ಇವನಾರವ, ಇವನಾರವ ಎಂದೆನಿಸದಿರಯ್ಯ
ಇವ ನಮ್ಮ ಇವ ನಮ್ಮವ ಎಂದೆನಿಸಯ್ಯ
ಕೂಡಲಸಂಗಮದೇವ ನಿಮ್ಮ ಮನೆಯ ಮಗನೆಂದೆನಿಸಯ್ಯ.
ಹನ್ನೆರಡನೆ ಶತಮಾನದಲ್ಲಿ ಬಸವಣ್ಣ ಜಾತಿಯಿಲ್ಲ ಶರಣಂಗೆ ಎಂದರು. ಎಲ್ಲರನ್ನು ಮನೆಯ ಮಕ್ಕಳಂತೆ ಕಾಣಿರಿ ಎಂದರು. ಸರ್ವಜ್ಞ ಕೂಡ ಜಾತಿ ಬೇಧ ಮಾಡಬೇಡಿ ಎಂದರು. ಕುಲ ಕುಲವೆಂದು ಬಡೆದಾಡುವಿರಿ ನಿಮ್ಮ ಕುಲದ ನೆಲೆಯನ್ನು ಬಲ್ಲಿರಾ ಎಂದು ದಾಸರೊಬ್ಬರು ಕೇಳಿದರು. ಹೀಗೆ ಅನೇಕ ಮಾಹಾನ್ ವ್ಯಕ್ತಿಗಳು ಜಾತಿಯ ಬಗ್ಗೆ ಅದನ್ನು ಹೊಡೆದೂಡಿಸುವ ಬಗ್ಗೆ ಮನುಷ್ಯರಿಗೆ ಹೇಳಿದ್ದಾರೆ ಜೊತೆಗೆ ಅವರು ಅದನ್ನು ಅನುಸರಿಸಿ ತೋರಿಸಿದ್ದಾರೆ. ಅವರ ಬದುಕಿನುದ್ದಕ್ಕೂ ಈ ಸಮಾಜದ ಜಾತಿಪದ್ಧತಿಯನ್ನು ಹೋಗಲಾಡಿಸಲು ಪ್ರಯತ್ನಪಟ್ಟರು. ಆದಿಕವಿ ಪಂಪನು “ಮನುಷ್ಯ ಜಾತಿ ತಾನೊಂದೇ ವಲಂ” ಎಂದಿದ್ದಾರೆ.
ನಾವೆಲ್ಲ ಒಂದೇ ತಾಯಿ ಮಕ್ಕಳಾದರು ನಮ್ಮಲ್ಲಿ ನಮ್ಮ ಆಚರಣೆ ಮತ್ತು ವಿಚಾರಗಳಲ್ಲಿ ಅನೇಕ ಮತಬೇಧಗಳಿವೆ. ಜಾತಿ ಬೇಧಗಳಿವೆ. ಇತ್ತಿಚಿನ ಕೆಲವು ಹೇಳಿಕೆಗಳಿಂದ ಇದು ಸಾಭಿತಾಗಿದೆ. ಇಲ್ಲಿ ಯಾವಾಗಲೂ ಪ್ರತಿಯೊಂದು ವಿಷಯಕ್ಕೂ ಒಂದು ಪರ ಇನ್ನೊಂದು ವಿರೋಧ ವ್ಯಕ್ತವಾಗುತ್ತಿರುತ್ತದೆ. ಅದು ಆರೋಗ್ಯಕರವಾಗಿದ್ದರೆ ಸ್ವೀಕರಿಸಬಹುದಾಗಿದೆ. ಎಲ್ಲವೂ ವೇಗದ ಪೈಪೋಟಿಯಾಗಿದೆ. ಒಬ್ಬರ ಕೊಂದು ಮುನ್ನುಗ್ಗುವ ಕಾಲ ಇದಾಗಿದೆ. ಕೈಹಿಡಿದು ನಡೆಸಬೇಕಾದವರು ನಡುನೀರಿನಲ್ಲಿ ಕೈಬಿಡುವ ಕಾಲ ಇದಾಗಿದೆ. ಪುರಾತನ ಕಾಲದಲ್ಲಿ ತಮ್ಮ ನೂರು ನೋವುಗಳಿದ್ದರು ಮತ್ತೊಬ್ಬರಿಗೆ ನೋವು ಕೊಡಬಾರದು ಎಂಬ ಭಾವನೆಯಿತ್ತು ಇದೀಗ ಇನ್ನೊಬ್ಬರಿಗೆ ನೋವು ಕೊಟ್ಟೆ ತಾನು ಸುಖವಾಗಿರುವುದು ಎಂಬ ಸ್ಪಷ್ಟವಾದ ನಿಲುವು ಕಾಣಬಹುದಾಗಿದೆ. ಇದೆಲ್ಲವನ್ನು ನಮ್ಮ ಯುವಕರು ಹಾಗೂ ಮಕ್ಕಳು ಗಮನಿಸುತ್ತಿದ್ದಾರೆ ಎಂಬ ಕನಿಷ್ಠ ಕಲ್ಪನೆ ಈ ಜನರಲ್ಲಿ ಇಲ್ಲವಲ್ಲಾ ಎನ್ನುವುದೇ ಶೋಚನೀಯವಾದ ಸಂಗತಿ.
