ಸುರೆ ಕುಡಿದವರು ಕೆಲರು ಹುಟ್ಟು ಹಾಕುವರು
ಬಿರುಗಾಳಿ ಬೀಸುವುದು, ಜನವೆದ್ದು ಕುಣಿಯುವುದು
ಉರುಳದಿಹುದಚ್ಚರಿಯೊ! ಮಂಕುತಿಮ್ಮ
ಇದೀಗ ಕರ್ನಾಟಕ “ಕಾವೇರಿ” ನದಿಯ ಹೆಸರಿನಲ್ಲಿ ಹೊತ್ತಿ ಉರಿಯುತ್ತಿದೆ. ಹಲವು ತಜ್ಞರು ಹಲವಾರು ರೀತಿಯಲ್ಲಿ ಈ ಪ್ರಕರಣವನ್ನು ಗಮನಿಸಿ ವಿವಿಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಎಲ್ಲಿ ನೋಡಿದರು ಕಾವೇರಿ ಗಲಭೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆಡಳಿತ ಪಕ್ಷಗಳು ತಮ್ಮ ಅಧಿಕಾರ ಉಳಿಸಿಕೊಳ್ಳಲು ನೀರಿನ ಬಗ್ಗೆ ಆಕಾಶದತ್ತ ತೋರಿಸಿ ಮುಂದಿನ ಜೂನ್ ವರೆಗೂ ಕುಡಿಯುವ ನೀರು ಮತ್ತು ಬೆಳೆಗಾಗಿ ನೀರು ಸಂಪೂರ್ಣ ಕೊಡುತ್ತೇವೆ ಎಂಬ ಭರವಸೆ ನೀಡುತ್ತಿದ್ದಾರೆ. ಇತ್ತ ವಿರೋಧ ಪಕ್ಷಗಳು ಮುಂದಿನ ಚುನಾವಣೆ ದೃಷ್ಠಿಯಲ್ಲಿಟ್ಟುಕೊಂಡು ಆಡಳಿತ ಪಕ್ಷದ ವಿರುದ್ಧ ಹೋರಾಟಗಳು ಮಾಡುತ್ತಿದ್ದಾರೆ. ಈ ಮಧ್ಯೆ ಜನಸಾಮಾನ್ಯರ ಬದುಕು ಹೀನಾಯವಾಗಿದೆ. ಅಮಾಯಕ ಜೀವಗಳು ಅಸುನೀಗುತ್ತಿವೆ. ಕರ್ನಾಟಕದ ಸಾಮಾನ್ಯ ಜನಜೀವನದ ಮೇಲೆ ಈ ಹೋರಾಟಗಳು ಘೋರ ಪರಿಣಾಮ ಬೀರುತ್ತಿರುವುದಲ್ಲದೆ ನಗರ ಪ್ರದೇಶಗಳು ಸುಟ್ಟು ಬೂದಿಯಾಗುತ್ತಿವೆ. ನಮ್ಮ ಆಸ್ತಪಾಸ್ತಿಗಳನ್ನು ಸ್ವತ: ನಾವೆ ಹಾಳು ಮಾಡುವಲ್ಲಿ ಯಶಸ್ವಿ ಪ್ರಜಾಪ್ರಭುತ್ವದ ಪ್ರದರ್ಶನ ಮಾಡುತ್ತಿದ್ದೇವೆ.