ಇದು ತಾವು ಇತ್ತೀಚೆಗೆ ಮುಖ್ಯಮಂತ್ರಿಯವರಿಗೆ ಮಾಡಿರುವ ಆಕ್ರೋಶದ ನಮಸ್ಕಾರಕ್ಕೆ ಪ್ರತಿಯಾಗಿ. ಹೌದು ನಿಮ್ಮ ಆಕ್ರೋಶದ ನಮಸ್ಕಾರ ನನಗೆ ಬಹಳ ಇಷ್ಟವಾಯಿತು. ಸಾಮಾಜಿಕ ಜಾಲಾತಾಣದಲ್ಲಿ ಹರೆದಾಡಿದ ನಿಮ್ಮ ನಮಸ್ಕಾರಗಳು ಅದರಲ್ಲಿನ ನಿಮ್ಮ ಸಾಮಾಜಿಕ ಕಳಕಳಿ ಕೇಳಿ ಬಹಳ ಸಂತೋಷವಾಯಿತು. ನೀವು ಉಲ್ಲೇಖ ಮಾಡಿರುವ ಎಲ್ಲರೂ ನಮ್ಮ ಬಂಧುಗಳೆ. ಅವರೆಲ್ಲರೂ ಮನುಷ್ಯ ಜಾತಿಗೆ ಸೇರಿದವರೆ ಎಂದು ಬಲವಾಗಿ ನಂಬಿದ್ದೇನೆ. ಅವರ ಸಾವು ನಾಡಿಗೆ ತುಂಬಲಾಗದ ನಷ್ಟ ಎನ್ನುವುದು ಸತ್ಯವಾಗಿದೆ.
ಇದೇ ಸಮಯದಲ್ಲಿ ನನ್ನ ಪುಟ್ಟ ಕಂದ ದಾನಮ್ಮಳ ಸಾವು ನಿಮಗೆ ಕಾಣಿಸಲಿಲ್ಲವೆ? ನಿಮಗೆ ನೆನಪಾಗಲಿಲ್ಲವೆ? ನೆನಪಾದರೂ ಸಣ್ಣ ಮಗುವೆಂದು ಓಟು ಹಾಕಲು ಬರುವುದಿಲ್ಲವೆಂದು ಪರಿಗಣಿಸಿ ನೆಗಲೆಕ್ಟ ಮಾಡಿದಿರಾ? ನನಗೆ ತಿಳಿಯಲೇಯಿಲ್ಲ.
ಈ ಪ್ರಪಂಚವನ್ನು ತಿಳಿದುಕೊಳ್ಳುವ ಮೊದಲೆ ನನ್ನ ಕಂದ ಇಹ ಲೋಕ ಬಿಟ್ಟು ಹೊರಹಾಕಿದರಲ್ಲ ಆ ಪಾಪಿಗಳ ಬಗ್ಗೆ ನಿಮಗೆ ಆಕ್ರೋಶ ಬರಲಿಲ್ಲವೆ? ಮಗು ಹೆತ್ತವರ ನೋವು ನಿಮಗೆ ಕಾಣಿಸಲಿಲ್ಲವೆ? ಕಂದಮ್ಮಳ ನೋವಿನ ಧ್ವನಿ ನಿಮಗೆ ರಾಜಕೀಯದ ಮೇಲಾಟದೊಳಗೆ ಮುಳಗಿ ಹೋಯಿತೆ? ಏಕೆ ಹೀಗಾಯಿತು ವಾಗ್ಮಿಗಳೆ?
ನಾನು ಇಲ್ಲಿ ಜಾತಿಗಳಾಚೆಗೆ ಮನುಷ್ಯ ಬದುಕಿನ ಬೆಲೆಯ ಬಗ್ಗೆ ಮಾತನಾಡುತ್ತಿರುವೆ. ಈ ನಾಡಿನ ನಿರ್ಭಯ ಮತ್ತು ದಾನಮ್ಮನಂತಹ ಹಸುಳೆಗಳ ಸಾವುಗಳಾದಾಗ ನೀವೇಕೆ? ಸುಮ್ಮನಿದ್ದಿರಿ. ಹಿಂದೂ ಧರ್ಮದ ಯುವಕರು ಮಾತ್ರ ನಿಮಗೆ ಪ್ರಿಯರೆ ಉಳಿದವರ ಹೆಣಗಳು ಕಾಲ ಕಸವಾಗುತ್ತವೆಯೆ? ನಿಮಗೆ ಕಾಣುವುದಿಲ್ಲವೆ? ಕೂಸು ಕಂದಮ್ಮಗಳ ಸಾವಿನ ಬಗ್ಗೆ ಯಾಕೆ ನಿಮಗೆ ಆಕ್ರೋಶ ಬರುವುದಿಲ್ಲ ಎಂಬ ಸರಳ ಆದರೆ ನಿಗೂಢ ಪ್ರಶ್ನೆಗೆ ಉತ್ತರ ಕೊಡುವಿರಾ?
