ಮಾನ್ಯ ಬರ್ನಾಡ್ ಷಾ ರವರ ಒಂದು ಹೇಳಿಕೆಯನ್ನು ತಾವೆಲ್ಲ ಆಲಿಸಿರಬಹುದು " ಮಾನವೀಯತೆಯ ಬಿಡುಗಡೆಯ ಏಕಮೇವ ಭರವಸೆ ನನಗೆ ಅನಿಸುವಂತೆ ಬೋಧನೆಯಲ್ಲಿದೆ . ಒಂದು ನಾಗರೀಕತೆಯಾಗಿ ಭಾರತದಲ್ಲಿ ನಾವು ಶಿಕ್ಷಕರನ್ನು ದೇವರ ನಂತರದಲ್ಲಿ ಅತಿ ಎತ್ತರವಾದ ಸ್ಥಾನದಲ್ಲಿ ಇರಿಸಿ ಗೌರವಸಿದ್ದೇವೆ.
ಈಗಾಗಲೇ ನಿಮಗೆಲ್ಲ ತಿಳಿದಿರುವಂತೆ, ಎಲ್ಲ ಸಮಾಜದಲ್ಲೂ ಮಕ್ಕಳು ದುರ್ಬಳಕೆ, ಹಿಂಸೆ ಮತ್ತು ಶೋಷಣೆಗೆ ಒಳಗಾಗಿರುವುದು ಕಂಡುಬರುತ್ತದೆ . ಸುತ್ತಮುತ್ತ ನೋಡಿದರೆ ಸಾಕು ಅದು ನಿಮ್ಮ ಕಣ್ಣಿಗೆ ಬೀಳುವುದು. ಚಿಕ್ಕ ಮಕ್ಕಳು ಕೆಲಸದಲ್ಲಿ ತೊಡಗಿರುವರು ಮತ್ತು ಶಾಲೆಗೆ ಹೋಗುವ ಅವಕಾಶದಿಂದ ವಂಚಿತರಾಗಿರುವರು. ಬಹಳ ಜನ ಮಕ್ಕಳು ಒಂದಲ್ಲ ಒಂದು ರೀತಿಯ ಬಂಧನಕ್ಕೆ ಒಳಗಾಗಿರುವರು. ತಾಯಿತಂದೆಯರಿಂದ ಮನೆಯಲ್ಲಿ ಹೊಡೆತ, ಶಿಕ್ಷಕರಿಂದ ತರಗತಿಯಲ್ಲಿ ಹೊಡೆತ. ಇಲ್ಲವೇ ಜಾತಿ, ಧರ್ಮದಿಂದಾಗಿ ತಾರತಮ್ಯಕ್ಕೆ ಗುರಿಯಾಗುವರು. ಹೆಣ್ಣು ಮಗುವನ್ನು ಜನ್ಮ ತಾಳಲು ಬಿಡವುದಿಲ್ಲ, ಇಲ್ಲವೇ ಹುಟ್ಟಿದ ಕೂಡಲೇ ಕೊಲ್ಲುವರು. ಅವರು ಬಾಲ್ಯ ವಿವಾಹ, ಅತ್ಯಾಚಾರ, ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗುವರು.
