ಒಂದು ಮಗು ಇನ್ನು ಜಸ್ಟ್ ಮನೆಯ ವಾತಾವರಣಕ್ಕೆ ಹೊಂದಿಕೊಳ್ಳುವ ಮೊದಲೇ, ಅದಕ್ಕೆ ಭಾರವಾದ ವಿಷಯಗಳನ್ನು ಕಲಿಸಲು ಪ್ರಯತ್ನಿಸುತ್ತೇವೆ. ಹುಟ್ಟಿದ ಕೆಲವೇ ತಿಂಗಳುಗಳಲ್ಲಿ ಅಪ್ಪ, ಅಮ್ಮ, ಅತ್ತಿ , ಅಜ್ಜಿ, ತಾತಾ ಇತ್ಯಾದಿಗಳನ್ನು ಹೇಳು ಹೇಳು ಎಂದು ಒತ್ತಡ ಹಾಕುತ್ತೇವೆ. ಇನ್ನು ಸ್ವಲ್ಪ ದೊಡ್ಡವರಾದರೆ ನಡೆ, ಓಡು, ಅದು ತೊಗೊಂಡು ಬಾ, ಆ ಕಡೆ ಹೋಗಬೇಡ, ಅಲ್ಲಿ ಇಳಿಬೇಡ ನೀರಿದೆ, ಅಲ್ಲಿ ಹೋಗಬೇಡ ಕಲ್ಲಿದೆ, ಬೀಳತೀಯಾ ಹೀಗೆ ಮುಂದುವರೆಯುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ಹಲವು ರೀತಿಯ ಅನುಕರಣೆ ಮಾಡುವುದನ್ನು ಕಲಿಯುತ್ತಾರೆ ಅದರಲ್ಲಿ ಹೆಚ್ಚಿನವು ಹಿರಿಯರ ಒತ್ತಡದಿಂದ ಕಲಿಯುತ್ತವೆಯೆ ಹೊರತು ಸ್ವತ: ಆಸಕ್ತಿಯಿಂದಲ್ಲ ಎಂಬುವುದು ಗಮನಿಸಬೇಕಾದ ವಿಷಯವಾಗಿದೆ. ಹಾಗೆಂದ ಮಾತ್ರಕ್ಕೆ ನಮ್ಮ ಮಕ್ಕಳಿಗೆ ಏನು ಹೇಳಲೇಬಾರದೆ ಎಂದು ಕೇಳಿದರೆ, ನನ್ನ ಉತ್ತರವಿಷ್ಟೆ ನಿಮ್ಮ ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಳ್ಳಿ ಅವರ ಆಸೆಗಳಿಗೆ ತಕ್ಕಂತೆ ಬೆಳೆಸಿ ಆಗಮಾತ್ರ ಮಕ್ಕಳಲ್ಲಿ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ. ಅವರಿಗೂ ಯೋಚಿಸುವ ಧೈರ್ಯ ಹೊರಬರುತ್ತದೆ. ಅವರ ಮೆದುಳಿಗೂ ಕೆಲಸ ಕೊಟ್ಟಂತಾಗುತ್ತದೆ. ಅವರೂ ಕೂಡ ಪ್ರಬುದ್ಧರಾಗಿ ಬೆಳೆಯಲು ಸ್ವಾತಂತ್ರತೆ ಇರುತ್ತದೆ. ನಿಮ್ಮ ಮಕ್ಕಳು ಅವರು ಬಯಸಿದಂತಾಗಲಿ ಎಂಬುವುದು ನನ್ನ ಬಯಕೆಯಷ್ಟೆ.
