ಪ್ರಸ್ತುತ ಸನ್ನಿವೇಶದಲ್ಲಿ ಪ್ರಜಾಪ್ರಭುತ್ವದ ಎತ್ತಿನ ಕಾಲಿಗೆ ಊನಾಗಿದೆ. ನಾಡಿನ ಹೆಸರಾಂತ ವಿಚಾರವಾದಿಗಳನ್ನು ಕೊಲ್ಲಲಾಗುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರಕ್ಕೆ ಕೊಲೆ ಮಾಡಲಾಗುತ್ತಿದೆ. ಪ್ರಜಾಪ್ರಭುತ್ವದ ಕಲ್ಪನೆ ಇದೀಗ ಕಾಣೆಯಾಗಿದೆ. ಜನಪರವಾದ ವಿಚಾರಗಳು, ಸಾಮಾನ್ಯ ಜನರಿಗೆ ಬೇಕಾಗುವ ಹೋರಾಟಗಳ ಪರವಾಗಿ ಮಾತನಾಡುವರಿಗೆ ಉಳಿಗಾಲವಿಲ್ಲದಂತಹ ಸ್ಥಿತಿಗಳು ನಿರ್ಮಾಣವಾಗುತ್ತಿವೆ. ಸಧ್ಯ ಭಾರತದಲ್ಲಿ ಬಡವರ ಪರವಾದ ಧ್ವನಿಗಳನ್ನು ಅಡಗಿಸುವಲ್ಲಿ ವ್ಯವಸ್ಥಿತವಾದ ಹುನ್ನಾರಗಳನ್ನು ರೂಪಿಸಲಾಗುತ್ತಿದ್ದು ಇದೀಗ ಒಂದಷ್ಟು ವಿಚಾರವಾದಿಗಳ ಹತ್ಯೆಗಳು ನಡೆದು ಹೋಗಿವೆ. ಯಾವ ಹತ್ಯೆಗೂ ತಾರ್ಕಿಕ ಅಂತ್ಯ ಮಾತ್ರ ದೊರೆತಿಲ್ಲವೆಂಬುವುದು ದುರಂತದ ಸಂಗತಿಯಾಗಿದೆ.
ಪ್ರಜಾಪ್ರಭುತ್ವ ಮತ್ತು ಭಾರತ :
ಪ್ರಸ್ತುತ ಭಾರತದಲ್ಲಿ ಪ್ರಜಾಪ್ರಭುತ್ವದ ಕಲ್ಪನೆಯನ್ನು ತಿರುವಿ ಹಾಕಲಾತ್ತಿದೆ. ಎಲ್ಲವೂ ಏಕಪಕ್ಷೀಯ ಮತ್ತು ಏಕವ್ಯಕ್ತಿ ನಿರ್ಧಾರವಾಗುತ್ತಿವೆ. ಇಲ್ಲಿಯವರೆಗಿನ ಅನೇಕ ನಿರ್ಧಾರಗಳು ಬಡವರ ಪಾಲಿಗೆ ಕಾದ ಕಬ್ಬಿಣದ ಅನುಭವ ನೀಡಿವೆ. ಸರಕಾರಗಳು ದೇಶದ ಅಭಿವೃದ್ಧಿಯತ್ತ ಮನಸ್ಸು ಮಾಡುವುದರ ಜೊತೆಗೆ ಇಲ್ಲಿನ ಗ್ರಾಮಮಟ್ಟದ ಬಡತನವನ್ನು ಬಂಡವಾಳ ಮಾಡಿಕೊಂಡು ದೇಶವನ್ನು ಒಡೆಯುವ ಹುನ್ನಾರ ಮಾಡುತ್ತಿದ್ದಾರೆ. ಧರ್ಮದ ಹೇರಿಕೆಯನ್ನು ಬಲವಾಗಿ ಹೇರುತ್ತಿದ್ದಾರೆ. ಸಮಾನತೆಯೇ ತನ್ನ ಉಸಿರಾಗಿಸುವ ಮೂಲಕ ನಿರ್ಗತಿಕರ ಮೇಲೆತ್ತುವ ಕೆಲಸಗಳನ್ನು ಮಾಡಬೇಕು ಆದರೆ ಕೇಂದ್ರ ಸರಕಾರದ ಅನೇಕ ನೀತಿ ನಿಯಮಗಳು ಭಾರತದ ಬಡವರ ವಿರುದ್ಧವಾಗಿ ಕಾಣುತ್ತಿವೆ. ಇದು ಪ್ರಜಾಪ್ರಭುತ್ವವನ್ನು ಪ್ರಶ್ನಿಸುವಂತೆ ಮಾಡಿರುವ ಬೆಳವಣಿಗೆ ಕಂಡುಬರುತ್ತಿದೆ. ಕ್ರಾಂತಿಯ ಬಗ್ಗೆಯ ಈ ಸಾಮಾನ್ಯ ಭಾವನೆಗಳು ತಾತ್ವಿಕವಾಗಿ ತಪ್ಪು ಎಂದು ಎತ್ತಿ ತೋರಿಸಬಹುದು. ಆ ವಿಷಯ ಬೇರೆ ಹಾಗೆಯೇ, ಪ್ರಜಾಪ್ರಭುತ್ವದ ಬಗ್ಗೆಯೂ ಕೆಲವು ಸಾಮಾನ್ಯ ಭಾವನೆಗಳಿವೆ. ಕ್ರಮಬದ್ದ ಚುನಾವಣೆಗಳು, ಅನೇಕ ರಾಜಕೀಯ ಪಕ್ಷಗಳು ಮತ್ತು ಪ್ರತಿ ವ್ಯಕ್ತಿಗೂ ಸಮಾನ ರಾಜಕೀಯ ಮೌಲ್ಯವನ್ನು ನೀಡುವ ಒಂದು ಪ್ರಾತಿನಿಧಿಕ ಸರ್ಕಾರದ ರೂಪ ಅದು.