ನಮ್ಮ ಮಕ್ಕಳಿಗಾಗಿ ಎಷ್ಟೊಂದು ಹಣ , ಯೋಜನೆಗಳು , ರೀತಿ ನೀತಿಗಳು , ಕಾಯಿದೆ ಕಾನೂನುಗಳು ಬಂದು ವಿನಿಯೋಗವಾಗುತ್ತಿವೆ . ಆದರೆ ಯಾವುದು ನಮ್ಮ ಮಕ್ಕಳ ಬದುಕಿಗೆ ಮುಟ್ಟುತ್ತಿದೆ, ತಟ್ಟುತ್ತಿದೆ ಎಂಬುವುದು ಗಮನಿಸಲೇಬೇಕು. ಅದನ್ನು ಒಮ್ಮೆ ಅವಲೋಕಿಸಿದರೆ ಎದೆ ಝಲ್ ಎನ್ನುತ್ತದೆ . ನಾವು ಮಕ್ಕಳ ಹಕ್ಕು ಕಾಯಿದೆ ಎಂಬ ಕಾನೂನನ್ನು ಒಮ್ಮೆ ನೋಡಿದರೆ, ಈ ಕಾನೂನು ಮಾಡಿದ್ದು ಸರ್ಕಾರ ಈಗ ಉಲ್ಲಂಘಿಸುತ್ತಿರುವುದು ಸ್ವತ: ಸರ್ಕಾರ ಎಂದು ಕೇಳಲು ಬೇಸರವೆನಿಸುತ್ತದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸಿ ಅದು ದೇವರ ಮಂದಿರ, ಅದು ವಿದ್ಯಾ ದೇಗುಲವೆಂದು ಹೇಳುವ ಜನಪ್ರತಿನಿಧಿಗಳು, ಅಧಿಕಾರಿಗಳು, ಶಿಕ್ಷಣ ಪ್ರೇಮಿಗಳು, ಸಾಹಿತಿಗಳು ತಮ್ಮ ಮಕ್ಕಳಿಗೆ ಇಂಗ್ಲೀಷ ಕಾನ್ವೆಂಟ್ ಶಾಲೆಗಳಿಗೆ ಕಳಿಸಿ ಕಾಯಿದೆಯ ಉಲ್ಲಂಘನೆ ಮಾಡುತ್ತಿರುವುದು ಕಂಡು ಬರುತ್ತಿದೆ. ಕನ್ನಡ ನಾಮ ಫಲಕದ ಕೆಳಗೆ ಇಂಗ್ಲೀಷ ಶಿಕ್ಷಣ ನಡೆಸಿ ಅನೇಕ ಶಾಲೆಗಳು ಈ ಮಕ್ಕಳ ಹಕ್ಕು ಕಾಯಿದೆಯನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತಿವೆ .
ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಯಿದೆಯ ಪೂರ್ವ ಪೀಠಿಕೆಯಲ್ಲಿಯೆ ಹೇಳಿದ್ದಾರೆ . ಶಾಲೆ ಎಂದರೆ ಸರ್ಕಾರದಿಂದ ಮಾನ್ಯತೆ ಪಡೆದು ಎಲಿಮೆಂಟರಿ ಶಿಕ್ಷಣ ಬೋದಿಸುವ ಸ್ಥಳವೆ ಶಾಲೆ ಎಂದು, ಆದರೆ ಕುರುಡು ಸರ್ಕಾರದ ಕಣ್ಣಿಗೆ ಮಣ್ಣೆರಚಿ ಅದೆಷ್ಟೊ ಶಾಲೆಗಳು ಮಾನ್ಯತೆ ಪಡೆಯದೆ ಶಾಲೆ ನಡೆಸುತ್ತಿವೆ . ತನ್ನ ಎಲಿಮೆಂಟರಿ ಶಿಕ್ಷಣ ಮಗಿಯುವವರೆಗೂ ಮಗು ಶಾಲೆ ಬಿಡದಂತೆ ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿ ಸರ್ಕಾರದ ಮೇಲಿದೆ ಆದರೆ ಸ್ವತ: ಸರ್ಕಾರ ಒಪ್ಪುತ್ತದೆ ಇನ್ನು ಕರ್ನಾಟಕದಲ್ಲಿ ಎಷ್ಟೊ ಮಕ್ಕಳು ಶಾಲೆಯಿಂದ ವಂಚಿತರಾಗಿದ್ದಾರೆ ಎಂದು .
