ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಈ ಪ್ಲೇಹೋಮ್ಗಳು ಎಷ್ಟು ಸರಿಯನ್ನುವುದನ್ನು ಯೋಚಿಸಬೇಕಿದೆ. ಅಲ್ಲಿ ನಮ್ಮ ಮಕ್ಕಳಿಗೆ ಬೇಕಾದ ನಿಜವಾದ ತಾರ್ಕಿಕ ಶಕ್ತಿಯುಳ್ಳ ಶಿಕ್ಷಣ ದೊರೆಯುತ್ತದೆಯೆ ಎಂಬ ಪ್ರಶ್ನೆ ಕಾಡುತ್ತದೆ. ಮಕ್ಕಳನ್ನು ತಂದೆ ತಾಯಿಗಳು ಪ್ಲೇಹೋಮ್ಗಳಿಗೆ ಸೇರಿಸುವ ಮೊದಲ ಉದ್ದೇಶವೆಂದರೆ ಮಕ್ಕಳ ಕಿರಿಕಿರಿಯಿಂದ ಬಿಡುಗಡೆಯಾಗಬಯಸುವುದು. ಮೊದಲಾದರೆ ಜೊತೆಗೆ ಆಡಲು ಅಜ್ಜ ಅಜ್ಜಿ ಮತ್ತಿತರೆ ಸಂಬಂಧಿಗಳಿರುತ್ತಿದ್ದರು. ಆಡಲು ಅಕ್ಕಪಕ್ಕದ ಮನೆಯ ಗೆಳೆಯರಿರುತ್ತಿದ್ದರು. ಈಗ ತಂದೆ ತಾಯಿಗಳಿಬ್ಬರೂ ದುಡಿಯುತ್ತಿರುವುದರಿಂದ ಮಕ್ಕಳು ಒಂಟಿಯಾಗಿಬಿಡುತ್ತವೆ. ಚಿಕ್ಕಂದಿನಿಂದಲೂ ಈ ವಿಷಯ ಕಾಡುತ್ತಲೆ ಬೆಳೆಯುತ್ತಾರೆ.
ತಂದೆ ತಾಯಿಗಳು ಮಕ್ಕಳಿಗಾಗಿ ಸಾಕಷ್ಟು ಸಮಯ ಕೊಡಬೇಕು. ಮಕ್ಕಳಿಗಾಗಿಯೇ ಹಣ ಗಳಿಸಲು ಶ್ರಮ ಪಡುತ್ತಿದ್ದೇವೆ. ಮಕ್ಕಳಿಗೆ ಸಮಯ ಕೊಡಬೇಕಾದ ಅತೀ ಅವಶ್ಯಕತೆ ಇವತ್ತಿದೆ. ಬರೀ ಹಣದಿಂದ ಮಕ್ಕಳ ಭವಿಷ್ಯ ರೂಪುಗೊಳ್ಳುವುದಿಲ್ಲ. ರಜೆ ಬರುತ್ತಿದ್ದಂತೆ ಮಕ್ಕಳನ್ನು ಬೇಸಿಗೆ ಶಿಬಿರಕ್ಕೆ ಸೇರಿಸಲಾಗುತ್ತದೆ. ಶಿಬಿರಗಳು ಒಳ್ಳೆಯವೇ ಆದರೂ ಎರಡು ತಿಂಗಳ ಸಮಯಾವಕಾಶ ಮಕ್ಕಳನ್ನು ಸೋಮಾರಿಗಳಾಗಿಸಲು, ವಿದ್ಯೆಯಿಂದ ದೂರವಿರಿಸಲು ಸಾಕಷ್ಟು ಅವಕಾಶ ಕೊಡುತ್ತದೆ. ಈ ಕುರಿತು ನಾವು ಯೋಚಿಸುವುದಿಲ್ಲವೆಂದಲ್ಲ ನಾವು ಹೆಚ್ಚು ಸುತ್ತಮುತ್ತಲ ಪ್ರಪಂಚ ನೋಡಿ ನಿರ್ಧಾರ ಮಾಡುತ್ತೇವೆ. ನಮ್ಮ ಪಕ್ಕದ ಮನೆಯವರು ಎಷ್ಟು ಡೊನೆಷನ್ ಕೊಟ್ಟು ಯಾವ ಶಾಲೆಗೆ ಹಾಕಿದ್ದಾರೊ ಅವರಿಗಿಂತ ಹೆಚ್ಚು ಡೊನೆಷನ್ ಕೊಟ್ಟು ಶಾಲೆಗೆ ಹಾಕಬೇಕೆಂದು ಮಾತ್ರ ಯೋಚಿಸುತ್ತೇವೆ. ಮಗುವಿನ ದೃಷ್ಠಿಕೋನದಿಂದ ಯೋಚಿಸುವುದೆಯಿಲ್ಲ.
