ಈ “ದೇಶದ ಬೆನ್ನೆಲುಬು ರೈತ” ಅವನ ಬೆನ್ನು ಬಾಗಿಸುವ ಜನಗಳೆ ಹೆಚ್ಚು. ರೈತನ ಬೆನ್ನು ಬಾಗಿಸಿ ಅವನದ್ದೆ ಬಾರುಕೋಲಿನಿಂದ ಹೊಡೆಯುವ ಮೂಲಕ ರೈತನನ್ನು ಇನ್ನಷ್ಟು ಬಡಕಲಾಗಿ ಮಾಡುತ್ತಿರುವ ಎಲ್ಲಾ ಲಕ್ಷಣಗಳ ಪ್ರಸ್ತುತ ಭಾರತದ ರಾಜಕೀಯ ವ್ಯವಸ್ಥೆ ಎತ್ತಿ ತೋರುತ್ತಿದೆ. ಭಾವಜೀವಿಗಳ ಜೀವನದ ಜೊತೆಗೆ ಈ ವ್ಯವಸ್ಥೆ ಆಟವಾಡುತ್ತಿದೆ. ಬಡವರ ಬದುಕನ್ನು ಬಂಡವಾಳ ಮಾಡಿಕೊಂಡು ಅಧಿಕಾರ ಹಿಡಿದವರು, ಬಡವರ ನೈಜ ಅಭಿವೃದ್ಧಿಯನ್ನು ಆಕಾಶದಾಚೆ ಚಂದ್ರನ ತೋರಿದಷ್ಟೆ ಹಿತವೆನಿಸುತ್ತದೆ ಆದರೆ ವಾಸ್ತವದಲ್ಲಿ ಚಂದ್ರನಷ್ಟೆ ದೂರ ಮರಿಚಿಕೆ ರೈತ ಮತ್ತು ಬಡವರ ಅಭಿವೃದ್ಧಿ.
ಈ ದೇಶದಲ್ಲಿ ಜ್ಞಾನದ ಬೆಳಕು ಹರೆದು, ಜ್ಯೋತಿಯೊಂದು ಹೊತ್ತಲಿದೆ, ರೈತ ಮತ್ತು ಬಡವರ ಪಾಲಿನ ದಿವ್ಯ ಬೆಳಕನ್ನು ನೀಡಿ ಈ ದೇಶದ ದಾರಿದ್ರ್ಯಾ ಹೋಗಲಾಡಿಸಲಿದೆ, ನಮ್ಮ ಬೆನ್ನೆಲುಬುಗಳು ಒಂದು ಒಳ್ಳೆಯ ಬದುಕು ನೋಡಲಿದ್ದಾರೆ ಎಂಬ ಬಯಕೆ ಮತ್ತೊಂದು ವರುಷ ಸುಳ್ಳು ಮಾಡಿದೆ. ಹಸಿದ ಹೊಸ ವರುಷವೊಂದು ಮತ್ತೆ ಬರುತ್ತಿದೆ.
ಈ ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗಲಿವೆ, ನಾಡು ಸಮೃದ್ಧವಾಗಲಿದೆ. ನುಡಿಯೊಳಗೊಂದು ಮಿಡಿತವು ಬರಲಿದೆ. ಈ ದೇಶವು ಅಭಿವೃದ್ಧಿಪಥದತ್ತ ಧಾಪುಗಾಲು ಹಾಕುವ ಹೊತ್ತು ಬರುತ್ತದೆ ಎಂಬ ಕನಸು ಈ ವರುಷ ಕಂಡಿದ್ದೆ ಆದರೆ ಎಲ್ಲವೂ ಠುಸ್ ಆಯಿತು. ಈರುಳ್ಳಿ ಬೆಲೆ ಕುಸಿಯಿತು, ತರಕಾರಿ ಬೆಲೆ ಏರಿತು, ಪೆಟ್ರೋಲ್ ಡಿಸೆಲ್ ಕೈಗೆಟಕಾದಾತು, ಉಣ್ಣುವ ಬೇಳೆ ಮುಗಿಲಮುಟ್ಟಿತು ನಾವೆ ಬೆವರ ಹರಿಸಿ ಬೆಳೆದಿದ್ದು ನಮ್ಮ ಹೊಟ್ಟೆಗೆ ಹಿಟ್ಟಾಗಲಿಲ್ಲ, ನಮ್ಮ ಗೇಣು ಜುಟ್ಟಿಗೆ ಮಲ್ಲಿಗೆಯಾಗಲಿಲ್ಲ ಎಂಬುವುದು ವಿಪರ್ಯಾಸ.