ಇನ್ನು ಕೆ.ಜಿ. ಯಿಂದ ಪಿಜಿಯವರೆಗೆ ಶಾಲೆಯನ್ನು ಕಲಿಯುವವರ ಬದುಕು ಹೇಳತೀರದಾಗಿರುತ್ತದೆ. ರಣಭಾರದ ಪುಸ್ತಕ ಹೊರಬೇಕು, ಹತ್ತರಿಂದ ಹನ್ನೆರಡು ವಿಷಯಗಳು, ಒಂದು ಡಜನ್ ನೋಟುಬುಕ್, ಆರು ಪುಸ್ತಕ, ದೊಡ್ಡ ಬ್ಯಾಗು ಅಬ್ಬಾ ಇಷ್ಟು ಭಾರ ನಮ್ಮ ಮಗುವಿಗೆ ಬೇಕೆ ಎಂಬ ಪ್ರಶ್ನೆ ಹಿರಿಯರಾದ ನಾವುಗಳು ಮಾಡುವುದೇಯಿಲ್ಲ. ಪಕ್ಕದ ಮನೆಯ ಮಕ್ಕಳು ಎಷ್ಟು ಅಂಕ ತೆಗೆದುಕೊಂಡರು ಅದಕ್ಕಿಂತ ಹೆಚ್ಚಿನ ಅಂಕ ತೆಗೆಯಬೇಕಾದ ಒತ್ತಡವಿದೆ. ರ್ಯಾಂಕ್ ಪಾಸಾದರೆ ಮಾತ್ರ ಸೈಕಲ್ ತೆಗೆದುಕೊಡತೀನಿ, ನೀನು ಬರಿ ಓದಬೇಕು, ನೀ ರ್ಯಾಂಕ್ ಬರಬೇಕು, ನೀ ನೈಂಟಿ ಸ್ಕೋರ್ ಮಾಡಲೇಬೇಕು ಛೇ ಎಷ್ಟು ಬಿಜಿಯಾಗಿದ್ದಾರೆ ನಮ್ಮ ನಡುವಿನ ಭಾವಿ ಸಾಮಾಜಿಕ ಜೀವಗಳು ಅಲ್ಲವಾ?
ನಮ್ಮ ಮಕ್ಕಳ ಇಂದಿನ ವಾಸ್ತವದ ದಿನಚರಿ ಗಮನಿಸಿದರೆ ಅಚ್ಚರಿಯಾಗುತ್ತದೆ. ಬೆಳೆಗ್ಗೆ 4ಕ್ಕೆ ಆ ಕಾಲ ಈ ಕಾಲ ನೋಡಿ ಓದಲು ಪ್ರಾರಂಭ ಮಾಡಬೇಕು. ಬೆಳಗ್ಗಿನ ದಿನನಿತ್ಯದ ಕೆಲಸಗಳನ್ನು ಮುಗಿಸಿ, ಬೆಳಗ್ಗಿನ ಟ್ಯೂಷನ್ ಗೆ ಹೋಬೇಕು, ಮೂರುಕ್ಕಿಂತ ಹೆಚ್ಚು ವಿಷಯಗಳನ್ನು ಟ್ಯೂಷನ್ ಮೂಲಕ ಕಲಿಬೇಕು. ಬೆಳಗ್ಗೆ ಒಂಬತ್ತಕ್ಕೆ ಶಾಲೆ, ಅಲ್ಲಿ ಶಿಕ್ಷಕರ ಹೇಳಿದ್ದನ್ನೆಲ್ಲ ಆ ಚಿಕ್ಕ ತಲೆಯೋಳಗೆ ಹಾಕಿಕೊಳ್ಳಬೇಕು, ಮೆಮೋರಿ ಎಷ್ಟೆ ಸ್ಟೋರ್ ಆಗದಿದ್ದರು ಒತ್ತಡಕ್ಕಾದರು ತುರಿಕೊಕೊಳ್ಳಲೇಬೇಕು. ಇಲ್ಲದಿದ್ದರೆ ಅಪ್ಪ ಅಮ್ಮನ ಬೈಗುಳ ಕೇಳಬೇಕು ಇದಕ್ಕಾದರು ಓದಲೇಬೇಕು. ಇನ್ನು ನಮ್ಮ ಶಿಕ್ಷಕರ ಮಾತು ಕೇಳಿಸಿಕೊಂಡು ಅರಗಿಸಿಕೊಳ್ಳುವಷ್ಟರಲ್ಲಿ ಸಂಜೆಯಾಗುತ್ತದೆ ಮತ್ತೆ ಮನೆಗೆ ಹೋಗಿ ಇದ್ದಷ್ಟು ಮ್ಯಾಗಿಯಂತಹ ಮ್ಯಾಜಿಕ್ ಊಟ ಮಾಡಿ ಸಂಗೀತ ತರಗತಿ, ಕಂಪ್ಯೂಟರ್ ತರಗತಿ ಇತ್ಯಾದಿ ತರಗತಿಗಳಿಗೆ ಹೋಗಬೇಕು ಅದನ್ನು ಕಲಿಯಬೇಕು. ಈ ವಿಷಯಗಳಲ್ಲಿ ಆಸಕ್ತಿಯಿಲ್ಲದಿದ್ದರು ನಮ್ಮ ಅಪ್ಪ ಅಮ್ಮನ ಪ್ರೆಸ್ಟೇಜ್ಗಾಗಿಯಾದರು ಕಲಿಯಲೇಬೇಕು ಎಂಬುವುದು ನಮ್ಮ ಮಕ್ಕಳ ಅಳಲಾಗಿದೆ.