ಮಕ್ಕಳಿಗೆ ಮನೆಯಲ್ಲಿಯೆ ಪಾಠ ಹೇಳಿಕೊಡುವ ಪರಿಪಾಠವಿರಬೇಕು. ಮಗು ಮಲಗುವ ಮುಂಚೆ ಕಥೆ ಹೇಳಬೇಕು. ಸಾಮಾಜಿಕ ಧಾರ್ಮಿಕ ವಿಷಯಗಳನ್ನು ಮಾತನಾಡುವುದರಲ್ಲೋ ವ್ಯಯಿಸಬೇಕು. ಸಂಗೀತ ಕೇಳಿಸಬೇಕು. ಉತ್ತಮವಾದ ವಿಚಾರಗಳನ್ನು ತಿಳಿಸಿಹೇಳಬೇಕು. ಪ್ರಾಚೀನ ಉತ್ತಮವಾದ ಕಥೆಗಳಿಂದ ಮಕ್ಕಳಲ್ಲಿ ಧೈರ್ಯ ಮೂಡುತ್ತದೆ. ಹಗಲ ಹೊತ್ತಿನಲ್ಲಿ ಮಗು ಹೆಚ್ಚು ದೈಹಿಕ ಆಟಗಳನ್ನು ಹೊರಾಂಗಣ ಆಟಗಳಲ್ಲಿ ತೊಡಗಿಸಿಕೊಳ್ಳಬೇಕು. ಮಗುವು ದೈಹಿಕ ಆಟಗಳಲ್ಲಿ ತೊಡಗಿಕೊಂಡರೆ ದಣಿದು ಚೆನ್ನಾಗಿ ನಿದ್ದೆ ಮಾಡುತ್ತವೆ. ನಿದ್ದೆ ಮಗುವಿನ ದೈಹಿಕ ಬೆಳವಣಿಗೆ ಉತ್ತಮಗೊಳ್ಳುವಲ್ಲಿ ಮುಖ್ಯ ಪಾತ್ರ ನಿರ್ವಹಿಸುತ್ತದೆ.
ಮನೆಯಲ್ಲಿರುವವರೆಲ್ಲರೂ ನಿಮ್ಮ ಮಗುವಿನ ತುಂಟಾಟ,ಮುಗ್ಧತೆ, ಮುದ್ದಾದ ಮಾತುಗಳು ಕೊಡುವ ಖುಷಿಯನ್ನು ಅವರೊಂದಿಗೆ ಅನುಭವಿಸಬೇಕು. ಪ್ರಪಂಚದ ಯಾವ ವಸ್ತುವು ಈ ಸಂತೋಷ ಮತ್ತು ಸುಖವನ್ನು ಕೊಡುವುದಿಲ್ಲ. ಇವುಗಳನ್ನು ನೋಡಿ ಜೀವನದ ಸಂಪೂರ್ಣ ಆನಂದವನ್ನು ಪಡೆಯಬೇಕು.
ಮಕ್ಕಳ ಪೆÇೀಷಣೆಯನ್ನು ಹೊರೆಯೆಂಬಂತೆ ನೋಡದೇ ಆ ಮಗುವಿನ ಜೊತೆ ಆಟದಲ್ಲಿ ಕಳೆಯುವ ಸಮಯ ಕೊಡುವ ದೈವಿಕ ಆನಂದವನ್ನು ಅನುಭವಿವುವುದರಲ್ಲಿ ತಾಯ್ತನದ ಸಾರ್ಥಕ್ಯವಿದೆ ಎಂಬುದನ್ನು ಅರಿಯಬೇಕು.
