ನಾನು ಇಂದು ನಮ್ಮ ಬರಹಗಾರರು ಎಂಬ ಫೇಸ್ ಬುಕ್ ಗುಂಪಿನಲ್ಲಿ ನಡೆದ ಕವಿಗೋಷ್ಠಿಯ ಕವಿತೆಗಳನ್ನು ಅತ್ಯಂತ ನಮೃತೆಯಿಂದ ಕೇಳಿಸಿಕೊಂಡೆ. ಈ ಗುಂಪಿನಲ್ಲಿ ನಾನು ಕೂಡ ಸಕ್ರಿಯ ಸದಸ್ಯನಾಗಿದ್ದು ಕವಿತೆ ವಾಚನ ಮಾಡಬೇಕೆಂದು ಹಂಬಲಿಸಿದೆ ಆದರೆ ನನ್ನ ವಯಕ್ತಿಕ ಕೆಲಸದ ನಿಮಿತ್ಯ ಆಗಲಿಲ್ಲ ಆದರೆ ಎಲ್ಲರ ಕವಿತೆಗಳನ್ನು ಅತ್ಯಂತ ತಾಳ್ಮೆಯಿಂದ ಆಲಿಸಿ ಆಸ್ವಾದಿಸಿದ್ದೇನೆ. ಆ ಕಾವ್ಯಗಳ ಕುರಿತು ಬರೆಯದೇ ಮನಸ್ಸು ನಿಲ್ಲಲಿಲ್ಲ.
ನಿಮ್ಮ ಕಾವ್ಯಗಳಲ್ಲಿ ಒಂದು ಮಹತ್ತರವಾದ ಶಕ್ತಿಯಿದೆ. ವಿಷಯದ ಆಳ ಅಗಲವಾದ ಒಲವಿದೆ. ಬರೆದೆ ಬರೆಯುವೆ ಎನ್ನುವ ಛಲವಿದೆ. ವಿಷಯದಲ್ಲಿ ಇಳಿಯಬಲ್ಲ ಕಾವ್ಯ ಕಟ್ಟಿಕೊಡಬಲ್ಲ ಅತ್ಯಂತ ಮಹತ್ತರವಾದ ಮನಸ್ಸಿದೆ. ಜಗತ್ತಿನೊಂದಿಗೆ ಸ್ಪಂದಿಸುವ ಪರಿಭಾಷೆಯಿದೆ. ಕಾವ್ಯಗಳಲ್ಲಿ ಅಡಗಿರುವ ವಾಸ್ತವತೆಯನ್ನು ಅರೆಯುವ ನಿಮ್ಮ ಮನಸ್ಸಿಗೆ ಇದೊಂದು ಕಾವ್ಯ ನಮಸ್ಕಾರ. ಎಲ್ಲರೂ ವಾಚಿಸಿರುವ ರೀತಿಯು ಕಾಯಿಯೊಳಗೆ ಅಡಗಿರುವ ಹಣ್ಣಿನಷ್ಟೆ ರುಚಿ ಕೊಟ್ಟಿತು. ಕಾವ್ಯ ಪ್ರಿಯನಾದ ನನಗೆ ಕೊಳಲ ಧ್ವನಿಯು ಕೇಳಿದ ಅನುಭವವಾಯಿತು. ನಿಮ್ಮ ಕಾವ್ಯಕ್ಕೆ ಕಿವಿಯಾದ ನನಗೆ ಇಂದು ಕರೋನಾದ ಕುರಿತು ಕಾವ್ಯದ ಮೂಲಕ ನಿವು ಹಂಚಿಕೊAಡದ್ದು ಖುಷಿಯಾಯಿತು.