ರೈತರ ಸಾಲು ಸಾಲು ಸಾವುಗಳಾದವು ನಿಮಗೆ ಕರುಣೆಯೆ ಬಾರಲಿಲ್ಲ. ಸಾವಿರಾರು ಪ್ರಜೆಗಳು ಪ್ರಾಣ ತೆತ್ತರು ನಿಮ್ಮ ಕರುಳು ಚುರ್ ಎನ್ನಲಿಲ್ಲ. ಈ ದೇಶದ ಗಡಿ ಕಾಯುವ ಯೋಧರ ಹೆಂಡರು ಮಕ್ಕಳು ಅನಾಥರಾದರು ನಿಮ್ಮ ಹೃದಯ ಕರಗಲೇಯಿಲ್ಲ. ಅದೇ ಈ ದೇಶದ ಸಂಪ್ರದಾಯದಂತೆ ಹಣಹಂಚಿ ಸುಮ್ಮನಾದಿರಿ. ಮೂರು ನಿಮಿಷ ಮೌನವಾಚರಿಸಿ ಮುಂದುವರೆದಿರಿ. ನೀವೆಲ್ಲ ವರ್ಷವಿಡಿ ಏಸಿ ರೂಂಲ್ಲಿ ಕುಳಿತು ನಮಗೆ ವರ್ಷವಿಡಿ ಬಿಸಿಲಿನಲ್ಲಿ ಮಳೆ ಛಳಿಯಲ್ಲಿ ನಿಲ್ಲಿಸಿದಿರಿ. ಸಾಲುಸಾಲುಗಳಲ್ಲಿ ಕಾಯ್ದು ಸಾವನ್ನು ಜಯಿಸಿದೇವು ನೀವು ಮಾತ್ರ ದೂರಿನಿಂದಲೆ ಧನ್ಯವಾದಗಳು ಬಿಟ್ಟು ಬೇರೇನು ಹೇಳಲೇಯಿಲ್ಲ. ಈ ಬಡವರ ರೈತರ ಕಣ್ಣೀರು ಒರೆಸುವ ಕೆಲಸ ನೀವ್ಯಾರು ಮಾಡಲೇಯಿಲ್ಲ.
ನಾವೆಲ್ಲರೂ ವರ್ಷವಿಡಿ ಹೋರಾಟ ಮಾಡಿ ದಣಿದೇವು. ಕೂಗು ಹಾಕಿ ಗಂಟಲೊಣಗಿಸಿಕೊಂಡೆವು ನೀರು ಸಿಗಲೇಯಿಲ್ಲ. ಯೋಜನೆಗಳಲ್ಲಿ ಬರುವ ನೀರನ್ನೆಲ್ಲ ನೀವು ಕುಡಿದುಹಾಕಿದಿರಿ. ನಾವು ಮಾತ್ರ ಮತ್ತದೇ ಕೊಳತ ನೀರನ್ನು ಕುಡಿದು, ವೈದ್ಯರ ಬಳಿ ರೋಗಿಗಳಾದೇವು. ನಮಗಾಗಿ ಸೂರಿನ ವ್ಯವಸ್ಥೆ ನೀವು ಮಾಡಲೇಯಿಲ್ಲ, ಮಳೆಯಲ್ಲಿ ನಾವು ಸೋರುವ ಮನೆಯಲ್ಲಿಯೇ ವಾಸಮಾಡುತ್ತಿದ್ದೇವೆ ನೀವು ಸ್ಮಾರ್ಟ್ ಸಿಟಿ ಮಾಡುವತ್ತಾ ಧಾಪುಗಾಲು ಹಾಕಿದ್ದೀರಿ ನಮ್ಮ ತೂತು ಬಿದ್ದ ಮ್ಯಾಳಿಗೆ ಹನಿ ನೀರ ತಡೆಯಲು ನಿಮ್ಮಿಂದ ಆಗಲೇಯಿಲ್ಲ. ನೀವು ಹೇಳಿದಂತೆ ಸರತಿ ಸಾಲಿನಲ್ಲಿ ನಿಂತು ಹಣ ಬದಲಿಸಿಕೊಳ್ಳಲು ಹೊರಟೇವು ಆದರೆ ನೀವೆಲ್ಲ ಬ್ಯಾಂಕ್ ಗಳನ್ನೇ ಡೀಲ್ ಮಾಡಿಕೊಂಡು ಹಣ ಬದಲಿಸಿದಿರಿ. ನನ್ನದೂ ಇನ್ನು ಸರದಿಯೇ ಬರಲಿಲ್ಲ ನನ್ನ ಪಕ್ಕದಲ್ಲಿ ನಿಂತಿದ್ದ ಬಡವ ರೈತನೊಬ್ಬ ನಿಂತಲ್ಲಿಯೇ ನಿಂತು ನಿತ್ರಾಣವಾಗಿ ಕೈಯಲ್ಲಿ ಕೂಡಿಟ್ಟ ಹಣ ಬಿಗಿಯಾಗಿ ಹಿಡಿದು ಪ್ರಾಣ ಬಿಟ್ಟ ಆದರೆ ಅವನ ನೋಟ ಬದಲಾಗಲಿಲ್ಲ. ನೀವು ನೋಡಿಯು ಮತ್ತೆ ವಿದೇಶಕ್ಕೆ ವಿಮಾನದಲ್ಲಿ ಹಾರಿದಿರಿ. ನಾವಿಲ್ಲಿ ಬಿಸಿಲಿನ ತಾಪಕ್ಕೆ ನೊಂದು ಬೆಂದು ಇನ್ನು ಹಣ ಬರಬಹುದೆಂಬ ಭರವಸೆಯಲ್ಲಿ ಕಾಯುತ್ತಿದ್ದೇವೆ.
ನೀವು ಹಲವು ಭಾಗ್ಯಗಳ ಘೋಷಣೆ ಮಾಡಿದಿರಿ ಆದರೆ ನಮ್ಮ ಭಾಗ್ಯವೇ ಬದಲಾಗಲಿಲ್ಲ. ಅನ್ನ ಕೊಟ್ಟಿರಿ ಅದರೊಳಗೆ ಕನ್ನ ಹಾಕುವವರ ಹಿಡಿಯಲೇಯಿಲ್ಲ. ಹಾಲುಕೊಟ್ಟಿರಿ ಹಾಲಿನೊಳಗೆ ಬೆರೆತ ವಿಷ ಮನಸ್ಸುಗಳನ್ನು ತೆಗೆಯಲೇಯಿಲ್ಲ. ಎಲ್ಲವೂ ಉಚಿತ ಮಾಡಿದಿರಿ ಯಾವ ಅನುಚಿತ ಘಟನೆ ನಡೆದರು ನಿಮ್ಮಿಂದ ತಡೆಯಲಾಗಲಿಲ್ಲ. ನಿಮಗೆ ಸಮಯದಿಂದಲೆ ಬೆಲೆ ಹೆಚ್ಚಾಯಿತು ನೀವು ಮಿಂಚಿದಿರಿ, ನಾವು ಈ ಸಮಯದ ಸಾದದಕ್ಕೆ ಒಳಪಟ್ಟು ಸಮಯ ಖರಾಬು ಮಾಡಿಕೊಂಡಿವಿ. ಬಡವರನ್ನು ಅವರ ಹಕ್ಕನ್ನು ಕಸಿದುಕೊಳ್ಳುವುದರಲ್ಲಿ ನೀವೆಲ್ಲರೂ ನಿಸ್ಸೀಮರು ಎಂಬ ಮಾತನ್ನು ಮತ್ತೊಮ್ಮೆ ಸಾಭೀತು ಮಾಡಿದಿರಿ. ನೀವು ಅಧಿಕಾರ ಅನುಭವಿಸಿದಿರಿ ನಾವು ನಿಮ್ಮ ಕಾಲಕಸವಾಗಿ ಎಲ್ಲಿ ಇದ್ದೇವು ಅಲ್ಲಿಯೇ ಉಳಿದೇವು. ನೀವು ಮೇಲಕ್ಕೀರಿದಿರಿ ನಾವು ಕೆಳಕ್ಕಿಳಿದೇವು.