ಪ್ರಜಾಪ್ರಭುತ್ವದ ಸ್ಥೂಲ ಸಂರಚನೆಯ ಮುಖ್ಯ ಶಿಲ್ಪಿ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಪರಿಗಣಿಸಲ್ಪಟ್ಟಿದ್ದರು. ಅವರ ಪ್ರಜಾಪ್ರಭುತ್ವದ ಕಲ್ಪನೆ ತೀರ ವಿಭಿನ್ನ ಸಮಾಜವನ್ನು ಆದರ್ಶ ಸಮಾಜವನ್ನಾಗಿ ತಮ್ಮ ಕಲ್ಪನೆಯ ಸುಖಿರಾಜ್ಯವನ್ನಾಗಿ ಬದಲಾಯಿಸಿ, ಸ್ವಾತಂತ್ರ್ಯ, ಸಮಾನತೆ ಮತ್ತು ಭಾತೃತ್ವಗಳನ್ನು ಒಟ್ಟಿಗೆ ಸಾಧಿಸಬಲ್ಲದೆಂಬಂತೆ ಪ್ರಜಾಪ್ರಭುತ್ವವನ್ನು ಅವರು ಕಲ್ಪಿಸಿಕೊಂಡ್ಡಿದರು. ಪ್ರಜಾಪ್ರಭುತ್ವವೆಂದರೆ ಸರ್ಕಾರದ ಒಂದು ರೂಪವೆಂದು, ಅದು ಹುಟ್ಟಿದ ಪ್ರಾಚೀನತೆಯಿಂದ ಇಂದಿನ ಆಧುನಿಕತೆಯವರೆಗೂ ಕಲ್ಪಿಸಿಕೊಳ್ಳಲಾಗಿದೆ. ಪ್ರಜಾಪ್ರಭುತ್ವವು ಕೇವಲ ಸರ್ಕಾರದ ಒಂದು ರೂಪವಲ್ಲ. ಅದು ಪ್ರಮುಖವಾಗಿ ಸಹಬಾಳ್ವೆಯ ಸೊಗಸು ಮತ್ತು ಅನುಭವವನ್ನು ಪರಸ್ಪರ ದಟೈಸುವ ಒಂದು ಜೋಡಣಿ. ಮೂಲಭೂತವಾಗಿ ಅದು ಸಹವರ್ತಿಗಳೆಡೆಗೆ ತೋರುವ ಗೌರವಾದರ ಭಾವನೆ ಎಂದು ಹೇಳಿದ್ದಾರೆ.
ಅವರ ದೃಷ್ಟಿಯಲ್ಲಿ ಪ್ರಜಾಪ್ರಭುತ್ವ ಪ್ರಜಾಸತ್ತಾತ್ಮಕ ಸಮಾಜವನ್ನು ನಿರೀಕ್ಷಿಸುತ್ತದೆ. ರಾಜಕಾರಣಿಗಳು ಪ್ರಜಾಪ್ರಭುತ್ವವು ಮೂಲಭೂತವಾಗಿ ಸಮಾಜದ ಒಂದು ಸ್ವರೂಪ ಕೇವಲ ಸರ್ಕಾರದ ಮಾದರಿ ಅಲ್ಲ ಎನ್ನುವುದನ್ನು ಗ್ರಹಿಸಲ್ಲಿಲ್ಲ. ಇದು ಎರಡು ಅಂಶಗಳನ್ನು ಒಳಗೊಂಡಿದೆ. ಮೊದಲನೆಯದು ಒಂದು ಮನೋಭಾವ, ಸಹವರ್ತಿಗಳಿಗೆ ಗೌರವ ಮತ್ತು ಸಮಾನತೆ. ಎರಡನೆಯದು ಪೆಡಸಾದ ಸಾಮಾಜಿಕ ಅಡೆ-ತಡೆಗಳಿಂದ ಮುಕ್ತ ಸಮಾಜ. ಸಾಮಾಜಿಕ ಪ್ರಜಾಪ್ರಭುತ್ವವ ಎನ್ನುವ ಪದ ಸಾಮಾನ್ಯವಾಗಿ ಆರ್ಥಿಕ ಸಂಸ್ಧೆಗಳು ಹಾಗೂ ಬಂಡವಾಳ ಕ್ರಮೇಣ ಸಮಾಜವಾದಕ್ಕೆ ಹೊರಳುತ್ತದೆಂಬ ಫೇಬಿಯನ್ ನಂಬಿಕೆಗಳನ್ನು ಒಳಗೊಂಡಿರುತ್ತದೆ. ಅಂಬೇಡ್ಕರ ಅವರ ಪ್ರ್ರಕಾರ ಅದು ಶ್ರೇಣೀಕೃತವಲ್ಲದ, ವಿಂಗಡಣೆ ಮತ್ತು ಪ್ರತ್ಯೇಕಗಳಿಲ್ಲದ ಸಮಾಜ ಅದು ಭಾರತಿಯ ಸಮಾಜ ಮತ್ತು ಅದರ ಜಾತಿಗಳ ವ್ಯವಸ್ಥೆಗೆ ತೀಕ್ಷಣವಾಗಿ ಅನ್ವಯಿಸುತ್ತದೆ.
ಅದು ಮೇಲ್ನೋಟಕ್ಕೆ ಫೇಬಿಯನ್ ಕಲ್ಪನೆಯ "ಸಾಮಾಜಿಕ ಪ್ರಜಾಪ್ರಭುತ್ವ"ದೊಂದಿಗೆ ಅನೇಕ ಅಂಶಗಳನ್ನು ಹಂಚಿಕೊಂಡಿದೆ. ಸಹಕಾರ ಮತ್ತು ಸಮುದಾಯ ಇದು ಭಾತೃತ್ವವನ್ನು ಸೂಚಿಸುತ್ತದೆ. ಸಮಾನತೆ ಅವಕಾಶ ಮತ್ತು ಗಳಿಕೆಗಳೆರಡರಲ್ಲೂ ಮತ್ತು ಸ್ವಾತಂತ್ರ್ಯ ಅದರ ಜೊತೆಗೆ ಅವರು ಸಂಪನ್ಮೂಲಗಳ ಹಂಚಿಕೆಯಲ್ಲಿ ವ್ಯಕ್ತಿಗಳ ಸಮಾನ ಮೌಲ್ಯವನ್ನು ವಿವರಿಸುವ 'ಆರ್ಥಿಕ ಪ್ರಜಾಪ್ರಭುತ್ವ' ಎನ್ನುವ ಪದವನ್ನು ಬಳಸಿದ್ದಾರೆ. ಹೀಗೆ ಅಂಬೇಡ್ಕರರ ಪ್ರಜಾಪ್ರಭುತ್ವವು ಮೂರು ಭಾಗಗಳನ್ನು ಹೊಂದಿದೆ ಔಪಚಾರಿಕ ಪ್ರಜಾಪ್ರಭುತ್ವವಾಗಿ ರಾಜಕೀಯ ಪ್ರಜಾಪ್ರಭುತ್ವ, ಸಾಮಾಜಿಕ ಸಮಾನತೆಗೆ ಅನ್ವಯಿಸುವ ಸಾಮಾಜಿಕ ಪ್ರಜಾಪ್ರಭುತ್ವ, ಮತ್ತು ಸಮಾಜವಾದಿ ಆರ್ಥಿಕತೆಯುಳ್ಳ ಆರ್ಥಿಕ ಪ್ರಜಾಪ್ರಭುತ್ವ. ಇವು ಮೂರು ತಮ್ಮ ಆದರ್ಶ ಸಮಾಜದ ಸ್ವರೂಪವಾದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಗಳೊಂದಿಗೆ ಸಮೀಕೃತಗೊಳ್ಳುತ್ತವೆ. ಎಂದು ಅಂಬೇಡ್ಕರ್ ಹೇಳಿದ್ದರು.
