ಇತ್ತೀಚಗೆ ನಾಡಿನ ಅನೇಕ ಹಿರಿಯ ಕಿರಿಯರು ಶಿಕ್ಷಣದ ಕುರಿತು ಕೇಳುತ್ತಿರುತ್ತಾರೆ. ಬಹಳ ಮುಖ್ಯವಾಗಿ ಮಕ್ಕಳ ಭಾಷಾ ಮಾಧ್ಯಮ ಆಯ್ಕೆ, ಅಂಕಗಳು, ಮಕ್ಕಳು ಓದುತ್ತಿಲ್ಲ, ಮಕ್ಕಳಿಗೆ ಒತ್ತಡ ಹಾಕಬೇಕೊ ಬೇಡವೊ, ಮಕ್ಕಳ ಜೀವನದಲ್ಲಿ ಏನಾಗುತ್ತಾರೊ ಹೀಗೆ ಈ ಪ್ರಶ್ನೆಗಳ ಸಂಖ್ಯೆ ಬೆಳೆಯುತ್ತಲೆಯಿರುತ್ತದೆ. ನಾನು ಕೆಲವು ಅನುಭವಗಳ ಆಧಾರದ ಮೇಲೆ ಉತ್ತರಿಸುತ್ತೇನೆ. ಕೆಲವು ಸಮಾಧಾನದ ಸಂಗತಿಗಳು ಕೂಡಾ ದೊರೆತಿವೆ. ಈ ಕ್ಷೇತ್ರ ತಿಳಿದುಕೊಂಡಷ್ಟು ಆಳವಾಗುತ್ತಾ ಹೋಗುತ್ತಿದೆ.
ಇದೀಗ ನಮ್ಮ ಮಕ್ಕಳಿಗಿಂತ ಪಾಲಕರಿಗೆ ಪರೀಕ್ಷೆ ಮತ್ತು ಅಂಕಗಳ ಬಗ್ಗೆ ಚಿಂತೆ ಪ್ರಾರಂಭವಾಗಿದೆ. ಮಕ್ಕಳ ಫಲಿತಾಂಶ ಏನಾಗುತ್ತದೆ ಎನ್ನುವ ಆತಂಕವಿದೆ. ನಮಗೆಲ್ಲ ನಮ್ಮ ಮಕ್ಕಳಿಗಾಗಿ ಯಾವುದು ಮಹತ್ವ ಎನ್ನುವುದನ್ನು ಅರೆತುಕೊಳ್ಳಬೇಕಾದ ಅಗತ್ಯವಿದೆ. ನಡೆಯುವಾಗ ಎಡುವುವುದು ಸಹಜ ಆದರೆ ಎಡವಿದ ಕಲ್ಲಿಗೆ ಮತ್ತೆ ಮತ್ತೆ ಎಡುವುದು ದಡ್ಡತನ. ಸೋಲದೆ ಗೆಲ್ಲುವುದು ಸಾಧ್ಯವಿಲ್ಲ ಸೋತು ಗೆದ್ದವನಿಗೆ ನೂರು ಸೋಲು ಎದುರಾದರೂ ಹೆದರುವುದಿಲ್ಲ. ಎನ್ನುವ ಧೈರ್ಯ ನಮ್ಮ ಮಕ್ಕಳಿಗೆ ತುಂಬಬೇಕಾಗಿದೆ.
ನಿಮ್ಮ ಮಕ್ಕಳನ್ನು ಕುರಿತು ಕಲಿಸುವ ಶಿಕ್ಷಕರಿಗೆ ಹೀಗೆ ಕೇಳಿಕೊಳ್ಳಬೇಕೆಂದು ನನಗನಿಸುತ್ತದೆ. ಇದು ಅನೇಕ ಶಿಕ್ಷಣ ತಜ್ಞರು ಹಾಗೂ ಸಂಶೋಧನೆಗಳು ಕೂಡಾ ದೃಢಪಡಿಸಿವೆ. ನಾನು ಒಬ್ಬ ಪಾಲಕನಾಗಿ ನನ್ನ ಶಿಕ್ಷಕರಿಗೆ ಕೇಳಿಕೊಳ್ಳುವುದಿಷ್ಟೆ. ಮಗು ಇದು ನನ್ನೊಂದಿಗೆ ಹುಟ್ಟಿಕೊಂಡ ಕನಸುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನವಷ್ಟೇ, ಆ ಮಗುವಿನ ಬದುಕು ಮತ್ತು ಭವಿಷ್ಯ ನಿಮಗೆ ಒಪ್ಪಿಸಿದ್ದೇನೆ. ಅವರಿಗೆ ದಯವಿಟ್ಟು ಅಂಕಗಳ ಹುಚ್ಚು ಹಿಡಿಸಬೇಡಿ. ಅಂಕಗಳ ಮೂಲಕ ಮಕ್ಕಳಿಗೆ ಅಳತೆ ಮಾಡಬೇಡಿ. ಅಂಕಗಳಾಚೆಗಿರುವ ಬದುಕುವುದನ್ನು ಕಲಿಸಿಕೊಡಿ.