ಈ ವರುಷ ಬಹಳ ಹರುಷದಿಂದ ಕಳೆಯುವೇವು ಎಂಬ ಭ್ರಮೆಯೊಳಗೆ ನಾವಿಲ್ಲ ಆದರೆ ನಿಮಗೆ ತಕ್ಕ ಪಾಠ ಕಲಿಸದೆ ನಾವು ಬಿಡುವುದಿಲ್ಲ. ನಾವಿಂದು ಸೋತಿರಬಹುದು ಮುಂದೆ ಗೆದ್ದೆ ಗೆಲ್ಲುವೇವು. ನಾವೀಗ ಅಳುತ್ತಿರಬಹುದು, ನೀವಿಗ ನಗುತ್ತಿರಬಹುದು ಮುಂದೆ ನೀವು ಮತ್ತೆ ಹಲ್ಲು ಕಿರಿದು ಓಟು ಕೊಡಿ ಎಂದು ಬಂದಾಗ ಹಳೆಯ ಬೂಟು ತೋರಿಸುವೇವು ಎಂಬ ಮಾತು ನೇರವಾಗಿಯೆ ಹೇಳುವೇವು ನಿಮಗೆ ಬುದ್ಧಿ ಕಲಿಸುವೇವು. ಬಡವನ ಶಕ್ತಿಯೇನು ಎಂಬ ಅಂದಾಜು ನಿಮಗಿಲ್ಲ. ರೈತನ ಶಕ್ತಿಯೇನು ಎಂಬ ಸುಳಿವು ನಿಮಗಿಲ್ಲ. ಈ ದೇಶ ಮತ್ತು ರಾಜ್ಯದಲ್ಲಿ ಯಾವುದೇ ವ್ಯಕ್ತಿ ಅಧಿಕಾರಕ್ಕೆ ಬರಲು ಇಲ್ಲಿನ ಬಡವರು ಮತ್ತು ರೈತರೆ ಮುಖ್ಯ ಕಾರಣರೆಂಬ ಅರಿವು ನಮಗಿದೆ. ಇಂದು ನೀವು ಮಾಡಿರುವ ಘನಘೋರ ಕೆಲಸಗಳ ತೂಕವು ನಮ್ಮ ಬಳಿಯಿದೆ ಇನ್ನೇನು ಕೆಲವೇ ದಿನಗಳಲ್ಲಿ ನಮ್ಮ ಕೊಳಗೇರಿ ಓಣಿಗೆ ಬರುವ ನೀವು ಮತ್ತು ನಿಮ್ಮ ಚೇಲಾಗಳಿಗೆ ಶಿಸ್ತು ಪಾಠ ಕಲಿಸದಿದ್ದರೆ ನಾವು ಈ ದೇಶದ ಪ್ರಜೆಗಳೆ ಅಲ್ಲಾ ನೆನಪಿರಲಿ.
ಕೊನೆಯ ತುತ್ತು: “ಅಧಿಕಾರದ ಮದವೇರಿದಾಗ ನೀವು ಘರ್ಷಿಸಿದಿರಿ ನಾವು ಸುಮ್ಮನಿದ್ದೇವೆ. ನಾವು ನಮ್ಮ ಸಮಯ ಬಂದಾಗ ಘರ್ಷಿಸದರೆ ಮತ್ತೆ ಮೂಲೆ ಸೇರುವಿರಿ” ಅಧಿಕಾರ ಯಾವತ್ತು ಶಾಶ್ವತವಲ್ಲ. ಈ ಜೀವನ ಆ ಪ್ರಕೃತಿ ಕೊಟ್ಟ ಕೊಡುಗೆ ಸೋಲು ಗೆಲುವು ಇದರ ಭಾಗಗಳು. ನೀವು ಗೆಲುವಿನಿಂದ ಅಬ್ಬರಿಸಿ ಬೊಬ್ಬೆರೆದು ಈ ದೇಶದ ರೈತ ಮತ್ತು ಬಡವರನ್ನು ಬಲಿತೆಗೆದುಕೊಂಡಿರಿ ಮುಂದಿನ ದಿನಗಳಲ್ಲಿ ಈ ಪ್ರಕೃತಿಯೆ ನಿಮ್ಮ ಬಲಿ ತೆಗೆದುಕೊಳ್ಳಲಿದೆ. ಈ ದೇಶದ ಪ್ರಜೆಗಳ ಶಾಪ ನಿಮಗೆ ಶೀಘ್ರವೆ ತಟ್ಟಲಿದೆ ಎಚ್ಚರಿಕೆ.”