೂ ಮತ್ತು ಸಮಾಜ ಸುಧಾರಕರಾಗಿ ಭಾರತೀಯರಿಗೆ ಗೌರವಯುತವಾದ ಉತ್ತಮ ಬದುಕನ್ನು ತಂದುಕೊಡಲು ಶ್ರಮಿಸಿದ ಗೋಪಾಲಕೃಷ್ಣ ಗೋಖಲೆಯವರು ಮೇ 9, 1866ರಂದು ಕೊಲ್ಹಾಪುರದಲ್ಲಿ ಜನಿಸಿದರು.
ಭಾರತೀಯರಿಗೆ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯುವುದು ಮಾತ್ರವಲ್ಲದೆ, ಸಮಾಜ ಸುಧಾರಣೆ ಅವಶ್ಯಕತೆಯು ಮುಖ್ಯ ಎಂದು ಮನಗಂಡವರು ಗೋಖಲೆ. ಈ ಉದ್ದೇಶಕ್ಕಾಗಿ ಅವರು ಸೂಚಿಸಿದ ಪ್ರಮಖ ಕಾರ್ಯವಿಧಾನಗಳೆಂದರೆ, ಅಹಿಂಸೆ ಮತ್ತು ಅಸ್ತಿತ್ವದಲ್ಲಿರುವ ಸರ್ಕಾರಿ ಸಂಸ್ಥೆಗಳ ಆಡಳಿತದಲ್ಲಿ ಮೌಲ್ಯಯುತ ಕಾರ್ಯನಿರ್ವಹಣಾ ವಿಧಾನದ ಅನುಸರಣೆ.
ಗೋಪಾಲಕೃಷ್ಣ ಗೋಖಲೆಯವರನ್ನು ತಮ್ಮ ಆದರ್ಶವೆಂದು ಪರಿಗಣಿಸಿದ್ದ ಡಿ. ವಿ. ಜಿಯವರು ಹೇಳುತ್ತಾರೆ ``ಜನರಿಗೆ ಬದುಕು ಸಹ್ಯವೂ ಪ್ರಿಯವೂ ಅರ್ಥಪೂರಿತವೂ ಆಗಬೇಕೆಂಬ ಮಹೋದ್ದೆಶಕ್ಕೆ ಸಾರ್ವಜನಿಕ ಕ್ಷೇತ್ರದೊಳಗಿದ್ದು ಅಪರಿಮಿತವಾಗಿ ಶ್ರಮಿಸಿದವರು ಗೋಪಾಲಕೃಷ್ಣ ಗೋಲೆಯವರು. ಅವರೊಬ್ಬ ಪೂರ್ಣಾಕಾರಿಗಳು'' ಎಂದು.
ಗೋಖಲೆಯವರು 1889ರ ವರ್ಷದಲ್ಲಿ ಮಹಾನ್ ಸಮಾಜ ಸುಧಾರಕರಾದ ಮಹಾದೇವ ಗೋವಿಂದ ರಾನಡೆಯವರಿಂದ ಪ್ರಭಾವಿತರಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಸದಸ್ಯರಾದರು. ತಮ್ಮ ಸಮಕಾಲೀನರಾದ ಬಾಲ ಗಂಗಾಧರ ತಿಲಕ್, ದಾದಾಬಾಯ್ ನವರೋಜಿ, ಬಿಪಿನ್ ಚಂದ್ರ ಪಾಲ್, ಲಾಲಾ ಲಜಪತ್ ರಾಯ್ ಮತ್ತು ಅನ್ನಿ ಬೆಸೆಂಟ್ ಮುಂತಾದವರ ಜೊತೆಗೂಡಿ ಹಲವಾರು ವರ್ಷಗಳ ಕಾಲ ಬ್ರಿಟಿಷ್ ರಾಜಕೀಯ ವ್ಯವಸ್ಥೆಯಲ್ಲಿ ಭಾರತೀಯರಿಗೆ ಹೆಚ್ಚಿನ ಪ್ರಾತಿನಿಧ್ಯ ದೊರಕಿಸಿಕೊಡಲು ಹೋರಾಡಿದರು. ಬ್ರಿಟಿಷರೊಡನೆ ಸೌಹಾರ್ದಯುತವಾಗಿ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕು ಎಂಬುದು ಗೋಖಲೆಯವರ ಸಹನಶೀಲ ನಡೆಯಾಗಿತ್ತು. ಐರ್ ಲ್ಯಾಂಡ್ ದೇಶಕ್ಕೆ ಭೇಟಿಕೊಟ್ಟ ಗೋಖಲೆಯವರು ಆ ದೇಶದ ಆಲ್ಫ್ರೆಡ್ ಎಂಬಾತನನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ಕೆಲಸ ಮಾಡುವ ಏರ್ಪಾಡು ಮಾಡಿದ್ದರು. ಅದರ ಮುಂದಿನ ವರ್ಷದಲ್ಲಿ ಬಾಲ ಗಂಗಾಧರ ತಿಲಕ್ಕರ ಜೊತೆಗೆ ಕಾಂಗ್ರೆಸ್ಸಿನ ಜಂಟಿ ಕಾರ್ಯದರ್ಶಿಯಾದರು. ತಿಲಕ್ ಮತ್ತು ಗೋಖಲೆಯವರು ಒಂದೇ ರೀತಿಯ ಕೌಟುಂಬಿಕ ಹಿನ್ನಲೆಯಿಂದ ಬಂದರು. ಇಬ್ಬರೂ ವಿದ್ಯಾಭ್ಯಾಸದಲ್ಲಿ ಸಮಾನ ಸಾಧಕರು. ಗಣಿತ ಶಾಸ್ತ್ರದ ಮಹಾನ್ ವಿದ್ವಾಂಸರು. ಇಬ್ಬರೂ ಡೆಕ್ಕನ್ ಎಜುಕೇಶನ್ ಸೊಸೈಟಿಯ ಪ್ರಮುಖ ಸದಸ್ಯರಾಗಿದ್ದರು. ಇಷ್ಟಾದ್ದರೂ ಕಾಂಗ್ರೆಸ್ಸಿನಲ್ಲಿ ಈ ಈರ್ವರೂ ನಾಯಕರಾದಾಗ, ಭಾರತೀಯ ಸಮುದಾಯಕ್ಕೆ ಯಾವ ರೀತಿಯಲ್ಲಿ ಉಪಯುಕ್ತತೆ ದೊರಕಿಸಿಕೊಡಬಹುದು ಎಂಬ ನಿಲುವಿನಲ್ಲಿ ತೀವ್ರಸ್ವರೂಪದ ಭಿನ್ನಾಭಿಪ್ರಾಯಗಳನ್ನು ತಳೆದವರಾಗಿದ್ದರು. 1905ರ ವರ್ಷದಲ್ಲಿ ಗೋಖಲೆಯವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷರಾದರು.
ಗೋಖಲೆಯವರು ಭಾರತೀಯ ಸ್ವತಂತ್ರ ಚಳುವಳಿಯ ನಾಯಕರಾಗಿದ್ದಾಗಿಯೂ ಅವರ ಧ್ಯೇಯ ಸ್ವಾತಂತ್ರ್ಯಕ್ಕಿಂತ ಹೆಚ್ಚಿನದಾಗಿ ಸಮಾಜ ಸುಧಾರಣೆಯ ಕುರಿತಾಗಿತ್ತು. ಇಂಥಹ ಸಮಾಜ ಸುಧಾರಣೆಗಾಗಿ ಬ್ರಿಟಿಷ್ ಆಡಳಿತ ವ್ಯವಸ್ಥೆಯೊಂದಿಗೆ ಸೌಹಾರ್ಧಯುತವಾಗಿ ನಡೆಯುವುದೇ ಉತ್ತಮವಾದ ದಾರಿ ಎಂಬ ನಿಲುವು ಅವರದಾಗಿತ್ತು. ಈ ಕಾರಣದಿಂದಾಗಿ ಗೋಖಲೆ ಮತ್ತು ತಿಲಕ್ಕರಂತಹ ಸ್ವಾತಂತ್ರ್ಯಪರ ಚಿಂತಕರ ನಡುವೆ ತೀವ್ರ ಭಿನ್ನಾಭಿಪ್ರಾಯಗಳಿದ್ದವು. ಈ ವಿರೋಧಗಳ್ಯಾವುವನ್ನೂ ಲೆಖ್ಖಿಸದ ಗೋಖಲೆಯವರು ತಾವು ಬಯಸಿದ್ದ ಸಮಾಜಸುಧಾರಣೆಗಳನ್ನು ಕಾರ್ಯರೂಪಕ್ಕೆ ತರುವ ಸಲುವಾಗಿ ತಮ್ಮ ಕೊನೆಯವರೆಗೆ ಬ್ರಿಟಿಷ್ ಸರ್ಕಾರದ ಜೊತೆ ಜೊತೆಗೆ ಸೌಹಾರ್ಧಯುತವಾಗಿಯೇ ಕಾರ್ಯನಿರ್ವಹಿಸಿದರು.