ಇನ್ನು ಇಡಿ ವರ್ಷ ಓದಿದ ಬಳಿಕ ಬೇಸಿಗೆಲ್ಲಾದರು ಅಜ್ಜಿ ತಾತನ ಊರಲ್ಲಿ ಹಳ್ಳಿ ವಾತಾವರಣದ ಮಕ್ಕಳೊಂದಿಗೆ ಹಾಯಾಗಿ ಇರಬೇಕೆಂದರೆ ಬೇಸಿಗೆ ಶಿಬಿರಗಳು ಬಿಡಬೇಕಲ್ಲ. ನಿಮ್ಮ ಮಕ್ಕಳನ್ನು ವಿಜ್ಞಾನಿಗಳಾಗಿ, ಐಎಎಸ್ ಆಗಿ ಪರಿವರ್ತನೆ ಮಾಡುತ್ತೇವೆ ಎಂಬ ಮಾತು ಅಪ್ಪ ಅಮ್ಮನ ಕಿವಿಯಲ್ಲಿ ಬಿದ್ದ ಬಳಿಕ ಮುಗಿತು ಬೇಸಿಗೆ ಶಿಬಿರದಲ್ಲಿ ಮತ್ತೆ ಒತ್ತಡದಲ್ಲಿ ಕಲಿಕೆ ಪ್ರಾರಂಭವಾಯಿತು. ಈಡಿ ವರ್ಷ ಶಾಲೆಯಲ್ಲಿ ಬಿಡುವಿಲ್ಲದ ಜೀವನ ಕಳೆದ ಮಕ್ಕಳಿಗೆ ಬೇಸಿಗೆ ಶಿಬಿರ ಎಷ್ಟು ಪೂರಕ ಹಾಗೂ ಮಾರಕ ಎಂಬ ವಿಷಯವನ್ನು ತಂದೆ ತಾಯಿಗಳಾದ ನಾವುಗಳು ಯೋಚಿಸಲೇಯಿಲ್ಲ. ಬಿಸಿಲೆಯಿರಲಿ ಮಳೆಯೆ ಇರಲಿ ನೀವು ಓದಲೇಬೇಕು ಬರೆಯಲೇಬೇಕು ಎಂಬ ಕಡಿವಾಣ ಹಾಕಿ ನಮ್ಮ ಮಕ್ಕಳು ಇವತ್ತು ಪ್ರಾಪಂಚಿಕ ಜ್ಞಾನ ಮತ್ತು ಹಳ್ಳಿ ಬದುಕಿನಿಂದ ಬಹುದೂರ ಹೋಗಿರುವ ಸಾಧ್ಯತೆಗಳ ದಟ್ಟವಾಗಿವೆ.
ಇವತ್ತಿನ ಮಕ್ಕಳ ವಾಸ್ತವಗಳನ್ನು ಗಮನಿಸಿದಾಗ ಅವರಿಗೆ ಸ್ವತಂತ್ರವಾಗಲಿ ಅವರದ್ದೆ ಆದ ಆಯ್ಕೆಗಳಾಗಲಿ ಅತೀ ಕಡಿಮೆಯಂಬುವುದು ಭಾಸವಾಗುತ್ತದೆ. ಅವರು ಏನೆ ಆಗಬಹಯಸಿದರು ತಂದೆ ತಾಯಿಯ ಒತ್ತಡಗಳು ಬಹುತೇಕ ಹೆಚ್ಚಾಗಿರುತ್ತವೆ. ನಮ್ಮ ಮಕ್ಕಳು ನಮ್ಮ ಮಾತಿನಂತೆ ನಡೆದುಕೊಳ್ಳುತ್ತಿಲ್ಲ ಎಂಬ ಪಾಲಕರ ಮಾತುಗಳು ಕೇಳಿಬರುತ್ತವೆ. ಮಕ್ಕಳ ಹಾಗೂ ಪಾಲರಕ ನಡುವೆ ಹೆಚ್ಚಿನ ಸಮನ್ವಯತೆಯ ಕೊರತೆ ಕಂಡುಬರುತ್ತದೆ. ಅಪ್ಪ ಹೇಳಿದ್ದು ಮಕ್ಕಳಿಗೆ ಆಗೋದಿಲ್ಲ, ಮಕ್ಕಳ ಹೇಳಿದ್ದು ಅಪ್ಪ ಅಮ್ಮನಿಗೆ ಆಗೋದಿಲ್ಲ ಎಂಬ ಸತ್ಯಸನ್ನಿಧಿಯಲ್ಲಿ ಇಂದು ನಾವಿದ್ದೇವೆ. ಅದಕ್ಕಾಗಿಯೇ ಇಂದು ಹಲವು ವೃದ್ಧಾಶ್ರಮಗಳು ತಲೆಯೆತ್ತುತ್ತಿವೆ. ಅಲ್ಲಿರುವ ಪ್ರತಿ ವೃದ್ಧನ ಬದುಕಿನಲ್ಲಿ ಒಂದೊಂದು ಕಥೆಗಳನ್ನು ಕಾಣುತ್ತೇವೆ.