ಮಕ್ಕಳಿಗೆ ಹಾಗೂ ಪಾಲಕರಿಗೆ ಯಾವುದೆ ರೀತಿಯ ಶುಲ್ಕ ಪಾವತಿ ಮಾಡಬಾರದು ಎಂದು ಕಾನೂನು ಹೇಳುತ್ತದೆ . ಆದರೆ ಸ್ವತ: ಸರ್ಕಾರದ ಅದೆಷ್ಟು ಶಿಕ್ಷಕರು, ಮುಖ್ಯ ಗುರುಗಳು ಇನ್ನು ಶುಲ್ಕ ತೆಗೆದುಕೊಳ್ಳುವ ಸ್ಥಿತಿಗತಿ ಎದುರಾಗಿದೆ. ಅದೆಷ್ಟೊ ಬಡಮಕ್ಕಳು ಇಂದು ಶಾಲೆ ಬಿಡುವ ಸ್ಥಿಗತಿಯು ಇದೆ . ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾ ಶಿಕ್ಷಣ ಒದಗಿಸುವುದು ಮಾನ್ಯ ಸರ್ಕಾರದ ಕರ್ತವ್ಯ ಆದರೆ ಇದನ್ನು ಪ್ರತಿ ಐದು ವರ್ಷಕ್ಕೊಮ್ಮೆ ಮುಂದೆ ಹಾಕುತ್ತಾ ಮಕ್ಕಳ ಶಿಕ್ಷಣದ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ.
ಎಲಿಮೆಂಟರಿ ಶಿಕ್ಷಣವನ್ನು ಪ್ರಮಾಣಿಕವಾಗಿ ಜಾರಿಗೆ ತರಲು ಅವಶ್ಯವಿರುವ ಮೂಲಭೂತ ಸೌಕರ್ಯಗಳಾದ ಶಾಲಾ ಕಟ್ಟಡ , ನುರಿತ ಬೋಧಕ ವರ್ಗ , ಕಲಿಕಾ ಸಾಮಾಗ್ರಿ , ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯ , ಒದಗಿಸುವಂತೆ ಕಾನೂನು ಹೇಳುತ್ತದೆ . ಆದರೆ ಬರಿ ಒಂದು ಜಿಲ್ಲೆಗೆ ಇದು ಹೋಲಿಸಿದರೆ ಬರಿ 30% ಮಾತ್ರ ಸರಿಯಾಗಿ ಮೂಲಭೂತ ಸೌಕರ್ಯ ಆಗಿದೆ . ಇನ್ನು ಈ ಫಲಿತಾಂಶದಲ್ಲಿ ಕೆಲವು ತೋರಿಕೆಗೆ , ಕೆಲವು ಆ ಬಜೆಟ್ ಮುಗಿಯುವವರೆಗೆ , ಆ ಅಧಿಕಾರಿ ಅಲ್ಲಿಂದ ವರ್ಗಾವಣೆ ಆಗುವವರೆಗೆ ಅಂತಾರೆ ನಮ್ಮ ಶಿಕ್ಷಕ ಬಂಧುಗಳು . ಖಾಸಗಿ ಶಾಲೆಗಳಿಗೆ ಕೆಲವು ನಿಯಮ ಗಾಳಿಗೆ ತೂರಿ ಹೋಗಿವೆ ಕಾನೂನು ಸ್ಪಷ್ಟವಾಗಿ ತಂದೆ ತಾಯಿಯರನ್ನು ಪ್ರವೇಶ ಪರೀಕ್ಷೆಗೆ ಒಳಪಡಿಸುವಂತಿಲ್ಲ ಅಂತಾ, ಆದರೆ ಖಾಸಗಿಯವರು ಅಪ್ಪ ಡಿಗ್ರಿ ಮಾಡಿದರೆ ಮಾತ್ರ ಸೀಟು , ಇಲ್ಲದಿದ್ದರೆ ಇಲ್ಲಾ ಎನ್ನುತ್ತಿವೆ ಇದನ್ನು ತಿಳಿದ ಸರಕಾರ ಗೊತ್ತಿದ್ದರು ಸುಮ್ಮನೆ ಕೂತಿದೆ .
