ನಿನ್ನ ನೆನಪು ಸದಾ ನಮ್ಮ ಮನದಲ್ಲಿ, ನೀನು ಮಗುವಾಗಿ ಬರುವೆಯಾ? ಮತ್ತೆ ಈ ನಾಡಿನಲ್ಲಿ ಹುಟ್ಟುವೆಯಾ? ಉನ್ನತ ಹುದ್ದೆಯೆಂಬ ಹೂವಿನ ಹಾರದಲ್ಲಿ ಮತ್ತೊಮ್ಮೆ ಕಂಗೊಳಿಸುವೆಯಾ? ಊರ/ನಾಡಿನ ಜನರ ಕಣ್ಣೀರಿನ ಕಲರವದಲ್ಲಿ, ಬಡವರ ದು:ಖದಲ್ಲಿ ನೆರವಾಗುವೆಯಾ? ಕೇರಿಯ ವಾರಿಗೆಯ ಗೆಳೆಯರ ಒಡಲೆಂಬ ಗಡಿದಾವರೆಯಲ್ಲಿ ತುಸು ಕಮಲವಾಗಿ ಮತ್ತೆ ಅರಳುವೆಯಾ? ಸಮಾಜವನ್ನು ಕೆಡಿಸುವವರಿಗೆ ಕ್ರಾಂತಿಯಾಗಿ ಹುಟ್ಟುವೆಯಾ? ಸಮಾಜವನ್ನು ಸುಂದರಗೊಳಿಸುವ ಮೂಡಿದ ಹೂವೊಂದು, ಕಡಿದು ಹಾಕಿದಂತಾಯಿತು, ಎಳೆಯ ಕ್ರಾಂತಿಯೆಂಬ ಕಿಡಿಯೊಂದು ಕುಡುಯೊಡೆಯುವ ಮುನ್ನವೇ ಚಿವುಟಿದಂದಾಯಿತು, ಕುಟಿಲ ಕಪಟಿಗಳ ನಾಡಿನೊಳು, ಸೀಳು ಸಿಂಹವೊಂದು, ಅಸಭ್ಯರ ಕೋಟೆ ಛಿದ್ರಗೊಳಿಸುವ ಮೊದಲೇ, ಶಿವಪೂರದÀ ಶಿವನಿಗೆ ಪ್ರಿಯವಾದಂತಾಯಿತು. ನಾಡಿನಲ್ಲಿ ಪ್ರಮಾಣಿಕತೆಯೆಂಬ ಕುದುರೆಯನೇರಿದವರಿಗೆ, ಕಷ್ಟ, ನಷ್ಟಗಳೆಂಬ ಸಾಗರ ಅಪ್ಪಳಿಸಿ ನೆಲಸಮಗೊಳಿಸುದೆಂಬ, ಸತ್ಯ ಮತ್ತೆ ಮತ್ತೆ ಚೀರಾಡಿ ಹೇಳಿದಂದಾಯಿತೆ.
“ಆಡಿ ಬಾ ನನಕಂದ ಅಂಗಾಲ ತೊಳದೇನ” ಎಂಬ ನುಡಿಯೊಂದಿಗೆ ತಾಯಿ ತನ್ನ ಮಗನನ್ನು ಅಂಗಳದೊಳಗೆ ಬಿಟ್ಟರೆ, ಅದು ಕೂಡ ವಿಷವಾಗುವ ಕಾಲವಾಗಿದೆ. ತಾಯಿ ಬೆಳೆಸಿ ಈ ದೇಶ ಸೇವೆಯನ್ನು ನಿಷ್ಠೆಯಿಂದ ಮಾಡು ಎನ್ನುವ ಆಶಿರ್ವಾದ ನೀಡದಂತಹ ವಿದ್ಯಾಮಾನಗಳು ಸದ್ಯ ರಾಜ್ಯದಲ್ಲಿ ಘಟಿಸುತ್ತಿವೆ. ಮಕ್ಕಳೆಲ್ಲ ಓದಿ ಐಎಎಸ್ ಆಗಲಿ ಎಂಬ ಆಸೆಯನ್ನು ಪಾಲಕರು ಬಿಡಬೇಕು ಎಂಬ ಸಂದೇಶ ಈಗಿನ ಎಚ್1ಎನ್1ಕ್ಕಿಂತಲೂ ಭಯಾನಕ ರೋಗವಾಗಿರುವ ರಾಜಕೀಯ ಕಾಣುತ್ತಿದೆ. ತಮ್ಮ ಬೆಳೆ ಬೇಯಿಸಿಕೊಳ್ಳಲು ಅಧಿಕಾರವೆಂಬ ಆನೆ ಉಳಿಸಿಕೊಳ್ಳಲು ರಾಜಕೀಯ ಮಾಡುತ್ತಿದ್ದಾರೆ. ಕುತಂತ್ರ ಬುದ್ಧಿಯ ರಾಜಕಾರಣಿಗಳು ಮಾಡುವ ಕ್ಷುಲ್ಲಕ ಕಾರಣಕ್ಕೆ ಪ್ರಮಾಣಿಕರು ತಮ್ಮ ಜೀವನವೇ ದಂಡ ತೆರಬೇಕಾದಂತಾಗಿದೆ. ಅನ್ಯಾಯದ ವಿರುದ್ಧ ಸಿಡಿದೆದ್ದವರನ್ನು ಕೊಲ್ಲಲಾಗುವುದು ಎಂಬ ಸತ್ಯ ಸಧ್ಯ ಹೊರಬಂದಂತಾಗಿದೆ.