ಇದೀಗ ಬೇಸಿಗೆ ಮಕ್ಕಳನ್ನು ಓದಿಗೆ ಹದಗೊಳಿಸಲು ಇದು ಸರಿಯಾದ ಸಮಯ. ಇದೊಂದು ಸಮಯದಲ್ಲಿ ಸರಿಯಾದ ಶಿಸ್ತನ್ನು ಮಕ್ಕಳಿಗೆ ರೂಢಿಸಿಬಿಟ್ಟರೆ ಕೆಲಸದ ಒತ್ತಡದಲ್ಲಿರುವ ಪಾಲಕರಿಗೆ ಯಾವುದೇ ತೊಂದರೆ ಕೊಡದೆ ಮಕ್ಕಳು ತಮ್ಮ ಓದಿನಲ್ಲಿ ಮುಂದುವರಿಯುತ್ತವೆ. ಮಕ್ಕಳು ಮೊದಮೊದಲು ಜೋರಾಗಿ ಓದುವಂತೆ ಪ್ರೇರೇಪಿಸಬೇಕು, ನಂತರ ಮನಸ್ಸಲ್ಲೇ ಓದಿಕೊಳ್ಳುವ ಅಭ್ಯಾಸ ಮಾಡಿಸಬೇಕು. ತಂದೆ ತಾಯಿಗಳಿಗೆ ಇಂತಹ ವಿಷಯ ಗೊತ್ತಿಲ್ಲ ಎಂಬುದು ಮಕ್ಕಳಿಗೆ ಗೊತ್ತಾಗುವ ಹಾಗೆ ನಡೆದುಕೊಳ್ಳಬಾರದು. ಮಕ್ಕಳು ತಮ್ಮ ಬಳಿ ಶಾಲೆಯ ಮತ್ತು ಮನೆಪಾಠದ ವಿಷಯಗಳನ್ನು ಸಾಧ್ಯವಾದಷ್ಟು ಹಂಚಿಕೊಳ್ಳುವಂತೆ ಹೇಳಬೇಕು. ಇದರಿಂದ ಮಕ್ಕಳು ಯಾವ ಕ್ಷೇತ್ರದಲ್ಲಿ ಹಿನ್ನಡೆಯನ್ನನುಭವಿಸುತ್ತಿದ್ದಾರೆ ಎಂದು ಗೊತ್ತಾಗುತ್ತದೆ. ಅಲ್ಲದೇ ಮಕ್ಕಳೊಡನೆ ಯಾವುದಾದರೂ ಅಹಿತಕರ ಘಟನೆ ನಡೆದರೆ ಸೂಕ್ತ ಕ್ರಮ ಕೈಗೊಳ್ಳಲು ಸಹಾಯವಾಗುತ್ತದೆ. ಹಾಗೆಯೇ ಮಕ್ಕಳಿಗೆ ತಮ್ಮ ಕಷ್ಟ ಕೇಳುವವರು ಈ ಜಗತ್ತಿನಲ್ಲಿ ಇದ್ದಾರೆ ಎಂಬ ಸುರಕ್ಷಿತ ಭಾವನೆಯೂ ಮೂಡುತ್ತದೆ. ಎಲ್ಲಾ ಮಕ್ಕಳೂ ಒಂದೇ ವೇಗದಲ್ಲಿ ಕಲಿಯುವುದಿಲ್ಲ. ಕಡಿಮೆ ವೇಗದಲ್ಲಿ ಕಲಿಯುವ ಮಕ್ಕಳ ತಂದೆತಾಯಿಗಳಿಗೆ ಹೆಚ್ಚು ತಾಳ್ಮೆ ಇರಬೇಕಾಗುತ್ತದೆ. ಅವರು ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯಬೇಕಾಗುತ್ತದೆ.