ಮಾನ್ಯತೆ ಪಡೆದ ಶಾಲೆಗಳು ದುರ್ಬಲ ವರ್ಗದ ಮಕ್ಕಳಿಗಾಗಿ 25% ಸೀಟುಗಳು ಕೊಡಬೇಕು ಎನ್ನುತ್ತದೆ ಕಾನೂನು. ಆದರೆ ಯಾವ ಶಾಲೆಯಲ್ಲಿ ನಡೆಯುತ್ತಿಲ್ಲ. ನಡೆದರು ಅದು ದಾಖಲಾತಿಯಲ್ಲಿ ಮಾತ್ರ ನೈಜವಾಗಿ ಇಲ್ಲಾ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಚಾರ ಆದರೆ ಯಾವುದು ಪರಿಗಣನೆಗೆ ಬಾರದೆ ಮರೆಯಾಗಿ ಹೋಗುತ್ತಿದೆ. ಖಾಸಗಿಯವರು ಅವರ ಮನಬಂದಂತೆ ನಡೆದಿದ್ದಾರೆ ಎನ್ನುವುದು ಗೊತ್ತಿದ್ದ ಸರ್ಕಾರ ಅವರಿಂದ ಹರಿದು ಬರುವ ಎಂಜಲ ಆಸೆಗೆ ಬಲುಯಾಗಿದ್ದು ಕಟುಸತ್ಯ .
ಕಾನೂನು ಮಕ್ಕಳ ದೈಹಿಕ ಮತ್ತು ಮಾನಸಿಕ ಹಿಂಸೆ ಸಂಪೂರ್ಣ ನಿಷೆಧಿಸಿದೆ, ಆದರೆ ಇನ್ನು ಮಕ್ಕಳ ಮೇಲಿನ ಶಿಕ್ಷಕರ ದೌರ್ಜನ್ಯ ಸಾಗುತ್ತಲೆ ಇದೆ ಸಾವಿರಾರು ಸಾವು ನೋವುಗಳು ಆಗುತ್ತಲೆ ಇವೆ. ಅನೇಕ ಮಕ್ಕಳು ಶಿಕ್ಷಕರ ದೌರ್ಜನ್ಯದಿಂದಲೆ ಬದುಕು ಸಾವಿನ ಮದ್ಯೆ ಇದ್ದಾರೆ ಎಂದರೆ ತಪ್ಪಾಗದು . ಕೆಲವು ಶಾಲೆಗಳಲ್ಲಿ ಈ ಮಕ್ಕಳ ಹೊಡಿಬೇಡಿ ಅಂದಾರಲ್ಲಾ ಹಾಗೂ ಮಕ್ಕಳು ಹೊಡಿಯದಿದ್ದರೆ ಮಾತು ಕೇಳಲ್ಲಾ ಅಂತಾ ಪಾಠ ಮಾಡುವುದೆ ಮರೆತು ಶಿಕ್ಷಕರು ಸುಮ್ಮನೆ ಹರಟೆ ಹೊಡಿಯುವ ಕೆಲಸಕ್ಕೆ ನಿರತಾಗಿದ್ದಾರೆ. ಮಕ್ಕಳು ಕಲಿತರೆಷ್ಟು ಬಿಟ್ಟರೆಷ್ಟು ಎನ್ನುವ ಲೆಕ್ಕಚಾರ ಅವರದು . ಇದು ಒಂದು ತರಹದ ಮುಖ್ಯ ಮಾನಸಿಕ ಮಕ್ಕಳ ದೌರ್ಜನ್ಯ ಅಲ್ಲವೆ ?