ಈ ನಾಡಿನಲ್ಲಿ ವೀರರು, ಶೂರರು ಆಳಿರುವ ಇತಿಹಾಸವಿದೆ ಆದರೆ ಇದೀಗ ಶೆಂಡರು, ಭಂಡರು, ಪುಂಡಾಟಿಕೆಯ, ತುಂಡು ಬುದ್ದಿಯ ರಾಜಕಾರಣಿಗಳು, ಲ್ಯಾಂಡ್ ಮಾಫಿಯಾಗಳು, ತುಂಬಿಕೊಂಡಿರುವ ನಾಡಾಗಿದೆ. ಗಂಡೆದೆಯಾ ಗುಂಡಿಗೆಯಿರುವ ಪೋಲಿಸ್ ಅಧಿಕಾರಿಗಳು ಐಎಎಸ್ ಅಧಿಕಾರಿಗಳು ಇವರ ಮುಂದೆ ತಮ್ಮ ಪವಿತ್ರ ಜೀವನವನ್ನು ಕಳೆದುಕೊಂಡು ಅವರ ಕುಟುಂಬ ಬೀದಿಪಾಲಾಗುವಂತಾಗಿದೆ. ಓದಿ ಪಾಸಾಗುವಾಗ ಅದೆಷ್ಟೊ ಕಷ್ಟಗಳನ್ನು ಅನುಭವಿಸುತ್ತಿದ್ದವರು ಪಾಸಾಗಿ ಉನ್ನತ ಹುದ್ದೆಯಲ್ಲಿದ್ದಾಗಲು ಅದಕ್ಕಿಂತ ಹೆಚ್ಚಿನ ಕಷ್ಟಗಳನ್ನು ದೌರ್ಜನ್ಯಗಳನ್ನು ಅನುಭವಿಸಬೇಕಾಗಿದೆ. ಸತ್ಯದ ಪರವಾಗಿ ಮಾತನಾಡುವ, ಕೃತಿ ಮಾಡುವ ಜನರು ಇಲ್ಲವಾಗಿದ್ದಾರೆ. ರಾಜಕೀಯದಲ್ಲಂತು ಕೊಳ್ಳೆ ಹೊಡೆಯುವ ಖದೀಮರ ಸಂಖ್ಯೆ ದಿನೆ ದಿನೆ ಹೆಚ್ಚಾಗುತ್ತದೆ. ಬಡವರ ಪಾಡು ಕೇಳುವ ರಾಜಕೀಯ ಜನರು ಇಲ್ಲವಾಗುತ್ತಿದ್ದಾರೆ. ಎಲ್ಲರೂ ದೇಶ ಲೂಟಿ ಮಾಡುವ ಲೆಕ್ಕಾಚಾರದಲ್ಲಿ ಬಿಜಿಯಾಗಿದ್ದಾರೆ. ಕೋಟಿ ಕೊಳ್ಳೆ ಹೊಡೆದು, ಸ್ವೀಸ್ ಬ್ಯಾಂಕ್ ತುಂಬುವ ಕೆಲಸದಲ್ಲಿ ನಿರತರಾಗಿದ್ದಾರೆ. ಇದಕ್ಕೆ ವಿರುದ್ಧವಾಗಿ ಮಾತನಾಡಿದವರ ಕತ್ತು ಕೊಯ್ಯೂವ ರಾಕ್ಷಸ ಬುದ್ಧಿ ಬೆಳೆಸಕೊಂಡಿದ್ದಾರೆ. ಈ ರಾಕ್ಷಸರು ಇದೀಗ ರವಿಯೆಂಬ ಪ್ರಮಾಣಿಕ ಅಧಿಕಾರಿಯನ್ನು ಬುಡಸಮೇತ ಕಿತ್ತೊಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ಕೆಟ್ಟ ಕೆಲಸಗಳಿಗೆ ಅಡ್ಡಗಾಲಾಗಿರುವವರನ್ನು ಅನುಮಾನವಿಲ್ಲದೇ ಯಾರಿಗೂ ಸಂಶಯ ಮೂಡದ ಹಾಗೆ ಕೊಲ್ಲುವ ವಿದ್ಯೆ ಕರಗತ ಮಾಡಿಕೊಂಡಿದ್ದಾರೆ.