ಒಂದೆಡೆ ವೈಚಾರಿಕತೆಯ ಕೊಲೆ, ಕಳಸಾಬಂಡೂರಿ, ಮಾಹಾದಾಯಿ ಹೋರಾಟ, ಐಐಟಿ ಬೇಕು ಎಂಬ ಚೀರಾಟ, ಇನ್ನೊಂದೆಡೆ ರಾಮ ಕೃಷ್ಣರನ್ನು ಬೈತಾರೆ, ಮತ್ತೊಂದೆಡೆಗೆ ಹಾಡು ಹಗಲೆ ರೇಪ್, ಮಕ್ಕಳ ಮೇಲಿನ ದೌರ್ಜನ್ಯ, ಈ ನಡುವೆ ಪ್ರಶಸ್ತಿಗಳು ಮಾತನಾಡಿದ್ದು, ರೈತರ ಆತ್ಮಹತ್ಯೆ, ದೇಶದ ಯೋಧರ ಮರಣ ಇವೆಲ್ಲವು ಯುವಕರ ಮನಸ್ಸಿನೊಳಗೆ ಎಂತಹ ಸಂದೇಶವನ್ನು ರವಾನಿಸುತ್ತಿವೆ ಎಂಬ ಊಹೆ ಮಾತ್ರ ನಿಲುಕುತ್ತಿಲ್ಲ. ಇದೆಲ್ಲದರ ನಡುವೆ ನಮ್ಮ ರಾಜ್ಯ ಸರಕಾರ ಆರಾಮವಾಗಿ ನಿದ್ರೆಗೆ ಜಾರಿದೆಯೇ ಎಂದು ಗಮನಿಸಿದರೆ ಇಲ್ಲಾ ಅದೂ ಕೂಡ ತನ್ನ ರಾಜಕೀಯ ಬದುಕಿಗಾಗಿ ಬಡೆದಾಡುತ್ತಿದೆ. ನಮ್ಮ ಪ್ರಜಾಪ್ರತಿನಿಧಿಗಳು ಸಚಿವಸ್ಥಾನ ಕೈಬಿಡವುದೇ ಎಂಬ ಚಿಂತೆಯಲ್ಲಿದ್ದಾರೆ, ಕೆಲವರು ಸಚಿವಸ್ಥಾನ ಗಿಟ್ಟಿಸಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ. ಒಂಡೆದೆ ಸಾಮಾಜಿಕ ಜಾಲತಾಣಗಳಲ್ಲಿ ವಿಚಿತ್ರ ಹೋರಾಟ ನಡೆದಿದೆ. ಅದನ್ನು ವಿರೋಧಿಸುವ ಮತ್ತೊಂದು ಗುಂಪು ಅಲ್ಲಿಯೇ ಇದೆ. ಛೇ ಎಷ್ಟು ಅಂತಾ ಹೇಳಲಿ ನಮ್ಮ ಕರುನಾಡಿನಲ್ಲಿ ಸಧ್ಯಕ್ಕಿರುವ ಸ್ಥಿತಿಗತಿ.
ನಮ್ಮ ರಾಜ್ಯದಲ್ಲಿ ಇಷ್ಟೆಲ್ಲ ನಡೆಯುತ್ತಿರುವುದಕ್ಕೆ ಮೂಲ ಕಾರಣ ಈ ಜಾತಿಯತೆ, ಬೆಳೆದುನಿಂತ ದ್ವೇಷ, ಅಸೂಯೆ, ಅಪಮಾನ, ಪ್ರಚಾರ ಪಡೆಯುವ ಆಸೆ, ಜಾತಿಯ ಮೇಲಿನ ವ್ಯಾಮೋಹ, ಅಭಿವ್ಯಕ್ತಿ ಸ್ವಾತಂತ್ರದ ದುರುಪಯೋಗ ಹೀಗೆ ಹಲವುದರಲ್ಲಿ ನಮ್ಮ ನಾಡು ಯುವಕರನ್ನು ಇಂದಿನ ಮಕ್ಕಳನ್ನು ಬೆಳೆಸುವಲ್ಲಿ ಎಡವುತ್ತಿದೆ. ಗಡವು ನೀಡದೇ ಪ್ರಿತಿ ಬಾಂಧವ್ಯ ಮರೆಸುತ್ತಿದೆ.