ಶಿಕ್ಷಕರು ಶಾಲೆಗೆ ಸರಿಯಾದ ಸಮಯಕ್ಕೆ ಬರುವುದು , ಸೂಕ್ತ ಸಮಯದಲ್ಲಿ ಪಾಠ ಮುಗಿಸುವುದು , ಪ್ರತಿಯೊಂದು ಮಗುವಿನ ಸಾಮರ್ಥ್ಯ ತಿಳಿಯುವುದು , ವಯಕ್ತಿಕ ಗಮನ ಕೊಡುವುದು , ವರ್ಷದಲ್ಲಿ ಮೂರು ಬಾರಿ ಪಾಲಕರ ಪೋಷಕರ ನಿಯಮಿತ ಸಭೆ ನಡೆಸುವುದು, ಶಿಕ್ಷಕರು ಖಾಸಗಿ ಪಾಠ ಮಾಡುವಂತಿಲ್ಲ , ಹೀಗೆ ಹಲವು ಶಿಕ್ಷಕರ ಕೆಲಸಗಳು ಎಂದು ಕಾನೂನು ಹೇಳುತ್ತದೆ . ಆದರೆ ಇವೆಲ್ಲ ಗಾಳಿಗೆ ತೂರಿದ ನಮ್ಮ ಶಿಕ್ಷಕರು ಯಾರು ಹೇಳುವರು ಕೇಳುವುರು ಇಲ್ಲದಂತೆ ಮಾಡುತ್ತಿರುವುದು ದಿನ ಬೆಳಗಾದರೆ ಪತ್ರಿಕೆ ನೋಡಿದರೆ ಗೊತ್ತಾಗುತ್ತದೆ. ಎಲ್ಲವು ದಾಖಲಾತಿಯಲ್ಲಿ ಮುಗಿಸಿ ಮಕ್ಕಳ ಜೀವನದ ಮೇಲೆ ಬರೆ ಎಳಿಯುತ್ತಿದ್ದಾರೆ . ಖಾಸಗಿ ಪಾಠದ ಹಾವಳಿ ತುಂಬಾ ಇದೆ ಕೆಲವು ಗೊತ್ತಿವೆ, ಕೆಲವು ತಿಳಿದಿಲ್ಲದ ಹಾಗೆ ನಡೆಯುತ್ತಿವೆ. ಸರ್ಕಾರಿ ಶಿಕ್ಷಕರು ಅದೆಷ್ಟೊ ಕಡೆ ತಮ್ಮ ಖಾಸಗಿ ಜೀವನಕ್ಕೆ ಒತ್ತುಕೊಟ್ಟು ಸರ್ಕಾರಿ ಕೆಲಸಕ್ಕೆ ರಾಜಕೀಯ ಮಾಡುತ್ತಿರುವ ಸುದ್ಧಿ ದಿನ ಬೆಳಗಾದೆರೆ ನೋಡುತ್ತೆವೆ. ಇದು "ಲಗಾಮವಿಲ್ಲದ ಕುದುರೆಯಂತೆ " ಓಡುತ್ತಲೆ ಇದೆ .
ಈ ಕಾನೂನಿನ ಪ್ರಕಾರ ಮಕ್ಕಳ ಸಂಖ್ಯೆ 60-2 , 90-3 , 120-4 , 150-5 , ಒಬ್ಬ ಶಿಕ್ಷಕರಿಗೆ ಕನಿಷ್ಟ 35 ಮಕ್ಕಳು ಇರಬೇಕು ಎಂದು ತಿಳಿಸುತ್ತದೆ . ಇನ್ನು ನಮ್ಮ ರಾಜ್ಯದಲ್ಲಿ ಶಿಕ್ಷಕರೆ ಇಲ್ಲದೆ ನಡೆಯುತ್ತಿರುವ ಶಾಲೆಗಳ ಸಂಖ್ಯೆ ತುಂಬಾ ಇದೆ, ಸರ್ಕಾರ ಮಾತ್ರ ಕಣ್ಣು ಮುಚ್ಚಿ ನಿದ್ದೆಗೆ ಜಾರಿದೆ . ಒಬ್ಬನೆ ಶಿಕ್ಷಕರಿರುವ ಶಾಲೆಗಳಿವೆ , ಇನ್ನು ದೇವರ ಗುಡಿಯಲ್ಲಿ ಶಾಲೆಗಳು ನಡೆಯುತ್ತಿವೆ ಎನ್ನುವುದು ವಿಪರ್ಯಾಸ , ಕಲಾ , ದೈಹಿಕ , ವೃತ್ತಿ , ಆರೋಗ್ಯ , ಈ ಶಿಕ್ಷಣಗಳ ಶಿಕ್ಷಕರು ಇರಬೇಕು ಎಂದು ಕಾನೂನು ಹೇಳುತ್ತದೆ, ಆದರೆ ಇಲ್ಲಿ ಒಬ್ಬ ಶಿಕ್ಷಕರು ಇರುವ ಶಾಲೆಗಳಲ್ಲಿ ಯಾವುದು ಸಾದ್ಯವಿಲ್ಲ ಅಲ್ಲಿ ಎಲ್ಲವು ಉಲ್ಲಂಘನೆಯಾಗುತ್ತಿದೆ .