ಉನ್ನತ ಹುದ್ದೆ ಪಡೆಯುವುದು ಅವಶ್ಯಕ ಆದರೆ ಒಂದು ಉನ್ನತ ಹುದ್ದೆ ಹಿಡಿಯುವುದಕ್ಕಾಗಿಯೇ ನೀನು ಓದಲಿಕ್ಕೆ ಬಂದಿದ್ದೀಯ?.'' ಎಂದು ದಯವಿಟ್ಟು ಹೇಳಿಕೊಡಬೇಡಿ. ಓದು ಉದ್ಯೋಗಕ್ಕೆ ಹೇಗೆ ಪೂರಕವಾಗಿದೆ. ಓದಿದ ವಿಷಯಗಳು ಉದ್ಯೋಗದಲ್ಲಿ ಬಳಕೆ ಹೇಗೆ ಆಗುತ್ತವೆ ಎನ್ನುವ ವಿಷಯವನ್ನು ಸ್ಪಸ್ಟಪಡಿಸಲು ಪ್ರಯತ್ನಿಸಿರಿ. ಉದ್ಯೋಗ ಪಡೆಯುದೇ ಮುಖ್ಯ ಎನ್ನುವುದಕ್ಕಿಂತ ವಿದ್ಯೆ ಮತ್ತು ಉದ್ಯೋಗ ಹೇಗೆ ಪರಸ್ಪರ ಸಂಬAಧ ಹೊಂದಿವೆ ಎಂಬುವುದನ್ನು ಅವಕಾಶಗಳ ಮೂಲಕ ಹೇಳಿಕೊಡಿ.
ನಮ್ಮ ಮಕ್ಕಳಿಗೆ ಕೆಲಸ ಯಾವುದೇ ಇರಲಿ ಅದನ್ನು ಪ್ರಾಮಾಣಿಕವಾಗಿ ಖುಷಿಯಿಂದ, ಹೆಮ್ಮೆಯಿಂದ ನಿಷ್ಟೆಯಿಂದ ಮಾಡುವುದೇ ಶ್ರೇಷ್ಠ ಎಂಬುದನ್ನು ಹೇಳಿಕೊಡಿ. ಪ್ರಮಾಣಿಕತೆ ರೂಢಿಸಿಕೊಳ್ಳುವುದನ್ನು ಕಲಿಸಿಕೊಡಿ. ಕೆಲಸಗಳಲ್ಲಿ ಮೇಲು ಕೀಳು ಎನ್ನುವ ಬದಲು ಎಲ್ಲಾ ಕೆಲಸಗಳು ಹೇಗೆ ಅದರದೆ ಮಹತ್ವ ಹೊಂದಿವೆ ಎನ್ನುವುದನ್ನು ತಿಳಿಸಿಕೊಡಿ.
ಸಧ್ಯ ಪುಸ್ತಕಗಳು ಜಗತ್ತಿನ ಬಹುದೊಡ್ಡ ಆಸ್ತಿ. ಪುಸ್ತಕಗಳು ಜಗತ್ತಿನ ಮಾಹಿತಿ ಕೊಡುತ್ತವೆ. ಬದುಕು ಕಲಿಸಿಕೊಡಬಲ್ಲ ಶಕ್ತಿ ತುಂಬುತ್ತವೆ. ನಮ್ಮ ಮಕ್ಕಳಿಗೆ ಉತ್ತಮ ಪುಸ್ತಕಗಳ ಹುಚ್ಚು ಹಿಡಿಯುವಂತೆ ಮಾಡಿ, ಶಾಲೆಯ ಪುಸ್ತಕಗಳಷ್ಟೇ ನಮ್ಮ ಮಿತಿ ಎಂಬ ಭ್ರಮೆ ಹುಟ್ಟಿಸಬೇಡಿ. ಪಠ್ಯಗಳಾಚೆಗಿನ ಬದುಕು ಎಷ್ಟು ಸುಂದರ ಅದರ ಸವಿಯನ್ನು ಸವಿಯಲು ಪುಸ್ತಕಗಳು ಹೇಗೆ ಸಹಾಯಕವೆನ್ನುವುದನ್ನು ತಿಳಿಸಿಕೊಡಲು ಪ್ರಯತ್ನಿಸಿ.