ಆತ್ಮೀಯ ಪಾಲಕರೆ ನಮ್ಮ ಮಕ್ಕಳು ನಮ್ಮಿಂದ ಬಂದವುಗಳೆ ಹೊರತು ನಾವು ಹೇಳಿದಂತೆ ಮಾಡುವ ರಿಮೋಟ್ ಬೊಂಬೆಗಳಲ್ಲ. ಅಂಕ ತರುವ ಮಾಯಾಜಿಂಕೆಗಳಲ್ಲ. ಅವರ ಆಸೆಗಳಿಗೂ ಮನ್ನಣೆ ಕೊಡಬೇಕಾಗಿದೆ. ಅವರಲ್ಲಿ ಅಡಗಿರುವ ಕೌಶಲ್ಯಗಳನ್ನು ಪತ್ತೆಹಚ್ಚಿ ಅದರಂತೆ ಅವರನ್ನು ಬೆಳೆಯಲು ಪ್ರೋತ್ಸಾಹಿಸಬೇಕಿದೆ. ಇವತ್ತು ಸಚಿನ್ ತೆಂಡುಲಕರ್ಗೆ ಅವರಪ್ಪ ನೀ ಹಾಡುಗಾರನಾಗು ಎಂದು ಒತ್ತಡ ಮಾಡಿದ್ದರೆ “ಕ್ರೀಕೇಟ್” ದೇವರು ನಮಗೆ ಸಿಗತ್ತಿರಲಿಲ್ಲ. ಅದರಂತೆ ನಾವೆಲ್ಲರೂ ಮಕ್ಕಳು ಯಾವುದರಲ್ಲಿ ಆಸಕ್ತಯಿದ್ದಾರೆ ಎಂಬುವುದನ್ನು ಅರೆತುಕೊಂಡು ಅವರ ಆಸೆಗಳಿಗೆ ನಾವುಗಳು ಪೂರಕವಾಗಿ ನಿಲ್ಲಬೇಕು ಅದರೊಳಗಿನ ಸಾಧಕ ಬಾಧಕಗಳನ್ನು ತಿಳಿಸಿ ಹೇಳಿ ಸರಿ ಯಾವುದು ತಪ್ಪು ಯಾವುದು ಎಂಬ ವಿಷಯವನ್ನು ಮಾತ್ರ ತಿಳಿಸಿ ಹೇಳುವ ಸುಗಮಕಾರರಾಗಿ ನಿಲ್ಲಬೇಕು. ಬೇಸಿಗೆಯಲ್ಲಿ ನಿಮ್ಮ ಮಕ್ಕಳು ನಿಮ್ಮ ಹಳ್ಳಿ ಊರಿಗೆ ಹೋಗಿ ಅಜ್ಜಿ ತಾತನ ಜೊತೆಗೆ ಇದ್ದು ಬರುತ್ತೇವೆ ಎಂದರೆ ಅವರನ್ನು ಅಲ್ಲಿಗೆ ಹೋಗಲು ಬಿಡಿ ಹಳ್ಳಿಯ ಸಂಬಂಧಗಳಲ್ಲಿ, ಹಳ್ಳಿಗಾಡಿನ ವಾಸ್ತವದ ಜೊತೆಗೆ ಕಲಿಯಲು ಅವಕಾಶಮಾಡಿಕೊಡಿ. ನಮ್ಮ ಮಕ್ಕಳು ನಮ್ಮ ಸಮಾಜವೆಂಬ ಹೂದೋಟದೊಳಗಿನ ಸುವಾಸನೆ ಬೀರುವ ಹೂವುಗಳು, ಅವುಗಳನ್ನು ಸ್ವತಂತ್ರವಾಗಿ ಅರಳಲು ಬಿಡಿ, ನಿಮ್ಮ ನಿಮ್ಮ ಕರುಳ ಕುಡಿಗಳನ್ನು ಅವರಿಚ್ಛೆಯಂತೆ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಬೆಳೆಯಲು ಅವಕಾಶಮಾಡಿಕೊಡಿ ಎಂಬುವುದು ನನ್ನ ಮನವಿ.