ಗೋಪಾಲಕೃಷ್ಣ ಗೋಖಲೆಯವರು ಮಹಾತ್ಮ ಗಾಂಧಿಯವರಿಗೆ ಭಾರತೀಯ ರಾಜಕೀಯ ಜೀವನದ ಪ್ರಾರಂಭಿಕ ವರ್ಷಗಳ ಮಾರ್ಗದರ್ಶಕರಾಗಿದ್ದರು. 1912ರ ವರ್ಷದಲ್ಲಿ ಗೋಖಲೆಯವರು ಗಾಂಧಿಯವರ ಆಹ್ವಾನದ ಮೇರೆಗೆ ದಕ್ಷಿಣ ಆಫ್ರಿಕಾಗೆ ಭೇಟಿ ನೀಡಿದರು. ಯುವ ಬ್ಯಾರಿಸ್ಟರ್ ಆಗಿ ದಕ್ಷಿಣ ಆಫ್ರಿಕಾದ ಹೋರಾಟಗಳ ನಂತರ ಭಾರತಕ್ಕೆ ಬಂದ ಗಾಂಧೀಜಿಯವರಿಗೆ ಸ್ವಯಂ ಗೋಖಲೆಯವರೇ ಜೊತೆ ನಿಂತು ಕೈಹಿಡಿದು ಮಾರ್ಗದರ್ಶನ ಮಾಡಿದರು. ಈ ನಿಟ್ಟಿನಲ್ಲಿ ಅವರು ಮಾಡಿದ ಪ್ರಮುಖ ಕಾರ್ಯವೆಂದರೆ ಗಾಂಧಿಯವರಲ್ಲಿ ಭಾರತದ ಕುರಿತಾಗಿ ನೀಡಿದ ಸಂಪೂರ್ಣ ಚಿತ್ರಣ ಮತ್ತು ಭಾರತವನ್ನು ಕಾಡುತ್ತಿರುವ ಸಮಸ್ಯೆಗಳ ಕುರಿತಾಗಿ ನೀಡಿದ ಸಮಗ್ರ ತಿಳುವಳಿಕೆ.
1920ರ ವೇಳೆಗೆ ಗಾಂಧೀಜಿ ಭಾರತೀಯ ಸ್ವಾತಂತ್ರ್ಯ ಹೋರಾಟದ ನಾಯಕರಾಗಿದ್ದರು. ತಮ್ಮ ಆತ್ಮ ಚರಿತ್ರೆಯಲ್ಲಿ ಗಾಂಧೀಜಿಯವರು ಗೋಪಾಲ ಕೃಷ್ಣ ಗೋಖಲೆಯವರನ್ನು ತಮ್ಮ ಗುರು ಮತ್ತು ಮಾರ್ಗದರ್ಶಕ ಎಂದು ಬಣ್ಣಿಸಿದ್ದಾರೆ. ಗೋಖಲೆಯವರ ಕುರಿತಾಗಿ ಗಾಂಧೀಜಿ ``ಅವರೊಬ್ಬ ಶ್ರೇಷ್ಠ ನಾಯಕ, ರಾಜಕೀಯ ಮುತ್ಸದ್ದಿ, ಸ್ಫಟಿಕದಂತೆ ಸ್ವಚ್ಚ, ಕುರಿಯಂತೆ ಮೆದು, ಸಿಂಹದಂತೆ ಧೈರ್ಯಸ್ಥ, ತಪ್ಪು ಮಾಡಿದಾಗ ಸಹನಶೀಲ ಮತ್ತು ರಾಜಕೀಯ ಕ್ಷೇತ್ರದ ಸತ್ಪಾತ್ರರು'' ಎಂದು ಕೊಂಡಾಡಿದ್ದಾರೆ. ಹಾಗಿದ್ದಾಗ್ಯೂ ಗಾಂಧೀಜಿಯವರು ಗೋಖಲೆಯವರಿಗಿದ್ದ ಪಾಶ್ಚಾತ್ಯ ಸಂಸ್ಥೆಗಳ ಕುರಿತಾಗಿದ್ದ ನಂಬುಗೆಗಳು ತಮಗೆ ಒಪ್ಪಿಗೆಯಾಗಿಲ್ಲ ಎಂದು ತಿಳಿಸುತ್ತಾರೆ.