ಸ್ವಾತಂತ್ರ್ಯದ ಸಂದರ್ಭದಲ್ಲಿ ನೆಹರು ಅವರಿಂದ ಕಾನೂನು ಸಚಿವರಾಗಲು ಆಹ್ವಾನ ಪಡೆದ ಅಂಬೇಡ್ಕರ್ ಅವರು, ಭಾರತದ ಸಂವಿಧಾನ ರೂಪಿಸುವ ಜವಾಬ್ಧಾರಿಯನ್ನು ಹೊತ್ತು ಅಪಾರವಾದ ಶ್ರಮವಹಿಸಿ ದೇಶಕ್ಕೆ ಸಂವಿಧಾನವನ್ನು ಕಟ್ಟಿಕೊಟ್ಟರು. ಇಂದು ಡಾ. ಅಂಬೇಡ್ಕರ್ ಅವರನ್ನು ಭಾರತದ ಸಂವಿಧಾನಶಿಲ್ಪಿ ಎಂದು ಮುಕ್ತ ಕಂಠದಿಂದ ಹೇಳಲಾಗುತ್ತಿದೆ. ಇಡೀ ವಿಶ್ವದಲ್ಲಿ ಸ್ವತಂತ್ರವಾದ ಅನೇಕ ದೇಶಗಳು ಸಾರ್ವಜನಿಕರ ಹಕ್ಕುಗಳನ್ನು ಕಾಪಾಡಲು ಅಸಮರ್ಥವಾಗಿವೆ ಎಂಬ ಹಿನ್ನೆಲೆಯಲ್ಲಿ ಭಾರತದ ಈ ಸಂವಿಧಾನ ಎದ್ದು ಕಾಣುತ್ತದೆ ಹಾಗೂ ಇದಕ್ಕೆ ಡಾ. ಅಂಬೇಡ್ಕರ್ ಕೊಡುಗೆಯನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳಲಾಗಿದೆ.
ರಾಜಕೀಯ ಪ್ರಜಾಪ್ರಭುತ್ವವು ಬಹುಮತವನ್ನು ತಿರುಚಿ ಬದಲಾಯಿಸಲು ಸಾಧ್ಯವಿಲ್ಲದಂತೆ ಸಮಾಜದ ಆರ್ಥಿಕ ಚೌಕಟ್ಟನ್ನು ಸಂವಿಧಾನದೊಳಗೆ ಭದ್ರವಾಗಿ ಅಳವಡಿಸಬೇಕೆಂದು ಅವರು ಬಯಸಿದ್ದರು. 'ಲಿಬರಿಸಂ'ನಲ್ಲಿ ಇಂತ ಹೊಳಹುಗಳು ಅಪರೂಪ. ಖಾಸಗಿ ಉದ್ದಿಮೆಯ ಮೇಲೆ ಆಧರಿಸಿದ ಆರ್ಥಿಕ ವ್ಯವಸ್ಥೆ ಪ್ರಜಾಪ್ರಭುತ್ವ ತತ್ವಗಳಿಗೆ ವಿರುದ್ದವಾದದ್ದು ಎಂದು ಅವರು ಸ್ಪಷ್ಟವಾಗಿ ತಿಳಿದಿದ್ದರು. "ಖಾಸಗಿ ಉದ್ದಿಮೆ ಮತ್ತು ವ್ಯೆಯಕ್ತಿಕ ಲಾಭಗಳಿಕೆಯನ್ನು ಆಧರಿಸುವ ಸಾಮಾಜಿಕ ಅರ್ಥವ್ಯವಸ್ಥೆಯನ್ನು ಅಭ್ಯಾಸ ಮಾಡುವ ಯಾರಾದರೂ ಇದು ಹೇಗೆ ಪ್ರಜಾಪ್ರಭುತ್ವದ ಮೂಲಾಧಾರವಾದ 'ವ್ಯಕ್ತಿಗಳ ಹಕ್ಕು'ಗಳನ್ನು ಕಿತ್ತುಕೊಳ್ಳದಿದ್ದರೂ ಬಹಳ ಮಟ್ಟಿಗೆ ಮೊಟಕುಗೊಳಿಸುತ್ತದೆ ಎನ್ನುವುದನ್ನು ಮನಗಾಣುವರು.
ಜೀವನೋಪಾಯಕ್ಕಾಗಿ ಎಷ್ಟ್ಟು ಜನ ತಮ್ಮ ಹಕ್ಕುಗಳನ್ನು ಬಿಟ್ಟುಕೊಡ ಬೇಕಾಗುವುದು? ಎಷ್ಟ್ಟು ಜನ ಖಾಸಗಿ ಮಾಲೀಕರಿಂದ ಆಳಿಸಿಕೊಳ್ಳಲು ಸಿದ್ದರಾಗಬೇಕು?"ಆದ್ದರಿಂದ ಪ್ರಜಾಪ್ರಭುತ್ವವನ್ನು ಸಹಕಾರಗೊಳಿಸಲು ಉತ್ಪಾದನೆಯ ಸಾಧನಗಳು ಸಮಾಜದ ಒಡೆತನದಲ್ಲಿ ಇರಬೇಕೆಂದು ಅವರು ಬಯಸಿದರು.
ಸಂವಿಧಾನದ ಉದೇಳನವನ್ನು ಕುರಿತು ಠರಾವಿನ ಬಗ್ಗೆ ಮಾತನಾಡುತ್ತ 17 ಡಿಸೆಂಬರ್ 1946ರಲ್ಲಿ ಅವರು, ಠರಾವಿನಲ್ಲಿ ಪ್ರಸ್ತಾಪಿಸಿದ್ದಂತೆ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ನ್ಯಾಯವನ್ನು ಖಾತ್ರಿಗೊಳಿಸಲು ಆರ್ಥಿಕ ವ್ಯವಸ್ಥೆಯಾಗಿರಬೇಕು ಎಂದು ಹೇಳಿದ್ದರು. ಆರ್ಥಿಕ ವ್ಯವಸ್ಥೆ ಸಮಾಜವಾದಿ ಆರ್ಥಿಕ ವ್ಯವಸ್ಥೆಯಾಗದ ಹೊರತು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ ದೊರಕಿಸುವಲ್ಲಿ ನಂಬಿಕೆ ಇಟ್ಟ ಯಾವುದೇ ಮುಂದಿನ ಸರ್ಕಾರಕ್ಕೆ ಇದು ಹೇಗೆ ಸಾಧ್ಯ ಎನ್ನುವುದು ನನಗೆ ಅರ್ಥವಾಗದು. ವಾಸ್ತವವಾಗಿ ಸಂವಿಧಾನ ರಚನಾಸಭೆಯನ್ನು ತಾವು ರೂಪುಗೊಳಿಸಿದ್ದ 'ರಾಷ್ಟ್ರವೇ ನಿಯಂತ್ರಿಸುವ ಸಮಾಜವಾದ' ವ್ಯವಸ್ಥೆಗೆ ಅವರು ದನಿ ಕೊಡುತ್ತಿದ್ದರು.