ನಾವು ಮನೆಯಲ್ಲಿ ಚಿಕ್ಕಂದಿನಲ್ಲಿ ಪೋಲಿಸ್ ಮಾಮಾ ಬರತಾನೆ, ಭೂತ ಬರುತ್ತದೆ ಎಂದು ಮಕ್ಕಳಿಗೆ ಭಯ ಪಡಿಸಿದ್ದೇವೆ. ನೀವು ಶಾಲೆಗಳಲ್ಲಾದರು ನಮ್ಮ ಮಕ್ಕಳಿಗೆ ಭಯದಲ್ಲಿ ನಡುಗುವ ಬದಲು ಖುಷಿಯಿಂದ ಶಿಸ್ತಿಗೆ ಒಡ್ಡಿಕೊಳ್ಳುವುದನ್ನು ಹೇಳಿಕೊಡಿ. ಇದರ ಮೂಲಕ ಮಕ್ಕಳು ಬದುಕಿನಲ್ಲಿಯೂ ಭಯವಿಲ್ಲದೆ ಬದುಕುವಂತಾಗಲಿ. ಶಿಸ್ತು ಒತ್ತಾಯಪೂರ್ವಕವಾಗಿ ಅಳವಡಿಸಿಕೊಳ್ಳದೇ ಅರ್ಥಮಾಡಿಕೊಂಡು ಅಳವಡಿಸಿಕೊಳ್ಳುವಂತೆ ಮಾಡಿ.
ಈ ಓಟದ ಬದುಕಿನಲ್ಲಿ ನಾವು ಎಲ್ಲವನ್ನು ಆಸ್ವಾದಿಸುದು ಅವಶ್ಯಕವಾಗಿದೆ. ತುಂಬಾ ಒತ್ತಡದ ಬದುಕು ಸಧ್ಯ ನಡೆಸುತ್ತಿದ್ದೇವೆ. ನಮ್ಮ ಮಕ್ಕಳಿಗೆ ಬದುಕು ಕಲಿಸಿ, ಕಷ್ಟಗಳಲ್ಲಿ ಓಡಿ ಹೋಗುವ, ಸುಖ ಬಂದಾಗ ಕುಣಿದಾಡುವುದರ ಬದಲು ಸಮಚಿತ್ತತೆಯಿಂದ ಇರುವುದನ್ನು ಹೇಳಿಕೊಡಿ, ನೋವಿನಲ್ಲೂ ನಗುವುದನ್ನು ಕಲಿಸಿ. ಜಗವೆಲ್ಲವೂ ನಗುತಿರಲಿ, ಜಗದಳವು ನನಗಿರಲಿ. ಜಗದೊಳಗಿನ ನೋವು ನಲಿವಿಗೆ ಸ್ಪಂದಿಸುವುದನ್ನು ಕಲಿಸಿಕೊಡಿ. ಜೀವನದ ಪ್ರತಿಯೊಂದು ಸಂಧರ್ಭಕ್ಕೂ ಒಗ್ಗಿಕೊಳ್ಳುವುದರ ಜೊತೆಗೆ ಎದುರಿಸಿನಿಲ್ಲಬಲ್ಲ ಶಕ್ತಿ ತುಂಬಿರಿ.
ಸಧ್ಯ ಜಾತಿಯೆಂಬ ಜಾಲಿಮರದಲ್ಲಿ ಮುಳ್ಳುಗಳಿದ್ದು, ಅದರ ಸುತ್ತಮುತ್ತಲಿನಲ್ಲಿ ನಮ್ಮ ಮಕ್ಕಳೆಂಬ ಹೂವುಗಳಿವೆ. ನಮ್ಮ ಮಕ್ಕಳಲ್ಲಿ ಎಂದಿಗೂ ಜಾತಿಯ ಬೀಜ ಮೊಳೆಯದಂತೆ ನೋಡಿಕೊಳ್ಳಿ. ಈ ಜಾತಿಯಂಬ ಜಂಜಾಟದಿAದ ಹೊರಬರುವ ದಾರಿಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸ್ನೇಹಮಯಿ ಜೀವನವಾಗವುದಕ್ಕೆ ಬೇಕಾದ ಅಂಶಗಳನ್ನು ಕಲಿಸಿಕೊಡಿ. ಸರ್ವಜನಾಂಗದ ಈ ಶಾಂತಿಯ ತೋಟದಲ್ಲಿ ತಾಳ್ಮೆ ಮತ್ತು ಶಾಂತಿಯಿAದ ಬದುಕುವ ಮಾರ್ಗ ಹಾಕಿಕೊಡಿ.