ಕಾವ್ಯ ನಮ್ಮೊಳಗೆ ಕಾಡುವ ಕಡಿಯತನಕ ತನ್ನತನವನ್ನು ಉಳಿಸುವ ಶಕ್ತಿ. ನಮ್ಮೊಳಗೆ ಕಂಡುಕೊAಡ ಅನುಭವಗಳಿಗೆ ಅಕ್ಷರ ರೂಪಕ್ಕೊಡುವ ಶಕ್ತಿ. ಕಾವ್ಯ ಯಾರೋದೊ ಮನಕಲಕುವ ಬದಲಿಗೆ ನಮ್ಮ ಮನ ಕಲಕಬೇಕು. ಹೃದಯದ ಕದತಟ್ಟಿ ಕಾವ್ಯ ಬಡಿದೆಬ್ಬಿಸಬೇಕು. ಓದುಗನ ಮನಸ್ಸಿನಾಳಕ್ಕಿಳಿದು ಕಾಲಾಂತರದಲ್ಲಿ ಉಳಿಯಬಲ್ಲ ಶಕ್ತಿ ಹೊಂದಿರಬೇಕು. ನನ್ನೊಂದಿಗೆ ಮಾತನಾಡಿದ ಕಾವ್ಯಗಳಲ್ಲಿ ಎರಡು ಮುಖ್ಯ ಕಾವ್ಯಗಳು ಅತೀ ಕಡಿಮೆ ಸಮಯದಲ್ಲಿ ನನ್ನೊಳಗೆ ಆವರಿಸಿಕೊಂಡವು. ಅವುಗಳ ಬಗೆಯನ್ನು ಅವುಗಳ ಶಕ್ತಿಯನ್ನು ನನಗೂ ಹಿಡಿಯಲಾಗಲಿಲ್ಲ. ಅವುಗಳನ್ನು ಮನಸ್ಸಾಳಕ್ಕಿಸಿಕೊಂಡು ಆಸ್ವಾದಿಸಿದೆ ಅಷ್ಟೆ. ಕಾವ್ಯ ನನ್ನ ಅನುಭವದ ಅಭಿವಯಕ್ತಿ.
ಕಾವ್ಯ ಓದುಗಾರಿಕೆಯು ಕಾವ್ಯದ ಅಂದ ಚಂದಕ್ಕೆ ಮೆರಗು ಕೊಡುತ್ತದೆ. ನಮ್ಮ ಕಾವ್ಯ ಅಕ್ಷರಗಳಿಂದ ಕೂಡಿರುವ ಬದಲಿಗೆ ಅಕ್ಷರದ ಅಮೃತದಿಂದ ಕೂಡಿರಬೇಕು ಅದನ್ನು ಸೇವಿಸದರಿಗೆ ಆಹ್ಲಾದ ಅನುಭವ ಕೊಡುವಂತಿರಬೇಕು. ಕಾವ್ಯ ಹೇಳಿಕೆಗಳಿಂದ ಮುಕ್ತವಾಗಿರಬೇಕು. ಮಾತು ಕವಿತೆಯಾಗಲಾರದು. ಮಾತು ಬರಿ ಆಡಿಕೊಳ್ಳಲು ಸಾಧ್ಯ ಕವಿತೆ ಮಾತ್ರ ಆಸ್ವಾಧಿಸಲು ಸಾಧ್ಯವಾಗುತ್ತದೆ ಅಂತಹ ಕಾವ್ಯ ಮಾತ್ರ ಕಾಲಾಂತರದಲ್ಲಿ ಉಳಿದು ಜಗತ್ತನ್ನು ಆಳಬಲ್ಲದು. ಕಾವ್ಯ ಕಟ್ಟಿಕೊಡುವಾಗ ಕನ್ನಡ ಸಾಹಿತ್ಯದ ಪಾರಂಪರಿಕ ಜ್ಞಾನ ಅತ್ಯಂತ ಅವಶ್ಯಕವಾಗಿದೆ. ಧ್ವನಿಯನ್ನು ಹೇಗೆ ಕಾವ್ಯವಾಗಿಸಿದ್ದರು ಎನ್ನುವುದನ್ನು ಅರೆತುಕೊಳ್ಳಬೇಕು. ಕಾವ್ಯದ ಮೂಲಕ ಆಳಕ್ಕಿಯುವಾಗ ಅಧ್ಯಯನ ಅವಶ್ಯಕವೆಂದು ನನಗೆ ಅನಿಸಿದೆ. ಸುಡುವ ಬಿಸಿಲು ಸುಡುವ ಕೆಲಸದ ಜೊತೆಗೆ ಬೆಳಕನ್ನು ಹೇಗೆ ಕೊಡುತ್ತದೆಯೊ ಹಾಗೆ ಕಾವ್ಯವೂ ಕೂಡ ತನ್ನ ಎರಡೂ ಕೆಲಸಗಳನ್ನು ಮಾಡುತ್ತದೆ. ಈ ಎರಡು ಕೆಲಸಗಳು ಕಾವ್ಯದ ಸೆಲೆಯಲ್ಲಿ ನಿಂತು ಆಸ್ವಾದಿಸುವ ಮನಸ್ಸು ಹೃದಯಗಳಿಗೆ ಮಾತ್ರ ಅರ್ಥವಾಗಲು ಸಾಧ್ಯವಾಗುತ್ತದೆ. ನಿಮ್ಮೆಲ್ಲರ ಕವಿತೆಗಳಿಗೆ ಹೃದಯಪೂರ್ವಕ ನಮಸ್ಕಾರ ತಿಳಿಸುತ್ತಾ ಈ ದಿನವನ್ನು ಇನ್ನಷ್ಟು ಅರ್ಥಪೂರ್ಣವಾಗಿಸಿದ್ದಕ್ಕೆ ಧನ್ಯವಾದಗಳು. ಅಧ್ಯಯನ ನಮ್ಮೆಲ್ಲರ ಆದ್ಯತೆಯಾಗಲಿ.