ತಮ್ಮ 'ರಾಷ್ಟ್ರಗಳನ್ನು ಮತ್ತು ಅಲ್ಪಸಂಖಾತರು' ಎನ್ನುವ ಪುಸ್ತಕದಲ್ಲಿ ಅವರು ಈ ಬಗ್ಗೆ ಈ ವ್ಯವಸ್ಥೆಯ ಬಗ್ಗೆ ಇನ್ನಷ್ಟು ವಿಷಾದವಾಗಿ ಹೇಳಿದ್ದಾರೆ. ಸಂವಿಧಾನದ ಕಾರ್ಯದ ನಿರ್ವಹಣೆಯ 60 ವರ್ಷಗಳ ಲೆಕ್ಕ ತೆಗೆದರೆ ಈ ನಿರ್ದೆಶಕ ತತ್ವಗಳನ್ನು ನಿರ್ಭಯವಾಗಿ ತುಳಿದು ಆಡಳಿತದ ನೀತಿ ನಿರೂಪಣೆ ಮಾಡಿರುವುದನ್ನು ಕಾಣುತ್ತೇವೆ. ಉದಾಹರಣೆಗೆ, ಜಾಗತೀಕರಣಕ್ಕೆ ಸಂಬಂಧಿಸಿದ ಇಡೀ ನೀತಿ ನಿರೂಪಣೆಯು ಸಂಪೂರ್ಣವಾಗಿ ಈ ನಿರ್ದೇಶಕ ತತ್ವಗಳ ಉಲ್ಲಂಘನೆ ಎಂದು ಪರಿಗಣಿಸಬಹುದು.
ಈ ಹೊತ್ತಿನಲ್ಲಿ ಹೊರಬಂದ ನೋಟು ರದ್ಧತಿ, ಜಿ.ಎಸ್.ಟಿ ಇತ್ಯಾದಿಗಳೆಲ್ಲವೂ ಬಡವರ ಮೇಲಿನ ಆರ್ಥಿಕ ಹೊಡೆತ ಎಂದರೆ ತಪ್ಪಾಗದು. ದೇಶದ ಆರ್ಥಿಕತೆಯಲ್ಲಿ ಸಹಕಾರವಾಗಬಲ್ಲ ಈ ಬದಲಾವಣೆಗಳಿಂದ ಬಡವರ ಮೇಲೆ ಘೋರವಾದ ಹೊಡೆತ ಕೊಟ್ಟಿರುವುದಂತು ಅಕ್ಷರಸ: ಸತ್ಯವಾಗಿದೆ. ಇವತ್ತಿನ ಜಿ.ಎಸ್.ಟಿ. ಬಗ್ಗೆ ಹೇಳುವುದಾದರೆ ನಾವು ಟ್ಯಾಕ್ಸ ಕಟ್ಟಬೇಕು ನಿಜ ಆದರೆ ಟ್ಯಾಕ್ಸ್ ಹೆಸರಿನಲ್ಲಿ ಅನೇಕ ವ್ಯಾಪಾರಿಗಳು ಪ್ರತಿಯೊಂದು ಸರಕಿನ ಬೆಲೆ ಗಗನಕ್ಕೇರಿದೆ ಬಡವರಾರು ಈ ಬೆಲೆಯನ್ನು ತುಂಬಿಸಲಾರ ಸ್ಥಿತಿಯಲ್ಲಿದ್ದಾರೆ. ಒಬ್ಬ ಮೆಣಸಿನಕಾಯಿ ವ್ಯಾಪಾರಿಯಿಂದ ದೊಡ್ಡ ದೊಡ್ಡ ವ್ಯಾಪಾರಿಗಳವರೆಗೆ ಈ ಮೋಸ ನಡೆದಿದೆ. ಜಿ.ಎಸ್.ಟಿ. ಇರುವುದೊಂದು ವ್ಯಾಪಾರಿಗಳು ಮಾಡುವುದೊಂದಾಗಿದೆ. ಈ ಜಿ.ಎಸ್.ಟಿ. ಸರಿಯಾಗಿ ಅನುಷ್ಠಾನವಾಗಬೇಕಾದರೆ ಪ್ರತಿಯೊಬ್ಬ ಸಣ್ಣಪುಟ್ಟ ವ್ಯಾಪಾರಿಗಳು ಕೂಡ ಬಿಲ್ ಕೊಡಬೇಕು ಬಿಲ್ ಇಲ್ಲದ ಸರಕಿನ ಜಿ.ಎಸ್.ಟಿ ಸರಕಾರಕ್ಕೆ ಸಂದಣಿಯಾಗುವುದು ಹೇಗೆ ಎಂಬುವುದು ಅತ್ಯಂತ ಸರಳ ತಿಳುವಳಿಕೆಯಲ್ಲವೆ? ಈ ಕುರಿತು ಪ್ರಜಾಪ್ರಭುತ್ವವನ್ನು ಕೊಳ್ಳೆ ಹೊಡೆಯುವ ಕೆಲಸ ಕೇಂದ್ರ ಸರಕಾರ ಬಿಡಬೇಕು. ಇದಾಗಲೇ ಆಹಾರದ ಹಕ್ಕಿನ ಮೇಲೆ ಕಲ್ಲುಹಾಕಿದವರು ಇದೀಗ ಆರ್ಥಿಕ ಸ್ವಾದೀನತೆ ಮಾಡಿಕೊಳ್ಳುತ್ತಿರುವುದು ದುರಂತದ ಸಂಗತಿಯಾಗಿದೆ. ದೇಶ ಅಭಿವೃದ್ಧಿ ಮಾಡುವುದೆಷ್ಟು ಮುಖ್ಯವೊ ಜನಸಾಮಾನ್ಯರ ಬದುಕು ಸರಳಗೊಳಿಸಿ ಸಬಲಗೊಳಿಸಿ ಪ್ರಜಾಪ್ರಭುತ್ವ ಉಳಿಸಿ ಡಾ.ಅಂಬೇಡ್ಕರ್ ರ ಸಂವಿಧಾನದಂತೆ ದೇಶದಲ್ಲಿ ಓಟು ಹಾಕುವವರ ಹಕ್ಕುಗಳನ್ನು ಪ್ರಜಾಪ್ರಭುತ್ವತೆಯನ್ನು ಕಾಪಾಡಬೇಕಿದೆ ಯೋಚಿಸಿ ನೋಡಿ.