ನೀವು ಹಿಂದು ಎನ್ನುವುದಕ್ಕೂ ಮೊದಲು ಒಬ್ಬ ಮನುಷ್ಯನಿದ್ದೀರಿ ಆ ದೃಷ್ಠಿಯಿಂದ ಈ ಪ್ರಶ್ನೆ ನಿಮಗೆ ಕೇಳಬೇಕಾಗಿದೆ. ನೀವು ಉಲ್ಲೇಖಿಸಿರುವ ಹೆಸರುಗಳಲ್ಲಿಯೂ ಧರ್ಮ ಜಾತಿಗಳನ್ನು ಎತ್ತಿ ಹಿಡಿಯುವ ಪ್ರಯತ್ನ ಮಾಡಿದರೆ ಹೇಗೆ? ಸಾವು ನೋವುಗಳಲ್ಲಿಯೂ ರಾಜಕೀಯ ಮಾಡಿದರೆ ನೀವು ನಂಬಿರುವ ಪರಮ ಹಂಸರು ಮೆಚ್ಚುವರೆ?
ನಿಮ್ಮ ಮಾತು ಸರ್ವಜನಾಂಗದ ಸಂತೋಷ ಕುರಿತು ಮಾತನಾಡದೇ ಒಂದು ಧರ್ಮ ಜಾತಿಗೆ ಸೀಮಿತ ಮಾಡಿ ಮಾತನಾಡಿದರೆ ನೀವೆ ಸ್ವತ: ತಾರತಮ್ಯವನ್ನು ಕಲಿಸಿಕೊಟ್ಟಂತೆ ಆಗುವುದಿಲ್ಲವೆ? ನೀವು ವಯಕ್ತಿಕವಾಗಿ ರಾಜಕೀಯ ಮಾಡಿದರೆ ನನ್ನದೇನು ತಕರಾರು ಇಲ್ಲಾ ಸಾವಿನಲ್ಲಿಯೂ ಧರ್ಮ, ಜಾತಿ, ರಾಜಕಾರಣ ಮಾಡಿದರೆ ನಿಮಗಿದು ಶೋಭೆ ತರುವುದಿಲ್ಲ ಎನ್ನುವುದು ನನ್ನ ಅಭಿಪ್ರಾಯವಷ್ಟೆ.
ಸಧ್ಯ ಭಾರತದಲ್ಲಿ ಮಕ್ಕಳ ಸಂಖ್ಯೆ ಕ್ಷೀಣವಾಗಿತ್ತಿದೆ. ಹಿಂದೆ ನಿರ್ಭಯ ಇದೀಗ ದಾನಮ್ಮ ಈ ಮಕ್ಕಳ ಸಾವಿನ ಬಗ್ಗೆ ನ್ಯಾಯ ಕೇಳುವಲ್ಲಿ ನಿಮ್ಮ ಧ್ವನಿ ಏಕೆ ಏಳುವುದಿಲ್ಲ. ಈ ನಾಡಿನಲ್ಲಿನ ಅನೇಕ ವ್ಯಕ್ತಿಗಳ ಬಗ್ಗೆ ಅತ್ಯಂತ ಕರಾರುವಕ್ಕಾಗಿ ಮಾತನಾಡುವ ನೀವು ನನ್ನ ಕೂಸು ಕಂದಯ್ಯನ ಸಾವಿನ ಬಗ್ಗೆ ಮುಖ್ಯಮಂತ್ರಿಯವರ ಹತ್ತಿರ ಏಕೆ ಮಾತನಾಡಲಿಲ್ಲ?