ಒಬ್ಬ ಶಿಕ್ಷಕರು 1-5ನೇ ತರಗತಿಗೆ 200 ದಿನಗಳು , 6-8ನೇ ತರಗತಿಗೆ 225 ದಿನಗಳು , ಶಿಕ್ಷಕ ಒಂದು ವರ್ಷದಲ್ಲಿ 800 ಗಂಟೆಗಳು ತರಗತಿ ತೆಗೆದುಕೊಳ್ಳಬೇಕು ಎಂದು ಕಾನೂನು ಹೇಳುತ್ತದೆ . ಆದರೆ ನಮ್ಮ ಶಿಕ್ಷಕರು ವರ್ಷದ ಹೆಚ್ಚನ ದಿನಗಳು ಈ ತರಬೇತಿ, ಆ ತರಬೇತಿ , ಆ ಮೀಟಿಂಗ, ಈ ಮೀಟಿಂಗ , ಆ ಆಫೀಸ್ ಅಂತಾನೆ ಸುತ್ತುತ್ತಾಯಿರುತ್ತಾರೆ . ಇನ್ನು ಶಾಲಾ ಗ್ರಂಥಾಲಯಗಳು ಕಪಾಟಿನಲ್ಲಿಯೆ ಕುಳಿತಿದೆ ಅದನ್ನು ಹೊರತೆಗೆದು ಮಕ್ಕಳಿಗೆ ಕೊಡಲು ಯಾವ ಶಿಕ್ಷಕರಿಗೂ ಮನಸ್ಸಿಲ್ಲ ಮಕ್ಕಳ ಓದುವ ಹಕ್ಕು ಕಸಿದು ಕೊಳ್ಳುತ್ತಿದ್ದಾರೆ . ಇನ್ನು ನಮ್ಮ ಖಾಸಗಿ ಹಾಗೂ ಸರಕಾರಿ ಎಷ್ಟೊ ಶಾಲೆಗಳಲ್ಲಿ ಮಕ್ಕಳಿಗೆ ಆಟಲು ಮೈದಾನವೆ ಇಲ್ಲಾ.
ಈ ಕಾನೂನಿನ ಆಗು ಹೋಗುಗಳಿಗೆ NCPCR ಹಾಗೂ SCPCR ಗೆ ನೀಡಿದೆ . ವಿಪರ್ಯಾಸವೆಂದರೆ ಕೆಲವು ಕ್ರೀಯಾಶೀಲ ವ್ಯಕ್ತಿಗಳಿಗೆ ಬಿಟ್ಟರೆ ನಮ್ಮ ರಾಜ್ಯದಲ್ಲಿ ಅನೇಕ ಜನರು ಈ ಸಮಿತಿಯಿಂದ ದುರುಪಯೋಗ ಮಾಡಿಕೊಂಡಿದ್ದು ತಿಳಿಯಲೇಬೇಕು. ಎಲ್ಲಿಯೂ ಕೇಸ್ ಇಲ್ಲ ಕಛೇರಿಯಿಲ್ಲ ಸುಮ್ಮನೆ ತಂಡ ರಚನೆ ಆಯಿತು, ಒಂದಿಷ್ಟು ಬಲಿಷ್ಠ ನಿರ್ಧಾರಗಳಿಲ್ಲ , ಒಂದಿಷ್ಟು ಮಕ್ಕಳಿಗಾಗಿ ದುಡಿತವಿಲ್ಲ , ಬರಿ ಎಲ್ಲವು ಸ್ವಾರ್ಥ ಬದುಕು ಮಕ್ಕಳ ಹೆಸರಿನಲ್ಲಿ ಕಬಳಿಸುವ ಕೆಲಸ ನಡೆದಿದೆ. ಯಾರು ದೊಡ್ಡ ಭಾಷಣದಲ್ಲಿ ಮಕ್ಕಳಿಗಾಗಿ ನಾವು ಎನ್ನುತ್ತಾರೊ ಅವರೆ ಮಕ್ಕಳ ಹಕ್ಕುಗಳ ಉಲ್ಲಂಘನೆ ಮಾಡುತ್ತಿರುವರು . ಯಾರು ಕಾನೂನು ಉಳಿಸಿ ಬೆಳಿಸಿ ಎನ್ನುತ್ತಾರೊ ಅವರೆ ಕಾನೂನಿನ ಕಿಮ್ಮತ್ತು ಕಳಿಯುತ್ತಿದ್ದಾರೆ . ಒಂದೆ ವಾಕ್ಯದಲ್ಲಿ ಹೇಳುವುದಾದರೆ "ಕಾಯುವವರೆ ಕೊಲ್ಲುವ " ಲೆಕ್ಕಾಚಾರ ಮಾಡುತ್ತಿದ್ದಾರೆ.