ವಿಚಾರವಾದಿಗಳ ಹತ್ಯೆ ಪ್ರಜಾಪ್ರಭುತ್ವದ ಹತ್ಯೆಗೆ ಸಮ :
ಈ ದೇಶದ ಪ್ರಜಾಪ್ರಭುತ್ವ ಜನಹಿತ ಬಯಸುತ್ತದೆ ಆದರೆ ದೇಶದ ವಿಚಾರವಾದಿಗಳನ್ನು ಕೊಲೆಮಾಡಲಾಗುತ್ತಿದೆ. ಪ್ರಜಾಪ್ರಭುತ್ವದ ನಾಡಿನಲ್ಲಿ ಮಾತನಾಡುವ ಕೆಟ್ಟದ್ದನ್ನು ವಿರೋಧಿಸುವ ಹಕ್ಕಿದೆ. ಜನರ ಮೂಢನಂಬಿಕೆಗಳನ್ನು ಹೋಗಲಾಡಿಸಲು ಅವಕಾಶವಿದೆ. ಅಂತಹ ಕೆಲಸ ಮಾಡುವವರ ಮೇಲೆ ಹಲ್ಲೆ ಮಾಡುತ್ತಿರುವುದು ಮನುಷ್ಯ ವಿರೋಧಿ ಜೀವಗಳು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದ್ದಾರೆ.
ವೈಚಾರಿಕೆತೆ ಎಂಬುವುದು ಯಾರ ಅಪ್ಪನ ಸೊತ್ತಲ್ಲ ಮತ್ತೆ ಇದ್ದ ವಿಷಯ ಇದ್ದ ಹಾಗೆ ಹೇಳುವುದು ಇವತ್ತಿನ ಅವಶ್ಯಕತೆ ಅದನ್ನೇ ವಿಚಾರವಾದಿಗಳು ತಮ್ಮ ವೈಚಾರಿಕತೆ ಮತ್ತು ಸಂಶೋಧನೆಯ ಅನುಭವದ ಮೂಲಕ ಹೇಳಿ ನಾಡಿನ ಜನತೆಯ ಮೌಢ್ಯತೆಯನ್ನು ಹೋಗಲಾಡಿಸಲು ಪ್ರಯತ್ನಿಸಿದರೆ ಅವರನ್ನು ನಿಗೂಢವಾಗಿ ಕೊಲೆ ಮಾಡಿದರೆ ಅದು ಈ ದೇಶದ ಪ್ರಜಾಪ್ರಭುತ್ವದ ಕೊಲೆ ಮಾಡಿದಂತಾಗುತ್ತದೆ.
ರಾಜ್ಯದಲ್ಲಿ ಮುಂದುವರಿದ ವಿಚಾರವಾದಿಗಳ ಹತ್ಯೆ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಗುಂಡಿಗೆ ಬಲಿ ಬೆಂಗಳೂರಿನ ನಿವಾಸದಲ್ಲೇ ಕಗ್ಗೊಲೆಯಾಗಿದೆ. ಕರ್ನಾಟಕದ ಕಾನೂನಿನ ಆಡಳಿತಗಾರರು ಸುಖನಿದ್ರೆಯಲ್ಲಿರುವಂತೆ ಮಾಡಿ ಪಾಪಿಗಳು ಗೌರಿ ಹತ್ಯೆ ಮಾಡಿದ್ದಾರೆ. ವಿಚಾರವಾದಿಗಳಾದ ಎಂ.ಎಂ. ಕಲಬುರ್ಗಿ, ನರೇಂದ್ರ ದಾಭೋಲ್ಕರ್ ಹಾಗೂ ಗೋವಿಂದ ಪನ್ಸಾರೆ ಅವರ ಹತ್ಯೆ ಈ ದೇಶ ಹಾಗೂ ರಾಜ್ಯದ ಬಹುದೊಡ್ಡ ಆಡಳಿತ ವೈಫಲ್ಯವೆನಿಸುತ್ತದೆ. ಕೆಲ ದಿನಗಳ ಹಿಂದೆ ರಾಜರಾಜೇಶ್ವರಿನಗರದ ತಮ್ಮ ಮನೆಯ ಮುಂದೆ ಗೌರಿ ಗುಂಡೇಟಿಗೆ ಬಲಿಯಾಗಿದ್ದರು. ಪ್ರಕರಣ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿತ್ತು. ರಾಜ್ಯ ಸರಕಾರ ಕುಟುಂಬದವರ ಒತ್ತಾಯದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗೆ ಎಸ್ಐಟಿ ರಚಿಸಿತ್ತು. ಸುಮಾರು 100 ಜನರ ತಂಡ ಕಳೆದ 12 ದಿನಗಳಲ್ಲಿ ನಾನಾ ಜಾಡು ಹಿಡಿದು ತನಿಖೆ ನಡೆಸುತ್ತಿದೆ ಆದರೆ ಫಲಿತಾಂಶ ಮಾತ್ರ ಶೂನ್ಯವಿದೆ.