ಭಾರತೀಯ ಸ್ವಾತಂತ್ರ್ಯ ಚಳುವಳಿಯಲ್ಲಿ ಗೋಪಾಲ ಕೃಷ್ಣ ಗೋಖಲೆಯವರು ನಿರ್ವಹಿಸಿದ ಪಾತ್ರ ಮಹತ್ವಪೂರ್ಣವಾದದ್ದು. ಅವರು ಬ್ರಿಟಿಷ್ ಸರ್ಕಾರದೊಂದಿಗೆ ಸೌಹಾರ್ಧಯುತವಾಗಿದ್ದರೆಂಬುದೇನೋ ನಿಜ. ಆದರೆ ಬ್ರಿಟಿಷ್ ಚಕ್ರಾಧಿಪತ್ಯದ ಮೇಲೆ, ಭಾರತೀಯ ನವ ವಿದ್ಯಾವಂತ ಜನಾಂಗಕ್ಕೆ ಸರ್ಕಾರ ಮತ್ತು ಆಡಳಿತ ಕ್ಷೇತ್ರದಲ್ಲಿ ಹೆಚ್ಚು ಪ್ರಾತಿನಿಧ್ಯತೆ ದೊರಕಿಸಸಬೇಕು ಎಂದು ನಿರಂತರವಾಗಿ ಒತ್ತಡ ತಂದರು. ಗೋಖಲೆಯವರು ಪರಿಶ್ರಮಗಳು ಮಹಾತ್ಮ ಗಾಂಧಿಯವರನ್ನೊಳಗೊಂಡಂತೆ ಅಂದಿನ ಯುವ ತಲೆಮಾರುಗಳನ್ನು ಪ್ರೇರೇಪಿಸಿದವು. ಸ್ವಾತಂತ್ರ್ಯಾನಂತರದಲ್ಲಿ ಜಾರಿಗೊಂಡ ಶಿಕ್ಷಣ ವ್ಯವಸ್ಥೆಯಲ್ಲಿ ಗೋಖಲೆಯವರ ಚಿಂತನೆಗಳಾದ ಪಾಶ್ಚಿಮಾತ್ಯ ರೀತಿಯ ಶಿಕ್ಷಣ ವ್ಯವಸ್ಥೆಗೆ ಸಾಕಷ್ಟು ಮಹತ್ವ ದೊರೆತಿದೆ.
``ಮಾತೃಭೂಮಿಯ ಸೇವೆಯನ್ನು ಶ್ರದ್ಧೆಯಿಂದಲೂ ಸ್ವಾರ್ಥತ್ಯಾಗಪೂರ್ವಕವಾಗಿಯೂ ಕೈಗೊಳ್ಳುವುದು ಈಗ ಅವಶ್ಯಕ. ಈ ಸೇವೆಗಿಂತಲೂ ಉತ್ತಮವಾದ ಅಥವಾ ಶ್ರೇಷ್ಠವಾದ ಅಥವಾ ಶ್ರೇಯಸ್ಕರವಾದ ಅಥವಾ ಪವಿತ್ರವಾದ ಧರ್ಮ ಬೇರೆ ಯಾವುದಿದೆ? ಭಾರತದ ಹಿತಕ್ಕಾಗಿ ಶ್ರಮಿಸುವುದೆಂದರೆ, ನಮ್ಮ ಜನ್ಮಭೂಮಿಗಾಗಿ, ನಮ್ಮ ತಾತ ಮುತ್ತಾತಂದಿರ ಭೂಮಿಗಾಗಿ, ನಮ್ಮ ಮಕ್ಕಳು ಮೊಮ್ಮಕ್ಕಳ ಭೂಮಿಗಾಗಿ ಶ್ರಮಪಡುವುದೇ ಅಲ್ಲವೆ?'' ಎಂಬ ಮಾತು ಇಂದಿಗೂ ಪ್ರಸ್ತುತವೆನಿಸುತ್ತದೆ. ಗೋಖಲೆಯವರ ಜೀವನ ಸಾಧನೆಯನ್ನು ಇಂದು ಪಠ್ಯಕ್ರಮವಾಗಿ ನಾವೆಲ್ಲ ಓದುತ್ತೇವೆ ಆದರೆ ಅವರ ಆದರ್ಶ ಮತ್ತು ಪ್ರಮಾಣಿಕೆತಯನ್ನು ಮಾತ್ರ ನಾವು ಮರೆಯುತ್ತಿದ್ದೇವೆಯನಿಸುತ್ತದೆ ಒಮ್ಮೆ ಯೋಚಿಸಿ ನೋಡಿ.