ಇತ್ತೀಚೆಗೆ ನಾವೆಲ್ಲ ಡಾ.ಅಂಬೇಡ್ಕರ್ ಅವರ 125ನೇ ಜನ್ಮದಿನಾಚಣೆಯನ್ನು ಆಚರಿಸಿದೇವು. ಈ ಆಚರಣೆಗಳಲ್ಲಿ ದಲಿತರಿಗಿಂತ ಹೆಚ್ಚು ದಲಿತೇತರರ ರಾಜಕೀಯ ಪುಡಾರಿಗಳೆ ಹೆಚ್ಚು ದಲಿತ ಮತ್ತು ಅಂಬೇಡ್ಕರ್ರ ಬಗ್ಗೆ ಮಾತನಾಡಿದ್ದು ಗಮನಿಸಬೇಕಾದ ವಿಷಯವಾಗಿದೆ. ಈ ಎಲ್ಲಾ ಆಚರಣೆಗಳಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ರನ್ನು ದಲಿತರ ಪ್ರತಿನಿಧಿ, ಆಶಾಕಿರಣ, ದಲಿತರಿಗೆ ಮಾತ್ರ ಅವಕಾಶಗಳನ್ನು ಕೊಟ್ಟರು, ಸಂವಿಧಾನ ದಲಿತರಿಗೆ ಅವರ ಏಳ್ಗೆಯಾಗಿದೆ ಎಂಬ ಕೂಗು ಕೇಳಿಬಂತು. ಈ ವಿಷಯದ ಜಾಡು ಹಿಡಿದು ಹೊರಟರೆ ನಮಗೆ ಅರ್ಥವಾಗುತ್ತದೆ ನಿಜವಾದ ಅಂಬೇಡ್ಕರ್ ಬರಿ ದಲಿತ ಕುಲದ ಪರವಾಗಿದ್ದರೆ ಎಂಬುವುದು.
ಈ ದೇಶದಲ್ಲಿ ರಾಜಪ್ರಭುತ್ವ ಪ್ರಮುಖವಾಗಿತ್ತು. ಅಪ್ಪ ರಾಜ ಸತ್ತರೆ ತನ್ನ ಮಗನೆ ಮುಂದಿನ ರಾಜನೆಂದು ನಿರ್ಧರಿತವಾಗಿತ್ತು. ಆಳುವವನು ಆಡಳಿತ ಮಾಡುತ್ತಿದ್ದನು. ಅರಸನಾಗಿ ಮೆರೆಯುತ್ತಿದ್ದನು. ಆಳಾಗಿ ದುಡಿಯುವವನ ಮಗ ಮುಂದೆ ಆಳಾಗಿಯೆ ಮುಂದುವರೆಯಬೇಕಿತ್ತು. ರಾಜನ ನಿರ್ಧಾರವೆ ಅಂತಿಮವಾಗಿತ್ತು. ಬಡವರು ಚಿಕ್ಕ ತಪ್ಪು ಮಾಡಿದರೆ ದೊಡ್ಡ ಶಿಕ್ಷೆಯಿತ್ತು, ಶ್ರೀಮಂತರು ಎಂತಹ ದೊಡ್ಡ ತಪ್ಪು ಮಾಡಿದರು ಶಿಕ್ಷೆ ಮಾಫಿ ಮಾಡಲಾಗುತಿತ್ತು. ಇಂತಹ ವಾತಾವರಣವನ್ನು ಕುಲಂಕುಶವಾಗಿ ಗಮನಿಸಿದ ಡಾ. ಅಂಬೇಡ್ಕರ್ ಪ್ರಜಾಪ್ರಭುತ್ವ ಈ ದೇಶದಲ್ಲಿ ನೆಲಸಲು ಕಾರಣರಾದರು. ಈ ಪ್ರಜಾಪ್ರಭುತ್ವದ ತತ್ವ ಕೇವಲ ದಲಿತರಿಗೆ ಮೀಸಲಿದೆಯೆ ಇಲ್ಲಾ ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೆ ಪ್ರಜಾಪ್ರಭುತ್ವವಿದೆ. ತನ್ನದೇ ಆದ ಹಕ್ಕು ಕರ್ತವ್ಯಗಳಿವೆ ಹೀಗಾದರೆ ಅಂಬೇಡ್ಕರ್ ದಲಿತರಿಗೆ ಮಾತ್ರ ಹೇಗೆ ಸೀಮಿತ ಮಾಡುತ್ತೀರಿ.