ಈ ನೆಲದಲ್ಲಿ ಪ್ರತಿದಿನ ಪ್ರತಿಕ್ಷಣವು ಒಂದಲ್ಲಾ ಒಂದು ಜಾತಿಯೊಳಗಿನ ಜಗಳ ಗುಂಪಿನೊಂದಿಗೆ ಜಗಳ ನಡದೇಯಿರುತ್ತದೆ. ಒಬ್ಬರು ಇನ್ನೊಬ್ಬರನ್ನು ಟೀಕಿಸುವುದು ಸಾಮಾನ್ಯವಾಗಿದೆ. ಒಬ್ಬರ ಬಗ್ಗೆ ಇನ್ನೊಬ್ಬರು ಅವಹೇಳನ ಮಾಡುವುದು ತಲೆಯೆತ್ತಿದೆ. ಸರಿ ತಪ್ಪುಗಳ ಪರದಾಟ ನಡೆದಿದೆ. ನ್ಯಾಯ ಅನ್ಯಾಯಗಳ ಹೊಡೆದಾಟದೊಳಗೆ ಯಾರು ಮತ್ತು ಯಾವುದು ನ್ಯಾಯವೆಂಬ ಗೊಂದಲವುಂಟಾಗಿದೆ. ಸಂಪ್ರದಾಯಗಳೆಂಬ ಕಟ್ಟುಪಾಡಿನೊಳಗೆ, ಮನುಷ್ಯ ಮನುಷ್ಯರ ನಡುವೆ ಅಸುಯ್ಯ ಮೂಡುತ್ತಿದೆ. ಹಿರಿಯರನ್ನು ನೋಡಿ ಕಲಿಯಬೇಕಾದ ಯುವಕರು ಅವರಿಂದಲೇ ಅಡ್ಡದಾರಿ ಹಿಡಿಯುವಂತಾಗಿದೆ.
ಕಟ್ಟುತ್ತೇವೆ ನಾವು ಕಟ್ಟುತ್ತೇವ ನಾವು ನಾಡು ಕಟ್ಟುತ್ತೇವ ಎಂಬ ಯುವಕರೀಗ ಬಿಚ್ಚುತ್ತೇವ ಎಂಬ ಹಾಡು ಹಾಡುವಂತಾಗಿದೆ. ಏಳಿ ಎದ್ದೇಳಿ ಯುವಕರೆ ನಾಡ ಸೇವೆಗಾಗಿ ಎನ್ನುವ ಮಾತೀಗ ಏಳಿ ಎದ್ದೇಳಿ ಯುವಕರೆ ದಿನಬೆಳಗಾದರೆ ನಾಡಿನಲ್ಲಿ ನಡೆಯುವ ಜಗಳ ನಿಮಗೆ ಕರೆಯುತ್ತಿದೆ ಎಂಬ ಮಾತಾಗುತ್ತಿದೆ. ಯಾವುದೇ ಸರಕಾರ ಅಧಿಕಾರಕ್ಕೆ ಬಂದರು ಸಾಮಾನ್ಯ ಜನರೇ ನಿಮ್ಮ ಗೋಳು ತಪ್ಪಿದ್ದಲ್ಲ ಎಂಬ ಕೂಗು ಇದೀಗ ಅಕ್ಷರಸಹ ಸತ್ಯವಾಗಿದೆ. ಮುಖ್ಯಮಂತ್ರಿ ಪ್ರಧಾನಮಂತ್ರಿ ಯಾರೆ ಬರಲಿ ಸಾಮಾನ್ಯ ಜನರ ಮನದೊಳಗಿನ ಮಾತು ಮತ್ತು ಸಾಮಾನ್ಯ ಜನರ ಸಮಸ್ಯೆಗಳು ಮಾತ್ರ ಖಾತ್ರಿಯಾಗಿ ಹಾಗೆ ಉಳಿಯುತ್ತವೆ ಎಂಬ ಸತ್ಯ ಇದೀಗ ಬಯಲಾಗಿದೆ. ಇದೇ ನಾಡಿನಲ್ಲಿ ನಮ್ಮ ಮಕ್ಕಳು ಬೆಳೆಯುತ್ತಾ ದಿನಬೆಳಗಾದರೆ ಇಂತಹ ಹಲವು ಹತ್ತು ವಿಷಯಗಳನ್ನು ಗಮನಿಸುತ್ತ ಬೆಳೆಯುತ್ತಿದ್ದಾರೆ. ಅರ್ಥಮಾಡಿಕೊಳ್ಳುತ್ತ ಹಿರಿಯರಿಗೆ ಪ್ರಶ್ನೆ ಕೇಳುತ್ತಿದ್ದಾರೆ ನಮ್ಮದು ಜ್ಯಾತ್ಯಾತೀತ ರಾಜ್ಯವೊ? ಜಾತಿ ಅತಿಯಾದ ರಾಜ್ಯವೊ? ಈ ಜಠಿಲವಾದ ಪ್ರಶ್ನೆಗೆ ನೀವೆ ಉತ್ತರ ಕೊಡಿ ಪ್ಲೀಸ್.
-ಕೆ.ಎಂ.ವಿಶ್ವನಾಥ ಮರತೂರ.