ನನ್ನ ಅಭಿಪ್ರಾಯದ ಪ್ರಕಾರ ತಂದೆ ತಾಯಿಗಳಿಬ್ಬರೂ ಮಗುವಿನೊಂದಿಗೆ ಕನಿಷ್ಠ ಮೂರರಿಂದ ನಾಲ್ಕು ವರ್ಷಗಳಾದರು ಮನೆಯಲ್ಲಿ ಸಮಯ ನೀಡಬೇಕು. ಮನೆಯ ಪಾಠವನ್ನು ಕಲಿಸಬೇಕು. ಸಂಬಂಧಗಳನ್ನು ತಿಳಿಸಿಕೊಡಬೇಕು. ನೆರೆಯವರೊಂದಿಗೆ ಬೆರೆಯುವ ಅವಕಾಶಗಳನ್ನು ಮಕ್ಕಳಿಗೆ ಕಲ್ಪಿಸಿಕೊಡಬೇಕು. ಹಳ್ಳಿಯ ವಾತಾವರಣದ ಪರಿಚಯ ಮಾಡಿಸಬೇಕು. ಗ್ರಾಮದಲ್ಲಿರುವ ನಿಮ್ಮ ಪಾಲಕರೊಂದಿಗೆ ಅಜ್ಜಿ ತಾತನೊಂದಿಗೆ ಕಾಲ ಕಳೆಯುವ ಅವಕಾಶ ಮಾಡಿಕೊಡಬೇಕು. ನಿಮ್ಮ ಹಿರಿಯ ನಿಮ್ಮ ನೆರೆಹೊರೆಯ ಪರಿಚಯ ಮಾಡಿಸುವುದರೊಂದಿಗೆ ಹಳ್ಳಿಯ ವಡನಾಡಿ ಹಾಗೂ ಹಳ್ಳಿಯ ಉತ್ತಮ ವಾತಾವರಣದ ಆಮ್ಲಜನಕ ನಿಮ್ಮ ಮಕ್ಕಳಿಗೆ ಸಿಗುವಂತೆ ನೋಡಿಕೊಳ್ಳಬೇಕಾಗಿದೆ.
ನಿಮ್ಮ ಮಕ್ಕಳಿಗೆ ಯಾವುದೇ ಶಾಲೆಗೆ ಹಾಕಿ ಆದರೆ ನಿಜವಾದ ಶಿಕ್ಷಣ ಪ್ರಾರಂಭವಾಗುವುದು ಕುಟುಂಬದಿಂದಲೇ ಎಂಬುವುದು ಮಾತ್ರ ಸತ್ಯ. ನೀವು ಎಂತಹ ಪ್ರತಿಷ್ಠಿತ ಶಾಲೆಗೆ ಸೇರಿಸಿ ಅವರು ಕೊಡುವ ಶಿಕ್ಷಣಕ್ಕಿಂತ ನೀವು ಮನೆಯಲ್ಲಿ ನೀಡಿದ ಶಿಕ್ಷಣ ತುಂಬಾ ಮಹತ್ವ ಪಡೆಯುವುದರ ಜೊತೆಗೆ ಮಗುವಿನ ಜೀವನ ಪೂರ್ತಿ ನೆನಪಿರುತ್ತದೆ. ನೀವು ನಿಮ್ಮ ಮಗುವಿಗೆ ಎಷ್ಟು ಸಮಯ ನೀಡಿದ್ದೀರಿ ಎನ್ನುವುದರ ಮೇಲೆ ನಿಮ್ಮ ಮಗುವಿನ ಬೆಳವಣಿಗೆ ಶೈಕ್ಷಣಿಕ ಬೆಳವಣಿಗೆ ನಿರ್ಧಾರಿತವಾಗುತ್ತದೆ. ಒಂದು ಮಗು ಉತ್ತಮವಾಗಿ ಸಂಸ್ಕಾರವಂತನಾಗಿ ಬೆಳೆಯಲು ಮನೆಯ ವಾತಾವರಣ ಅತ್ಯಂತ ಮಹತ್ವ ಪಡೆಯುತ್ತದೆ. ನೀವು ಕಲಿಸುವ ಪ್ರತಿ ವಿಷಯವು ಮಗುವಿನ ಮೆದುಳಿನ ಆಳದಲ್ಲಿ ಅಚ್ಚಳಿಯದೆ ಉಳಿಯುತ್ತದೆ ಹೀಗಾಗಿ ಮನೆಯೆ ಮೊದಲ ಪಾಠಶಾಲೆ ಎಂದು ಹೇಳಿದ್ದಾರೆ. ಜನನಿ ಮೊದಲ ಗುರು ಎಂದು ಹೇಳಿದ್ದಾರೆ. ಇದೀಗ ನಾನು ಕೂಡ ನನ್ನ ಮಗಳಿಗೆ ಮನೆಯಲ್ಲಿಯೆ ಹೆಚ್ಚು ಕಲಿಸುವ ಪ್ರಯತ್ನ ಮಾಡುತ್ತಿರುವೆ ನನಗೂ ಬದುಕಿನ ಒತ್ತಡವಿದೆ ಅದರ ಜೊತೆಗೆ ಮಗಳಿಗೆ ಉತ್ತಮ ಭವಿಷ್ಯ ನೀಡಬೇಕೆಂದ ಒತ್ತಡವೂ ಇದೆ ಅಲ್ಲವೆ?