ಹೀಗೆ ಒಂದು ಕಾನೂನು ಯಾರ ಮೇರೆಯಿಲ್ಲದೆ ಓರೆಕೊರೆಯಿಲ್ಲದೆ ಯಾರ ಅರಿವುಯಿಲ್ಲದೆ ಸಾಗಿದರೆ ನಾವು ಮಾತ್ರ ಕಣ್ಣಿದ್ದು ಕುರುಡರಾಗಿ ಹೋಗುತ್ತಿದ್ದೇವೆ. ಗೊತ್ತಿದ್ದರು ಗೊತ್ತಿಲ್ಲದಂತೆ ನಾಟಕವಾಡುತ್ತಿದ್ದೇವೆ. ಮಾತು ಬಂದರು ಮೂಕರಾಗಿ ಹೋಗಿದ್ದೇವೆ . ಈ ನೂಕುನುಗ್ಗಲು ಲೋಕದಲ್ಲಿ ಜೊಕೆಯಾಗಿ ಇರುವಷ್ಟು ದಿನ ಹಾಯಾಗಿ ಇರೋಣಾ ಎಂದು ತೆಪ್ಪಗಿದ್ದೇವೆಯೆ ಇರೋಣವೆ ಹೊರತು ಜಗದ ಚಿಂತೆ ನಮಗೇಕೆ ? ನಾವಿಷ್ಟು ನಮ್ಮ ಕುಟುಂಬವಿಷ್ಟು ಸುಖವಿದ್ದರೆ ಸಾಕು ಎನ್ನುವ ಚಿಕ್ಕ ಬುದ್ಧಿ ನಮ್ಮದಾಗಿದೆ . ಕಾಟಾಚಾರಕ್ಕೆ ಕಾನೂನು ಮಾಡಿ ಅದರ ಎಲ್ಲೆಗಳೆ ಮೀರಿ ಬೀಗುತ್ತಿದ್ದೇವೆ. ಭ್ರಷ್ಟಾಚಾರವೆ ಮನೆಮಾತಾಗಿರುವ ಇಲ್ಲಿ ಸತ್ಯಕ್ಕೆ ಬೆಲೆ ಎಲ್ಲಿದೆ , ಸುಳ್ಳಿನ ಸಂತೆಯಾಗಿರುವ ಇಲ್ಲಿ ಸತ್ಯ ಸತ್ತು ಹೋಗುವ ಕಾಲವಿದೆ , ಈ ಸಡಗರ ಸಂಭ್ರಮದಲ್ಲಿ ನಮ್ಮ ಮುಂದಿನ/ಇಂದಿನ ಪ್ರಜೆಗಳನ್ನು ಜೀವಂತ ಬಲಿಕೊಟ್ಟು ತಮಾಷೆ ನೋಡುತ್ತಿದ್ದೇವೆ ಅಷ್ಟೆ .