ಕರುನಾಡಿನೊಳಗಿನ ನಡೆದ ಈ ಸಾವು ಇದೀಗ ಪ್ರಪಂಚದ ಗಮನ ಸೆಳೆದಿದೆ. ಇಡಿ ನಾಡಿನ ಜನತೆಯ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರಿದೆ. ಕನ್ನಡಿಗರ ಮೃದು ಹೃದಯವನ್ನು ಘಾಸಿಗೊಳಿಸಿದೆ. ಮನ ಕುಲುಕುವ ಸಾವು ಇದಾಗಿದೆ. ಕಷ್ಟದೊಳಗೆ ಓದಿಸಿದ ತಾಯಿಗೆ ಅವಳ ಮಡಿಲಿಗೆ ರಾಜಕಾರಣಿಗಳು ಅನ್ಯಾಯ ಮಾಡಿದಂತಾಗಿದೆ. ಆ ಮಾಹಾ ತಾಯಿಯ ಒಡಲೊಳಗಿನ ಮಾತೃಭಕ್ತಿಯೆಂಬ ಅಗ್ನಿ ಅವರನ್ನು ಸುಡದೇ ಇರಲಾರದು. ಅವಳ ವೇಧನೆ ಅಫರಾಧಿಗಳನ್ನು ಕ್ಷಮಿಸಲಾರದು. ಹೆತ್ತ ಕರುಳನ್ನು ಕಿತ್ತುಕೊಂಡ ಅಪ್ರಮಾಣಿಕರಿಗೆ, ಆಂತರಿಕ ಆತಂಕವಾದಿಗಳಿಗೆ ಆ ಹೆತ್ತ ಕರುಳಿನ ಹಿಡಿ ಶಾಪ ತಾಕದೇಯಿರುವುದಿಲ್ಲ. ಗಂಡು ಮಕ್ಕಳನ್ನು ಹೆತ್ತು ದೇಶ ಸೇವೆಗೆಂದು ಅರ್ಪಸುವ ಪ್ರತಿ ಕನ್ನಡ ತಾಯಿಯ ಶಾಪ ಆ ಕಳ್ಳ ಖದೀಮರನ್ನು ಅವರ ಭವಿಷ್ಯವನ್ನು ಸುಟ್ಟು ಭಸ್ಮ ಮಾಡಲಿ, ಹೆತ್ತ ಒಡಲನ್ನು ದು:ಖವೆಂಬ ಸಾಗರದೊಳಗೆ ಮುಳಗಿಸಿದ ಆ ಪಾಪಿಗಳನ್ನು ಸತ್ಯವೆಂಬ ದೇವರು ನೋಡಿಕೊಳ್ಳಲಿ. ನಾಡನ್ನು ಕೊಳ್ಳೆ ಹೊಡೆಯುತ್ತಿರುವ ಕಳ್ಳರಿಗೆ ಎಚ್ಚರಿಕೆಯ ಘಂಟೆಯಾಗಲಿ ಎಂಬುವುದೇ ನನ್ನ ಆಶೆಯ.