ಈ ನಾಡಿನಲ್ಲಿ ಒಂದಿಷ್ಟು ಯುವಕರ ದಂಡು ಕಟ್ಟಿಕೊಂಡು ಅವರ ಮೂಲಕ ನಾಡನ್ನು ಕಟ್ಟುತ್ತಿರುವ ನೀವು ನಿಮ್ಮ ಕೆಲಸ ಶ್ಲಾಘನೀಯವಾಗಿದೆ. ಎಲ್ಲೋ ಒಂದುಕಡೆ ನೀವು ಕೂಡ ಮುಂದಿನ ಚುನಾವಣೆಯ ಬಿಜೆಪಿ ಅಭ್ಯರ್ಥಿ ಎಂಬುವುದು ಸ್ಪಷ್ಟ ಮಾಡುತ್ತಿದ್ದೀರಿ ಅದೂ ನಿಮ್ಮ ವಯಕ್ತಿಕ ಸ್ವಾತಂತ್ರ ಮುಂದುವರೆಯಿರಿ ಆದರೆ ಸಾಮಾಜಿಕ ಕಳಕಳಿ ಎನ್ನುವುದು ಬಂದಾಗ ಇತ್ತೀಚೆಗೆ ನಡೆದ ಮಕ್ಕಳ ಸಾವಿನ ಬಗ್ಗೆ ನಿಮಗೆ ಆಕ್ರೋಶವಿಲ್ಲದ ಧ್ವನಿ ಕೇಳಿ ಈ ಪ್ರಶ್ನೆಗಳನ್ನು ಕೇಳಬೇಕಾಯಿತು.
ಈ ಪತ್ರದ ಮೂಲಕ ಇನ್ನೊಂದು ವಿಷಯ ನೆನಪಿಸಬೇಕಿದೆ. ಉತ್ತರ ಪ್ರದೇಶದ ಗೋರಖಪುರ ಬಿ.ಆರ್.ಡಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ 60ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದಾಗ ನಿಮ್ಮ ಆಕ್ರೋಶ ಎಲ್ಲಿ ಅಡಗಿತ್ತು? ಅಮಿತ್ ಷಾ ಅವರು “ಭಾರತದಂಥ ದೊಡ್ಡ ದೇಶದಲ್ಲಿ ಇಂಥ ಘಟನೆಗಳಾಗುತ್ತವೆ” ಎಂದು ಉಡಾಫೆ ಮಾತನಾಡಿದ್ದು ನೀವು ಗಮನಿಸಿಲಿಲ್ಲವೆ? ಬಿಆರ್ಡಿ ಆಸ್ಪತ್ರೆಗೆ ಖಾಸಗಿ ಕಂಪನಿಯೊಂದು ಗುತ್ತಿಗೆ ಆಧಾರದ ಮೇಲೆ ಆಕ್ಸಿಜನ್ ಸಿಲಿಂಡರ್ನ್ನು ಒದಗಿಸುತ್ತಿತ್ತು. ಈ ಮಧ್ಯೆ ಸುಮಾರು 60 ಲಕ್ಷ ರೂ.ಬಾಕಿ ಮೊತ್ತವನ್ನು ಪಾವತಿಸದೇ ಇದ್ದಿದ್ದಕ್ಕೆ ಆಕ್ಸಿಜನ್ ಪೂರೈಕೆಯಾಗದೇ ಮಕ್ಕಳು ಸಾವನ್ನಪ್ಪಿದ್ದಾರೆಂದು ಶಂಕಿಸಲಾಗಿತ್ತು. ಈ ಉತ್ತರ ಪ್ರದೇಶದ ರಾಜಾಕಾರಣಿಗಳು ಹಾಗೂ ಅಲ್ಲಿನ ಮುಖ್ಯಮಂತ್ರಿಯ ಮೇಲೆ ನಿಮಗೇಕೆ ಆಕ್ರೋಶ ಬರಲಿಲ್ಲ? ಭಾರತದ ಉತ್ತರ ಪ್ರದೇಶದಲ್ಲಿ ಮಕ್ಕಳ ನೆತ್ತರು ಹರೆದು ಧರ್ಮವೆಂಬ ಕೋಡಿ ತುಂಬಿ ಹರೆಯಿತು ನಿಮ್ಮವರೆ ಆದ ಆದಿತ್ಯನಾಥ ಅವರಿಗೆ ಆಕ್ರೋಶದ ನಮಸ್ಕಾರ ನೀವೆಕೆ? ಕೇಳಲಿಲ್ಲ? ಹೇಳಲಿಲ್ಲ?