ಕಾವ್ಯ ನನ್ನ ಅನುಭವದ ಅಭಿವ್ಯಕ್ತಿಯೇ ಹೌದು. ಇದರಿಂದ ಮನಸ್ಸಿಗೆ ತೃಪ್ಪಿ ಸಿಗುತ್ತದೆ. ನಾನು ನನ್ನ ಸುತ್ತಮುತ್ತಲಿನ ವಾತಾವರಣ ತಿಳಿಗೊಳಿಸಲು ಬರೆಯುತ್ತೇನೆ. ನನ್ನ ಕಣ್ಣ ಮುಂದಿನ ವಿಷಯನ್ನು ಅಚ್ಚಳಿಯದಂತೆ ಉಳಿಯುವಂತೆ ಮಾಡಲು ಬರೆಯುತ್ತೇನೆ. ಸರಳ, ಕಠಿಣ ವಿಷಯವನ್ನು ಸ್ವಾರಸ್ಯಕರವಾಗಿ ಹೇಳಿದರೆ ನಾವು ಅದನ್ನು ನೆನಪಿಟ್ಟುಕೊಳ್ಳುತ್ತೇವೆ. ಕೆಲವು ಸಂದರ್ಭ ಹಾಗೂ ನೆನಪುಗಳು ಯಾವತ್ತು ಮಾಸಿ ಹೋಗಬಾರದು ಎಂಬ ಕಾರಣಕ್ಕೆ ಅವುಗಳನ್ನು ಕಾವ್ಯ ರೂಪಕ್ಕೆ ತರುತ್ತೇನೆ. ಒಡಲೊಳಗಿನ ಕಿಚ್ಚು, ಸತ್ಯ, ಸಂತಸ, ಮಾಹಿತಿ, ಪ್ರೀತಿ, ಕಾಳಜಿ, ಸಾಮಾಜಿಕ ಬದ್ಧತೆ, ಎಲ್ಲವು ಎಲ್ಲರಿಗೂ ದೊರೆಯಲಿ ಎಂಬ ಕಾರಣಕ್ಕೆ ಬರೆಯುತ್ತೇನೆ. ಇದರಲ್ಲಿ ನನ್ನ ವಯಕ್ತಿಕ ಆತ್ಮ ತೃಪ್ತಿ ಎಲ್ಲದ್ದಕ್ಕೂ ಮುಖ್ಯವಾಗುತ್ತದೆ. ಈ ಬರವಣಿಗೆ ಮುಗಿಸಿದ ಬಳಿಕ ಸಿಗುವ ಆತ್ಮ ತೃಪ್ತಿಗಾಗಿ ಬರೆಯುತ್ತೇನೆ. ಕೂಡಿಟ್ಟ, ಕಟ್ಟಿಕೊಂಡ, ಹರಡಿಕೊಂಡ, ಕ್ರೋಢಿಕೃತ ಅನುಭವ ಹಾಗೂ ಅಭಿಪ್ರಾಯಗಳನ್ನು ಸಮಾಜದೊಂದಿಗೆ ಹಂಚಿಕೊಳ್ಳುವುದರಿಂದ ಸಮಾಜಕ್ಕೆ ನನ್ನ ಕೈಲಾದ ಸೇವೆ ಕೊಡುವುದಕ್ಕಾಗಿ ಬರೆಯುತ್ತೇನೆ. “ ಈ ಸಮಾಜ ನನಗೇನು ಕೊಟ್ಟಿದೆ ಎನ್ನುವುದ್ದಕ್ಕಿಂತ ನಾನು ಸಮಾಜಕ್ಕೆ ಏನು ಕೊಟ್ಟಿರುವೆ” ಎನ್ನುವ ಆಶೆಯದೊಂದಿಗೆ ನಿಮ್ಮ ಕಾವ್ಯ ಪಯಣ ಸಾಗುವಂತಾಗಲಿ ಎನ್ನುವ ಶುಭಹಾರೈಕೆಯೊಂದಿಗೆ.