ಗೌರಿ ಲಂಕೇಶ್ ಸುದ್ದಿ ಬಹಿರಂಗವಾಗುತ್ತಿದ್ದಂತೆ ಘಟನಾ ಸ್ಥಳದಲ್ಲಿ ಅವರ ಹಿತೈಷಿಗಳು ಅಂದೇ ಸೇರತೊಡಗಿದರು. ಮಾರನೇ ದಿನ ಬೆಳಗ್ಗೆಯೇ ಕನ್ನಡದ ದಿನ ಪತ್ರಿಕೆಯೊಂದು `ಹತ್ಯೆ ಹಿಂದೆ ಎಡಪಂಥೀಯರ ಕೈವಾಡ'' ಎಂಬ ಶಂಕೆಯ ಸುದ್ದಿಯೊಂದನ್ನು ಮುಖಪುಟದಲ್ಲಿ ಪ್ರಕಟಿಸಿತ್ತು. ಇದಕ್ಕೆ ಅವರ ಕೊನೆಯ ಟ್ವೀಟ್ ಗಳನ್ನು ಆಧಾರವಾಗಿ ಇಟ್ಟುಕೊಳ್ಳಲಾಗಿತ್ತು. ಮುಂದಿನ ಒಂದು ವಾರದಲ್ಲಿ ನಕ್ಸಲ್ ಚಳವಳಿಯ ವಿಕ್ರಂ ಗೌಡ ಎಂಬುವವರ ಹೆಸರನ್ನು ತೇಲಿ ಬಿಡುವ ಪ್ರಯತ್ನ ನಡೆಯಿತು. ಕಳೆದ ವೀಕೆಂಡ್ ಹೊತ್ತಿಗೆ, ಗೌರಿ ಲಂಕೇಶ್ ಪ್ರಕರಣದ ಶಂಕೆಗಳು ಸನಾತನ ಸಂಸ್ಥೆ ಮತ್ತು ರುದ್ರ ಪಾಟೀಲ್ ಎಂಬುವವರ ಕಡೆಗೆ ನೆಟ್ಟಿವೆ. ``ಮುಂದಿನ ದಿನಗಳಲ್ಲಿ ಇದು ಮಂಗಳೂರಿಗೂ ಹೋಗಿ ನಿಲ್ಲುವ ಸಾಧ್ಯತೆಗಳಿವೆ.''
``ಇವೆಲ್ಲವೂ ಊಹಾಪೋಹಗಳು ಅಷ್ಟೆ,'' ಎನ್ನುವ ಅವರ ಗೌರಿ ಲಂಕೇಶ್ ಹತ್ಯೆಗೂ ಎರಡು ವರ್ಷಗಳ ಹಿಂದೆ ನಡೆದ ಕಲ್ಬುರ್ಗಿ ಹತ್ಯೆ ಪ್ರಕರಣಕ್ಕೂ ಸಾಮ್ಯತೆ ಇದೆ,'' ಎನ್ನುತ್ತಾರೆ. ಅದಕ್ಕೆ ಘಟನಾ ಸ್ಥಳದಲ್ಲಿ ಸಿಕ್ಕಿರುವ ಕಾಡತೂಸುಗಳೇ ಸಾಕ್ಷಿ ಎನ್ನುತ್ತಾರೆ. ಈ ಕುರಿತು ಸರಕಾರಕ್ಕೆ ವರದಿಯೂ ಸಲ್ಲಿಕೆಯಾಗಿದೆ. ಹೀಗಿರುವಾಗಲೇ ರಾಷ್ಟ್ರೀಯ ಪತ್ರಿಕೆಗಳು, `ಗೌರಿ ಲಂಕೇಶ್ ಹಾಗೂ ಸಂಶೋಧಕ ಕಲ್ಬುರ್ಗಿ ಹತ್ಯೆಗಳಿಗೆ ಬಳಸಿದ ಪಿಸ್ತೂಲು ಒಂದೇ' ಎಂದು ವರದಿಗಳನ್ನು ಪ್ರಕಟಿಸಿದವು.
ಇದರ ನಡುವೆ, ಗೌರಿ ಲಂಕೇಶ್ ಹತ್ಯೆ ದಿನ ಕಚೇರಿಯಲ್ಲಿ `ಪಾರ್ಟಿ ಮಾಡಿದ್ದರು' ಎಂಬಂತಹ ದುರುದ್ದೇಶಪೂರ್ವಕ, ಮಾನಹಾನಿ ವರದಿಗಳು ಪ್ರಕಟಗೊಂಡವು. ``ಈ ಪ್ರಕರಣದ ಎಷ್ಟರ ಮಟ್ಟಿಗೆ ಸೆನ್ಸೇಷನ್ ಕ್ರಿಯೇಟ್ ಮಾಡಿದೆ ಎಂದರೆ ಎಸ್ಐಟಿ ತನಿಖೆ ಜತೆಗೆ ನಾನಾ ತನಿಖೆಗಳು ನಡೆಯುತ್ತಿವೆ,'' ಎಂದು ತಮಾಷೆಯಾಗಿ ಹೇಳುತ್ತಾರೆ ಹಿರಿಯ ಪೆÇಲೀಸ್ ಅಧಿಕಾರಿಯೊಬ್ಬರು. ಒಟ್ಟಾರೆ, ಕಳೆದ ಕೆಲ ದಿನಗಳಲ್ಲಿ, ಅದರಲ್ಲೂ ವಿಶೇಷವಾಗಿ ಕಳೆದ ಮೂರು ದಿನಗಳಲ್ಲಿ ದೊಡ್ಡ ಸಂಖ್ಯೆಯ ಥಿಯರಿಗಳು ಗೌರಿ ಹತ್ಯೆ ಸುತ್ತ ಹುಟ್ಟಿಕೊಂಡಿವೆ. ಆದರೆ ಪ್ರಕರಣ ಮಾತ್ರ ನಿಗೂಢವಾಗುತ್ತಲೇ ಹೋಗುತ್ತಿದೆ.
ಸಂವಿಧಾನದಂತೆ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಪಾಲನೆಯಲ್ಲಿರುವ ಭಾರತದಲ್ಲಿ ಇತ್ತೀಚೆಗೆ ಏಕಸಂಸ್ಕೃತಿ, ಏಕಧರ್ಮ ದೌರ್ಜನ್ಯ, ಕೋಮು ಪ್ರಚೋದನೆ ಹೆಚ್ಚಾಗುತ್ತಿದ್ದು, ಪರಿಣಾಮ ವಿಚಾರವಾದಿಗಳ ಹತ್ಯೆ,ಹಲ್ಲೆಗಳು ನಿರಂತರ ನಡೆಯುತ್ತಿದೆ. ಕೂಡಲೆ ಸರ್ಕಾರ ಎಚ್ಚೆತ್ತುಕೊಂಡು ಇಂತಹ ವಿರೋಧಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳದೇ ಹೋದರೆ ಕೊಲೆಗಳು ಮುಂದುವರೆದು ವೈಚಾರಿಕತೆಯಿಲ್ಲದ ಭಾರತ ಮೂಢನಂಬಿಕೆಯ ಗೂಡಿನಲ್ಲಿ ಬಡವರ ನರಳಾಟ ಪ್ರಾರಂಭವಾಗಿ ಶ್ರೀಮಂತರ ಬಲಾಢ್ಯರ ಅಟ್ಟಹಾಸ ಮೆರೆಯುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.