ನಾವೆಲ್ಲರೂ ಪ್ರಕೃತಿಯ ನಡುವೆ ಜೀವಿಸುತ್ತಿದ್ದೇವೆ. ನಮಗೆಲ್ಲರಿಗೂ ಪ್ರಕೃತಿಯ ಮಹತ್ವದ ಅರಿವು ಆಗಬೇಕಿದೆ. ನಮ್ಮ ಮಕ್ಕಳಿಗೆ ಸಾಧ್ಯವಾದರೆ ಪ್ರಕೃತಿಯಲ್ಲಿ ಕಳೆದುಹೋಗುವುನ್ನು ಹೇಳಿಕೊಡಿ, ಸುರಿಯುವ ಮಳೆಯಲ್ಲಿ ನೆನೆಯುವ, ಚಿಟ್ಟೆಗಳ ಚಂದವನ್ನು ಆನಂದಿಸುವ, ಹಾರುವ ಪಕ್ಷಿಗಳನ್ನು ಎಣಿಸುವ, ಸಾಲಾಗಿ ನಡೆದುಕೊಂಡು ಹೋಗುವ ಇರುವೆಗಳನ್ನು ಹಿಂಬಾಲಿಸುವ, ಬೀಜ ಮೊಳೆಯುವುದನ್ನು ಕಾಯುವ ಕುತೂಹಲ ತುಂಬಿ. ಬೀಸುವ ತಂಪಾದ ಗಾಳಿಯನ್ನು, ಮೂಡುವ ಕಾಮನಬಿಲ್ಲನ್ನು ನೋಡಿ ಕಣ್ತುಂಬಿಕೊಳ್ಳವ ಬಗೆಯನ್ನು ಕಲಿಸಿಕೊಡಿ. ಬೀಜ ಮೊಳಕೆಯಾಗುವ, ನವಿಲು ಗರಿಬಿಚ್ಚುವಂತಹ ಪ್ರಾಕೃತಿಕ ದೃಶ್ಯಗಳನ್ನು ಆಸ್ವಾದಿಸುವ ಗುಣವನ್ನು ಬೆಳೆಸಲು ಪ್ರಯತ್ನಿಸಿ.
ಪಠ್ಯದಲ್ಲಿರುವಂತೆ ಆಮ್ಲಜನಕ ಸಸ್ಯ ಕೊಡುತ್ತದೆ ಎಂದು ಹೇಳುವುದರ ಜೊತೆಗೆ ಅದೇ ಸಸ್ಯವನ್ನು ನೆಡಲು ಪಣತೊಡುವ ಮನಸ್ಸು ಬರುವಂತೆ ಮಾಡಿ. ಒಂದು ಸಸ್ಯದ ಮಹತ್ವ ಮನುಷ್ಯ ಬದುಕಿಗೆ ಎಷ್ಟು ಮುಖ್ಯ ಎನ್ನುವದನ್ನು ಕಲಿಸಲು ಪ್ರಯತ್ನಿಸಿ. ಒಂದು ಸಸ್ಯ ನಾಶದಿಂದಾಗುವ ಪ್ರಾಕೃತಿಕ ಹಾನಿಯನ್ನು ನಮ್ಮ ಮಕ್ಕಳಿಗೆ ಕಲಿಸಿಕೊಡಿ. ಹಸಿರಾಗಿರುವ ಎಲೆಯ ಬಣ್ಣವನ್ನು ಕಣ್ತುಂಬಿಕೊಳ್ಳುವAತಹ ದೊಡ್ಡ ಗುಣವನ್ನು ನಮ್ಮ ಮಕ್ಕಳು ಕಲಿಯಬೇಕಾದ ಅನಿವಾರ್ಯವಿದೆ. ಮನುಷ್ಯನ ಲಾಭಿಗಾಗಿ ಪ್ರಕೃತಿ ನಾಶವಾಗುತ್ತಿದೆ ಅದನ್ನು ಉಳಿಸಿಕೊಳ್ಳುವ ಉಪಾಯಗಳನ್ನು ನಮ್ಮ ಮಕ್ಕಳಿಗೆ ಹೇಳಿಕೊಡಿ.