ಈ ಪ್ರಶ್ನೆಗಳ ಮೂಲಕ ನಿಮಗನಿಸಬಹುದು ನಾನು ಕಾಂಗ್ರೆಸ್ ಹಾಗೂ ಮುಖ್ಯಮಂತ್ರಿಯವರ ಪರವಾಗಿ ಮಾತನಾಡುತ್ತಿರುವೆ ಎಂದು ಆದರೆ ಅದು ತಪ್ಪು. ನನ್ನದು ಏನೆಯಿದ್ದರು ಮನುಷ್ಯರ ಪರವಾದ ನಿಲುವು ಪಕ್ಷ, ಜಾತಿ, ಪಂಗಡಗಳಾಚೆಗೆ ಯೋಚಿಸಿ ಬರೆದಿರುವೆ. ನಿಮ್ಮ ಆಕ್ರೋಶದಲ್ಲಿ ಮಕ್ಕಳ ಸಾವಿನ ಬಗ್ಗೆ ಉಲ್ಲೇಖಿಸಬೇಕಿತ್ತು ಎಂಬುವುದಷ್ಟೆ ನನ್ನ ಅಭಿಪ್ರಾಯ. ನೀವು ಉಲ್ಲೇಖ ಮಾಡಿರುವ ಸಾವುಗಳ ಹಿಂದೆ ಮುಂದೆಯೆ ಈ ಮಕ್ಕಳನ್ನು ಅಮಾನುಷ್ಯವಾಗಿಯೇ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ ಎಂಬ ಸುದ್ದಿಗಳು ಇನ್ನು ತನಿಖೆಗಳು ಚಾಲ್ತಿಯಲ್ಲಿವೆ. ಮಕ್ಕಳ ಕಳೆದುಕೊಂಡ ತಂದೆ ತಾಯಿಗಳ ದು:ಖವು ಇನ್ನೂ ಆರಿಲ್ಲ. ನೀವು ಹೇಳಿದಂತೆ ಸಿದ್ದರಾಮಯ್ಯನವರಿಗೆ ತರುಣ ಮಕ್ಕಳ ತಾಯಂದಿರ ಜೊತೆಗೆ ಎಳೆಯ ಮಕ್ಕಳನ್ನು ಕಳೆದುಕೊಂಡ ಪಾಲಕರ ಶಾಪವೂ ತಟ್ಟಲಿದೆ.
ಸಂಘ ಮತ್ತು ಧರ್ಮದ ಹೆಸರಿನಲ್ಲಿ ಅಮಾಯಕರ ಜೀವಗಳ ಜೊತೆಗೆ ಆಟವಾಡುತ್ತಿರುವ ಕೋಮುವಾದಿಗಳಿಗೂ ಶಾಪ ತಟ್ಟಲಿದೆ. ದಿನಬೆಳಗಾದರೆ ಮನುಷ್ಯ ಜೀವಗಳ ಜೊತೆಗೆ ಗೋಲಿ ಆಟ ವಾಡುತ್ತಿರುವ ಕತ್ತಿ ಮಸೆಯುತ್ತಿರುವ ಸಂಘಟನೆಗಳ ಪದಾಧಿಕಾರಿಗಳಿಗೂ ಶಾಪತಟ್ಟಲಿದೆ. ಇನ್ನೂ ಧರ್ಮ, ಜಾತಿ, ಮತ, ಪಕ್ಷದ ಅಮಲಿನೊಳಗೆ ಕೂಸು ಕಂದಮ್ಮಳ ಸಾವನ್ನು ಉಲ್ಲೇಖಿಸದ ನಿಮಗೂ ಶಾಪ ತಟ್ಟುವುದಿಲ್ಲವೆ ಒಮ್ಮೆ ಯೋಚಿಸಿ.
ಮತ್ತೊಮ್ಮೆ ನಿಮಗೆ ಅರಿವಿನ ನಮಸ್ಕಾರಗಳು.