ಸಂಶೋಧಕ ಎಂ.ಎಂ.ಕಲಬುರ್ಗಿ,ಪತ್ರಕರ್ತೆ ಗೌರಿ ಲಂಕೇಶ್ ಮುಂತಾದವರನ್ನು ಗುಂಡಿಕ್ಕಿ ಕೊಂದಿರುವುದು, ಸಾಹಿತಿ ಕೆ.ಎಸ್.ಭ ಗವಾನ್ ಅವರಿಗೆ ಕೊಲೆ ಬೆದರಿಕೆ ಹಾಕುತ್ತಿರುವುದು, ಸಾಮಾಜಿಕ ಚಿಂತಕರಾಗಿರುವ ದಿನೇಶ್ ಅಮೀನ್ ಮಟ್ಟು ರವರ ಮೇಲೆ ಹಲ್ಲೆ,ಹತ್ಯೆ ನಡೆಸಲು ಗೂಢಾಲೋಚನೆ ನಡೆಯುತ್ತಿರುವುದಲ್ಲದೇ ನಿನ್ನೆ ಗುಂಟೂರಿನಲ್ಲಿ ಪುಸ್ತಕ ಬಿಡುಗಡೆ ಮುಗಿಸಿ ಮರಳುವಾಗ ಚಿಂತಕ ಕಾಂಚ ಇಲಯ್ಯ ಅವರ ಕಾರಿನಮೇಲೆ ಕಲ್ಲುತೂರಿ ದಾಳಿ ನಡೆಸಿರುವುದು.ಹೀಗೆ ದೇಶದುದ್ದಗಲಕ್ಕೂ ಪ್ರಗತಿಪರರ,ಪತ್ರಕರ್ತರ ಮೇಲೆ ಹಲ್ಲೆ ನಡೆಯುತ್ತಿರುವುದು ಖಂಡನೀಯವಾಗಿದೆ. ಆಡಳಿತ ನಡೆಸುತ್ತಿರುವ ಸರಕಾರಗಳು ಈ ವಿಷಯಗಳನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡು ಕಟ್ಟುನಿಟ್ಟಿನ ಕ್ರಮ ಜರುಗಿಸದೇ ಹೋದರೆ ಭಾರತದಲ್ಲಿ ಭಯಾನಕ ವಾತಾವರಣ ನಿರ್ಮಾಣವಾಗಲಿದೆ.
ದೇಶದಲ್ಲಿ ಸರ್ವಜನರ ಬದುಕನ್ನು ಹತ್ತಿಕ್ಕುವ ಹುನ್ನಾರ ನಡೆಸುತ್ತಿರುವ ತಪ್ಪಿತಸ್ಥರ ವಿರುದ್ಧ ಕಾನೂನು ಉಗ್ರ ಕ್ರಮ ಕೈಗೊಳ್ಳಬೇಕು, ಆಹಾರ ವೈವಿದ್ಯತೆಯ ಮೂಲಭೂತ ಹಕ್ಕಿಗೆ ಭಂಗ ಉಂಟು ಮಾಡುತ್ತಿರುವ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಅವಶ್ಯಕ. ಇಂತಹ ಕೋಮುವಾದಿ ಕೃತ್ಯಗಳಿಗೆ ಪ್ರಗತಿಪರ ಚಿಂತಕರು ಸಂಘಟನೆಗಳು ಒಗ್ಗೂಡಿ ಪ್ರತಿಭಟಿಸುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ ಅದು ಸರಕಾರಗಳ ಗಡಚು ಕಿವಿಗೆ ಕೇಳಿಸಬೇಕಾಗಿದೆ.
ಸರ್ವಧರ್ಮ ಸಹಿಷ್ಣುತೆಯನ್ನು ಹೊಂದಿರುವ ರಾಜ್ಯದಲ್ಲಿ ಸೈದ್ಧಾಂತಿಕ ಬಿನ್ನತೆಯ ಅಸಹನೆಗೆ ಮತ್ತೊಂದು ಹತ್ಯೆ ನಡೆದು ಹೋಗಿದೆ. ಸಾಮಾಜಿಕ ಹೋರಾಟಗಾರ, ಮಾನವೀಯತೆಯ ಪರ ರಾಜಿಯಿಲ್ಲದೆ ಹೋರಾಟ ನಡೆಸುತ್ತಿದ್ದ ವ್ಯಕ್ತಿಗಳ ಸರಣಿ ಕೊಲೆಗಳು ರಾಜ್ಯ ಮತ್ತು ಕೇಂದ್ರದಲ್ಲಿ ಆಡಳಿತ ಮಾಡುತ್ತಿರುವ ಸರಕಾರಗಳ ರಾಜಕೀಯ ಮೇಲಾಟ ನೆನಪಿಸುತ್ತದೆ. ರಾಜ್ಯದಲ್ಲಿ ನಿರಂತರವಾಗಿ ಸೈಧ್ಧಾಂತಿಕ ಭಿನ್ನತೆಯ ಹೆಸರಿನಲ್ಲಿ ನಾಡಿನ ಸಾಹಿತಿಗಳು , ವಿಚಾರವಾದಿಗಳ ಮೇಲೆ ನಡೆಯುವ ದಾಳಿಗಳು ,ಕೊಲೆಗಳ ವಿರುದ್ಧ ಆತಂಕ ವ್ಯಕ್ತಪಡಿಸಿದ ಅವರು ಸಂಶೋಧಕ ಎಂ.ಎಂ ಕಲ್ಬುರ್ಗಿಯವರ ಕೊಲೆ ನಡೆದು ವರ್ಷಗಳು ಎರಡು ಕಳೆದರೂ ಇದುವರೆಗೂ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿಲ್ಲ. ಕಲಬುರ್ಗಿಯವರ ಹತ್ಯೆಯ ಹಂತಕರನ್ನು, ಪ್ರಾಯೋಜಕರನ್ನು ಕಂಡು ಹಿಡಿದಿದ್ದರೆ ಗೌರಿ ಹತ್ಯೆ ತಪ್ಪಿಸಬಹುದಾಗಿತ್ತು.