ಪ್ರಸ್ತುತ ಸಮಾಜದಲ್ಲಿ ಮೋಸ,ವಂಚನೆ ತಾಂಡವಾಡುತ್ತಿದೆ. ನಮ್ಮ ಮಕ್ಕಳು ಬದುಕಿನಲ್ಲಿ ಮೋಸ ಮಾಡಿ ಗೆಲ್ಲುವುದಕ್ಕಿಂತ, ಪ್ರಾಮಾಣಿಕವಾಗಿ ಸೋಲುವುದನ್ನು ಕಲಿಸಿ. ಸೋಲು ಗೆಲುವಿಗೆ ಹೇಗೆ ಸ್ಪೂರ್ತಿಯಾಗಿದೆ ಎಂಬ ಪಾಠವನ್ನು ಮರೆಯದೆ ಹೇಳಿಕೊಡುವುದು ಅಗತ್ಯವಾಗಿದೆ. ಸೋತಾಗ ದೃತಿಗೆಡದೆ, ಗೆದ್ದಾಗ ಬೀಗದೇಯಿರುವ ಬದುಕು ಇವತ್ತಿನ ಅಗತ್ಯಗಳಲ್ಲಿ ಒಂದಾಗಿದೆ ಅಂತಹ ಮನಸ್ಥಿತಿ ಕಲಿಯಬೇಕಾಗಿರುವುದು ಇಂದಿನ ನಮ್ಮ ಮಕ್ಕಳ ಅಗತ್ಯವೂ ಹೌದು.
ನಮ್ಮ ಮಕ್ಕಳು ಅನ್ಯಾಯ ಮಾಡಿ ಗಳಿಸುವುದಕ್ಕಿಂತ, ಒಬ್ಬರಿಗೆ ನೋವು ಮಾಡಿ ಪಡೆಯುವುದಕ್ಕಿಂತ ಪ್ರಾಮಾಣಿಕತೆಯಿಂದ ಸಾಧಿಸಲು ತಿಳಿಸಿ. ಜೀವನ ತುಂಬಾ ಸುಂದರವಾಗಿದೆ ಅದನ್ನು ಆನಂದಿಸುವ ಬಗೆಯನ್ನು ಹೇಳಿಕೊಡಿ. ಪ್ರತಿ ಕ್ಷಣದಲ್ಲೂ ಖುಷಿಯಿದೆ ಎಂಬುದನ್ನು ನಮ್ಮ ಮಕ್ಕಳು ತಿಳಿಯಲಿ. ಅದರ ಕ್ಷಣಗಳನ್ನು ಹೃದಯ ತುಂಬಿಕೊಳ್ಳಲಿ. ಹೆಣ್ಣನ್ನು ಗೌರವಿಸುವ, ದೀನ ದುರ್ಬಲರನ್ನು, ವಯೋ ವೃದ್ಧರನ್ನು ನೋಡಿ ಮರುಗುವ ಗುಣ ಕಲಿಸಿ, ಕಷ್ಟದಲ್ಲಿ, ನೋವಿನಲ್ಲಿರುವವರ ಸಹಾಯಕ್ಕೆ ಧಾವಿಸುವ ಛಲ ಬರುವಂತೆ ಮಾಡಿ.
ಫೇಲಾದರೂ ಪರವಾಗಿಲ್ಲ ಬದುಕಿನಲ್ಲಿ ಖುಷಿಯಾಗಿ ದುಡಿದು ಜೀವಿಸುವುದನ್ನು ಕಲಿಸಿ. ನಮ್ಮ ಮಕ್ಕಳನ್ನು ಒಬ್ಬ ಡಾಕ್ಟರ್, ಎಂಜಿನಿಯರ್, ಉನ್ನತ ಅಧಿಕಾರಿಗಿಂತ ಒಳ್ಳೆಯ ಮನುಷ್ಯನಾಗಿ ಬಾಳುವುದನ್ನು ಕಾಣ ಬಯಸುತ್ತೇನೆ. ಅದನ್ನು ಸಾಕಾರಗೊಳ್ಳಲು ಅವಕಾಶ ಮಾಡಿಕೊಡಿ. ಏನಾಗಲಿ ಮುಂದೆ ಸಾಗು ನೀ ಎನ್ನುವ ಧೈರ್ಯ ತುಂಬಿಸಿ. ನಮ್ಮ ಮನೆಯ ಮಕ್ಕಳಿಗೆ ಶಿಕ್ಷಕರಾದ ನೀವು ಇಂಥ ಗುಣಗಳನ್ನು ರೂಢಿಸಿದರೆ ನಾನು ನಿಮಗೆ ಋಣಿ.