ಭಾರತದಲ್ಲಿ ಸಂವಿಧಾನಕ್ಕಿಂತ ಮುಂಚೆ ಓಟು ಹಾಕುವ ಪದ್ಧತಿಯಲ್ಲಿ ಭಾರಿ ಅನ್ಯಾಯವಿತ್ತು. ಭೂಮಿವುಳ್ಳವರು, ಸಮಾಜದ ಮೇಲ್ವರ್ಗದವರು, ಮೇಲುಜಾತಿಯವರು ಮತ್ತು ಪುರುಷರು ಮಾತ್ರ ಮತ ಹಾಕುವ ಪದ್ಧತಿಯಿತ್ತು. ಈ ಪದ್ಧತಿಯ ವಿರುದ್ಧ ಧ್ವನಿಯತ್ತುವುದರ ಜೊತೆಗೆ ಈ ಧ್ವನಿಗೆ ಪ್ರೇರಕ ಶಕ್ತಿಯಾಗಿ ಬೆಳೆದರು ಅಂಬೇಡ್ಕರ್. ಪಾರ್ಲೇಮೆಂಟಿನಂತಹಲ್ಲಿ ಮೊದಲಬಾರಿಗೆ ಸಮಾನತೆಯ ಬಗ್ಗೆ ಮಾತನಾಡಿದ್ದು ಬರಿ ಒಂದು ಕುಲಕ್ಕೆ ಮಾತ್ರವಲ್ಲ, ಇಡಿ ಸಮುದಾಯದ ಅಭಿವೃದ್ಧಿಗಾಗಿ ದುಡಿದವರು ಅಂಬೇಡ್ಕರ್ ಅದರ ಫಲವಾಗಿಯೆ ಈ ದೇಶದಲ್ಲಿ ಇವತ್ತು ಮತ ಹಾಕುವ ವಿಧಾನ ಜಾರಿಯಾಯಿತು. ಇಲ್ಲಿ ದೇಶದಲ್ಲಿರುವ ಯಾವುದೇ ವ್ಯಕ್ತಿಯ ಮತಕ್ಕೆ ಒಂದೆ ಬೆಲೆಯಿದೆ. ಇವತ್ತು ಮೋದಿ ಹಾಕಿದರು ಅದೆ ಬೆಲೆಯಿದೆ ನಮ್ಮ ಓಣಿಯ ಕಲ್ಲಪ್ಪ ಮಲ್ಲಪ್ಪನ ಓಟಿಗೂ ಅದೇ ಬೆಲೆಯಿದೆ. ಮುಖ್ಯವಾಗಿ ಮಹಿಳೆಯರು ಕೂಡ ಪ್ರಜಾಪ್ರಭುತ್ವದ ಹಕ್ಕು ಪಡೆದಿದ್ದು ಈ ಸಂದರ್ಭದಲ್ಲಿಯೆ ಎಂಬುವುದು ಅನೇಕರಿಗೆ ಅರಿವಿಲ್ಲ. ಇವತ್ತು ಹುಚ್ಚನಲ್ಲದ ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬ ಪ್ರಜೆ 18 ವರ್ಷ ವಯಸ್ಸಿನ ಎಲ್ಲರು ಮತ ಹಾಕುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿ ತಮಗೆ ಬೇಕಾದ ನಾಯಕನನ್ನು ಆರಿಸುತ್ತಾರೆ ಅದು ಹೇಗೆ ಅಂಬೇಡ್ಕರ್ ದಲಿತರಿಗೆ ಮಾತ್ರ ಸೀಮಿತ ಮಾಡುತ್ತೀರಿ.
ಡಾ.ಅಂಬೇಡ್ಕರ್ ಮೊಟ್ಟ ಮೊದಲಬಾರಿಗೆ ಮಹಿಳೆಗೆ ಆಸ್ತಿಯಲ್ಲಿ ಪಾಲು ಕೊಡಬೇಕು ಎಂಬ ವಾದ ಮಂಡನೆ ಮಾಡಿದವರು. ಹಿಂದು ಕೋಡ್ ಬಿಲ್ ಸರಕಾರ ಒಪ್ಪದಿದ್ದಾಗ ತಮ್ಮ ಅಧಿಕಾರವನ್ನೆ ತ್ಯಾಗ ಮಾಡಿದವರು. ಇವತ್ತಿನ ಮಹಿಳೆಯ ಈ ಮುಖ್ಯವಾಹಿನಿಗೆ ಮೂಲಕಾರಣ ಡಾ.ಅಂಬೇಡ್ಕರ್ ಅವರು ಅದು ಹೇಗೆ ಅವರು ದಲಿತರಿಗೆ ಮಾತ್ರ ಸೀಮಿತ ಮಾಡುವುದು. ಈ ದೇಶದ ನ್ಯಾಯ ಎಲ್ಲರಿಗೂ ಒಂದೆ ಮಾಡಿದವರು. ಅನ್ಯಾಯ ವೆಸಗಿದ ಮೇಲ್ಜಾತಿ ಅಥವಾ ಕೀಳುಜಾತಿ ಯಾರೆ ಇರಲಿ ನ್ಯಾಯ ಮಾತ್ರ ಎಲ್ಲರಿಗೂ ಒಂದೆ ಎಂಬ ಮಾತು ಹೇಳಿದವರು ಕೃತಿಯಲ್ಲಿ ಜಾರಿಗೆ ತಂದವರು. ಅನ್ಯಾಯ ಅಕ್ರಮಗಳನ್ನು ತಡೆಯುವಲ್ಲಿ ಕಠಿಣ ಕಾನೂನುಗಳನ್ನು ರೂಪಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಆದರೆ ನಾವು ಮಾತ್ರ ಅವರನ್ನು ದಲಿತರ ಪರವೆಂದು ನಂಬಿದ್ದೇವೆ.
ಬಸವಣ್ಣನನ್ನು ಲಿಂಗಾಯತರ ಓಣಿಯಿಂದ, ಅಂಬೇಡ್ಕರ್ರನ್ನು ದಲಿತರ ಓಣಿಯಿಂದ ಹೀಗೆ ಎಲ್ಲಾ ನಾಯಕರನ್ನು ಸೀಮಿತಗೊಳಿಸುವ ಪರದಿಯಿಂದ ಮುಕ್ತಗೊಳಿಸಬೇಕಿದೆ. ಅವರೆಲ್ಲ ಇಡಿ ಮನುಕುಲಕ್ಕೆ ಒಳಿತನ್ನು ಮಾಡಿದ್ದಾರೆಯಂಬ ಸತ್ಯ ಭಾರತೀಯರೆಲ್ಲ ಅರೆಯಬೇಕಿದೆ. ಅವರ ಆದರ್ಶಗಳನ್ನು ಅನುಪಾಲನೆ ಮಾಡಬೇಕಿದೆ.