ವೈಚಾರಿಕ ಮತ್ತು ಸೈದ್ಧಾಂತಿಕ ಕಾರಣಗಳಿಗಾಗಿ ವಿಚಾರವಾದಿಗಳನ್ನು ವಿರೋಧಿಸಿದರೆ, ಜೀವ ಸಹಿತ ಬಿಡಲ್ಲ ಎನ್ನುವ ಈ ದಬ್ಟಾಳಿಕೆ ಸಂಸ್ಕೃತಿ ನಾಗರೀಕ ಸಮಾಜಕ್ಕೆ ಶ್ರೇಯಸ್ಸು ಅಲ್ಲ. ಪ್ರಜಾಪ್ರಭುತ್ವ ರೂಪಗೊಳ್ಳುವ, ಬೆಳೆಯುವ ವಿಧಾನವೂ ಅಲ್ಲ. ಹಾಗಾಗಿ ಯಾವುದೇ ಹಿಂಸಾತ್ಮಕ ಸಂಘಟನೆಗಳು, ಸಾಮಾಜಿಕ ಗುಂಪುಗಳಿರಲೀ ಅಥವಾ ಧಾರ್ಮಿಕ ಅಥವಾ ರಾಜಕೀಯ ಪಕ್ಷಗಳೇ ಇರಲಿ. ಹಿಂಸೆಯ ಸಿದ್ಧಾಂತದಿಂದ ಹೊರಗೆ ಬರಬೇಕು. ಪರಸ್ಪರರನ್ನು ಅಂತ್ಯಗೊಳಿಸುವ, ಬಾಯಿ ಮುಚ್ಚಿಸುವ ಹಿಂಸಾ ವಿಧಾನಗಳು ಇದು ಪ್ರಜಾಪ್ರಭುತ್ವದ ಯಶಸ್ಸಿಗೆ ಪೂರಕವಾಗಿಲ್ಲ. ಹಿಂಸೆಯಿಂದ ಪ್ರಜಾಪ್ರಭುತ್ವ ಕಟ್ಟಲು ಖಂಡಿತ ಸಾಧ್ಯವಿಲ್ಲ. ಈ ದಬ್ಟಾಳಿಕೆ ನಡವಳಿಕೆಯನ್ನು ಬಿಟ್ಟು ಬಿಡಬೇಕು.
ಕಲಬುರ್ಗಿ ಹತ್ಯೆಯನ್ನು ಸಂಭ್ರಮಿಸಿದಂತಹ ಅದೇ ಮನಸುಗಳೇ ಗೌರಿ ಹತ್ಯೆಯ ಸಂದರ್ಭದಲ್ಲೂ ಸಂಭ್ರಮಿಸಿದ್ದನ್ನು ನೋಡಿದ್ದೇವೆ. ಸಹಜವಾಗಿಯೇ ಪ್ರಬಲವಾದ ಅನುಮಾನ ಯಾರ ಕಡೆಗೆ ಹೋಗುತ್ತದೆ? ಗೌರಿ ಹತ್ಯೆಯಾದಾಗ ಕನಿಷ್ಠ ಸಹಾನುಭೂತಿ, ಸದ್ಭಾವನೆ ಎಲ್ಲ ವಲಯದಿಂದಲೂ ಬರಲಿಲ್ಲ ಎಂಬುದು ಕೂಡ ಒಂದು ಅನುಮಾನಕ್ಕೆ ಕಾರಣವಾಗುತ್ತದೆ. ತನಿಖೆಯು ವಿವಿಧ ಆಯಾಮಗಳಲ್ಲಿ, ದೃಷ್ಟಿಕೋನಗಳಲ್ಲಿ ನಡೆಯಬೇಕು. ವೈಚಾರಿಕ ಚಿಂತನೆಯ ಮೂಲಕ ಕೋಮುವಾದಿತನವನ್ನು ವಿರೋಧಿಸುತ್ತಿದ್ದ ಗೌರಿಯದ್ದು ರಾಜಕೀಯ ಹತ್ಯೆ. ಎಂ.ಎಂ.ಕಲಬುರ್ಗಿ ಅವರದ್ದು ಧಾರ್ಮಿಕ ಹತ್ಯೆಯಾಗಿತ್ತು. ಇದು ಪ್ರಜಾಪ್ರಭುತ್ವ ಸಾಗುತ್ತಿರುವ ದಾರಿಯನ್ನು ತೋರುತ್ತದೆ.
ಉಪಸಂಹಾರ:
ಈ ದೇಶದ ಪ್ರಜಾಪ್ರಭುತ್ವ ವಿಶ್ವಕ್ಕೆ ಮಾದರಿಯಂಬುವುದು ಪಠ್ಯದಲ್ಲಿ ಓದಿದ್ದೇವೆ ಅದು ಅನುಷ್ಠಾನದಲ್ಲಿ ಭಾರಿ ವ್ಯತ್ಯಾಸವನ್ನು ಕಾಣುತ್ತಿದ್ದೇವೆ. ಈ ದೇಶದ ಇಡಿ ವಿಶ್ವಕ್ಕೆ ಮಾದರಿ ಮಾಡುತ್ತೇನೆ ಎಂಬ ಕನಸು ಹೊತ್ತ ರಾಜಕೀಯ ಪಕ್ಷಗಳು ಈ ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕುತ್ತಿರುವವರ ವಿರುದ್ಧ ಮೊದಲು ಧ್ವನಿಯತ್ತಿ ಕಾನೂನಿನ ಕಣ್ಣು ಸೂಕ್ಷ್ಮಗೊಳಿಸಿ ಇಲ್ಲಿಯೇ ಇರುವ ಮನುಷ್ಯ ವಿರೋಧಿಗಳನ್ನು ವೈಚಾರಿಕ ವಿರೋಧಿಗಳನ್ನು ಸದೆಬಡೆಯಬೇಕಾಗಿದೆ. ವಿಚಾರಗಳಲ್ಲಿ ಎದುರಿಸಲಾಗದ ಹೇಡಿಗಳನ್ನು ವಿಚಾರವಾದಿಗಳನ್ನು ಕೊಲ್ಲುತ್ತಿರುವುದು ಅತ್ಯಂತ ಖೇದದ ಸಂಗತಿಯಾಗಿದೆ. ಅಂತಹ ಕೇಡಿಗಳನ್ನು ಸರಕಾರ ಕೂಡಲೇ ಬಂಧಿಸುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರವನ್ನು ಎತ್ತಿ ಹಿಡಿದು ದೇಶದ ಸಾರ್ವಜನಿಕರ ಹಿತ ಕಾಯಬೇಕು. ಈ ಪ್ರಕರಣಗಳನ್ನು ತಾರ್ಕಿಕವಾಗಿ ಅಂತ್ಯಗೊಳಿಸದೇ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಹುನ್ನಾರ ಮಾಡುವ ಯಾವುದೇ ವ್ಯಕ್ತಿ ಅಥವಾ ಪಕ್ಷಗಳು ಮನುಷ್ಯ ಜೀವವಿರೋಧಿಯೇಯಾಗುತ್ತವೆ. ಇನ್ನಾದರು ಸರಕಾರಗಳು ಒಣ ರಾಜಕೀಯ ಬಿಟ್ಟು ಸತ್ಯ ನ್ಯಾಯದ ಕಡೆಗೆ ವಾಲಿಕೊಂಡು ಈ ದೇಶದ ಪ್ರಜಾಪ್ರಭುತ್ವ ಕಾಪಾಡಲಿ ಎಂಬುವುದು ನನ್ನ ಆಶೆಯ.